Advertisement

ಪ್ಲಾಸ್ಟಿಕ್‌ ಮೇಲಿನ ತೆರಿಗೆ ಶೇ.4ರಿಂದ 5ಕ್ಕೆ ಹೆಚ್ಚಳ

06:00 AM Jun 06, 2018 | Team Udayavani |

ಬೆಂಗಳೂರು: ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಮೇಲಿನ ತೆರಿಗೆಯನ್ನು ಶೇ.4ರಿಂದ 5ಕ್ಕೆ ಹೆಚ್ಚಳ ಮಾಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಮಂಗಳವಾರ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಪರಿಸರ ದಿನಾಚರಣೆ ಹಾಗೂ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭ’ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕವನ್ನು ಪ್ಲಾಸ್ಟಿಕ್‌ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದಟಛಿವಾಗಿದೆ. ಈ ನಿಟ್ಟಿನಲ್ಲಿ ಹಣ್ಣಿನ ಅಂಗಡಿ, ಬಟ್ಟೆ ಅಂಗಡಿ ಮತ್ತು ಹೋಟೆಲ್‌ಗ‌ಳಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್‌ ಬ್ಯಾಗ್‌ಗಳ ಮೇಲಿನ ತೆರಿಗೆಯನ್ನು ಶೇ.4ರಿಂದ 5ಕ್ಕೆ ಹೆಚ್ಚಳ ಮಾಡುವ ಮೂಲಕ ಪ್ಲಾಸ್ಟಿಕ್‌ ಬಳಕೆಯನ್ನು ತಗ್ಗಿಸುವ ಚಿಂತನೆಯಿದೆ ಎಂದು ಹೇಳಿದರು.

“ಪ್ಲಾಸ್ಟಿಕ್‌ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ಘೋಷವಾಕ್ಯ ದೊಂದಿಗೆ ನಾವು ಇಂದು ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇವೆ. ಪ್ಲಾಸ್ಟಿಕ್‌ ಬಳಕೆಯಿಂದ ಕ್ಯಾನ್ಸರ್‌ ಸೇರಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಜಾಗತಿಕ ತಾಪಮಾನದ ಏರಿಕೆಗೂ ಪ್ಲಾಸ್ಟಿಕ್‌ ಕಾರಣವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್‌ ಬಳಕೆ ಬಗ್ಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು. 

ಇದೇ ವೇಳೆ, “ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌’ ಹಾಗೂ “ನಿಮ್ಮ ಭವಿಷ್ಯ ನೀವೇ ನೆಡಿ’ ಸಿಡಿಯನ್ನು ನಟ ಹಾಗೂ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ರಾಯಬಾರಿ ದರ್ಶನ್‌ ತೂಗುದೀಪ್‌ ಬಿಡುಗಡೆ ಮಾಡಿದರು. ಇದಕ್ಕೂ ಮೊದಲು ಮಲ್ಲೇಶ್ವರಂ ಆಟದ ಮೈದಾನದಿಂದ ಚೌಡಯ್ಯ ಸ್ಮಾರಕ ಸಭಾಂಗಣದವರೆಗೆ ಪರಿಸರ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮೇಯರ್‌ ಸಂಪತ್‌ ರಾಜ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು. 

ಸಾಧಕರಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2018ನೇ ಸಾಲಿನ “ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ ಪ್ರದಾನ
ಮಾಡಲಾಯಿತು. ಶಾಲಾ ವಿಭಾಗ ಮತ್ತು ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದ ಶಾಲೆಗಳು ಮತ್ತು ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಕನಕಪುರ ತಾಲೂಕಿನ ಬನವಾಸಿಯ ಸರ್ಕಾರಿ ಪ್ರೌಢಶಾಲೆ, ಸಕಲೇಶಪುರ ತಾಲೂಕಿನ ಬಾಳ್ಳ ಪೇಟೆಯ ಬಿ.ಸಿದ್ದಣ್ಣಯ್ಯ
ಪ್ರೌಢಶಾಲೆ, ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ ತಾಲೂಕಿನ ಚನ್ನೂರು ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾರಿಯ ಸಿರಗುಪ್ಪ ತಾಲೂಕು ತಾಳೂರುನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗದ ಹಿರಿಯೂರು ತಾಲೂಕಿನ ಒಣಕಲ್ಲು ಗುಡ್ಡ ಸರ್ಕಾರಿ ಪ್ರೌಢಶಾಲೆ ಗಳಿಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ವೈಯಕ್ತಿಕ ವಿಭಾಗದಲ್ಲಿ ವಿಜ್ಞಾನಿ ಡಾ. ಟಿ.ವಿ.ರಾಮಚಂದ್ರ, ಐಎಎಸ್‌ ಅಧಿಕಾರಿ ವೆಮೇಲಾ ಮಲ್ಲೋತ್ರಾ, ವನ್ಯ ಜೀವಿತಜ್ಞ ಅಜಯ್‌ ಎ.ದೇಸಾಯಿ ಹಾಗೂ ಸಂಸ್ಥೆಯ ವಿಭಾಗದಲ್ಲಿ ಕರ್ನಾಟಕ ನವೀಕರಿಸಬಹು ದಾದ ಇಂಧನಗಳ ಅಭಿವೃದ್ಧಿ ನಿಗಮ, ಉಡುಪಿ ಹಾಗೂ ಹಾವೇರಿ ಜಿಲ್ಲಾ ಪಂಚಾಯತ್‌ಗಳಿಗೆ “ರಾಜ್ಯ ಪರಿಸರ ಪ್ರಶಸ್ತಿ’ ಹಾಗೂ 1 ಲಕ್ಷ ರೂ. ನಗದು ನೀಡಿ ಗೌರವಿಸಲಾಯಿತು. 

ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್‌ಕಿನ್‌ ಬಿಡುಗಡೆ 
ಬಡ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳು, ಮಹಿಳೆಯರಿಗೆ ಸ್ವಾಸ್ಥ್ಯ, ಸ್ವತ್ಛತೆ ಹಾಗೂ ಸುವಿಧಾ ಸೌಲಭ್ಯ ಕಲ್ಪಿಸಲು “ಜನೌಷಧಿ ಸುವಿಧಾ ಓಕೊ- ಬಯೋಡಿಗ್ರೇಡಬಲ್‌ ಸ್ಯಾನಿಟರಿ ನ್ಯಾಪ್‌ಕಿನ್‌’ ಬಿಡುಗಡೆ ಮಾಡಲಾಗಿದ್ದು, ಅಗ್ಗದ ದರದಲ್ಲಿ ಸಿಗಲಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿದರು.  

ನಗರದಲ್ಲಿ ಮಂಗಳವಾರ ಜನೌಷಧಿ ಸುವಿಧಾ ಓಕ್ಸೋ- ಬಯೋಡಿಗ್ರೇಡಬಲ್‌ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಮಾರುಕಟ್ಟೆಯಲ್ಲಿ ಪ್ರತಿಷ್ಠಿನ ಬ್ರಾಂಡ್‌ನ‌ ನಾಲ್ಕು ನ್ಯಾಪ್‌ಕಿನ್‌ಗಳಿಗೆ 38 ರೂ. ಇದ್ದು, ಪ್ರತಿ ನ್ಯಾಪ್‌ಕಿನ್‌ಗೆ 8 ರಿಂದ 10 ರೂ.ತಗಲುತ್ತಿದೆ. ಅದೇ ಗುಣಮಟ್ಟದ ಜೈವಿಕವಾಗಿ ಕೊಳೆಯುವ ನ್ಯಾಪ್‌ಕಿನ್‌ನ್ನು ಈಗ ಬಿಡುಗಡೆಗೊಳಿಸಲಾಗಿದೆ. ಮೊದಲ ಹಂತದಲ್ಲಿ 3,603 ಜನೌಷಧ ಮಳಿಗೆಗಳಲ್ಲಿ ಜೈವಿಕವಾಗಿ ಕೊಳೆಯುವ ನ್ಯಾಪ್‌ಕಿನ್‌ಗಳು ದೊರೆಯಲಿವೆ. ಮುಂದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದೊರೆಯುವ ವ್ಯವಸ್ಥೆ ಕಲಿಸಲು ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಗ್ರೀನ್‌ ಪಾಲಿಮರ್‌, ಬಯೋಡಿಗ್ರೇಡಬಲ್‌ ಪ್ಲಾಸ್ಟಿಕ್‌ ಅನ್ವೇಷಣೆಗೆ ಸಂಶೋಧನೆ ನಡೆದಿದೆ ಎಂದರು. ಬಿಪಿಪಿಐ ಸಿಇಒ, ಸಚಿನ್‌ ಕುಮಾರ್‌ ಸಿಂಗ್‌ ಮಾತನಾಡಿ, ಸದ್ಯಕ್ಕೆ ಗದಗದ ಜನೌಷಧ ಮಳಿಗೆ ಹಾಗೂ ಬೆಂಗಳೂರಿನ ಎನ್‌.ಆರ್‌. ಕಾಲೋನಿ, ಯಲಹಂಕ, ಮತ್ತಿಕೆರೆ, ಭಾಷ್ಯಂ ವೃತ್ತದ ಜನೌಷಧ ಮಳಿಗೆಗಳಲ್ಲಿ ಸಿಗಲಿವೆ. ಜು.10ರ ವೇಳೆಗೆ ಎಲ್ಲ ಜನೌಷಧ ಮಳಿಗೆಗಳಲ್ಲಿ ದೊರೆಯಲಿವೆ ಎಂದು
 
ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಾಟಲಿ ಕ್ರಶಿಂಗ್‌ ಯಂತ್ರ
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ನಾಲ್ಕು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಪುಡಿಮಾಡಿ, ಮರುಬಳಕೆಗೆ ಅಗತ್ಯ ಕಚ್ಚಾವಸ್ತುವಾಗಿ ಪರಿವರ್ತಿಸುವ “ಪ್ಲಾಸ್ಟಿಕ್‌ ಬಾಟಲಿ ಕ್ರಶಿಂಗ್‌ ಮಷಿನ್‌’ಗಳನ್ನು ಅನಾವರಣಗೊಳಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲು ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್‌ ಮತ್ತು ಕೆ.ಆರ್‌. ಪುರದಲ್ಲಿ ತಲಾ ಒಂದು ಯಂತ್ರಗಳನ್ನು ಬೆಂಗಳೂರು ವಿಭಾಗೀಯ ಕಚೇರಿ ಅಳವಡಿಸಿದ್ದು, ಇದರಿಂದ ರೈಲು ನಿಲ್ದಾಣಗಳಲ್ಲಿನ ಪ್ಲಾಸ್ಟಿಕ್‌ ಬಾಟಲಿಗಳ ಹಾವಳಿ ಅಲ್ಪಮಟ್ಟಿಗೆ ತಗ್ಗಲಿದೆ. ಜೊತೆಗೆ, ಕ್ರಶಿಂಗ್‌ ಯಂತ್ರದಲ್ಲಿ ಬಾಟಲಿಯನ್ನು ಹಾಕಿದ ತಕ್ಷಣ ಆ ಯಂತ್ರವು ಮೊಬೈಲ್‌ ಸಂಖ್ಯೆ ಕೇಳುತ್ತದೆ. ನಂಬರ್‌ ನಮೂದಿಸಿದರೆ, ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಅದರಲ್ಲಿ ಕೋಡ್‌ ನೀಡಲಾಗಿರುತ್ತದೆ. ಆ ಕೋಡ್‌ ಅನ್ನು ಪೇಟಿಎಂನಲ್ಲಿರುವ “ಆ್ಯಡ್‌ ಮನಿ’ಯಲ್ಲಿ ಪೇಸ್ಟ್‌ ಮಾಡಬೇಕು. ಕ್ಷಣಾರ್ಧದಲ್ಲಿ 5 ರೂ.ಖಾತೆಗೆ ಜಮೆ ಆಗುತ್ತದೆ. ಆದರೆ, ಒಂದು ಮೊಬೈಲ್‌ ನಂಬರ್‌ಗೆ ನಿತ್ಯ ಎರಡು ಬಾರಿ ಮಾತ್ರ ಈ ಅವಕಾಶ ಇರುತ್ತದೆ.

ಉಡುಪಿ ಜಿಪಂಗೆ ಪ್ರಶಸ್ತಿ
ಈ ಬಾರಿಯ “ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ಗೆ ಉಡುಪಿ ಜಿಲ್ಲಾ ಪಂಚಾಯತ್‌ ಭಾಜನವಾಗಿದೆ. ಸಂಸ್ಥೆಗಳ ವಿಭಾಗದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ ಗೆ ಈ ಪ್ರಶಸ್ತಿ ಲಭಿಸಿದ್ದು, ಮಂಗಳವಾರ ಬೆಂಗಳೂರಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ರಾಜ್ಯಮಟ್ಟದ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. 

ಬೆಂಗಳೂರಿನ ಮೆಟ್ರೋ ಯೋಜನೆಗೆ ನೂರು ವರ್ಷಕ್ಕೂ ಹಳೆಯ ಮರಗಳನ್ನು ಕತ್ತರಿಸಬೇಕಾಯಿತು. ಆದರೆ, ಕತ್ತರಿಸಿದ ಮರಗಳಿಗೆ 
ಪರ್ಯಾಯವಾಗಿ ಅರಣ್ಯ ಬೆಳೆಸಲು ಕೈಗೊಂಡಿರುವ ಕ್ರಮಗಳು ವಾಸ್ತವಕ್ಕೆ ದೂರವಾಗಿವೆ. ಬಿಬಿಎಂಪಿ, ಅರಣ್ಯ ಇಲಾಖೆಯ ಅಂಕಿ-ಅಂಶಗಳನ್ನು ನಂಬುವ ಸ್ಥಿತಿಯಲ್ಲಿಲ್ಲ.
● ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬೆಂಗಳೂರಿನಲ್ಲಿ ಪ್ರತಿದಿನ 4 ಸಾವಿರ ಟನ್‌ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ ಕೇವಲ 2 ಸಾವಿರ ಮಾತ್ರ ಸಂಸ್ಕರಣೆ ಯಾಗುತ್ತಿದೆ. ಉಳಿದ ಕಸವನ್ನು ಭೂಭರ್ತಿ ಮಾಡಲಾಗುತ್ತಿದೆ. ಇದರಿಂದ ಇಂಗಾಲಕ್ಕಿಂತ ಅಪಾಯಕಾರಿ ಮಿಥೇನ್‌ ಗ್ಯಾಸ್‌ ಉತ್ಪತ್ತಿಯಾಗಿ ವಾತಾವರಣ ಸೇರುತ್ತಿದೆ.
● ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next