Advertisement

ಸುರೇಶ್‌ ಬಳಿ ಇತ್ತು ಪಿಸ್ತೂಲ್‌

10:35 AM Aug 01, 2018 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್‌ ಹತ್ಯೆಗೆ ಬಳಸಿದ್ದ ಪಿಸ್ತೂಲ್‌ ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿರುವ ಕುಣಿಗಲ್‌ ಮೂಲದ ಸುರೇಶ್‌ ಬಳಿಯೇ ಸುಮಾರು 20 ದಿನಗಳ ಕಾಲ ಇತ್ತು ಎಂಬುದು ಆರೋಪಿಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆಯಷ್ಟೇ ಆರೋಪಿಯನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ಸುರೇಶ್‌ ನಿಂದ ಕೆಲವೊಂದು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

Advertisement

2017 ಸೆ.5 ರಂದು ಗೌರಿಲಂಕೇಶ್‌ ಮೇಲೆ ಗುಂಡು ಹಾರಿಸಿದ ಪರಶುರಾಮ್‌ ವಾಗ್ಮೊರೆ ಪಿಸ್ತೂಲ್‌ ಅನ್ನು ಗಣೇಶ್‌ ಮಸ್ಕಿಗೆ ಕೊಟ್ಟು ಮರು ದಿನ ವಿಜಯಪುರದ ಕಡೆ ಪ್ರಯಾಣ ಬೆಳೆಸಿದ್ದ. ಬಳಿಕ ಆ ಪಿಸ್ತೂಲ್‌ ಅನ್ನು ಅಮೋಲ್‌ ಕಾಳೆ ಪಡೆದುಕೊಂಡಿದ್ದ.

 ಇತ್ತ ಪ್ರಕರಣ ಕುರಿತು ವಿಶೇಷ ತಂಡ ರಚನೆಯಾಗುತ್ತಿದ್ದಂತೆ ಆತಂಕಗೊಂಡ ಅಮೋಲ್‌ ಕಾಳೆ ಪಿಸ್ತೂಲ್‌ ಅನ್ನು ಸುರೇಶ್‌ಗೆ ಕೊಟ್ಟು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ. ಅನಂತರ ಸುಮಾರು 20 ದಿನಗಳ ಕಾಲ ಸುರೇಶ್‌, ಮಾಗಡಿ ಮುಖ್ಯರಸ್ತೆಯಲ್ಲಿರುವ ಶ್ರೀಸಾಯಿಲಕ್ಷ್ಮೀ ಲೇಔಟ್‌ನ ವಾಣಿಜ್ಯ ಮಳಿಗೆಯಲ್ಲಿ ಇಟ್ಟಿದ್ದ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪಿಸ್ತೂಲ್‌ ಪಡೆದ ವ್ಯಕ್ತಿ ಯಾರು?: ಗೌರಿಹತ್ಯೆ ಪ್ರಕರಣ ಕೂಡ ಕಲಬುರ್ಗಿ ಪ್ರಕರಣದಂತೆ ತಣ್ಣಗಾಗುತ್ತದೆ ಎಂದು ಭಾವಿಸಿದ್ದ ಅಮೋಲ್‌ ಕಾಳೆ ಪಿಸ್ತೂಲ್‌ ಅನ್ನು ಸುರೇಶ್‌ಗೆ ಕೊಟ್ಟು ಹೋಗಿದ್ದ. ಆದರೆ, ಎಸ್‌ಐಟಿ ತನಿಖಾ ವೇಗದಿಂದ ಗಾಬರಿಗೊಂಡ ಅಮೋಲ್‌ ಕಾಳೆ ಕೂಡಲೇ ಪಿಸ್ತೂಲ್‌ ಅನ್ನು ತಾನು ಸೂಚಿಸಿದ ವ್ಯಕ್ತಿಗೆ ಕೊಡುವಂತೆ ಸುರೇಶ್‌ಗೆ ತಿಳಿಸಿದ್ದ.
 
ಅದರಂತೆ ಆರೋಪಿ ಕೊಟ್ಟಿದ್ದಾನೆ. ಆದರೆ, ಆತ ಯಾರು ಎಂಬುದು ಇನ್ನು ನಿಗೂಢವಾಗಿದೆ. ಈ ಮಧ್ಯೆ ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆಯುವ ವೇಳೆಯೊಳಗೆ ಪಿಸ್ತೂಲ್‌ ಐದಾರು ಮಂದಿ ಕೈ ಬದಲಾಗಿರುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ಈತನೇ ಇತರೆ ಸಾಕ್ಷ್ಯಗಳನ್ನು ಸುಟ್ಟುಹಾಕಿದ್ದಂತೆ ಪಿಸ್ತೂಲ್‌ ಅನ್ನು ನಾಶ ಮಾಡಿರಬಹುದು ಎಂದು ಎಸ್‌ಐಟಿ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ನರೇಂದ್ರ ನಾಯಕ್‌ ಹತ್ಯೆಗೂ ಸಂಚು?: ಗೌರಿ ಹಂತಕರ ಪೈಕಿ ಕೆಲವರು ಮಂಗಳೂರು ಮೂಲದ ವಿಚಾರವಾದಿ, ಮೌಡ್ಯ ವಿರೋಧಿ ಕಾರ್ಯಕರ್ತ ನರೇಂದ್ರ ನಾಯಕ್‌ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಎರಡು ಬಾರಿ ನರೇಂದ್ರ ನಾಯಕ್‌ ಮನೆ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಓಡಾಡುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. 

Advertisement

8 ದಿನ ಎಸ್‌ಐಟಿ ವಶಕ್ಕೆ  ಸುರೇಶ್‌ ಪತ್ರಕರ್ತೆ ಗೌರಿಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕುಣಿಗಲ್‌ ಮೂಲದ ಸುರೇಶ್‌ನನ್ನು 8 ದಿನಗಳ ಕಾಲ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶಕ್ಕೆ ನೀಡಿ 3ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಸುರೇಶ್‌ ಪ್ರಮುಖ ಪಾತ್ರವಹಿಸಿದ್ದು, ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆಯುವಂತೆ ಎಸ್‌ಐಟಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಶ್ರೀಶೈಲ ವಡವಡಗಿ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಸಂಬಂಧ ಸೋಮವಾರವೇ ಅರ್ಜಿಯ ವಿಚಾರಣೆ ಮುಕ್ತಾಯಗೊಳಿಸಿದ್ದ ನ್ಯಾಯಾಧೀಶ ವಿ.ಪ್ರಕಾಶ್‌ ಕಾಯ್ದಿರಿಸಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿದರು. ಇದಕ್ಕೆ ಆಕ್ಷೇಪಿಸಿದ ಸುರೇಶ್‌ ಪರ ವಕೀಲ ಅಮೃತೇಶ್‌, ತಮ್ಮ ಕಕ್ಷಿದಾರರಿಗೆ ತನಿಖಾಧಿಕಾರಿಗಳು ಈಗಾಗಲೇ ಬಹಳ ಹಿಂಸೆ ನೀಡಿದ್ದಾರೆ. ಹೀಗಾಗಿ 8 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಬಾರದು. ಮತ್ತೆ ಈತನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next