Advertisement

ಇಲ್ಲಿ 108 ಹಸುಗಳಿವೆ ! ದಿನಕ್ಕೆ 400ಲೀ. ಹಾಲು ಸಿಗುತ್ತದೆ !!

04:22 PM Sep 17, 2018 | |

ಈ ಯುವ ಉದ್ಯಮಿಯ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಲೋಪತಿ ಔಷಧಿಗಳು ಅವರ ನೋವನ್ನು ಶಮನಗೊಳಿಸಿರಲಿಲ್ಲ. ಆಗ ವೈದ್ಯರೊಬ್ಬರು, ದೇಸಿ ತಳಿಯ ಗೋವಿನ ಮೂತ್ರದಿಂದ ತಯಾರಿಸಿದ ಅರ್ಕವನ್ನು ಸೇವಿಸುವಂತೆ ಸಲಹೆ ನೀಡಿದರು. ಈ ಚಿಕಿತ್ಸೆ ಫ‌ಲಪ್ರದವಾಯಿತು. ಅವರು ರೋಗವನ್ನು ಜಯಿಸಿ ಮೊದಲಿನಂತಾದರು. ಈ ಕಾರಣಕ್ಕೆ ಉದ್ಯಮಿ ಎಂಟು ವರ್ಷಗಳ ಹಿಂದೆ ದೇಸೀ ತಳಿಯ ಗೋವುಗಳ ವಂಶ ಅಳಿಯಬಾರದೆಂಬ ದೃಷ್ಟಿಯಿಂದ ಅದನ್ನು ಉಳಿಸುವ, ಬೆಳೆಸುವ ಕಾಯಕಕ್ಕೆ ಮುಂದಾದರು. ಇಂದು ಅವರ ದೇಸೀ ತಳಿಗಳ ಗೋಮಂದಿರ 108 ಗೋವುಗಳನ್ನು ಹೊಂದಿ ವಿಶಿಷ್ಟವಾಗಿ ರೂಪುಗೊಂಡಿದೆ. ಒಬ್ಬರೇ ನಡೆಸುವ ಒಂದು ಅಪರೂಪದ ಸಂಗತಿಗೆ ಮಾದರಿಯಾಗಿ ಅದು ಗಮನ ಸೆಳೆಯುತ್ತದೆ.

Advertisement

  ಅಂದಹಾಗೆ, ಈ ಉದ್ಯಮಿಯ ಹೆಸರು ಕೆ. ಅನಂತ ಕಾಮತ್‌.  ಕಾರ್ಕಳ ಮೂಲದವರು. ಮಂಗಳೂರಿನಲ್ಲಿ ಖ್ಯಾತ ಉದ್ಯಮಿ. ತಮ್ಮ ಅವಿರತ ಕೆಲಸಗಳ ನಡುವೆಯೂ ಕೃಷಿ ಮತ್ತು ಗೋ ಸಾಕಣಿಕೆಗೆ ಆದ್ಯತೆ ನೀಡುತ್ತಾರೆ. ಪುಂಜಾಲಕಟ್ಟೆಯ ಬಳಿಯ ಮೂರ್ಜೆಯಿಂದ ಎರಡೂವರೆ ಕಿ.ಮೀ ದೂರದಲ್ಲಿ ನೇರಳಕಟ್ಟೆಯ ಕುಮಂಗಿಲದಲ್ಲಿ ಅವರಿಗೆ ಮೂವತ್ತು ಎಕರೆ ಕೃಷಿ ಭೂಮಿ ಇದೆ. ಅದರಲ್ಲಿ ಹದಿನೇಳು ಎಕರೆಯನ್ನು ಗೋವುಗಳಿಗೆ ಹಸಿರು ಮೇವು ಬೆಳೆಯುವ ಸಲುವಾಗಿ ಮೀಸಲಿಟ್ಟಿದ್ದಾರೆ.

    ಹತ್ತು ದೇಸೀ ಗೋವುಗಳಿಂದ ಆರಂಭವಾದ ಕಾಮತರ ಗೋಮಂದಿರದಲ್ಲಿ ಈಗ ಕರುಗಳು ಸೇರಿ ಗೋವುಗಳ ಸಂಖ್ಯೆ 108ರಷ್ಟಿದೆ. ಪ್ರಮುಖವಾಗಿ ಗಿರ್‌ ಮತ್ತು ಕಾಂಕ್ರೇಜ್‌ ತಳಿಯ ದನಗಳಿವೆ.  ಮಲೆನಾಡು ಗಿಡ್ಡ ತಳಿಯ ಗೋವುಗಳೂ ಇವೆ. ವರ್ಣಸಂಕರವಾಗಬಾರದೆಂಬ ದೃಷ್ಟಿಯಿಂದ ಆಯಾ ತಳಿಯ ವಂಶದ ಅಭಿವೃದ್ಧಿಗೆ ಅದೇ ತಳಿಯ ಎತ್ತುಗಳಿವೆ. ನೇರವಾಗಿ ಗುಜರಾತಿಗೆ ಹೋಗಿ ಕಾಮತರು ಈ ಗೋವುಗಳನ್ನು ತಂದಿದ್ದಾರೆ. ಇದು ಲಾಭದ ಬಯಕೆಯಿಂದ ಮಾಡಿದ ಪ್ರಯತ್ನವಲ್ಲ, ದೇಸೀ ತಳಿ ಉಳಿಸುವುದೊಂದೇ ನನ್ನ ಧ್ಯೇಯ ಎನ್ನುವ ಅವರು ಇದರಿಂದ ಸಿಗುವ ಪರಿಶುದ್ಧವಾದ ಹಾಲನ್ನು ದಿನವೂ 300ರಿಂದ 400 ಲೀಟರ್‌ ಪ್ರಮಾಣದಲ್ಲಿ ಮಂಗಳೂರಿನ ಸಾವಯವ ಮಾರುಕಟ್ಟೆಗೆ ತಲುಪಿಸುತ್ತಾರೆ. ಒಂದು ಲೀಟರ್‌ ಹಾಲಿಗೆ ಎಂಭತ್ತೆ„ದು ರೂಪಾಯಿ ಧಾರಣೆ ಸಿಗುತ್ತದೆ. ಹಾಲನ್ನು ಪ್ಲಾಸ್ಟಿಕ್‌ ಸೀಸೆಯಲ್ಲಿ ತುಂಬುವುದಿಲ್ಲ. ಹಾಲು ತುಂಬಲು ಗಾಜಿನ ಬಾಟಲಿಯನ್ನೇ ಬಳಸುತ್ತಾರೆ. ಹೆಚ್ಚುವರಿ ಹಾಲಿನಿಂದ ಕ್ರಮಬದ್ಧವಾಗಿ ತಯಾರಿಸುವ ಘಮಘಮಿಸುವ ತುಪ್ಪದಿಂದ ಲೀಟರಿಗೆ ಮೂರು ಸಾವಿರ ರೂ. ಧಾರಣೆ ಬರುತ್ತಿದೆಯಂತೆ. ಮಜ್ಜಿಗೆಗೂ ಲೀಟರ್‌ ದರ 20 ರೂ.

    ಗೋವುಗಳ ಮೂತ್ರದಿಂದ ಕಾಮತರು ತಯಾರಿಸುವ ಅರ್ಕಕ್ಕೂ ಬೇಡಿಕೆ ಇದೆ. ಲೀಟರ್‌ಗೆ 200 ರೂ. ಬರುತ್ತದೆ. ಸಗಣಿಯನ್ನು ಧಾರಾಳವಾಗಿ ಮೇವಿನ ಕೃಷಿಗೆ ಬಳಸುತ್ತಾರೆ. ನಂತರವೂ ಅದು ಉಳಿದರೆ ಬೇರೆ ರೈತರಿಗೆ ಮಾರಾಟ ಮಾಡುತ್ತಾರೆ. ಸಗಣಿಯನ್ನು ಒಣಗಿಸಿ ಬೆರಣಿಗಳಾಗಿ ತಯಾರಿಸಿದರೆ ವಿಭೂತಿ ಮತ್ತು ಹೋಮನೇಮಗಳಿಗಾಗಿ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಸಗಣಿಯನ್ನು ಧೂಪದ ಸಾಮಗ್ರಿಯಾಗಿಯೂ ಸಿದ್ಧಪಡಿಸುವ ವ್ಯವಸ್ಥೆ ಇದೆ. ಅವರ ಉತ್ಪಾದನೆಗಳು ದೇಶದ ಬಹುಭಾಗವಲ್ಲದೆ ವಿದೇಶಗಳಿಗೂ ರವಾನೆಯಾಗುತ್ತಿವೆಯಂತೆ.  

    ಗೋವುಗಳಿಗೆ ಧಾರಾಳವಾಗಿ ಬೆಳಕು, ಗಾಳಿ ಸಿಗುವ ನೂರು ಅಡಿ ಉದ್ದ, ಅದರ ಅರ್ಧದಷ್ಟು ಅಗಲವಿರುವ ಸುಸಜ್ಜಿತ ಕೊಟ್ಟಿಗೆಯನ್ನು ಕಟ್ಟಿಸಿದ್ದಾರೆ. ಹತ್ತು ಗೋವುಗಳಿಗೆ ಒಬ್ಬನಂತೆ ಕೆಲಸಗಾರನನ್ನು ನೇಮಿಸಿಕೊಂಡಿದ್ದಾರೆ. ಗೋವುಗಳನ್ನು ದಿನವೂ ತಿಕ್ಕಿ ತೊಳೆದು ಹೊರಗೆ ಮೇಯಲು ಬಿಡುತ್ತಾರೆ. ಜಾನುವಾರು ಸಾಕಣೆಯಲ್ಲಿ 35 ವರ್ಷಗಳ ಅನುಭವವಿರುವ ಪ್ರಶಾಂತ್‌ ಎಂಬ ಪರಿಣತರು ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಕಾಯಿಲೆಗಳಿಗೆ ಬೇಕಾಗುವ ಔಷಧಿ, ಚುಚ್ಚುಮದ್ದು ಕೊಡುವ ಕೆಲಸವನ್ನೂ ಪ್ರಶಾಂತ್‌ ಮಾಡುತ್ತಿರುವುದರಿಂದ ಪಶುವೈದ್ಯರ ಅಗತ್ಯ ತೀರ ಕಡಮೆಯಾಗಿದೆ. ಗೋವುಗಳು ಕಾಮತರ ವಿಶಾಲವಾದ ಕೃಷಿ ಭೂಮಿಯಲ್ಲಿ ಸೊಪ್ಪು, ಸದೆ, ಹುಲ್ಲು ಮೇದು ಬರುವ ಕಾರಣ ಆರೋಗ್ಯಶಾಲಿಗಳಾಗಿವೆ. ಹತ್ತಿಬೀಜದ ಹಿಂಡಿ, ಜೋಳ ಮತ್ತು ಗೋಧಿಯ ಹುಡಿಗಳ ಮಿಶ್ರಣವನ್ನು ಪ್ರತೀ ಗೋವಿಗೂ ದಿನಕ್ಕೆರಡು ಸಲ 4ರಿಂದ 5 ಕಿಲೋದಷ್ಟು ಕೊಡುತ್ತಾರೆ. 

Advertisement

   ಮೊಳಕೆ ಬಂದ ಜೋಳವನ್ನು ಟ್ರೇಗಳಲ್ಲಿ ಬಿತ್ತಿ ಗಿಡ ತಯಾರಿಸಿ ಏಳು ದಿನಗಳ ಗಿಡಗಳನ್ನು ತಿನ್ನಲು ಕೊಡುವುದರಿಂದ ದೇಹಕ್ಕೂ ಹಿತ, ಹಾಲೂ ಅಧಿಕ, ಹಿಂಡಿಯಲ್ಲೂ ಗಣನೀಯ ಉಳಿತಾಯವಾಗುತ್ತದೆ. ಇದರ ಘಟಕ ತಯಾರಿಗೆ ಎರಡು ಲಕ್ಷ ರೂಪಾಯಿ ವೆಚ್ಚವಾಗಿದೆ. ಹೀಗೆ ಮೇವು ತಯಾರಿಸುವ 425 ಟ್ರೇಗಳು ಇವೆ ಎನ್ನುತ್ತಾರೆ ಕಾಮತರು. ಒಣಮೇವು ಎಂದು ಹಸುಗಳಿಗೆ ಅವರೆಂದೂ ಭತ್ತದ ಹುಲ್ಲು ಹಾಕುವುದಿಲ್ಲ, ಜೋಳದ ಒಣ ಕಡ್ಡಿಗಳನ್ನು ಸಣ್ಣದಾಗಿ ಕತ್ತರಿಸಿ ನೀಡುವ ಕ್ರಮವಿದೆ. 

   ಇಲ್ಲಿರುವ ಗೋಶಾಲೆಯನ್ನು ಸುರತ್ಕಲ್‌ನಲ್ಲಿರುವ ಅನುಕೂಲಕರ ಜಾಗಕ್ಕೆ ಸ್ಥಳಾಂತರಿಸುವ ಯೋಚನೆಯೂ ಕಾಮತರಿಗಿದೆ. ಸೆಗಣಿಯಿಂದ ಬಯೋಗ್ಯಾಸ್‌ ಉತ್ಪಾದಿಸಿ ಸಿಲಿಂಡರಿನೊಳಗೆ ತುಂಬಿಸಿ ಮಾರುಕಟ್ಟೆಗೆ ಇಳಿಸುವ ಚಿಂತನೆಯೂ ಇದೆ. ದೇಶಿ ತಳಿ ಉಳಿಯಬೇಕಿದ್ದರೆ ಅದರ ಆರ್ಥಿಕ ಲಾಭಗಳ ಅರಿವು ಜನರಿಗೆ ಮೂಡಬೇಕು. ನಾನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವ ಉದ್ದೇಶ ಜನರಿಗೆ ಅದರ ಮಹಣ್ತೀವನ್ನು ತಿಳಿಸುವುದು ಬಿಟ್ಟರೆ ಬೇರೇನಿಲ್ಲ ಎನ್ನುತ್ತಾರೆ ಅನಂತ ಕಾಮತ್‌.

ಪ. ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next