Advertisement

ಜನರ ಸಮಸ್ಯೆ ಆಲಿಸಲು ಜನಸಂಪರ್ಕ ಕಚೇರಿ

06:13 PM Feb 03, 2022 | Team Udayavani |

ಗದಗ: ಈ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅತ್ಯಲ್ಪ ಮತಗಳೊಂದಿಗೆ ಕಾಂಗ್ರೆಸ್‌ ಜಯ ಗಳಿಸಲಿದೆ ಎಂಬ ರಾಜಕೀಯ ವಿರೋಧಿಗಳ ಲೆಕ್ಕಾಚಾರವನ್ನು ಸಲೀಂ ಅಹ್ಮದ್‌ ಅವರು ತಲೆ ಕೆಳಗಾಗಿಸಿ, ಅತೀ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳೊಂದಿಗೆ ಜಯಭೇರಿ ಬಾರಿಸಿದ್ದಾರೆ. ಈ ಭಾಗದ ಜನರ ದುಃಖ, ದುಮ್ಮಾನ ಹಾಗೂ ಸಮಸ್ಯೆಗಳನ್ನು ಆಲಿಸಲು ಜನ ಸಂಪರ್ಕ ಕಾರ್ಯಾಲಯ ಆರಂಭಿಸಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್‌ ಹಿರಿಯ ನಾಯಕ
ಹಾಗೂ ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

Advertisement

ನಗರದ ಭೀಷ್ಮ ಕೆರೆ ರಸ್ತೆಯಲ್ಲಿ ಆರಂಭಿಸಲಾದ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಅವರ ಜನಸಂಪರ್ಕ ಕಾರ್ಯಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಿವಿಧ ರಾಜಕೀಯ ಪಕ್ಷಗಳ ನಾಯಕರು ಹೇಳಿಕೊಳ್ಳುತ್ತಿದ್ದರು. ಆದರೆ, ವಿಧಾನ ಪರಿಷತ್‌ ಚುನಾವಣಾ ಫಲಿತಾಂಶದ ಬಳಿಕ ಜಿಲ್ಲೆಯ ಗ್ರಾಪಂಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಸಂಖ್ಯೆ ಎಷ್ಟಿದೆ ಎಂಬುದು ಸ್ಪಷ್ಟವಾಗಿದೆ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಪಾಟೀಲ್‌ ಹಾಗೂ ಮಾಜಿ ಶಾಸಕ ಡಿ.ಆರ್‌.ಪಾಟೀಲ್‌ ಅವರ ನೇತೃತ್ವದಲ್ಲಿ ನಡೆದ
ಸಂಘಟಿತ ಹೋರಾಟದ ಫಲವಾಗಿ ಸಲೀಂ ಅಹ್ಮದ್‌ ಅವರಿಗೆ ಹೆಚ್ಚಿನ ಮತಗಳು ಬಂದಿವೆ ಎಂದರು.

ಈ ಹಿಂದೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸಲೀಂ ಅಹ್ಮದ್‌ ಅವರು ವಿಧಾನಸಭೆಯ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದರು. ಆಗ ನಮ್ಮಿಬ್ಬರ ಮಧ್ಯೆ ಗ್ರಾಮೀಣಾಭಿವೃದ್ಧಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿತ್ತು. ದೇಶದ ಗ್ರಾಮೀಣಾಭಿವೃದ್ಧಿ, ಅಲ್ಪಸಂಖ್ಯಾತರು, ದೀನ ದಲಿತರು ಹಾಗೂ ಹಿಂದುಳಿದವರ ಬಗ್ಗೆ ಸಲೀಂ ಅಹ್ಮದ್‌ ಅವರು ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ಬಾರಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಧ್ವನಿಯನ್ನು ಗಟ್ಟಿಗೊಳಿಸುವ ಮೂಲಕ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅ ಧಿಕಾರಕ್ಕೆ ಬರುವಂತೆ ಮಾಡಲಾಗುತ್ತದೆ. ಕಾಂಗ್ರೆಸ್‌ ಅ ಧಿನಾಯಕಿ ಸೋನಿಯಾ ಗಾಂಧಿ , ಯುವ ನಾಯಕ ರಾಹುಲ್‌ ಗಾಂಧಿ  ಅವರ ಕೈ ಬಲಪಡಿಸಲಾಗುತ್ತದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಮಾತನಾಡಿ, ಗದಗ ಜಿಲ್ಲೆಯ ಜನರ ಕುಂದುಕೊರತೆಗಳನ್ನು ಆಲಿಸಲು, ಜನರ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುವ ಸಲುವಾಗಿ ಗದಗ, ಹುಬ್ಬಳ್ಳಿ ಹಾಗೂ ಹಾವೇರಿಯಲ್ಲೂ ಜನಸಂಪರ್ಕ ಕಾರ್ಯಾಲಯ ಆರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಅನಗತ್ಯ ಅಲೆದಾಟ ತಪ್ಪಲಿದೆ ಎಂದರು.

Advertisement

ಈಗಾಗಲೇ ಪಕ್ಷ ಸಂಘಟನೆಗಾಗಿ ಮೊಬೈಲ್‌ ಆ್ಯಪ್‌ ಮೂಲಕ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ. 1000 ಮತದಾರರಿರುವ ಬೂತ್‌ ಮಟ್ಟದಿಂದ ಕೇಡರ್‌ ಬೇಸ್ಡ್ ಕಾರ್ಯಕರ್ತರ ಸಂಘಟನೆಗೆ ಒತ್ತು ನೀಡಲು ಉದ್ದೇಶಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಬಹು ಚುರುಕಿನಿಂದ ಸದಸ್ಯತ್ವ ನಡೆಯುತ್ತಿದೆ. ಗದಗ ಜಿಲ್ಲೆಯಲ್ಲೂ ಸದಸ್ಯತ್ವ ನೋಂದಣಿಯನ್ನು ತೀವ್ರಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಪಕ್ಷದ ವಿವಿಧ ಘಟಕಗಳು, ಸಕ್ರಿಯ ಕಾರ್ಯಕರ್ತರಿಗೆ ಹೊಣೆ ನೀಡಲಾಗುವುದು ಎಂದು ವಿವರಿಸಿದರು.

ಅದರೊಂದಿಗೆ ಜನರ ಆಶೋತ್ತರಗಳನ್ನು ಈಡೇರಿಸುವುದರ ಜೊತೆಗೆ ಕೇಂದ್ರ ಹಾಗೂ ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರ ವಿಫಲ್ಯ, ಶೇ.40 ರಷ್ಟು ಕಮಿಷನ್‌, ಭ್ರಷ್ಟಾಚಾರವನ್ನು ಸಾರ್ವಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಮುಂಬರುವ ಜಿಪಂ, ತಾಪಂ ಹಾಗೂ ಶಾಸನಸಭೆಗಳ ಚುನಾವಣೆಗೂ ಸಿದ್ಧತೆ ನಡೆಸಲಾಗುವುದು ಎಂದು ಹೇಳಿದರು. ವೇದಿಕೆ ಮೇಲೆ ಮಾಜಿ ಶಾಸಕರಾದ ಡಿ.ಆರ್‌ .ಪಾಟೀಲ್‌, ಶ್ರೀಶೈಲಪ್ಪ ಬಿದರೂರ, ಎನ್‌.ಎಚ್‌. ಕೋನರೆಡ್ಡಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌ .ಪಾಟೀಲ್‌, ನಗರಸಭೆ ಸದಸ್ಯ ಸುರೇಶ್‌ ಕಟ್ಟಮನಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next