ಹೊಸದಿಲ್ಲಿ: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರು ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಹೊಂದಿರುವ ಖಾತೆಗಳ ವಿವರ ನೀಡುವಂತೆ ಮೆಟಾ ಕಂಪೆನಿಗೆ ದಿಲ್ಲಿ ಪೊಲೀಸರು ಪತ್ರ ಬರೆದಿದ್ದಾರೆ.
ಇದೇ ವೇಳೆ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಡಿ.13ರ ಕೃತ್ಯಕ್ಕಾಗಿ ಆರೋಪಿಗಳು ಬೇರೆಯವರಿಂದ ಹಣ ಪಡೆದಿದ್ದರೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
“ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಫೇಸ್ ಬುಕ್ ಪೇಜ್ ಮೂಲಕ ಆರೋಪಿಗಳು ಪರಸ್ಪರ ಪರಿಚಯ ವಾಗಿದ್ದರು ಎನ್ನಲಾಗಿದೆ. ಈ ಪೇಜ್ ಅನ್ನು ಆರೋಪಿಗಳೇ ಕ್ರಿಯೇಟ್ ಮಾಡಿದ್ದು, ಈಗ ಅದನ್ನು ಡಿಲೀಟ್ ಮಾಡಿದ್ದಾರೆ. ಈ ಪೇಜ್ ಕುರಿತ ಮಾಹಿತಿ ಹಾಗೂ ಆರೋಪಿಗಳ ವಾಟ್ಸ್ಆ್ಯಪ್ ಸಂಭಾಷಣೆಗಳ ವಿವರಗಳನ್ನು ಒದಗಿಸುವಂತೆ ಮೆಟಾಗೆ ದಿಲ್ಲಿ ಪೊಲೀಸರು ಕೇಳಿದ್ದಾರೆ.
ಪಿಐಎಲ್ ಸಲ್ಲಿಕೆ: ಡಿ.13ರ ಸಂಸತ್ನ ಭದ್ರತಾ ಲೋಪ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ.
ಜಂಟಿ ಕಾರ್ಯದರ್ಶಿ ಹುದ್ದೆ ಭರ್ತಿಗೆ ನಿರ್ಧಾರ
ಕಳೆದ 48 ದಿನಗಳಿಂದ ಖಾಲಿ ಇರುವ ಲೋಕಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ(ಭದ್ರತೆ) ಹುದ್ದೆ ಭರ್ತಿಗಾಗಿ ನಾಮನಿರ್ದೇಶನಗಳನ್ನು ಸಲ್ಲಿಸುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಸಚಿವಾಲಯ ಡಿ.14ರಂದು ಪತ್ರ ಬರೆದಿದೆ. ಸಂಸತ್ನಲ್ಲಿ ಭದ್ರತಾ ಲೋಪ ಘಟನೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.