Advertisement

ಶೇ. 62ರಷ್ಟು ಮಂದಿಗೆ ಲಸಿಕೆ ವಿತರಣೆ: ಡಾ|ಸುಧಾಕರ್‌

01:22 AM Jan 17, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆಯಲು ನಿಗದಿಪಡಿಸಿದವರಲ್ಲಿ ಶೇ. 62ರಷ್ಟು ಮಂದಿ  ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದರು.

Advertisement

ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಅವರೊಂದಿಗೆ ವೀಡಿಯೋ ಸಂವಾದ ನಡೆದ ಬಳಿಕ ಮಾತನಾಡಿದ ಅವರು, ಶೇ.62 ರಷ್ಟು ಮಂದಿ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೊದಲ ದಿನ 21,658 ಮಂದಿಗೆ ಲಸಿಕೆ ನೀಡಬೇಕೆಂದು ನಿಗದಿಯಾಗಿದ್ದು, 13,408 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾರಲ್ಲೂ ಗಂಭೀರ ಸಮಸ್ಯೆ ಅಥವಾ ಅಡ್ಡ ಪರಿಣಾಮ ಕಂಡುಬಂದಿಲ್ಲ ಎಂದರು.

ಸೋಮವಾರದಿಂದ ಮತ್ತೆ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ರವಿವಾರ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ನಾನು ವಿವಿಧೆಡೆ ಸಂಚರಿಸಿ ಲಸಿಕೆ ಪಡೆಯುವಂತೆ ಉತ್ತೇಜಿಸಲಿದ್ದೇನೆ.

ರಾಜ್ಯದಲ್ಲಿ 7.43 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, 8 ಲಕ್ಷ ಲಸಿಕೆ ಬಂದಿದೆ. ಇನ್ನೂ 8 ಲಕ್ಷ ಲಸಿಕೆ ಕಳುಹಿಸಿಕೊಡಬೇಕೆಂದು ಕೇಂದ್ರ ಸರಕಾರಕ್ಕೆ ಕೋರಲಾಗಿದೆ. ಪೌರಕಾರ್ಮಿಕರೊಬ್ಬರಿಗೆ ಮೊದಲ ಲಸಿಕೆ ನೀಡುವ ಪ್ರಧಾನಿಯವರ ಪರಿಕಲ್ಪನೆ ವಿಪಕ್ಷಗಳಿಗೆ ಅರ್ಥವಾಗಿಲ್ಲ. ಆದರೆ ಸಾಮಾನ್ಯ ಜನರಿಗೆ ಅರ್ಥವಾಗಿದೆ ಎಂದರು.

ಬೆರಳೆಣಿಕೆ ಮಂದಿಗೆ ಅಡ್ಡ ಪರಿಣಾಮ :

Advertisement

ರಾಜ್ಯದಲ್ಲಿ ಲಸಿಕೆ ಪಡೆದವರ ಪೈಕಿ ಬೆರಳಿಕೆಯಷ್ಟು ಮಂದಿಗೆ ಮಾತ್ರ ಲಸಿಕೆ ಪಡೆದ ಸ್ಥಳದಲ್ಲಿ ಕೆಂಪಾಗಿ, ನೋವು ಹೆಚ್ಚು ಕಾಣಿಸುಕೊಂಡಿದೆ. ಸಂಜೆ ವೇಳೆಗೆ ಸರಿಹೋಗಿದ್ದು, ಇವುಗಳನ್ನು ಹೊರತು ಪಡಿಸಿ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next