Advertisement
ಕೀಟ ಹಿಡಿಯುವ ಕಲೆಯನ್ನು ಬಲ್ಲ ಹೂವನ್ನು ಅರಳಿಸಲು ಹೊರಟ ಬಳ್ಳಿಯ ಇದಿರಲ್ಲಿ ಮರದಿಂದ ಮರಕ್ಕೆ “ಡೇರೆ’ ಕಟ್ಟುವುದರಲ್ಲಿ ಮಗ್ನವಾಗಿರುವ ಕಾಡುಜೇಡರ ತಾಜಾ ರೂಪಕವೊಂದನ್ನು ಸಂಕಲನದ ಶೀರ್ಷಿಕೆ ಕವಿತೆಯಲ್ಲಿ ನಮ್ಮ ಕಣ್ಣೆದುರು ಹಿಡಿಯುವ ಮೂಲಕ ಈ ಕವಯಿತ್ರಿ, ಆ ಹೂವು ಅರಳುವ ಹಂತದಲ್ಲಿದ್ದರೂ ಜೇಡ ಸದ್ಯ ತೋರಿಸುತ್ತಿರುವ ಜೀವನೋತ್ಸಾಹವನ್ನು ಚಮತ್ಕಾರಿಕವಾಗಿ ಧ್ವನಿಸಿದ್ದಾರೆ. ಹಸಿರು ಮತ್ತು ನೋವು ಕವಿತೆಯೂ ಹೀಗೆ ಹುಟ್ಟು-ಸಾವುಗಳ ಪೈಪೋಟಿಯೆದುರಲ್ಲಿ “ಸೋತರೂ ಗೆದ್ದೇನು’ ಎನ್ನುವ ಮನಸ್ಸುಗಳ ಆಶಾ ನಿರೀಕ್ಷೆಗಳ ಅಸಂಗತತೆಯನ್ನು ಹಾಗೂ ಅರ್ಥಪೂರ್ಣತೆಯನ್ನು ಧ್ಯಾನಿಸುವ ಇನ್ನೊಂದು ಮುಖ್ಯ ರಚನೆ ಯಾಗಿದೆ. ಸುಜಾತಾ ಅವರ ಕಾವ್ಯ- ಕಸುಬು ಗಾರಿಕೆಯ ಮೂಲ ಪ್ರೇರಣೆ ಕೇವಲ ಪರಿಸರಪ್ರೀತಿ ಮಾತ್ರವಲ್ಲ , ಇತಿಹಾಸ ಹಾಗೂ ಪುರಾಣದ ಕೆಲವು ಸಿದ್ಧ ಪ್ರತಿಮೆಗಳನ್ನು ಭಂಜಿಸಿ, ಪುರುಷಪ್ರಧಾನ ವರ್ತನೆಯನ್ನು ಪ್ರಶ್ನಿಸುವ ಹಾಗೂ ತಾಳ್ಮೆಯಿಂದ ತಿಳಿಹೇಳುವ ತಾಯ್ತನದ್ದೂ ಆಗಿದೆ. ಇದರ ಜತೆಜತೆಗೇ ಸೃಷ್ಟಿ ಮೂಲದಲ್ಲಿರುವ ಅದಮ್ಯ ಜೀವಕಾಮದ ನಿನಾದವನ್ನು ಹೊಮ್ಮಿಸುವ ಮಾಗಿದ ರಚನೆಗಳೂ ಇಲ್ಲಿವೆ.
(ಕವನ ಸಂಕಲನ)
ಲೇ.: ಎಚ್.ಆರ್. ಸುಜಾತಾ
ಪ್ರ.: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ,
ವಯಾ-ಎಮ್ಮಿಗನೂರು, ಬಳ್ಳಾರಿ-583113
ಮೊಬೈಲ್: 9480353507
ಮೊದಲ ಮುದ್ರಣ: 2018 ಬೆಲೆ: ರೂ. 200 -ಜಕಾ