Advertisement

BSY-Somanna ಮುನಿಸಿಗೆ ತೇಪೆ? ಮಾಜಿ ಸಚಿವಗೆ ತುಮಕೂರು ಟಿಕೆಟ್‌ ಖಚಿತ ಸಾಧ್ಯತೆ

11:54 PM Mar 02, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಹಿರಿಯ ನಾಯಕರ ಮುನಿಸಿಗೆ ತೇಪೆ ಹಚ್ಚಲಾಗುತ್ತಿದ್ದು, ವೈರತ್ವ ಮರೆತ ಮಾಜಿ ಸಚಿವ ವಿ.ಸೋಮಣ್ಣ ಅವರು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Advertisement

ಜಗದೀಶ್‌ ಶೆಟ್ಟರ್‌, ತುಮಕೂರು ಸಂಸದ ಜಿ.ಎಸ್‌.ಬಸವರಾಜ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಜತೆಯಲ್ಲಿ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಸೋಮಣ್ಣ ಹಾಗೂ ಅವರ ಪುತ್ರ ಡಾ| ಅರುಣ್‌ ಸೋಮಣ್ಣ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಈ ಸಂದರ್ಭ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಇದ್ದರು.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಲಿಂಗಾಯತ ನಾಯಕರೆಲ್ಲರೂ ಒಟ್ಟಾಗಿದ್ದಾರೆ ಎಂಬ ಸಂದೇಶ ರವಾನೆಗೆ ವರಿಷ್ಠರು ಈ ಮೂಲಕ ಮುಂದಾಗಿದ್ದಾರೆ.

ವರಿಷ್ಠರ ಸೂಚನೆ
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ತಮಗೆ ತುಮಕೂರು ಟಿಕೆಟ್‌ನ್ನು ವರಿಷ್ಠರು ಅಂತಿಮಗೊಳಿಸಿದ್ದಾರೆ. ಆದರೆ ಈ ಬಗ್ಗೆ ಖುದ್ದಾಗಿ ತೆರಳಿ ಯಡಿಯೂರಪ್ಪ ಅಭಿಪ್ರಾಯ ಪಡೆಯಿರಿ ಎಂದು ವರಿಷ್ಠರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿಶ್ವಾಸ ಪಡೆಯಲು ಸೋಮಣ್ಣ ಆಗಮಿಸಿದ್ದರು ಎನ್ನಲಾಗಿದೆ. ವರಿಷ್ಠರು ಅಂತಿಮಗೊಳಿಸಿದರೆ ನನ್ನದೇನು ಅಭ್ಯಂತರವಿಲ್ಲ. ಎಲ್ಲರೂ ಸೇರಿ ಪಕ್ಷವನ್ನು ಗೆಲುವಿನೆಡೆಗೆ ಸಾಗಿಸೋಣ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸೋಮಣ್ಣ, ನಾವು ಟಿಕೆಟ್‌ ಬಗ್ಗೆ ಮಾತನಾಡಿಲ್ಲ, ನೋವುಗಳ ಬಗ್ಗೆ ಮಾತನಾಡಿದ್ದೇವೆ. ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿ ಆಗ ಬೇಕೆಂಬುದು ನಮ್ಮೆಲ್ಲರ ಆಶಯ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಜತೆ ಚರ್ಚಿಸಿದ್ದೇನೆ. ನನ್ನ ಅಸಮಾಧಾನ ವನ್ನು ಈಗಾಗಲೇ ಹೊರ ಹಾಕಿದ್ದೇನೆ. ಯಾವುದೇ ಗೊಂದಲ ಬೇಡ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next