Advertisement

ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸೌಖ್ಯ ಮೇಳೈಸುವ ಯೋಗಾ

09:07 AM Jun 22, 2019 | sudhir |

ಜಗತ್ತಿಗೆ ನಮ್ಮ ಕೊಡುಗೆಯಾಗಿರುವ ಯೋಗಾಭ್ಯಾಸವು ಮೈಕೈ ದಂಡಿಸುವ ದೈಹಿಕ ಕಸರತ್ತು ಮಾತ್ರವೇ ಅಲ್ಲ. ಪುರಾತನ ಭಾರತೀಯ ವೈದ್ಯವಿಜ್ಞಾನದ ಪರಿಕಲ್ಪನೆಗಳಂತೆ ಮನುಷ್ಯ ದೇಹದಲ್ಲಿ ನಿಹಿತವಾಗಿರುವ ವಿವಿಧ ಚಕ್ರಗಳು, ನಾಡಿಗಳು ಹಾಗೂ ಪ್ರಾಣಶಕ್ತಿಯನ್ನು ಯಮ-ನಿಯಮದಂತಹ ಕ್ರಮಗಳಿಂದ ಸುಸೂತ್ರಗೊಳಿಸಿ ದೈಹಿಕ ಸ್ವಾಸ್ಥ್ಯದ ಜತೆಗೆ ಮಾನಸಿಕ ಕ್ಷೇಮವನ್ನೂ
ಆಧ್ಯಾತ್ಮಿಕ ಉನ್ನತಿಯನ್ನೂ ಸಾಧಿಸುವ ಜೀವನ ವಿಧಾನವದು.

Advertisement

ಜಗತ್ತಿನಾದ್ಯಂತ ಪ್ರತಿವರ್ಷ ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಐದು ವರ್ಷಗಳ ಹಿಂದೆ ಆರಂಭವಾದ ಇದು ನಿಧಾನವಾಗಿ ಒಂದು ಮಹತ್ವದ ದಿನಾಚರಣೆಯಾಗಿ ಬಹುತೇಕ ಎಲ್ಲ ದೇಶಗಳಲ್ಲಿ ಹಬ್ಬುತ್ತಿದೆ. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸೌಖ್ಯವನ್ನು ದಯಪಾಲಿಸುವ ಪುರಾತನ ಭಾರತೀಯ ಜೀವನ ವಿಧಾನ ಎಂದರೆ ತಪ್ಪಲ್ಲ. ಜಗತ್ತಿಗೆ ಯೋಗಾಭ್ಯಾಸವನ್ನು ಪರಿಚಯಿಸಿದ್ದು ಭಾರತೀಯರು ಎಂಬುದು ನಮ್ಮ ಹೆಮ್ಮೆ. ಸುಮಾರು 6,000 ವರ್ಷಗಳ ಸುದೀರ್ಘ‌ವಾದ ಪರಂಪರೆಯನ್ನು ಹೊಂದಿರುವ ಯೋಗಾಭ್ಯಾಸವು ನಮ್ಮ ದೈಹಿಕ ಮತ್ತು ಮಾನಸಿಕ ಕಲ್ಯಾಣಕ್ಕೆ ಪೂರಕವಾಗಿದೆ. ಯೋಗಾಭ್ಯಾಸದಿಂದ ನಾವು ಮನಸ್ಸು ಮತ್ತು ದೇಹವನ್ನು ಸಮತೋಲನ ಮತ್ತು ಕ್ಷೇಮದ ಏಕಸೂತ್ರದಲ್ಲಿ ತರುವುದು ಸಾಧ್ಯ.

ಯೋಗ ದಿನಾಚರಣೆ ಆರಂಭವಾದ ಬಳಿಕವೇ ಜಗತ್ತಿನಾದ್ಯಂತ ಯೋಗಾಭ್ಯಾಸಕ್ಕೆ ಮನ್ನಣೆ ಸಿಕ್ಕಿದ್ದೇನಲ್ಲ. ಬಹಳ ಹಿಂದಿನಿಂದಲೇ ಯೋಗ ಜೀವನಪಥವು ಪಾಶ್ಚಾತ್ಯರ ಗಮನ ಸೆಳೆದಿತ್ತು, ಅನುಸರಿಸುವಂತೆ ಆಕರ್ಷಿಸಿತ್ತು. ಆದರೆ ಐದು ವರ್ಷಗಳ ಹಿಂದೆ, 2014ರಲ್ಲಿ ಅದು ವಿಶ್ವಸಂಸ್ಥೆಯ ಮೂಲಕ ಒಂದು ದಿನಾಚರಣೆಯ ಮನ್ನಣೆಯನ್ನು ಪಡೆದು ಅಧಿಕೃತವಾಯಿತು. ಆ ಬಳಿಕ ಅದು ಜಗತ್ತಿನ ವಿವಿಧ ದೇಶಗಳಲ್ಲಿ ಹೆಚ್ಚು ಗಮನವನ್ನು ಸೆಳೆಯಿತು.

ಪ್ರತಿವರ್ಷ ಜೂನ್‌ 21ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಬೇಕು ಎಂಬುದಾಗಿ ಭಾರತವು 2014ರಲ್ಲಿ ವಿಶ್ವಸಂಸ್ಥೆಗೆ ಕರಡು ಮನವಿಯನ್ನು ಸಲ್ಲಿಸಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ಜರಗಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಅಶೋಕ್‌ ಕುಮಾರ ಅವರು ಈ ಕರಡು ಪ್ರಸ್ತಾವನೆಯನ್ನು ಮಂಡಿಸಿದರು. ಈ ಪ್ರಸ್ತಾವವನ್ನು ಜಗತ್ತಿನ 193 ರಾಷ್ಟ್ರಗಳ ಪೈಕಿ ಸುಮಾರು 177 ದೇಶಗಳು ಅನುಮೋದಿಸಿದವು. ಇದರಂತೆ ಜೂನ್‌ 21ರಂದು ವಿಶ್ವಾದ್ಯಂತ ವಿಶ್ವ ಯೋಗ ದಿನ ಆಚರಿಸಲು ಕರೆ ನೀಡಲಾಯಿತು. ವಿಶ್ವದಾದ್ಯಂತ ಮೊದಲ ಯೋಗ ದಿನವನ್ನು ಆಚರಿಸಿದ್ದು 2015ರ ಜೂನ್‌ 21ರಂದು. ಇಂದು ಸರಕಾರ, ಸರಕಾರೇತರ ಸಂಸ್ಥೆಗಳ ಮೂಲಕ ಯೋಗಾಭ್ಯಾಸದ ಜತೆಗೆ ಆರೋಗ್ಯ ಜಾಗೃತಿ ಮೂಡಿಸಲಾಗುತ್ತದೆ. 2015ರ ಮೊದಲ ಯೋಗ ದಿನವನ್ನು ದಿಲ್ಲಿಯ ರಾಜಪಥದಲ್ಲಿ ಆಚರಿಸಲಾಗಿತ್ತು.

ಭಾರತ ಮತ್ತು ಯೋಗ
ಯೋಗವೂ ವಿಶ್ವಕ್ಕೆ ಭಾರತ ನೀಡಿದ ಮಹತ್ವದ ಕೊಡುಗೆಯಾಗಿದೆ. ಈ ಕೊಡುಗೆಯಿಂದ ವಿಶ್ವ ಭಾರತಕ್ಕೆ ಋಣಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕ್ರಿ.ಪೂ. 3ನೇ ಶತಮಾನದಲ್ಲಿ ಪತಂಜಲಿ ಋಷಿಯ ಚಿಂತನೆಯ ಮೂಲಕ ಯೋಗ ರೂಪಿತಗೊಂಡಿದೆ. ಯೋಗಾಭ್ಯಾಸವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ – ಈ 3 ಅಂಶಗಳನ್ನು ಏಕೀಕೃತಗೊಳಿಸಿ ಕಲ್ಯಾಣವನ್ನುಂಟು ಮಾಡುತ್ತದೆ.

Advertisement

ವಿಶೇಷ ಸಂದೇಶ
ಐದು ವರ್ಷಗಳಿಂದ ಯೋಗ ದಿನಾಚರಣೆಯನ್ನು ಪ್ರತೀ ವರ್ಷವೂ ವಿಶೇಷವಾದ ಸಂದೇಶದೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ವಿಶ್ವ ಯೋಗ ದಿನಕ್ಕೆ “ಯೋಗ ಮತ್ತು ಗುರು’ ಎಂದು ಸಂದೇಶವಿದೆ. ಭಾರತದ ಮಟ್ಟಿಗೆ ಈ ದಿನ ವಿಶೇಷವಾಗಿದ್ದು, ಸರಕಾರವೂ ಮುತುವರ್ಜಿಯಿಂದ ಒಂದು ವಿಶೇಷ ಶಿಷ್ಟಾಚಾರವಾಗಿ ಆಚರಿಸುತ್ತಿದೆ. ಈ ಬಾರಿಯ ಯೋಗದಿನದ ಆಚರಣೆ ಝಾರ್ಖಂಡ್‌ ರಾಂಚಿಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ.

ದೀರ್ಘ‌ ಹಗಲಿನ ದಿನ
ಜೂ.21ರಂದೇ ಯೋಗ ದಿನಾಚರಣೆ ಏಕೆ ಎಂಬುದೊಂದು ಪ್ರಶ್ನೆ. ಈ ದಿನ ವರ್ಷದ ಅತಿ ದೀರ್ಘ‌ ಹಗಲಿನ ದಿನ. ದಕ್ಷಿಣಾಯನ ಆರಂಭವಾಗುವ ದಿನವಿದು. ದಕ್ಷಿಣಾಯನವು ಆಧ್ಯಾತ್ಮಿಕ ಸಂಬಂಧಿ ಅಭ್ಯಾಸಗಳಿಗೆ ಪೂರಕವಾದ ಸಮಯ ಎಂದು ತಿಳಿಯಲಾಗಿದೆ. ಸೂರ್ಯಾಭಿಮುಖವಾಗಿ ಯೋಗಾಭ್ಯಾಸ ಮಾಡುವುದರಿಂದ ನಮ್ಮಲ್ಲಿ ನವ ಚೈತನ್ಯ ಉದ್ದೀಪನಗೊಳ್ಳುತ್ತದೆ ಎಂಬ ನಂಬಿಕೆ ಇದೆ.

ಹೊಸ ಜೀವನ ಆರಂಭಿಸಿದ

ಬಾಲಿವುಡ್‌ನ‌ ಅತ್ಯುತ್ತಮ ಹಾಸ್ಯನಟರಲ್ಲಿ ಒಬ್ಬರಾದ ರಸ್ಸೆಲ್‌ ಬ್ರಾಂಡ್‌ ಹಲವು ವರ್ಷಗಳ ಹಿಂದೆ ಮಿತಿಮೀರಿದ ಕುಡಿತ, ಮಾದಕ ವಸ್ತುಗಳ ಸೇವನೆಗಳಿಂದ ಹುಚ್ಚನಂತಾಗಿದ್ದರು. ಆ ನರಕ ಕೂಪದಿಂದ ಪಾರಾಗಬೇಕು ಎಂಬ ಮನಸ್ಸಿತ್ತು ಅವರಿಗೆ; ಆದರೆ ಮೇಲೇಳಲು ಪ್ರಯತ್ನಿಸಿದಷ್ಟೂ ಅದು ಅವರನ್ನು ಒಳಕ್ಕೆಳೆದು ಕೊಳ್ಳುತ್ತಿತ್ತು. ಅವರ ವರ್ತನೆಯಿಂದ ಜತೆಗಿದ್ದವರು ಅವರಿಂದ ದೂರಸರಿದರು. ಸಂಸಾರ ಬೇಸರವಾಯಿತು. ಬದುಕು ನರಕವಾಯಿತು. ಇಂತಹ ದುರ್ಭರ ಸನ್ನಿವೇಶದಲ್ಲಿ ರಸ್ಸೆಲ್‌ ಅವರನ್ನು ಕೈಹಿಡಿದು ಮೇಲೆತ್ತಿದ್ದು ಯೋಗ. ರಸೆಲ್‌ ಯೋಗಾಭ್ಯಾಸದ ಮೊರೆ ಹೋದರು. ತಪ್ಪದೆ ಆಸನಗಳನ್ನು ಅಭ್ಯಾಸ ಮಾಡುತ್ತ, ಆಧ್ಯಾತ್ಮಿ ಕತೆಯಿಂದ ತನ್ನನ್ನು ತಾನು ಹೇಗೆ ಬದಲಿಸಿಕೊಳ್ಳ ಬಹುದು ಎಂಬುದನ್ನು ಸಾಧಿಸಿ ತೋರಿದರು.

ಹೊಸ ವ್ಯಕ್ತಿಯಾದರು. ಇಂದು ಅವರು ಸಾವಿರಾರು ಜನರಿಗೆ ಯೋಗಾಭ್ಯಾಸ ಮಾಡಿ ಎಂದು ತಿಳಿವಳಿಕೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next