Advertisement

ರಾಜ್ಯದ ಎಲ್ಲಾ ಗ್ರಾಮಗಳ ಇತಿಹಾಸ ದಾಖಲಿಸಲು ಯೋಜನೆ

03:59 PM Sep 10, 2019 | Team Udayavani |

ಮಂಡ್ಯ: ಪ್ರತಿಯೊಬ್ಬರೂ ರಾಜ್ಯದ ಎಲ್ಲ ಗ್ರಾಮದ ಇತಿಹಾಸ ತಿಳಿದುಕೊಳ್ಳುವಂತಾಗಬೇಕು. ಈ ಹಿನ್ನೆಲೆಯಲ್ಲಿ ಗ್ರಾಮದ ಹಿನ್ನೆಲೆಯನ್ನು ದಾಖಲಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಅದರಂತೆ ಜಿಲ್ಲೆಯ ಪ್ರತಿ ಗ್ರಾಮದ ಇತಿಹಾಸವನ್ನು ದಾಖಲಿಸಲು ಕ್ರಮ ವಹಿಸುವಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮಹತ್ಕಾರ್ಯಕ್ಕೆ ಕನ್ನಡ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವ್ಯಾಸಂಗ ಮಾಡುತ್ತಿರುವ ಪದವಿ ಅಥವಾ ಪಿಯುಸಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಪ್ರತಿ ಮೂರು ವಿದ್ಯಾರ್ಥಿಗಳನ್ನು ಒಂದು ತಂಡದಂತೆ ರೂಪಿಸಿ ಗ್ರಾಮದ ಹುಟ್ಟು, ಊರಿನ ಗ್ರಾಮದೇವತೆ, ಆಚಾರ, ವಿಚಾರ, ಸಂಪ್ರದಾಯ, ಪದ್ಧತಿ, ಧಾರ್ಮಿಕ ಹಿನ್ನೆಲೆ ಸೇರಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಅಧ್ಯಯನ: ಸರ್ಕಾರದ ಉದ್ದೇಶಿತ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಅಧ್ಯಯನವಾದಂತಾಗುತ್ತದೆ. ಗ್ರಾಮದ ಇತಿಹಾಸದ ಅರಿವೂ ಮೂಡುತ್ತದೆ. ಶೀಘ್ರವೇ ಜಿಲ್ಲೆಯ ಎಲ್ಲ ಕಾಲೇಜಿನ ಪ್ರಾಂಶುಪಾಲರೊಂದಿಗೆ ಸಭೆ ಆಯೋಜಿಸುವಂತೆ ಸೂಚಿಸಿದ ಸಚಿವರು, ಗ್ರಾಮದ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿದ ನಂತರ ತಜ್ಞರೊಂದಿಗೆ ಕುಳಿತು ಪರಿಶೀಲನೆ ನಡೆಸಬೇಕು. ಬಳಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ರಾಜ್ಯದ ಯಾವುದೇ ಗ್ರಾಮದ ಇತಿಹಾಸದ ಮಾಹಿತಿಯನ್ನು ಯಾರು ಎಲ್ಲಿ ಬೇಕಾದರೂ ಕುಳಿತಲ್ಲೇ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಇದಕ್ಕೆ ಪ್ರತಿಕ್ರಿಯಿಸಿ, ಆದಷ್ಟು ಬೇಗನೆ ಮಾಹಿತಿ ಕಲೆ ಹಾಕಿಸುವ ಕೆಲಸ ಮಾಡಲಾಗುವುದು. ಅಂತೆಯೇ, ಮಾಹಿತಿಯನ್ನು ಗ್ರಾಮ ಪಂಚಾಯಿತಿವಾರು ಪ್ರಕಟಿಸಲಾಗುವುದು ಎಂದು ಸಚಿವರಿಗೆ ತಿಳಿಸಿದರು.

ಅಧಿಕಾರಿ ಗೈರಾಗಿದ್ದಕ್ಕೆ ಗರಂ: ಸಭೆಗೆ ಪಿಡಬ್ಯುಡಿ ಎಂಜಿನಿಯರ್‌ ಹರ್ಷ ಗೈರಾಗಿದ್ದಕ್ಕೆ ಸಚಿವ ಗರಂ ಆದರು. ಸಭೆಗೆ ಕಚೇರಿ ಸಿಬ್ಬಂದಿಯನ್ನು ಕಳಿಸಿದಕ್ಕೆ ಆಕ್ಷೇಪಿಸಿದ ಸಿ.ಟಿ.ರವಿ, ಸಮರ್ಪಕ ಮಾಹಿತಿ ತರದೇ ಸಭೆಗೆ ಬಂದಿದ್ದೀರಿ. ಹೀಗಿರುವಾಗ ಸಭೆಗೆ ಏಕೆ ಬರುತ್ತೀರಾ?. ಗೈರಾಗಿದ್ದಕ್ಕೆ ನೋಟಿಸ್‌ ನೀಡುವಂತೆ ಸೂಚಿಸಿದರು. ಇದೇ ವೇಳೆ ಸಚಿವ, ರೇವಣ್ಣ ಹೆಚ್ಚು ಹಣ ಬಿಡುಗಡೆ ಮಾಡಿರುವುದರಿಂದ ಪಿಡಬ್ಯುಡಿ ಇಲಾಖೆ ಸಿಬ್ಬಂದಿ ಪುರುಷೋತ್ತಿಲ್ಲದೆ ಕೆಲಸ ಮಾಡುತ್ತಿದ್ದಾರೆಂದು ಶಾಸಕ ಪುಟ್ಟರಾಜು ಅವರಿಗೆ ಹೇಳಿದರು.

Advertisement

ಸಭೆಯಲ್ಲಿ ಶಾಸಕ ಎಂ.ಶ್ರೀನಿವಾಸ್‌, ಮಂಡ್ಯ ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next