Advertisement

ಏ.20ರವರೆಗೆ ಪಾಸ್‌ ಅವಧಿ ವಿಸ್ತರಣೆ

01:12 PM Apr 15, 2020 | Suhan S |

ಬೆಂಗಳೂರು: ಆನ್‌ಲೈನ್‌ ಮೂಲಕ ಅನಗತ್ಯ ಕಾರಣಗಳನ್ನು ಉಲ್ಲೇಖೀಸಿ ಇ-ಪಾಸ್‌ಗಾಗಿ ಸಲ್ಲಿಸಿದ್ದ 46.8 ಲಕ್ಷ ಅರ್ಜಿ ತಿರಸ್ಕೃತಗೊಳಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ 1.87 ಲಕ್ಷ ಪಾಸ್‌ ವಿತರಿಸಲಾಗಿದ್ದು, ಅವುಗಳನ್ನು ಏ.20ರವರೆಗೆ ಬಳಕೆ ಮಾಡಬಹುದು. ಪಾಸ್‌ ಇದ್ದವರು ಅನಗತ್ಯವಾಗಿ ತಿರುಗಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲವೆಡೆ ಪಾಸ್‌ಗಳನ್ನು ಕಲರ್‌ ಜೆರಾಕ್ಸ್‌ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆಲವರು ತಪ್ಪು ಮಾಹಿತಿ ಕೊಟ್ಟು ಪಾಸ್‌ ಪಡೆದುಕೊಂಡವರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ವಿವರಿಸಿದರು.

ವಾಹನ ಜಪ್ತಿ: ನಗರದ 12 ಗಡಿ ಭಾಗಗಳನ್ನು ಸೀಲ್‌ ಮಾಡಲಾಗಿದೆ. ಏ.20ರ ವರೆಗೆ ಸಾರ್ವಜನಿಕರಿಗೆ ಬೆಂಗಳೂರು ಬಿಟ್ಟು ಹೊರ ಹೋಗಲು ಅಥವಾ ನಗರ ಪ್ರವೇಶಿಸಲು ಅವಕಾಶ ಇಲ್ಲ. ಒಂದು ವೇಳೆ ಪೊಲೀಸರ ಕಣ್ತಪ್ಪಿಸಿ ಬೇರೆ ಜಿಲ್ಲೆಗೆ ಹೋದರೂ, ಅಲ್ಲಿ ಸಿಕ್ಕಿ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಗತ್ಯವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದರು. ಆದರೆ, ಸರಕು ವಾಹನ, ಹಣ್ಣು, ತರಕಾರಿ, ದಿನಸಿ ಪದಾರ್ಥ, ಮಾಂಸ ತರುವ ವಾಹನಗಳಿಗೆ ಓಡಾಡಲು ಅವಕಾಶ ಕೊಡಲಾಗುತ್ತದೆ. ವೈದ್ಯಕೀಯ ಚಿಕಿತ್ಸೆಯಿದ್ದರೂ ಅವರ ಜಿಲ್ಲೆಗಳಲ್ಲೇ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅನುಮತಿ ಪಡೆಯಬೇಕು: ಏ.20ರ ವರೆಗೆ ಹೊರ ರಾಜ್ಯಗಳಿಗೆ ಹೋಗಲು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ತುರ್ತು ಸಂದರ್ಭ ಅಥವಾ ಸಾವು ಸಂಭವಿಸಿದ ಸಂದರ್ಭದಲ್ಲಿ ಮಾತ್ರ ಹೋಗಲು ಅವಕಾಶ ಕೊಡಲಾಗುತ್ತದೆ. ಅಂತಹ ಸಾರ್ವಜನಿಕರು ಡಿಜಿಪಿ ಕಚೇರಿಯಲ್ಲಿರುವ ಹಿರಿಯ ಐಪಿಎಸ್‌ ಅಧಿಕಾರಿ ಪ್ರತಾಪ್‌ ರೆಡ್ಡಿ ಅವರನ್ನು ಭೇಟಿಯಾಗಿ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಹೋಗಲು ಅವಕಾಶ ಕೊಡಲಾಗುವುದಿಲ್ಲ ಎಂದು ಭಾಸ್ಕರ್‌ ರಾವ್‌ ಸ್ಪಷ್ಟಪಡಿಸಿದ್ದಾರೆ. ತುರ್ತು ಮೆಡಿಕಲ್‌ ಪಾಸ್‌ ಗಳನ್ನು ಆಯಾ ಪೊಲೀಸ್‌ ಠಾಣೆಗಳಲ್ಲಿ ಪಡೆದು ನಗರದಲ್ಲಿ ಆಸ್ಪತ್ರೆಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಏ.20ರವರೆಗೆ ನಿಷೇಧಾಜ್ಞೆ: ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್‌ ಮುಂದುವರಿಸಿರುವ ಬೆನ್ನಲ್ಲೇ ನಗರದಲ್ಲಿ ಏ. 20ರ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು.

Advertisement

ಡ್ರೋನ್‌ ಯಶಸ್ವಿ : ನಗರದಲ್ಲಿ ಈಗಾಗಲೇ 50 ಡ್ರೋನ್‌ ಗಳನ್ನು ಬಳಕೆ ಮಾಡಲಾಗುತ್ತಿದೆ. ಅನಗತ್ಯವಾಗಿ ತಿರುಗಾಡುವ ಜನರನ್ನು ಪತ್ತೆ ಹಚ್ಚಲು ಈ ಡ್ರೋನ್‌ ಸಹಕಾರಿಯಾಗಿದೆ. ವಾಯುವಿಹಾರಕ್ಕೆ ಬರುವವರು, ಸೈಕಲ್‌ನಲ್ಲಿ ತಿರುಗಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಾಕು ಪ್ರಾಣಿಗಳನ್ನು ಮನೆ ಸುತ್ತ-ಮುತ್ತ ಕರೆದುಕೊಂಡು ಹೋಗಬಹುದು ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next