Advertisement

ಯೋಜನೆಗಳೆಲ್ಲ ತಾಂಡಾ ಪಾಲು: ಯಾಕಾಪುರ

03:13 PM Aug 25, 2022 | Team Udayavani |

ಚಿಂಚೋಳಿ: ಮೀಸಲು ಚಿಂಚೋಳಿ ವಿಧಾನಸಭೆ ಮತಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ಅನ್ಯಾಯ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳು ತಾಂಡಾಗಳ ಪಾಲಾಗಿವೆಯೇ ಹೊರತು ಗ್ರಾಮಗಳ ಅಭಿವೃದ್ಧಿಯಾಗಿಲ್ಲ ಎಂದು ಜೆಡಿಎಸ್‌ ಮುಖಂಡ ಸಂಜೀವನ ಯಾಕಾಪುರ ಟೀಕಿಸಿದರು.

Advertisement

ತಾಲೂಕಿನ ಗೋಟೂರ ಗ್ರಾಮದಿಂದ ಜೆಡಿಎಸ್‌ದಿಂದ ಹಮ್ಮಿಕೊಂಡಿರುವ “ಹಳ್ಳಿಹಳ್ಳಿಗೆ ಎಚ್‌.ಡಿ.ಕುಮಾರಣ್ಣ, ಮನೆ-ಮನೆಗೆ ಜೆಡಿಎಸ್‌’ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತೇಗಲತಿಪ್ಪಿ, ಹಲಚೇರಾ, ಎಚ್‌.ಹೊಸಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೆಕೆಆರ್‌ಡಿಬಿ, ಎಸ್‌ಸಿಪಿ, ಟಿಎಸ್‌ಪಿ ಮತ್ತು ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮದ ಕಾಮಗಾರಿಗಳು, ಜಲ ಜೀವನ ಮಿಷನ್‌ ಯೋಜನೆಗಳು, ಶಾಸಕರ ಅನುದಾನದ ಕೆಲಸಗಳು ಕೇವಲ ತಾಂಡಾಗಳಲ್ಲಿ ನಡೆದಿವೆ ಎಂದು ಆಪಾದಿಸಿದರು. ತಾಂಡಾಗಳಲ್ಲಿ ಹೈಮಾಸ್ಟ್‌ ದೀಪ, ಶುದ್ಧ ನೀರು, ರಸ್ತೆ, ಚರಂಡಿ, ಶಾಲೆ, ಅಂಗನವಾಡಿ ಕೇಂದ್ರ, ಸಮುದಾಯ ಭವನಗಳ ನಿರ್ಮಾಣ, ಶೌಚಾಲಯಗಳು ಸೇರಿದಂತೆ ಸಾಲ ಸೌಲಭ್ಯ ನೀಡಲಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಓಣಿಗಳಿಗೆ ನೀಡುವ ಮೂಲ ಸೌಕರ್ಯಗಳೆಲ್ಲವೂ ತಾಂಡಾಗಳಿಗೆ ಹೋಗಿವೆ ಎಂದು ಆರೋಪಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿ, 500ಕಿ.ಮೀ ಪಾದಯಾತ್ರೆ 25 ದಿನಗಳ ವರೆಗೆ ನಡೆಯಲಿದೆ. ಸೆ.21ರಂದು ಪಟ್ಟಣದಲ್ಲಿ ಬೃಹತ್‌ ಸಮಾರೋಪ ಸಮಾರಂಭದಲ್ಲಿ ನಡೆಯಲಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ರವಿಕುಮಾರ ಕೊಟಗಾ, ಎಸ್‌.ಕೆ.ಮುಕ್ತಾರ, ರಾಹುಲ್‌ ಯಾಕಾಪುರ, ಸಿದ್ಧು ಬುಬಲಿ, ಸೈಯದ್‌ ನಿಯಾಜ ಅಲಿ, ವೀರಾರೆಡ್ಡಿ, ಗೌರಿಶಂಕರ ಸೂರವಾರ, ರೇವಣಸಿದ್ಧ ಸೂಗೂರ, ಲಾಲಪ್ಪ ಹೋಳ್ಕರ, ಮಲ್ಲಿಕಾರ್ಜುನ ಪೂಜಾರಿ, ಹಣಮಂತ ಪೂಜಾರಿ, ಹಣಮಂತರೆಡ್ಡಿ ದೋಟಿಕೊಳ, ಬಸವರಾಜ ಪಸ್ತಪುರ, ಸನ್ನಿ ಜಾಬಶೆಟ್ಟಿ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next