Advertisement

ದಲಿತರೊಂದಿಗೆ ಸೌಹಾರ್ದ ಬೆಳೆಸಿದ್ದ ಸಂತ

11:20 AM Dec 30, 2019 | Suhan S |

ಬಾಗಲಕೋಟೆ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೂ ಮುಳುಗಡೆ ಜಿಲ್ಲೆ ಬಾಗಲಕೋಟೆಗೆ ಅವಿನಾಭಾವ ನಂಟಿದೆ. ಅವರು ವರ್ಷಕ್ಕೆ ಕನಿಷ್ಠ 20-25 ಬಾರಿ ಜಿಲ್ಲೆಗೆ ಭೇಟಿ ನೀಡಿ ಹಲವಾರು ಧಾರ್ಮಿಕ, ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ.

Advertisement

ಉಡುಪಿ ಜಿಲ್ಲೆ ಬಿಟ್ಟರೆ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಂಡ  ಜಿಲ್ಲೆ ಬಾಗಲಕೋಟೆ ಎಂದರೆ ತಪ್ಪಾಗಲಿಕ್ಕಿಲ್ಲ. ಪೇಜಾವರ ಶ್ರೀಗಳು ಜಿಲ್ಲೆಗೆ ಭೇಟಿ ನೀಡಿದ್ದರ ಲೆಕ್ಕವಿಲ್ಲ. ಅವರು ಜಿಲ್ಲೆಗೆ ಸುಮಾರು 1960-65ರಿಂದ ನಿರಂತರವಾಗಿ ಭೇಟಿ ನೀಡಿದ್ದಾರೆ. ಈ ಭಾಗದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ನಿವಾರಣೆಗೆ ಸ್ವತಃ ಶ್ರೀಗಳೇ ದಲಿತರ ಮನೆಗಳಿಗೆ ಭೇಟಿ ನೀಡಿ, ಪಾದಪೂಜೆ ಮಾಡಿಸಿಕೊಳ್ಳುವುದರೊಂದಿಗೆ ದಲಿತರೊಂದಿಗೆ ಸೌಹಾರ್ದತೆ ಬೆಳೆಸಲು ಪ್ರಮುಖ ಕಾರಣರಾಗಿದ್ದರು.

­1ರೂ.ಗೆ ವೈದ್ಯಕೀಯ ಸೇವೆ: ಸದ್ಯ ಮುಳುಗಡೆಯಾಗಿರುವ ಅಂಜುಮನ್‌ ಸಂಸ್ಥೆ ಪಕ್ಕ ಜೋರಾಪುರ ಗಿರಣಿ ಇತ್ತು. ಆ ಸ್ಥಳದಲ್ಲಿಬಾಗಲಕೋಟೆಯ ನಾಲ್ವರು ಖಾಸಗಿ ವೈದ್ಯರ ಸಹಕಾರರೊಂದಿಗೆ ಜನಸೇವಾ ಸಮಿತಿ ಆಸ್ಪತ್ರೆ ಸ್ಥಾಪಿಸಿದ್ದರು. ಈ ಆಸ್ಪತ್ರೆಯಲ್ಲಿ ಕೇವಲ 1 ರೂ.ಗೆ ವೈದ್ಯಕೀಯ ಸೇವೆ, ಔಷಧ ಎಲ್ಲವನ್ನೂ ನೀಡಲಾಗುತ್ತಿತ್ತು. ಬಾಗಲಕೋಟೆಯ ಡಾ|ಜಿ.ಆರ್‌. ದಾತಾರ, ಎ.ಎನ್‌. ಜೋಶಿ, ಎ.ಬಿ. ಡಂಬಳ ಮತ್ತಿತರ ವೈದ್ಯರು ನಿತ್ಯ ಎರಡು ಗಂಟೆ ಕಾಲ ಉಚಿತ ಸೇವೆ ನೀಡುತ್ತಿದ್ದರು. ಶ್ರೀಗಳ ಈ ಬಡಜನರ ಕಾಳಜಿ ಕಂಡು ಖಾಸಗಿ ವೈದ್ಯರೂ, ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲು ಪ್ರೇರಣೆಯಾಯಿತು. 1ರೂ.ಗೆ ವೈದ್ಯಕೀಯ ಸೇವೆ ನಗರದಲ್ಲಿ ಸುಮಾರು 20 ವರ್ಷಗಳ ಕಾಲ ನಡೆದಿತ್ತು ಎಂಬುದು ದಾಖಲೆ.

­ಅನಾಥರಿಗಾಗಿ ನೆಲೆ: ಜನಸೇವಾ ಸಮಿತಿ ಆಸ್ಪತ್ರೆಗೆ ಜಿಲ್ಲೆಯ ಜನ ತೋರಿದ ಪ್ರೀತಿ-ಗೌರವ ಬಹಳಷ್ಟಿತ್ತು. ಅದೇ ಮಾದರಿಯಲ್ಲಿ ಕುಷ್ಠ ರೋಗಿಗಳಿಗಾಗಿ ಪ್ರತ್ಯೇಕ ಆಸ್ಪತ್ರೆ ಕಟ್ಟಬೇಕೆಂಬುದು ಶ್ರೀಗಳ ಒತ್ತಾಸೆಯಾಗಿತ್ತು. ಆ ಕಾರ್ಯಕ್ಕೆ ದಾಮೋದರ ಶಿಂಧೆ ಎಂಬುವರು ನೀರಲಕೇರಿ ಬಳಿ ನಾಲ್ಕು ಎಕರೆ ಭೂಮಿಯನ್ನು ಉಚಿತವಾಗಿ ನೀಡಿದ್ದರು. ಆ ಜಾಗೆಯಲ್ಲಿ ಆಸ್ಪತ್ರೆ ಕಟ್ಟಡವೂ ತಲೆ ಎತ್ತಿತ್ತು. ಆದರೆ, ಕುಷ್ಠರೋಗಿಗಳು ಬಾರದ ಕಾರಣ ಅಲ್ಲಿ ಅನಾಥ ಮಕ್ಕಳ ನೆಲೆಯಾಯಿತು. ಇದು ಸೇವಾ ಭಾರತಿ ಹೆಸರಿನಲ್ಲಿ ಇಂದಿಗೂ ನಡೆಯುತ್ತಿದ್ದು, ಅನಾಥ ಮಕ್ಕಳು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ.

­ಗೋವುಗಳ ಸಂರಕ್ಷಣೆ: 1983ರ ವೇಳೆ ರಾಜ್ಯದಲ್ಲಿ ಭೀಕರ ಬರ ಬಿದ್ದಿತ್ತು. ಜನ- ಜಾನುವಾರು ಕುಡಿಯುವ ನೀರು-ಮೇವಿಗಾಗಿ ಪರಿತಪಿಸುತ್ತಿದ್ದವು. ಆಗ ಗದ್ದನಕೇರಿ ಬಳಿ ಒಂದು ಗೋ ಶಾಲೆ ಆರಂಭಿಸಿದ್ದರು. ಅದರಲ್ಲಿ 1200 ಗೋವುಗಳು ಆಶ್ರಯ ಪಡೆದಿದ್ದವು. ಅದೇ ಮಾದರಿಯಲ್ಲಿ ಹೊಳೆಆಲೂರ ಬಳಿಯೂ ಒಂದು ಗೋ ಶಾಲೆ ಆರಂಭಿಸಿ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗಿದ್ದರು.

Advertisement

­ಬಡ ಬ್ರಾಹ್ಮಣ ಮಕ್ಕಳಿಗೆ ವಸತಿ ನಿಲಯ: 1969ರಲ್ಲಿ ಅಖೀಲ ಭಾರತ ಮಾಧ್ವ ಮಹಾ ಮಂಡಳದ ನೇತೃತ್ವದಲ್ಲಿ ನಗರದಲ್ಲಿ ಬಡ ಬ್ರಾಹ್ಮಣರ ಮಕ್ಕಳಿಗೆ ಉಚಿತ ವಸತಿ ನಿಲಯ ಆರಂಭಿಸಿದ್ದಾರೆ. ಆಗಿನ ಸಂದರ್ಭದಲ್ಲೇ 24 ಕೊಠಡಿಗಳನ್ನು ನಿರ್ಮಿಸಿ ಬಡ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು. ಈ ವಸತಿ ನಿಲಯದಲ್ಲಿದ್ದು ಶಿಕ್ಷಣ ಪಡೆದವರೀಗ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ವೈದ್ಯರು ಹೀಗೆ ಸಮಾಜದ ಹಲವು ಉನ್ನತ ಹುದ್ದೆಯಲ್ಲಿದ್ದಾರೆ.

­ರೈತರ ಬ್ಯಾರೇಜ್‌ಗೆ ಶ್ರಮದಾನ: ಕೇಂದ್ರದ ಮಾಜಿ ಸಚಿವ, ಜಮಖಂಡಿಯ ಮಾಜಿ ಶಾಸಕ ದಿ.ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ 1989ರಲ್ಲಿ ಜಮಖಂಡಿ ತಾಲೂಕು ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರೇ ನಿರ್ಮಿಸಿದ ಬ್ಯಾರೇಜ್‌ ಇಡೀ ದೇಶದ ಗಮನ ಸೆಳೆದಿದೆ. 94ಲಕ್ಷ ರೂ.ಗಳಲ್ಲಿ 11 ತಿಂಗಳ ಅವಧಿಯಲ್ಲಿ ಕಟ್ಟಿದ ಈ ಬ್ಯಾರೇಜ್‌ ಇಂದು ಸಾವಿರಾರು ರೈತರಿಗೆ ನೀರು ಒದಗಿಸುತ್ತಿದೆ. ರೈತರೇ ಸೇರಿ ಬ್ಯಾರೇಜ್‌ ಕಟ್ಟುತ್ತಿರುವ ವಿಷಯ ಕೇಳಿ ಜಮಖಂಡಿಗೆ ಆಗಮಿಸಿದ ಶ್ರೀಗಳು ಇಡೀ ಒಂದು ದಿನ ರೈತರೊಂದಿಗಿದ್ದು ಶ್ರಮದಾನ ಮಾಡಿದ್ದರು. ಅಲ್ಲದೇ ತಮ್ಮ ಮಠದಿಂದ ರೈತರ ನಿಧಿಗೆ ಒಂದಷ್ಟು ಆರ್ಥಿಕ ನೆರವೂ ನೀಡಿದ್ದರು.

­ದೇಣಿಗೆ ಹಣ ಸಮಾಜಕ್ಕೆ: ಉಡುಪಿ ಮಠದ ಪೀಠಾಧಿಪತಿಗಳಾದ 80ನೇ ವರ್ಷದ ಕಾರ್ಯಕ್ರಮವನ್ನು 2012ರಲ್ಲಿ ಬಾಗಲಕೋಟೆಯ ಸಕ್ರಿ ಕಾಲೇಜು ಮೈದಾನದಲ್ಲಿ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಭಕ್ತರು ನೀಡಿದ ಕಾಣಿಕೆಯ ಹಣ ಸುಮಾರು 14 ಲಕ್ಷ ರೂ. ಗಳನ್ನು ನವನಗರದಲ್ಲಿ ಕೃಷ್ಣ ಮಂದಿರ, ಗೋ ಶಾಲೆ ನಿರ್ವಹಣೆ ಹಾಗೂ ಅರ್ಥಕ್ಕೆ ನಿಂತಿದ್ದ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಪೂರ್ಣಗೊಳಿಸಲು ನೀಡಿದ್ದರು. ಅದರ ಫಲವಾಗಿ ಒಂದು ನವನಗರದಲ್ಲಿ ಕೃಷ್ಣ ಮಠ ಹಾಗೂ ವಿದ್ಯಾರ್ಥಿ ನಿಲಯ ತಲೆ ಎತ್ತಿದೆ. ಕೃಷ್ಣ ಮಠದಲ್ಲಿ ಇಬ್ಬರು ಆಚಾರ್ಯರನ್ನು ನಿಯೋಜಿಸಿ, ನಿರಂತರ ಪೂಜೆ, ಪುನಸ್ಕಾರ, ಧರ್ಮ ಸೇವೆ ನಡೆಸಲು ಅಪ್ಪಣೆ ಕೊಡಿಸಿದ್ದರು.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next