Advertisement

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

01:21 AM Jun 30, 2024 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಬಿಸಲೆ ಅರಣ್ಯ ವ್ಯಾಪ್ತಿಯ ಪಟ್ಲಬೆಟ್ಟದಲ್ಲಿ ರಸ್ತೆ ನಿರ್ಮಿಸಲಾಗಿರುವ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಿಸಲೆ ಅರಣ್ಯ ವ್ಯಾಪ್ತಿಯ ಪಟ್ಲಬೆಟ್ಟಕ್ಕೆ ಬೈಕ್‌ನಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯಲ್ಲಿ, ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ವಾಹನ ಓಡಾಟಕ್ಕೆ ಖಾಸಗಿಯಾಗಿ ರಸ್ತೆ ನಿರ್ಮಿಸಲಾಗಿದೆ. ಇದಕ್ಕಾಗಿ ಅನಧಿಕೃತವಾಗಿ ಮರಗಳನ್ನು ಕಡಿಯಲಾಗಿದೆ ಎಂದೂ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಲಬೆಟ್ಟಕ್ಕೆ ನಿರ್ಮಿಸಲಾಗಿರುವ ರಸ್ತೆ ಅಧಿಕೃತವೇ? ಫಾರೆಸ್ಟ್‌ ಕ್ಲಿಯರೆನ್ಸ್‌ ಪಡೆಯಲಾಗಿದೆಯೇ? ಮರ ಕಡಿಯಲು ಅನುಮತಿ ಪಡೆಯಲಾ ಗಿತ್ತೋ, ಇಲ್ಲವೋ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸಚಿವರು ತಿಳಿಸಿದ್ದಾರೆ. ಅನುಮತಿ ಇಲ್ಲದೆ ರಸ್ತೆ ನಿರ್ಮಿಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಮತ್ತು ಕರ್ತವ್ಯ ಲೋಪ ಎಸಗಿರುವ ಅರಣ್ಯ ಸಿಬಂದಿ ವಿರುದ್ಧ ಕ್ರಮ ಜರಗಿಸಲು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಅರಣ್ಯ ಸಚಿವರು ಸೂಚಿಸಿದ್ದಾರೆ.

ಸುಬ್ರಹ್ಮಣ್ಯ ಸಮೀಪದ ಬಿಸಲೆ ಅರಣ್ಯ ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲ ಬೆಟ್ಟದಲ್ಲಿ ಕೆಲವು ದಿನಗಳ ಹಿಂದೆ ಮಂಗಳೂರಿನ ಬೈಕ್‌ ಸವಾರ ರೋರ್ವರ ಮೇಲೆ ಸ್ಥಳೀಯ ಜೀಪು ಚಾಲಕರು ಹಲ್ಲೆ ನಡೆಸಿದ ವೀಡಿಯೋ ವೈರಲ್‌ ಆಗಿತ್ತು. ಹಲ್ಲೆಗೊಳಗಾದವರ ದೂರಿನಂತೆ ಸಕಲೇಶಪುರ ತಾಲೂಕಿನ ಯಸಲೂರು ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಹಲ್ಲೆ ನಡೆಸಿರುವ ಬಗ್ಗೆ ಬಾರೀ ಆಕ್ರೋಶ ವ್ಯಕ್ತವಾಗಿತ್ತು. ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೂ ಸುಬ್ರಹ್ಮಣ್ಯದ ಯುವಕರು ಪಟ್ಲಬೆಟ್ಟ ಘಟನೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next