Advertisement

ಮರವಂತೆ-ತ್ರಾಸಿ ಕಡಲ್ಕೊರೆತ ತಡೆಗೆ ಪೈಲೆಟ್‌ ಯೋಜನೆ

09:54 AM Oct 25, 2019 | sudhir |

ಉಪ್ಪುಂದ: ವಿಶ್ವವಿಖ್ಯಾತ ತಾಣವಾಗಿ ರುವ ಮರವಂತೆ ಬೀಚ್‌ನ ಮರಳಿನ ಹಾಗೂ ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಆರಂಭಿಸಿದ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆಗೆ ಈಗ ಅಂತಿಮ ಸ್ಪರ್ಷ ನೀಡಲಾಗುತ್ತಿದೆ.

Advertisement

ಮರವಂತೆ-ತ್ರಾಸಿ ಗ್ರಾಮಗಳಿಗೆ ಸೇರಿದ ಸಮುದ್ರ-ನದಿ ನಡುವಿನ ಇಕ್ಕಟ್ಟಾದ ದಂಡೆಯ ಮೇಲೆ ಸಾಗುವ 3 ಕಿಲೋಮೀಟರು ಉದ್ದದ ರಾಷ್ಟ್ರೀಯ ಹೆದ್ದಾರಿ ಭಾಗಕ್ಕೆ ಸದಾ ಕಡಲ್ಕೊರೆತದ ಭೀತಿ. ರಾಷ್ಟ್ರೀಯ ಮಹತ್ವದ ಈ ಸಂಪರ್ಕಸೇತುವಿನ ಸುರಕ್ಷತೆಗಾಗಿ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಂಡ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಈಗ ಮುಕ್ತಾಯದ ಹಂತಕ್ಕೆ ಬಂದಿದೆ.

ಗ್ರಾಯಿನ್‌ ಕಲ್ಲು: ಮರಳಿನ ರಕ್ಷಣೆ
ಕಡಲ್ಕೊರೆತ ತಡೆಗೆ ದಶಕಗಳಿಂದ ಚಾಲ್ತಿಯಲ್ಲಿ ರುವ ಕಲ್ಲುಗಳನ್ನು ಪೇರಿಸುವ ಕೆಲಸ ನಿರೀಕ್ಷಿತ ಯಶಸ್ಸು ನೀಡುತ್ತಿಲ್ಲ. ಅದಕ್ಕಾಗಿ ಹಲವೆಡೆ ಫಲ ನೀಡಿದೆ ಎನ್ನಲಾಗುವ ಈ ಯೋಜನೆಯನ್ನು ಇಲ್ಲಿ ಅನುಷ್ಠಾನಿಸಲಾಗಿದೆ. ಇದರಲ್ಲಿ ಸಮುದ್ರದ ದಂಡೆಯುದ್ದಕ್ಕೆ ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಸಮುದ್ರದತ್ತ ಹೊರಚಾಚಿರುವ ಗ್ರಾಯಿನ್‌ ಅಥವಾ ಕರೆಗೋಡೆ ಎಂದು ಕರೆಯಲಾಗುವ ಕಲ್ಲಿನ ನಿರ್ಮಾಣಗಳನ್ನು ರಚಿಸಲಾಗಿದೆ. ಇವು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತವೆ. ಅದರ ಜತೆಗೆ ಎರಡು ಗ್ರಾಯಿನ್‌ಗಳ ನಡುವೆ ಅಲೆಗಳ ಸಹಜ ಪ್ರಕ್ರಿಯೆಯ ಪರಿಣಾಮ ವಾಗಿ ಮರಳು ಶೇಖರಣೆಯಾಗಿ ಸಮುದ್ರದಂಡೆ ವಿಸ್ತರಿಸುತ್ತದೆ.

ಕರೆಗೋಡೆಗಳ ನಿರ್ಮಾಣ
ಈ ಪ್ರದೇಶದಲ್ಲಿ ಪ್ರತಿ 120 ಮೀಟರ್‌ ಅಂತರದಲ್ಲಿ 24 ಕರೆಗೋಡೆಗಳನ್ನು ನಿರ್ಮಿಸಲಾಗಿದೆ. ಸಮುದ್ರವು ಹೆದ್ದಾರಿಗೆ ತೀರ ನಿಕಟವಾಗಿರುವಲ್ಲಿ 9 “ಟಿ’ ಮಾದರಿಯ ಮತ್ತು ಉಳಿದೆಡೆ 15 “ಐ’ ಮಾದರಿಯ ಕರೆಗೋಡೆಗಳನ್ನು ರಚಿಸಲಾಗಿದೆ.

“ಐ’ ಕರೆಗೋಡೆಗಳು 100 ಮೀಟರ್‌ ಉದ್ದ, ತಳದಲ್ಲಿ 30 ಮೀಟರ್‌ ಮತ್ತು ಶಿರದಲ್ಲಿ 4 ಮೀಟರ್‌ ಅಗಲವಾಗಿರುತ್ತವೆ.

Advertisement

“ಟಿ’ ಮಾದರಿಯವು 76 ಮೀಟರ್‌ ಉದ್ದ, ತಳದಲ್ಲಿ 36 ಮೀಟರ್‌ ಮತ್ತು ಶಿರದಲ್ಲಿ 5 ಮೀಟರ್‌ ಅಗಲವಾಗಿರುತ್ತವೆ. ಈ 9 ಕರೆಗೋಡೆಗಳ ಹೊರಮೈಯಲ್ಲಿ ಕಾಂಕ್ರೀಟಿನ ಟೆಟ್ರಾಪಾಡ್‌ಗಳ ರಕ್ಷಣೆ ಒದಗಿಸಲಾಗಿದೆ.

ಜಿಯೋಫ್ಯಾಬ್ರಿಕ್‌ ಶೀಟ್‌
ಕರೆಗೋಡೆಗಳ ತಳದ 1.5 ಮೀಟರ್‌ ಆಳದ ಮರಳನ್ನು ತೆಗೆದು ಅಲ್ಲಿ ಜಿಯೋಫ್ಯಾಬ್ರಿಕ್‌ ಶೀಟ್‌ ಹರಡಿ ಅದರ ಮೇಲೆ ಕಲ್ಲುಗಳನ್ನು ಅಳವಡಿಸಲಾಗಿರುವುದರಿಂದ ಕರೆಗೋಡೆಗಳು ದೀರ್ಘ‌ಕಾಲ ಕುಸಿಯದೆ ಉಳಿಯುತ್ತವೆ.

ಕಾಮಗಾರಿ ಹೆಚ್ಚಾಕಡಿಮೆ ಮುಗಿದಿದ್ದು, ಕೆಲವು ಕರೆಗೋಡೆಗಳಿಗೆ ಟೆಟ್ರಾಪಾಡ್‌ ಅಳವಡಿಸುವ ಕೆಲಸ ಮಾತ್ರ ಉಳಿದಿದೆ.

ಪುಣೆಯ ಕೇಂದ್ರೀಯ ಜಲಶಕ್ತಿ ಸಂಶೋಧನಾ ಕೇಂದ್ರ ಅನುಮೋದಿಸಿದ 88 ಕೋಟಿ ರೂ. ವೆಚ್ಚದ ಈ ಯೋಜನೆಗೆ ಏಶ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಮುಂಗಡ ನೆರವು ದೊರಕಿದೆ. ಬಂದರು ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿ ನಡೆದಿದೆ.

ಸೆಲ್ಫಿ ಮುದ
ಈ ತೀರದಲ್ಲಿ ಸಮುದ್ರ ಆಳವಾಗಿರುವುದರಿಂದ ಸೀಮಿತ ಭಾಗದಲ್ಲಿ ಮಾತ್ರ ಪ್ರವಾಸಿಗಳು ವಿಹರಿಸಬಹುದಿತ್ತು. ಈಗ ಅವರು ಉದ್ದಕ್ಕೂ ರಚನೆಯಾಗಿರುವ ಗ್ರಾಯಿನ್‌ಗಳ ಮೇಲೆ ನಡೆದಾಡುತ್ತ, ತೆರೆ ಚಿಮ್ಮಿಸುವ ನೊರೆಯನ್ನು ನೋಡುತ್ತ, ಸಮುದ್ರದ ನಡುವೆ ಇದ್ದಂತೆ ಭಾಸವಾಗುವಂತೆ ಸೆಲ್ಫಿ ತೆಗೆದುಕೊಳ್ಳುತ್ತ ಮೊದಲಿಗಿಂತ ಹೆಚ್ಚು ಮುದಗೊಳ್ಳುತ್ತಿದ್ದಾರೆ.

– ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next