Advertisement

ಸಭೆ-ಸಮಾರಂಭಕ್ಕೆ ಅನುಮತಿ ಕಡ್ಡಾಯ

11:36 AM Sep 23, 2019 | Team Udayavani |

ಬೆಳಗಾವಿ: ಜಿಲ್ಲೆಯ ಮೂರು ಮತಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಸೋಮವಾರದಿಂದ ನಾಮಪತ್ರ ಸ್ವೀಕಾರ ಆರಂಭವಾಗಲಿದೆ. ಮಾದರಿ ನೀತಿ ಸಂಹಿತೆ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಯಲ್ಲಿ ಇರುವುದರಿಂದ ಯಾವುದೇ ಸಭೆ, ಸಮಾರಂಭ ಅಥವಾ ಮೆರವಣಿಗೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು.

Advertisement

ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನುಅಳವಡಿಸುವಂತಿಲ್ಲ. ಖಾಸಗಿ ಜಾಗದಲ್ಲಿ ಪ್ರಚಾರ ಸಾಮಗ್ರಿ ಅಳವಡಿಸಲು ಮಾಲೀಕರು ಹಾಗೂ ಸ್ಥಳೀಯ ಸಂಸ್ಥೆಯ ಅನುಮತಿ ಪಡೆದಿರಬೇಕು ಎಂದು ಹೇಳಿದರು.

ಚುನಾವಣಾ ಪ್ರಚಾರ ನಡೆಸಬೇಕಾದರೆ ನಿಯಮಾವಳಿ ಪ್ರಕಾರ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪಕ್ಷದ ಪದಾಧಿಕಾರಿಗಳಿಗೆ ವಾಹನ ಬಳಕೆ, ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ಪಡೆಯಬೇಕು. ಅದೇ ರೀತಿ ಖಾಸಗಿ ಸ್ಥಳದ ಬಳಕೆಗೆ ಅವುಗಳ ಮಾಲೀಕರಮತ್ತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅನುಮತಿ ಅಗತ್ಯ ಎಂದರು.

ಚುನಾವಣಾ ವೆಚ್ಚ ವೀಕ್ಷಕರು: ಜಿಲ್ಲೆಯಲ್ಲಿ ನಡೆಯಲಿರುವ ಮೂರು ಮತಕ್ಷೇತ್ರಗಳ ಉಪಚುನಾವಣೆಯ ಖರ್ಚು-ವೆಚ್ಚದ ಮೇಲೆ ನಿಗಾ ವಹಿಸಲು ಚುನಾವಣಾ ವೀಕ್ಷಕರು ಶೀಘ್ರ

ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಬೊಮ್ಮನಹಳ್ಳಿ ತಿಳಿಸಿದರು. ಚುನಾವಣಾ ಸಂದರ್ಭಗಳಲ್ಲಿ

Advertisement

ದುರ್ಬಳಕೆ ತಡೆಗೆ ನಿಯಮಾನುಸಾರ ನಿಗಮ-ಮಂಡಳಿಗಳ ವಾಹನಗಳನ್ನು ಹಿಂದಕ್ಕೆ ಪಡೆಯಲಾಗುವುದು. ಮತದಾರರ ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗಿರುತ್ತದೆ. ಹೊಸದಾಗಿ ಅರ್ಜಿ ಪರಿಶೀಲಿಸಿ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಹೆಸರು ಸೇರ್ಪಡೆಗೆ ಸೆ.30ರ ವರೆಗೆ ಅವಕಾಶವಿದೆ. ತಿದ್ದುಪಡಿ ಅಥವಾ ಹೆಸರು ತೆಗೆದು ಹಾಕಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಟ್ಟಿಯಲ್ಲಿ ಸಂಶಯಾಸ್ಪದ ಹೆಸರುಗಳು ಕಂಡುಬಂದರೆ ಪಕ್ಷಗಳು ಅಥವಾ ಯಾರಾದರೂ ತಮ್ಮ ಗಮನಕ್ಕೆ ತಂದರೆ ಅಂತಹ ವ್ಯಕ್ತಿಗಳು ಮತದಾನಕ್ಕೆ ಬಂದಾಗ ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಇವಿಎಂ/ವಿವಿ ಪ್ಯಾಟ್‌ಗಳಲ್ಲಿ ಹೊಸದಾಗಿ ಎಂ3 ಇವಿಎಂ ಗಳನ್ನು ಈ ಬಾರಿ ಬಳಕೆ ಮಾಡಲಾಗುತ್ತದೆ. ಮತಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.

ಪರ್ಯಾಯ ಮತಗಟ್ಟೆ ಸ್ಥಾಪನೆಪರಿಶೀಲನೆ: ಕಳೆದ ಚುನಾವಣೆಯಲ್ಲಿದ್ದ ಬಹುತೇಕ ಮತಕೇಂದ್ರಗಳು ಈ ಬಾರಿಯೂ ಇರಲಿವೆ. ಆದರೆ ಪ್ರವಾಹದಿಂದ ಕೆಲವು ಶಾಲಾ ಕಟ್ಟಡಗಳು ಕುಸಿದಿದ್ದರೆ ಅಥವಾ ಶಿಥಿಲಗೊಂಡಿದ್ದರೆ ಸೂಕ್ತ ಪರಿಶೀಲನೆ ಬಳಿಕ ಪರ್ಯಾಯ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಮತದಾನ ಸಂದರ್ಭದಲ್ಲಿ ಆಧಾರ, ವಾಹನ ಚಾಲನಾಪತ್ರ ಸೇರಿದಂತೆ 22 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಪ್ರದರ್ಶಿಸಿ ಮತದಾನ ಮಾಡಬಹುದು. ಒಂದು ವೇಳೆ ದಾಖಲೆಗಳನ್ನು ಕಳೆದುಕೊಂಡಿದ್ದರೆ ಸಾಕಷ್ಟು ಸಮಯಾವಕಾಶ ಇರುವುದರಿಂದ

ನಕಲು ಪ್ರತಿಯನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ರಾಜೇಂದ್ರ ಹರಕುಣಿ, ಬಹುಜನ ಸಮಾಜ ಪಾರ್ಟಿಯ ರಮೇಶ್‌ ಕಡ್ಲಾಸ್ಕರ, ಕೆ.ಜಿ. ಪಾಟೀಲ, ಅಪರ ಜಿಲ್ಲಾ ಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್‌. ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next