Advertisement
ಹುಲಿಗೆ ಹೆದರಿದ ಪ್ರಾಣಿಗಳೆಲ್ಲವೂ ಒಟ್ಟುಗೂಡಿ ಕಾಡಿನ ಒಂದು ಮೂಲೆಯಲ್ಲಿ ರಹಸ್ಯವಾಗಿ ಸಭೆ ನಡೆಸಿದವು. “”ಈ ಭಯಂಕರ ಪ್ರಾಣಿಯಿಂದ ಪಾರಾಗುವ ಬಗೆ ಹೇಗೆ? ಕೋತಿಯ ಹಾಗಿದ್ದರೆ ತೊಂದರೆಯಿಲ್ಲ. ಮರವೇರಿ ಕುಳಿತು ಪ್ರಾಣ ಉಳಿಸಿಕೊಳ್ಳಬಹುದು. ಆದರೆ ನಮಗಿನ್ನೂ ಮರವೇರುವ ಕಲೆ ಗೊತ್ತಿಲ್ಲ. ಕಾಡು ಬಿಟ್ಟು ಊರಿಗಿಳಿದರೆ ಜನ ಕೊಲ್ಲುತ್ತಾರೆ ” ಎಂದು ಹಂದಿ ದುಃಖದಿಂದ ಹೇಳಿತು. ಕೋತಿಯೂ ಸಂತೋಷಪಡದೆ, “”ನೀವು ನನ್ನದು ನಿಶ್ಚಿಂತೆಯ ಬದುಕು ಅಂದುಕೊಂಡಿದ್ದರೆ ಅದು ನಿಮ್ಮದೇ ತಪ್ಪು. ಆ ದೈತ್ಯನಿಗೆ ಮರ ಹತ್ತುವುದಕ್ಕೂ ಬರುತ್ತದೆ ಎಂಬುದು ನಿಮಗೆ ತಿಳಿದಿಲ್ಲವೆ? ರಾತ್ರೆ ನಾನು ಹೆಂಡತಿ, ಮಕ್ಕಳೊಂದಿಗೆ ಹಾಯಾಗಿ ಮರದ ಕೊಂಬೆಯಲ್ಲಿ ಮಲಗಿ ನಿದ್ರಿಸುತ್ತೇನೆ. ಆಗ ಈ ರಕ್ಕಸ ಮರವೇರಿ ಬಂದರೆ ಕತ್ತಲಲ್ಲಿ ಹೋಗುವುದಾದರೂ ಎಲ್ಲಿಗೆ?” ಎಂದು ಅದೂ ಮುಖ ಚಿಕ್ಕದು ಮಾಡಿತು.
Related Articles
Advertisement
ಮೊಲ ಸ್ವಲ್ಪವೂ ಭಯಪಡಲಿಲ್ಲ. “”ಫೂ, ಇದಕ್ಕೆ ಭಯಪಡಬೇಕೆ? ನಾನು ಗಾತ್ರದಲ್ಲಿ ಸಣ್ಣಗಿರುವ ಮಾತ್ರಕ್ಕೆ ನನ್ನಲ್ಲಿ ಜಾಣ್ಮೆಯಿಲ್ಲವೆಂದು ಭಾವಿಸಬೇಡಿ. ಯಾವ ಕಾಯಿಲೆಗೆ ಯಾವ ಬೇರು ಅರೆಯಬೇಕೆಂದು ನನಗೆ ತಿಳಿದಿದೆ. ಇದೊಂದು ದಿನ ನಿಮ್ಮ ಮನೆಗಳ ಒಳಗೆ ಅಡಗಿಕೊಳ್ಳಿ. ಯಾರೂ ಹೊರಗೆ ಬರಬೇಡಿ. ಬಂದ ಸಂಕಷ್ಟ ನಿವಾರಣೆಗೆ ಏನಾದರೂ ಉಪಾಯ ಹುಡುಕಲು ಸಾಧ್ಯವೇ ನಾನು ನೋಡುತ್ತೇನೆ” ಎಂದು ಭರವಸೆ ಹೇಳಿ ಪ್ರಾಣಿಗಳನ್ನು ಅವುಗಳ ಮನೆಗಳಿಗೆ ಕಳುಹಿಸಿತು. ತಾನೊಬ್ಬನೇ ಕಾಡಿನಲ್ಲಿ ಸವಾರಿ ಹೊರಟಿತು. ಎಲ್ಲ ಪ್ರಾಣಿಗಳೂ ಅಡಗಿಕೊಂಡ ಕಾರಣ ಹುಲಿಗೆ ಎಷ್ಟು ಹುಡುಕಿದರೂ ಏನೂ ಆಹಾರ ಸಿಕ್ಕಿರಲಿಲ್ಲ. ಅದು ಹಸಿವಿನಿಂದ ಬಳಲಿ ಅರಣ್ಯದಲ್ಲಿ ಕಾಲೆಳೆದುಕೊಂಡು ಬರುತ್ತ ಇತ್ತು. ಆಗ ಅದರ ಮುಂದೆ ಧಿಮಾಕಿನಿಂದ ಮೊಲ ನಡೆದುಕೊಂಡು ಬಂತು. ಹುಲಿ ಒಂದು ಸಲ ಘರ್ಜನೆ ಮಾಡಿತು. “”ಯಾರೋ ಅದು ಅಷ್ಟು ಪೊಗರಿನಿಂದ ಹೋಗುತ್ತಿರುವುದು? ಕಾಡಿನ ರಾಜ ನಾನಿಲ್ಲಿ ಬರುತ್ತಿರುವಾಗ ನನ್ನ ಮುಂದೆ ಮೊಣಕಾಲೂರಿ ಸಲಾಮು ಹೊಡೆಯಬೇಕೆಂಬುದು ತಿಳಿದಿಲ್ಲವೆ?” ಎಂದು ಪ್ರಶ್ನಿಸಿತು.
ಮೊಲ ನಿರ್ಲಕ್ಷ್ಯದಿಂದ, “”ಈ ಕಾಡಿಗೆ ನಿಮಗಿಂತ ದೊಡ್ಡವರಾದ, ಪರಾಕ್ರಮಿಯೊಬ್ಬರು ರಾಜರಾಗಿರುವಾಗ ಅವರಿಗೆ ಗೌರವ ಕೊಡುತ್ತೇವೆ ವಿನಃ ನಿಮಗೆ ನಾನೇಕೆ ಸಲಾಮು ಹೊಡೆಯಬೇಕು?” ಎಂದು ಕೇಳಿತು. ಹುಲಿ ಕೋಪದಿಂದ, “”ಏನೆಂದೆ? ನನಗಿಂತ ದೊಡ್ಡವರು ಈ ಕಾಡಿಗೆ ರಾಜರಾಗಿದ್ದಾರೆಯೇ? ಇದು ನಂಬುವ ಸಂಗತಿಯೇ?” ಎಂದು ಘರ್ಜಿಸಿತು. “”ಕೋಪ ಮಾಡಿಕೊಳ್ಳಬೇಡಿ. ಅಷ್ಟೇ ಏಕೆ, ಆ ರಾಜನಿಗೆ ಮಂತ್ರಿಯಾಗಿರುವುದು ನನ್ನ ಅಣ್ಣ. ಸುಳ್ಳು ಅಂದುಕೊಂಡಿರಾ? ನನ್ನ ಜೊತೆಗೆ ಬನ್ನಿ, ಅವರಿಬ್ಬರನ್ನೂ ತೋರಿಸುತ್ತೇನೆ” ಎಂದು ಮೊಲ ಸವಾಲು ಹಾಕಿತು.
“”ಓಹೋ, ನಿನ್ನ ವಂಶದವರಿಗೂ ರಾಜನ ಬಳಿ ಉದ್ಯೋಗವಿದೆಯೇ? ಈ ಚೋದ್ಯವನ್ನೊಮ್ಮೆ ಕಣ್ಣಾರೆ ನೋಡಿ ಆ ರಾಜನನ್ನು ಕಾಳಗಕ್ಕೆ ಕರೆಯುತ್ತೇನೆ. ಕ್ಷಣಮಾತ್ರದಲ್ಲಿ ಅವನನ್ನು ಸೋಲಿಸಿ ಮುಂದೆ ನನಗೆ ಎದುರಾಳಿಯಿಲ್ಲದ ಹಾಗೆ ಮಾಡುತ್ತೇನೆ. ಮೊದಲು ನನಗವರನ್ನು ತೋರಿಸು” ಎಂದಿತು ಹುಲಿ. ಮೊಲ ತುಂಬ ನೀರಿರುವ ಆಳವಾದ ಬಾವಿಯ ಬಳಿಗೆ ಹುಲಿಯನ್ನು ಕರೆದುಕೊಂಡು ಹೋಗಿ, “”ಬಾಗಿ ನೋಡಿ. ಅಲ್ಲಿ ನಿಮಗಿಂತ ಶೂರರಾದ ರಾಜರು, ಅವರ ಬಳಿ ಮಂತ್ರಿಯಾಗಿ ನಿಂತಿರುವ ನನ್ನ ಅಣ್ಣ ಕಾಣಿಸುತ್ತಾರೆ. ಮತ್ತೆ ಯುದ್ಧಕ್ಕೆ ಕರೆಯಿರಿ” ಎಂದು ಹೇಳಿತು. ಹುಲಿ ಬಾವಿಗೆ ಬಾಗಿ ನೋಡಿದಾಗ ಅದರ ಪ್ರತಿಬಿಂಬದ ಜೊತೆಗೆ ಮೊಲದ ಪ್ರತಿಬಿಂಬವೂ ಕಂಡುಬಂತು. ಮೊಲ ಹೇಳಿದ್ದು ಸುಳ್ಳಲ್ಲ, ಇಲ್ಲಿ ಪರಾಕ್ರಮಿ ಹುಲಿಯೊಂದು ಇದೆ, ಅದರೊಂದಿಗೆ ಮೊಲವೂ ಇದೆ ಎಂದು ನಂಬಿ ಘರ್ಜಿಸುತ್ತ ಅದರ ಕಡೆಗೆ ನೆಗೆಯಿತು. ಆದರೆ ತುಂಬಿದ್ದ ನೀರಿಗೆ ಬಿದ್ದು ಮೇಲೆ ಬರಲಾಗದೆ ಮೊಲದೊಂದಿಗೆ, “”ಮೋಸ, ಮೋಸ! ನೀನು ಮೋಸ ಮಾಡಿದೆ” ಎಂದು ಕೂಗಿತು. “”ಮೋಸ ಎಲ್ಲಿಯದು? ನಿನ್ನನ್ನು ಹೀಗೆಯೇ ಬಿಟ್ಟರೆ ಉಳಿದ ಪ್ರಾಣಿಗಳು ಬದುಕಬೇಡವೆ?” ಎಂದು ಮೊಲ ಹಿಗ್ಗುತ್ತ ಹೊರಟುಹೋಯಿತು.
ಪರಾಶರ