Advertisement

ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ ಅಸಾಧ್ಯ: ರಮೇಶ್‌ಕುಮಾರ್‌

10:32 AM Jun 10, 2017 | Team Udayavani |

ವಿಧಾನಸಭೆ: ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಪ್ಲಾಸ್ಟಿಕ್‌ ಅಕ್ಕಿ ಮತ್ತು ಮೊಟ್ಟೆ ವಿಚಾರ, ಸದನದಲ್ಲೂ ಸದ್ದು
ಮಾಡಿತು. ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಜನರ ಆತಂಕದ ಬಗ್ಗೆ ಪ್ರಸ್ತಾಪ ಮಾಡಿದರೆ, ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರು, ವೈಜ್ಞಾನಿಕವಾಗಿ ಈ ರೀತಿ ಮಾಡುವುದು ಸಾಧ್ಯವೇ ಎಂಬ ಬಗ್ಗೆ ಮಾಹಿತಿ ಪಡೆದು ಸದನಕ್ಕೆ ಉತ್ತರ ನೀಡುವುದಾಗಿ ಹೇಳಿದರು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗದೀಶ್‌ ಶೆಟ್ಟರ್‌, ಪ್ಲಾಸ್ಟಿಕ್‌ ಅಕ್ಕಿ ರಾಜ್ಯದ ಕೆಲವು ಕಡೆ ಪತ್ತೆಯಾಗಿದೆ
ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದೇ ರೀತಿ ಪ್ಲಾಸ್ಟಿಕ್‌ ಮೊಟ್ಟೆ ಸಿಕ್ಕಿರುವುದು ಕೂಡ ಗೊತ್ತಾಗಿದೆ. ಈ ಬಗ್ಗೆ
ಸರ್ಕಾರ ಹೆಚ್ಚು ಗಮನ ಕೊಟ್ಟು, ತನಿಖೆ ನಡೆಸಿ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶಕುಮಾರ್‌, “ಪ್ಲಾಸ್ಟಿಕ್‌ ಅಕ್ಕಿ ಮತ್ತು ಮೊಟ್ಟೆ ಉತ್ಪಾದನೆ ಅಷ್ಟು
ಸುಲಭವಲ್ಲ. ಪ್ಲಾಸ್ಟಿಕ್‌ ಅಕ್ಕಿ ಮತ್ತು ಮೊಟ್ಟೆಯನ್ನು ತಯಾರಿಸಿ ಮಾರುವುದು ಎಂದರೆ ವೆಚ್ಚದಾಯಕ. ಹೀಗಿರುವಾಗ
ಯಾರು ಈ ಕೆಲಸ ಮಾಡೋದಕ್ಕೆ ಸಾಧ್ಯ? ಅದೇನು ಬೆಲೆ ಬಾಳುವ ವಸ್ತುವೇ?’ ಎಂದು ಪ್ರಶ್ನಿಸಿದರು. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಧ್ಯಪ್ರವೇಶಿಸಿದ ಬಿಜೆಪಿಯ ಸದಸ್ಯ ಸಿ.ಟಿ.ರವಿ, “ಅನ್ನಭಾಗ್ಯ ಅಕ್ಕಿಯಲ್ಲೂ ಪ್ಲಾಸ್ಟಿಕ್‌ ಅಕ್ಕಿ ಇದೆ ಎನ್ನುವ ಸುದ್ದಿ ಇದೆ. ಅದನ್ನು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುತ್ತಿದ್ದಾರೆ. ಹಾಗಾದರೆ ಸರ್ಕಾರವೇ ಪ್ಲಾಸ್ಟಿಕ್‌ ಅಕ್ಕಿಯನ್ನು ಕೊಡುತ್ತಿದೆಯೇ?’ ಎಂದು ಆಹಾರ ಸಚಿವರನ್ನು ಪ್ರಶ್ನಿಸಿದರು.

ಇದೊಂದು ವದಂತಿ ಅಷ್ಟೇ
“ಪ್ಲಾಸ್ಟಿಕ್‌ ಅಕ್ಕಿ ಮತ್ತು ಮೊಟ್ಟೆ ತಯಾರಿಸುವುದು ಶುದ್ಧ ಸುಳ್ಳು. ಇದೊಂದು ವದಂತಿ ಅಷ್ಟೆ. ಒಂದು ವೇಳೆ ಇದ್ದರೆ
ಅಂಥದ್ದು ಎಲ್ಲಿ ಪತ್ತೆಯಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಿ’ ಎಂದು ಸಚಿವ ಖಾದರ್‌ ಸವಾಲೆಸೆದರು. ಸಚಿವರ ಮಾತಿಗೆ ಆಕ್ಷೇಪ ವ್ಯಕ್ತ ಪಡಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, “ಪ್ಲಾಸ್ಟಿಕ್‌ ಅಕ್ಕಿ ಮತ್ತು ಮೊಟ್ಟೆ ಇದೆಯೋ ಇಲ್ಲವೋ ಎಂಬುದು ಯಾರಿಗೆ ಗೊತ್ತಿದೆ? ನೀವು ಸಚಿವರಾಗಿ ಈ ರೀತಿ ಬೇಜವಾಬ್ದಾರಿ ಉತ್ತರ ಕೊಡಬೇಡಿ. ಸರ್ಕಾರದ
ಮಂತ್ರಿಯಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ‘ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next