Advertisement

ಬೆಂಕಿ ಹಚ್ಚುವವರನ್ನು ಜನರೇ ಅರೆಸ್ಟ್‌ ಮಾಡಿ ಮನೆಗೆ ಕಳಿಸ್ತಾರೆ

06:00 AM Jan 13, 2018 | |

ಶ್ರೀರಂಗಪಟ್ಟಣ/ಮೈಸೂರು: ಕೋಮುಭಾವನೆ ಬಿತ್ತಿ, ಸಮಾಜದಲ್ಲಿ ಬೆಂಕಿ ಹಚ್ಚುವ ಬಿಜೆಪಿಯವರನ್ನು ಅರೆಸ್ಟ್‌ ಮಾಡಲು ಪೊಲೀಸರು ಬೇಕಿಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ಅರೆಸ್ಟ್‌ ಮಾಡಿ ಮನೆಗೆ ಕಳುಹಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರೆಸ್ಸೆಸ್‌, ಬಿಜೆಪಿ, ಬಜರಂಗದಳದಲ್ಲಿರುವವರು ಉಗ್ರಗಾಮಿಗಳು ಎಂಬ ತಮ್ಮ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಐಟಿ ಪ್ರಕೋಷ್ಠ ಆರಂಭಿಸಿರುವ ಅರೆಸ್ಟ್‌ ಮಿ ಸಿದ್ದರಾಮಯ್ಯ ಅಭಿಯಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು,  ಜನರ ಮನಸ್ಸಲ್ಲಿ ಕೋಮುಭಾವನೆ ಬಿತ್ತುವವರನ್ನು, ಸಮಾಜದಲ್ಲಿ ಬೆಂಕಿ ಹಚ್ಚುವವರನ್ನು ಜನರೇ ಅರೆಸ್ಟ್‌ ಮಾಡುತ್ತಾರೆ. ಪೊಲೀಸರು ಬಿಜೆಪಿಯವರನ್ನು ಬಂಧಿಸಬೇಕಾದ ಅಗತ್ಯವೇ ಇಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮ ವಿರುದ್ಧ ಹೋರಾಡಿ ಸೋತಿರುವ ಅವರು, ಈಗ ಅಮಿತ್‌ ಶಾ, ಯೋಗಿ ಆದಿತ್ಯನಾಥ ಹಾಗೂ ಇತರರನ್ನು ಕರೆ ತಂದು ಗಿಮಿಕ್‌ ಮಾಡುತ್ತಿದ್ದಾರೆ. ಸಣ್ಣಪುಟ್ಟ ವಿಚಾರಗಳನ್ನೇ ದೊಡ್ಡದು ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿಯವರ ತಂತ್ರ ಕರ್ನಾಟಕದಲ್ಲಿ ಸಫ‌ಲವಾಗದು. ಪ್ರಧಾನಿಯವರು ಕಾಂಗ್ರೆಸ್‌ ವೈಫ‌ಲ್ಯ ಹೇಳುವುದಕ್ಕೂ ಮುಂಚೆ ನಾನೇ ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರ ವೈಫ‌ಲ್ಯ ಹೇಳುತ್ತೇನೆ. ರಾಜ್ಯ ಸರ್ಕಾರದ  ಸಾಧನೆ ಮುಂದಿಟ್ಟು ಬಿಜೆಪಿಯ ಅಮಿತ್‌ ಶಾ, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಅವರಂತಹ ನಾಯಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ನನ್ನನ್ನು ನಂಬಿ ಬಂದವರನ್ನು ರಕ್ಷಿಸುವೆ:
ಬಳಿಕ, ಶ್ರೀರಂಗಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮತನಾಡಿ, “ಜೆಡಿಎಸ್‌ನೊಳಗಿನ ಒತ್ತಡ ತಾಳಲಾರದೆ ಏಳು ಜನ ಶಾಸಕರು ಮನಸ್ಸನ್ನು ಗಟ್ಟಿ ಮಾಡಿಕೊಂಡು ನನ್ನೊಂದಿಗೆ ಬಂದಿದ್ದಾರೆ. ನನ್ನೊಂದಿಗಿರುವ ಜೆಡಿಎಸ್‌ ಶಾಸಕರಿಗೆ ಸಂಪೂರ್ಣ ರಕ್ಷಣೆ ನೀಡುವೆ. ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿಸಿ ಪಕ್ಷ ಸೇರ್ಪಡೆಗೆ ಒಪ್ಪಿಸಿದ್ದೇನೆ. ಅವರೆಲ್ಲರೂ ಶೀಘ್ರ ಕಾಂಗ್ರೆಸ್‌ ಪಕ್ಷವನ್ನು ಸೇರಲಿದ್ದಾರೆ. ಮತದಾರರು ಅವರನ್ನು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ಕಪ್ಪು ಬಾವುಟ ಪ್ರದರ್ಶಿಸಿದ ವ್ಯಕ್ತಿಯ ಬಂಧನ
ಶ್ರೀರಂಗಪಟ್ಟಣ:
ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಜನರ ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಕಪ್ಪುಬಾವುಟ ಪ್ರದರ್ಶಿಸಿದ. ತಕ್ಷಣವೇ ಪೊಲೀಸರು ಆತನನ್ನು ಬಂಧಿಸಿದರು. ಈ ಮಧ್ಯೆ, ಮಳವಳ್ಳಿಯಲ್ಲಿ ಮುಖ್ಯಮಂತ್ರಿ ಬರುತ್ತಿದ್ದಂತೆ ಕೈಯ್ಯಲ್ಲಿ ಮನವಿ ಪತ್ರ ಹಿಡಿದು ಪ್ರಾಂತ ಕೃಷಿ ಕೂಲಿಕಾರರ ಸಂಘದವರು ಅವರ ಭೇಟಿಗೆ ಮುಂದಾದರು. ಹೆಲಿಕಾಪ್ಟರ್‌ನಿಂದ ಇಳಿದ ಸಿದ್ದರಾಮಯ್ಯ, ಮನವಿ ಸ್ವೀಕರಿಸಲು ನಿರಾಕರಿಸಿ ಅಲ್ಲಿಂದ ಕಾರು ಹತ್ತಿ ನಿರ್ಗಮಿಸಿದರು. ಸಂಘದ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೇಂದ್ರ ಸರ್ಕಾರದ ಚಾರ್ಜ್‌ಶೀಟ್‌ ನಮ್ಮಲ್ಲೂ ಇದೆ:
ಮಳವಳ್ಳಿಯಲ್ಲಿ ಮಾತನಾಡಿದ ಸಿಎಂ, ರಾಜಕೀಯ ಎದುರಾಳಿಗಳನ್ನು ಹೆದರಿಸಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಛೂ ಬಿಟ್ಟಿರುವ ಕೇಂದ್ರ ಸರ್ಕಾರ, ನನ್ನ ಆಪ್ತರ ಮನೆಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿ ಬೆದರಿಸುವ ತಂತ್ರಗಾರಿಕೆ ನಡೆಸುತ್ತಿದೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದರು.

ಬಿಜೆಪಿಯವರಿಂದ ಕಾಂಗ್ರೆಸ್‌ ಚಾರ್ಜ್‌ಶೀಟ್‌ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೇಳಿದಾಗ, ನಮ್ಮಲ್ಲೂ ಕೇಂದ್ರ ಸರ್ಕಾರದ ಚಾರ್ಜ್‌ಶೀಟ್‌ ಇದೆ ಎಂದು ಚುಟುಕಾಗಿ ಉತ್ತರಿಸಿದರು.

ಜೆಡಿಎಸ್‌ಗಿಂತ ಹೆಚ್ಚು ಯಡಿಯೂರಪ್ಪ ಹತಾಶರಾಗಿದ್ದಾರೆ. ಏಕೆಂದರೆ, ಬಿಜೆಪಿಗೆ ಸ್ವಂತ ಶಕ್ತಿ ಮೇಲೆ ಚುನಾವಣೆಯಲ್ಲಿ ಗೆಲ್ಲಲಾಗದು ಎಂಬ ಸತ್ಯ ಅವರಿಗೆ ಮನವರಿಕೆಯಾಗಿದೆ. ಅದಕ್ಕಾಗಿ ಯಾವುದೇ ಪಕ್ಷಕ್ಕೂ ಬಹುಮತ ಬರದಿದ್ದರೆ, ಅಲ್ಲಿ ನಮ್ಮ ಆಟ ನಡೆಯಬಹುದೇನೋ ಎಂಬ ಲೆಕ್ಕಾಚಾರದಲ್ಲಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next