Advertisement

ಅಂತರ್ಜಲ ಉಳಿಸಲು ತುರ್ತು ಗಮನ ಹರಿಸಿ

11:50 PM Jul 01, 2019 | mahesh |

ದೇಶದ ಶೇ. 16ರಷ್ಟು ತಾಲೂಕುಗಳು, ಹಳ್ಳಿಗಳು, ಹೋಬಳಿಗಳಲ್ಲಿ ಅಂತರ್ಜಲ ಬತ್ತಿ ಹೋಗುವ ಸಮಸ್ಯೆ ಮಿತಿಮೀರಿದೆ. ಅದರಲ್ಲೂ ಶೇ. 4ರಷ್ಟು ತಾಲೂಕು, ಹಳ್ಳಿ ಮತ್ತು ಹೋಬಳಿಗಳಲ್ಲಿನ ಅಂತರ್ಜಲ ಮಟ್ಟ ಶೋಚನೀಯ ಸ್ಥಿತಿಗೆ ತಲುಪಿದೆ ಎಂದಿದೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ವರದಿ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನದ ವರದಿ ಇದು. ಯಾವ ಪರಿಯಲ್ಲಿ ಅಂತರ್ಜಲ ಲೂಟಿಯಾಗುತ್ತಿದೆ ಎನ್ನುವುದನ್ನು ಈ ವರದಿ ತಿಳಿಸುತ್ತಿದೆ. ಆದರೆ ಅಂತರ್ಜಲ ಬತ್ತುತ್ತಿದೆ ಎನ್ನಲು ಇಂಥ ವರದಿಯ ಅಗತ್ಯ ಇಲ್ಲ. ಏಕೆಂದರೆ ಅದನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ.

Advertisement

ಚೆನ್ನೈ ನಗರ ಹಿಂದೆಂದೂ ಕಂಡಿರದ ಜಲ ಕ್ಷಾಮಕ್ಕೆ ತುತ್ತಾಗಿದೆ, ಬೆಂಗಳೂರು ನಗರದ ಪರಿಸ್ಥಿತಿಯೂ ಆಶಾದಾಯಕವೇನಲ್ಲ. ನೀರಿನ ಅಧಿಕ ಬಳಕೆಯನ್ನು ತಡೆಯುವ ಸಲುವಾಗಿ ಬೆಂಗಳೂರಿನಲ್ಲಿ ಐದು ವರ್ಷದ ಮಟ್ಟಿಗೆ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ತಡೆಯೊಡ್ಡುವ ಕುರಿತು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ದೇಶದ 21 ಪ್ರಮುಖ ನಗರಗಳಲ್ಲಿ ಅಂತರ್ಜಲ ಬತ್ತಿ ಹೋಗುವ ಪರಿಣಾಮವಾಗಿ 2020ಕ್ಕಾಗುವಾಗ ತೀವ್ರ ನೀರಿನ ಸಮಸ್ಯೆ ಅನುಭವಿಸಲಿದೆ ಎನ್ನುವ ವಿಚಾರವನ್ನು ನೀತಿ ಆಯೋಗ ಈಗಾಗಲೇ ಬಹಿರಂಗಪಡಿಸಿದೆ. ಹಳ್ಳಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿ ಬೇಸಿಗೆಯಲ್ಲಿ ನೀರಿಗಾಗಿ ಜನರ ಹಾಹಾಕಾರ ಮುಗಿಲು ಮುಟ್ಟುತ್ತಿದೆ. ಕರಾವಳಿಯಂಥ ಸಮೃದ್ಧ ಮಳೆಯಾಗುವ ಪ್ರದೇಶದಲ್ಲೇ ಈ ಬೇಸಿಗೆಯಲ್ಲಿ ನೀರಿಗಾಗಿ ಜನರು ಪರದಾಡಿದ ಸ್ಥಿತಿಯನ್ನು ಗಮನಿಸಿದರೆ ಭವಿಷ್ಯದಲ್ಲಿ ನೀರು ಎಷ್ಟು ದೊಡ್ಡ ಸಮಸ್ಯೆಯಾಗಬಹುದು ಎಂಬ ಅಂದಾಜು ಸಿಗಬಹುದು.

ಅಂತರ್ಜಲದ ನಿರಂತರ ಶೋಷಣೆ, ನೀರಿನ ಬಗ್ಗೆ ಇರುವ ನಿರ್ಲಕ್ಷ್ಯ, ನೀರು ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಉದಾಸೀನ ಈ ಮುಂತಾದ ಕಾರಣಗಳಿಂದ ಅಂತರ್ಜಲದ ಪ್ರಮಾಣ ಬತ್ತುತ್ತಿದೆ. ಅಂತರ್ಜಲ ಬಳಕೆಯಲ್ಲಿ ಜಗತ್ತಿನಲ್ಲೇ ನಮ್ಮ ದೇಶಕ್ಕೆ ಮೊದಲ ಸ್ಥಾನವಿದೆ. ಆದರೆ ಈ ಪ್ರಮಾಣದಲ್ಲಿ ಅಂತರ್ಜಲ ಮರುಪೂರಣವಾಗುತ್ತಿಲ್ಲ. ದೇಶದಲ್ಲಿ ವಾರ್ಷಿಕವಾಗಿ ಸಂರಕ್ಷಿಸಲಾಗುವ ಮಳೆ ನೀರಿನ ಪ್ರಮಾಣ ಬರೀ ಶೇ. 8 ಮಾತ್ರ. ಜಲ ಸಂಗ್ರಹವಾಗುವ ಮೂಲಗಳನ್ನೆಲ್ಲ ಕೃಷಿ, ಜನವಸತಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಬೆಂಗಳೂರು, ಚೆನ್ನೈಯಂಥ ನಗರಗಳಲ್ಲಿ ನೀರಿನ ಸಮಸ್ಯೆ ಉಂಟಾಗಲು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದೂ ಒಂದು ಕಾರಣ. 80ರ ದಶಕದಿಂದೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರ ಬಿರುಸುಗೊಂಡ ಬಳಿಕ ಕೆರೆಗಳೆಲ್ಲ ಸೈಟ್‌ಗಳಾಗಿ ಬದಲಾಗಿವೆ.

ಅಂತರ್ಜಲ ಬತ್ತುವುದರಲ್ಲಿ ಕೃಷಿ ಚಟುವಟಿಕೆಗಳ ಪಾತ್ರವೂ ದೊಡ್ಡದು. ಭಾರೀ ಪ್ರಮಾಣದ ನೀರು ಅಗತ್ಯವಿರುವ ಬತ್ತ, ಕಬ್ಬು ಇತ್ಯಾದಿ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು ನೀರಿನ ಬಳಕೆಯನ್ನು ಮಿತಗೊಳಿಸಬೇಕೆಂದು ತಜ್ಞರು ಪದೇ ಪದೆ ಸಲಹೆ ನೀಡುತ್ತಿದ್ದರೂ ಪ್ರಗತಿ ಏನೇನೂ ಸಾಲದು. ಕೃಷಿಗೆ ಉಚಿತವಾಗಿ ವಿದ್ಯುತ್‌ ಪೂರೈಸುವಂಥ ಕ್ರಮಗಳಿಂದ ಕೃಷಿಕರಿಗೇನೋ ಖುಷಿಯಾಗಬಹುದು, ಆದರೆ ವಿದ್ಯುತ್‌ ಬಳಸಿಕೊಂಡು ಅಂತರ್ಜಲವನ್ನು ಎತ್ತುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನೂ ಗಮನಿಸಬೇಕು.

ಪ್ರತಿ ಸಲ ರಾಷ್ಟ್ರೀಯ ಜಲ ನೀತಿಯನ್ನು ಪರಿಷ್ಕರಿಸುವಾಗ ಹೊಸ ಗುರಿಗಳನ್ನು ಇಟ್ಟುಕೊಳ್ಳಲಾಗುತ್ತದೆ. ಕೊನೆಯದಾಗಿ 2012ರಲ್ಲಿ ಜಲನೀತಿಯನ್ನು ಮರು ರೂಪಿಸಲಾಗಿದ್ದು, ಇದರಲ್ಲಿ ದೇಶದ ಎಲ್ಲ ಪ್ರಜೆಗಳಿಗೆ ಆರೋಗ್ಯಕರ ಜೀವನಕ್ಕೆ ಅಗತ್ಯವಿರುವ ಕನಿಷ್ಠ ಪ್ರಮಾಣದ ಕುಡಿಯುವ ನೀರನ್ನು ಒದಗಿಸುವ ಗುರಿ ಇರಿಸಿಕೊಳ್ಳಲಾಗಿತ್ತು. ಇದನ್ನೇ ಹಾಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ತುಸು ಪರಿಷ್ಕರಿಸಿ ಪ್ರತಿ ಮನೆಗೆ ಶುದ್ಧವಾದ ಕುಡಿಯುವ ನೀರನ್ನು ಕೊಳವೆ ಮೂಲಕ ಪೂರೈಸುವ ಗುರಿಯಿರಿಸಿಕೊಂಡಿದೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಈ ಅಂಶವನ್ನು ಸೇರ್ಪಡೆಗೊಳಿಸಲಾಗಿತ್ತು. ಆದರೆ ಈಗಿರುವ ಪ್ರಶ್ನೆ ಇಷ್ಟು ಪ್ರಮಾಣದ ನೀರನ್ನು ಎಲ್ಲಿಂದ ತರುವುದು ಎಂದು.

Advertisement

ಹಾಗೆಂದು ನೀರು ಸಂರಕ್ಷಿಸುವ ನಿಟ್ಟಿನಲ್ಲಿ ಏನೂ ಪ್ರಯತ್ನ ಆಗಿಲ್ಲ ಎಂದಲ್ಲ. ಸ್ವತಹ ಪ್ರಧಾನಿಯೇ ಮನ್‌ ಕಿ ಬಾತ್‌ನಲ್ಲಿ ನೀರು ಸಂರಕ್ಷಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ನೀರಿಗಾಗಿಯೇ ಜಲಶಕ್ತಿ ಎಂಬ ಹೊಸ ಸಚಿವಾಲಯ ಸೃಷ್ಟಿಸಲಾಗಿದೆ. ಮಳೆ ನೀರು ಕೊಯ್ಲು, ಜಲಮೂಲಗಳ ನವೀಕರಣ, ಬೋರ್‌ವೆಲ್ಗಳ ಮರುಪೂರಣ ಇತ್ಯಾದಿಗಳನ್ನು ನಡೆಸುವುದು ತುರ್ತಾಗಿ ಆಗಬೇಕಾದ ಕಾರ್ಯ. ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಿ ಇದಕ್ಕಾಗಿ ಬಜೆಟ್‌ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಡಬೇಕು. ನೀರು ಸಂರಕ್ಷಣೆಗಾಗಿ ಕಠಿನ ಕಾನೂನುಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ಈ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ವಿವಿಧ ಸಂಘಟನೆಗಳನ್ನು, ಎನ್‌ಜಿಒಗಳನ್ನು ಒಳಗೊಂಡು ಇಂಥಹ ಕಾರ್ಯಕ್ರಮಗಳನ್ನು ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next