Advertisement

ನೆಟ್ಟಾರು: ಉಪಯೋಗವಿಲ್ಲದ ಬಸ್‌ ತಂಗುದಾಣ

11:50 PM Jun 01, 2019 | mahesh |

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ನೆಟ್ಟಾರು ಪ್ರಯಾಣಿಕರ ಬಸ್‌ ತಂಗುದಾಣ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಬಸ್‌ ನಿಲ್ದಾಣದ ಛಾವಣಿಯ ಮರದ ಪಕ್ಕಾಸು ಮುರಿದಿದ್ದು, ಹೆಂಚು ಹಾರಿ ಹೋಗಿದೆ. ಬಸ್‌ ನಿಲ್ದಾಣದ ಸುತ್ತ ಪೊದೆ ಬೆಳೆದು ನಿಂತಿದ್ದು, ಬಸ್‌ ನಿಲ್ದಾಣವನ್ನು ಗುರುತಿಸುವುದೇ ಅಸಾಧ್ಯವಾಗಿದೆ. ಪುತ್ತೂರಿನಿಂದ ಬೆಳ್ಳಾರೆಗೆ ಹಾಗೂ ಪೆರ್ಲಂಪಾಡಿಯಂದ ಬೆಳ್ಳಾರೆಗೆ ಸಂಪರ್ಕಿಸುವ ನೆಟ್ಟಾರು ಜಂಕ್ಷನ್‌ನಲ್ಲಿರುವ ಈ ಬಸ್‌ ನಿಲ್ದಾಣ ಹಲವು ವರ್ಷಗಳಿಂದ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ ಸರಿಪಡಿಸದಿರುವುದರಿಂದ ಪ್ರಯಾಣಿಕರು ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸ್ಥಳಾಂತರಕ್ಕೆ ಆಗ್ರಹ
ಪೆರ್ಲಂಪಾಡಿ ಹಾಗೂ ಮಾಡಾವು ಮೂಲಕ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ನೆಟ್ಟಾರು ಪ್ರಮುಖ ಜಂಕ್ಷನ್‌ ಆಗಿದ್ದು, ದಿನಂಪ್ರತಿ ಹತ್ತಾರು ಬಸ್‌ಗಳು ಸಂಚರಿಸುತ್ತವೆ. ಆದರೆ ಈಗ ಇರುವ ಬಸ್‌ ನಿಲ್ದಾಣ ಯಾವ ಕಡೆಯಿಂದ ಬಸ್‌ ಬಂದರೂ ಉಪಯೋಗಕ್ಕಿಲ್ಲ ಎಂಬಂತಾಗಿದೆ. ಬಸ್‌ ನಿಲ್ದಾಣ ಒಂದು ಕಡೆಯಾದರೆ ಬಸ್‌ ನಿಲ್ಲುವುದು ಬೇರೆಯೇ ಕಡೆ. ಆದ್ದರಿಂದ ವಿದ್ಯಾರ್ಥಿಗಳೂ ಸಹಿತ ಪ್ರಯಾಣಿಕರು ರಸ್ತೆ ಬದಿಯಲ್ಲೋ ಅಂಗಡಿ ಜಗಲಿಯಲ್ಲೋ ಬಸ್‌ಗಾಗಿ ಕಾಯುವುದು ಅನಿವಾರ್ಯವಾಗಿದೆ. ಬಸ್‌ ನಿಲ್ದಾಣವನ್ನು ಸ್ಥಳಾಂತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಾರ್ವಜನಿಕರು ಹಲವು ಬಾರಿ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಪ್ರಯಾಣಿಕರ ತಂಗುದಾಣ ಭಿಕ್ಷುಕರ ಆಶ್ರಯ ತಾಣವಾಗಿದೆ.

ಅಂಚೆ ಕಚೇರಿಗೂ ಅಪಾಯ
ಬಸ್‌ ನಿಲ್ದಾಣದ ಪಕ್ಕದಲ್ಲೇ ಮಣಿಕ್ಕಾರ ಅಂಚೆ ಕಚೇರಿ ಕಾರ್ಯಾಚರಿಸುತ್ತಿದ್ದು, ಬಸ್‌ ನಿಲ್ದಾಣದ ಛಾವಣಿ ಕುಸಿದಲ್ಲಿ ಅಂಚೆ ಕಚೇರಿಗೂ ಅಪಾಯ ತಪ್ಪಿದ್ದಲ್ಲ. ಪ್ರಯಾಣಿಕರ ವಿಶ್ರಾಂತಿ ಕೊಠಡಿಯ ಛಾವಣಿ ಮೂಲಕ ನೀರು ಸೋರುತ್ತಿದೆ. ಛಾವಣಿ ಕುಸಿದು ಬಿದ್ದಲ್ಲಿ ಅಂಚೆ ಕಚೇರಿಯ ಕಡತಗಳಿಗೂ ಹಾನಿಯಾಗುವ ಅಪಾಯವಿದೆ.

ಶೀಘ್ರ ದುರಸ್ತಿ
ಬೆಳ್ಳಾರೆ ಗ್ರಾಮ ಪಂಚಾಯತ್‌ವ್ಯಾಪ್ತಿಯ ಬಸ್‌ ನಿಲ್ದಾಣಗಳ ದುರಸ್ತಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ನೆಟ್ಟಾರು ಬಸ್‌ ನಿಲ್ದಾಣವನ್ನು ಪರಿಶೀಲಿಸಿ ಮಳೆಗಾಲಕ್ಕೆ ಮೊದಲು ಛಾವಣಿ ಸರಿಪಡಿಸಲಾಗುವುದು.
– ಶಕುಂತಳಾ ನಾಗರಾಜ್‌, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ

– ಉಮೇಶ್‌ ಮಣಿಕ್ಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next