Advertisement

ಕೆಎಂಎಫ್ ಕಾರ್ಯಶೈಲಿಗೆ ಪ್ರಧಾನಿ ಮೋದಿ ಮೆಚ್ಚುಗೆ

11:26 AM Sep 13, 2022 | Team Udayavani |

ನೋಯಿಡಾ (ಉತ್ತರ ಪ್ರದೇಶ): ಸಹಕಾರಿ ವಲಯದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಉತ್ತರಪ್ರದೇಶದ ಗ್ರೇಟರ್‌ ನೋಯಿಡಾದಲ್ಲಿ ಸೋಮವಾರದಿಂದ ಆರಂಭವಾಗಿರುವ ವಿಶ್ವ ಡೇರಿ ಶೃಂಗಸಭೆಯಲ್ಲಿ ಕೆಎಂಎಫ್‌ನ ನಂದಿನಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿ, ಸಹಕಾರಿ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಕೆಎಂಎಫ್ ಅನ್ನು ಶ್ಲಾಘಿಸಿದರು. ಕಳೆದ ಐದು ದಶಕಗಳಿಂದ ರೈತರ ಸೇವೆ ಮಾಡುತ್ತಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಕೆಲಸ ಹೆಮ್ಮೆಪಡುವಂತಹದ್ದು ಎಂದು ಹೇಳಿದರು.

ಹೈನುಗಾರಿಕೆಯನ್ನೇ ಅವಲಂಬಿತರಾಗಿರುವ ರೈತ ಸಮುದಾಯ ಅದರಲ್ಲೂ ವಿಶೇಷವಾಗಿ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬಿ ಬದುಕಿಗೆ ವಿಶೇಷ ಯೋಜನೆಗಳನ್ನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕೆಎಂಎಫ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಸ್ತೃತ ಮಾಹಿತಿ ನೀಡಿದರು.

ಕರ್ನಾಟಕದ 24184 ಹಳ್ಳಿಗಳು ಸುಮಾರು 15043 ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಹೊಂದಿದ್ದು, 16 ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳನ್ನು ಹೊಂದಿರುವ ಸಹಕಾರಿ ಸಂಸ್ಥೆಯಾಗಿದೆ. 26 ಲಕ್ಷ ಹಾಲು ಉತ್ಪಾದಕ ಸದಸ್ಯರಿದ್ದು, 10 ಲಕ್ಷ ಹಾಲು ಸರಬರಾಜುದಾರರಿದ್ದಾರೆ. 91.88 ಲಕ್ಷ ಕೆಜಿ ಗರಿಷ್ಠ ಶೇಖರಣೆ ಹೊಂದಿದೆ ಎಂದು ತಿಳಿಸಿದರು. ಪ್ರತಿದಿನ 30 ಕೋಟಿ ರೂ. ರೈತರಿಗೆ ಹಣ ಪಾವತಿ ಮಾಡುತ್ತಿದ್ದು, 170ಕ್ಕೂ ಅಧಿಕ ನಂದಿನಿ ಹಾಲಿನ ಉತ್ಪನ್ನಗಳನ್ನು ಕೆಎಂಎಫ್‌ ಉತ್ಪಾದಿಸುತ್ತಿದೆ ವಿವರಿಸಿದರು.

ಕೆಎಂಎಫ್ ನಂದಿನಿ ಬ್ರಾಂಡ್‌ ಬಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲು ವಿಶ್ವ ಡೇರಿ ಶೃಂಗಸಭೆಯು ಉತ್ತಮ ವೇದಿಕೆಯಾಗಿದೆ. ಬ್ರಾಂಡ್‌ ಮೌಲ್ಯವರ್ಧನೆ ಮತ್ತು ವಹಿವಾಟು ವಿಸ್ತರಣೆ ಸದುದ್ದೇಶದಿಂದ ಈ ವಿಶ್ವ ಡೇರಿ ಶೃಂಗ ಸಭೆ ಕಾರ್ಯಾಗಾರದಲ್ಲಿ ನಂದಿನಿ ಉತ್ಪನ್ನಗಳ ಪ್ರದರ್ಶನದ ಆಕರ್ಷಕ ಮಳಿಗೆ ತೆರೆದಿದೆ.

Advertisement

ಕೆಎಂಎಫ್‌ ಆಡಳಿತ ಮಂಡಳಿ ಸದಸ್ಯರು, ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಒಕ್ಕೂಟಗಳ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಕಹಾಮ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next