Advertisement

ಉಡುಪಿ: ಮುಗಿಯದ ಪಾರ್ಕಿಂಗ್‌ ತಲೆನೋವು!

11:23 PM Jul 05, 2019 | Sriram |

ಉಡುಪಿ: ನಗರದಲ್ಲಿ ಸಮರ್ಪಕ ವಾಹನ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ವಾಹನ ದಟ್ಟಣೆ ದಿನಕಳೆದಂತೆ ಅಧಿಕವಾಗುತ್ತಿದೆ. ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದು ಒಂದು ಸಮಸ್ಯೆಯಾದರೆ ಸಂಚಾರ ನಿಯಮ ಉಲ್ಲಂಘಿಸಿ ಪಾರ್ಕಿಂಗ್‌ ಮಾಡುವುದು ಮತ್ತೂಂದು ಸಮಸ್ಯೆಯಾಗಿದೆ.

Advertisement

ನಗರದಲ್ಲಿ ಪ್ರಸ್ತುತ 3,18,898 ದ್ವಿಚಕ್ರ ವಾಹನಗಳು, 60,823 ಕಾರುಗಳು, 19,802 ತ್ರಿಚಕ್ರ ವಾಹನಗಳು, 19,042 ಟ್ರಕ್‌ಗಳು, 1,391 ಬಸ್‌ಗಳ ಸಹಿತ ಒಟ್ಟು 4,19,956ರಷ್ಟು ವಾಹನಗಳಿವೆ. ದಿನದಿಂದ ದಿನಕ್ಕೆ ಈ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಪ್ರತೀ ವರ್ಷ ಸಾವಿರಕ್ಕೂ ಅಧಿಕ ಹೊಸ ವಾಹನಗಳು ನೋಂದಣಿಯಾಗುತ್ತಿವೆ.

ಪ್ರಮುಖ ರಸ್ತೆಗಳಾದ ಕವಿ ಮುದ್ದಣ್ಣ ಮಾರ್ಗ, ಕೋರ್ಟ್‌ ರಸ್ತೆ, ಸರ್ವಿಸ್‌ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ, ಸಿಟಿಬಸ್‌ ನಿಲ್ದಾಣ, ಕಲ್ಸಂಕ, ಮಣಿಪಾಲದಲ್ಲಿ ವಾಹನದಟ್ಟಣೆ ಮಿತಿಮೀರುತ್ತಿದೆ.

ರಸ್ತೆಯಲ್ಲೇ ಪಾರ್ಕಿಂಗ್‌
ನಗರದಲ್ಲಿ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ವಾಗಿದೆ. ಕೆಎಂ ಮಾರ್ಗ, ಕೋರ್ಟ್‌ ರಸ್ತೆ, ಕೃಷ್ಣಮಠದ ಬಳಿ, ಶಿರಿಬೀಡು, ಕಲ್ಸಂಕ, ಪೂರ್ಣಪ್ರಜ್ಞ ಕಾಲೇಜು (ಪಿಪಿಸಿ), ತ್ರಿವೇಣಿ ಸರ್ಕಲ್‌, ಕಡಿಯಾಳಿಗಳಲ್ಲಿ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸಿ ತೆರಳುತ್ತಾರೆ.

ಟ್ರಾಫಿಕ್‌ ಪೊಲೀಸರು ಸುಸ್ತು
ನಗರದ ಕಲ್ಸಂಕ, ಶಿರಿಬೀಡು ವೃತ್ತ, ಸಿಟಿ ಬಸ್‌ ನಿಲ್ದಾಣ ಸಮೀಪ, ಡಯಾನಾ ವೃತ್ತಗಳಲ್ಲಿ ಎಷ್ಟೇ ಸಂಚಾರ ವನ್ನು ನಿಯಂತ್ರಿಸಲು ಪೊಲೀಸರು ಯತ್ನಿಸಿ ದರೂ ಕೂಡ ದ್ವಿಚಕ್ರ, ಲಘುವಾಹನಗಳ ದಟ್ಟಣೆ ಯಿಂದ ಅಲ್ಲಲ್ಲಿ ಟ್ರಾಫಿಕ್‌ ಸಮಸ್ಯೆ ತಲೆದೋರುತ್ತಿದೆ.

Advertisement

ಸಿಟಿಬಸ್‌ ನಿಲ್ದಾಣ, ಕೆಎಂ ಮಾರ್ಗಗಳಲ್ಲಿ ಕಾರು ಚಾಲಕರು ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ಹೋದಲ್ಲಿ ರಸ್ತೆ ಮೇಲೆ ಪಾರ್ಕಿಂಗ್‌ ಮಾಡಿ ತೆರಳುತ್ತಾರೆ. ಸಂಚಾರಿ ಠಾಣಾ ಪೊಲೀಸರು ಎಚ್ಚರಿಕೆ ನೀಡಿದರೂ ಯಾರೂ ಪಾಲಿಸುತ್ತಿಲ್ಲ. ಪೊಲೀಸ್‌ ಫೋನ್‌ ಇನ್‌ನಲ್ಲೂ ಶೇ.70ರಷ್ಟು ದೂರುಗಳು ಪಾರ್ಕಿಂಗ್‌ ಕುರಿತೇ ಆಗಿವೆ.

ಟೋಯಿಂಗ್‌ ವಾಹನಗಳ ಕೊರತೆ
ಅಂಬಲಪಾಡಿ, ಕರಾವಳಿ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಕೇಸು ಜಡಿದು ವಾಹನಗಳಿಗೆ ಲಾಕ್‌ ಹಾಕುವ ವ್ಯವಸ್ಥೆಯೂ ಇದೆ. ಆದರೆ ವಾಹನಗಳನ್ನು ಕೊಂಡುಹೋಗುವ ಟೋಯಿಂಗ್‌ ವಾಹನ ಗಜೇಂದ್ರ ಒಂದೇ ಇದ್ದು ಸರಿಯಾಗಿ ಬಳಕೆ ಮಾಡಲಾಗುತ್ತಿಲ್ಲ. 4 ಚಕ್ರದ ವಾಹನಗಳನ್ನು ಕೊಂಡೊಯ್ಯಲೂ ಪೊಲೀಸರ ಬಳಿ ವಾಹನವಿಲ್ಲ. ಕನಿಷ್ಠ 4 ಟೋಯಿಂಗ್‌ ವಾಹನಗಳಾದರೂ ಬೇಕು ಎನ್ನುತ್ತಾರೆ ಟ್ರಾಫಿಕ್‌ ಪೊಲೀಸ್‌ ಸಿಬಂದಿ.

ಸಿಗ್ನಲ್‌ ಅಳವಡಿಕೆ ಪ್ರಸ್ತಾವನೆಯಲ್ಲೇ ಬಾಕಿ
ಬನ್ನಂಜೆ, ಎಂಜಿಎಂ, ಕಲ್ಸಂಕ, ಶಿರಿಬೀಡು, ಸಿಂಡಿಕೇಟ್‌ ಸರ್ಕಲ್‌, ಎಂಐಟಿ, ಟೈಗರ್‌ ಸರ್ಕಲ್‌ಗ‌ಳಲ್ಲಿ ಸಿಗ್ನಲ್‌ ಅಳವಡಿಸುವ ಬಗ್ಗೆ ಪೊಲೀಸ್‌ ಇಲಾಖೆಯು ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಇನ್ನೂ ಯಾವುದೇ ಬೆಳವಣಿಗೆ ಕಂಡಿಲ್ಲ. ಇದರಿಂದ ನಿಯಮ ಉಲ್ಲಂ ಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಎಲ್ಲೆಲ್ಲಿ ಪಾರ್ಕಿಂಗ್‌ ಸಮಸ್ಯೆ?
ಕೆಎಸ್ಸಾರ್ಟಿಸಿ, ಸಿಟಿ ಬಸ್ಸು ನಿಲ್ದಾಣ, ಗೀತಾಂಜಲಿ ಸಿಲ್ಕ್$Õ ಬಳಿ, ಆಭರಣ ಜುವೆಲರ್, ಕಿದಿಯೂರು ಹೊಟೇಲ್‌ ಬಳಿ, ಕಲ್ಸಂಕ ರಸ್ತೆ, ಬನ್ನಂಜೆ, ತ್ರಿವೇಣಿ ಸರ್ಕಲ್‌, ಕೋರ್ಟ್‌ ರೋಡ್‌, ಕೆಎಂ ಮಾರ್ಗ, ರಿಲಯನ್ಸ್‌ ಮಾರ್ಟ್‌, ಸಿಂಡಿಕೇಟ್‌ ಬ್ಯಾಂಕ್‌, ಬಿಗ್‌ ಬಜಾರ್‌, ಚಿತ್ತರಂಜನ್‌ ಸರ್ಕಲ್‌, ಡಯಾನ ಸರ್ಕಲ್‌, ಕ್ಲಾಕ್‌ಟವರ್‌.

ಟ್ರಾಫಿಕ್‌ ಸಮಸ್ಯೆ
ಪರಿಹಾರ ಸಾಧ್ಯವೇ?
ವಿಶ್ವೇಶ್ವರಯ್ಯ ಮಾರುಕಟ್ಟೆ ಜತೆ ಈಗಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ಬಳಸಿ ಕಮರ್ಶಿಯಲ್‌ ಕಾಂಪ್ಲೆಕ್ಸ್‌ ಜತೆ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ ಮಾಡಿದಲ್ಲಿ ಕೆ.ಎಂ. ಮಾರ್ಗದಿಂದ ಸಿಟಿ ಬಸ್‌ ನಿಲ್ದಾಣದವರೆಗಿನ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಸಿಗಲಿದೆ. ವಾಣಿಜ್ಯ ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಪಾರ್ಕಿಂಗ್‌ಗೆ ಜಾಗ ನೀಡಿರುವ ಬಗ್ಗೆ ಕಡ್ಡಾಯ ಪರಿಶೀಲನೆ ನಡೆಸಬೇಕು. ನಗರಸಭೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಹೋದರೆ ಮುಂಬರುವ ದಿನಗಳಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಾಗಲಿದೆ.

ಮಣಿಪಾಲದಲ್ಲಿ ಪ್ರತ್ಯೇಕ ಠಾಣೆಗೆ ಬೇಡಿಕೆ
ಉಡುಪಿ ನಗರ ವ್ಯಾಪ್ತಿಯ ಟ್ರಾಫಿಕ್‌ ಪೊಲೀಸರ ಕಾರ್ಯವ್ಯಾಪ್ತಿ ಇಂದ್ರಾಳಿ ಸೇತುವೆ ತನಕ ಮಾತ್ರ ಇದೆ. ದಟ್ಟನೆ ಇರುವ ಮಣಿಪಾಲ ಭಾಗದಲ್ಲಿ ಬ್ಲಾಕ್‌ ಉಂಟಾಗುತ್ತಿದೆ. ಬೆಳಗ್ಗೆ, ಸಂಜೆ, ವಾರಾಂತ್ಯಗಳಲ್ಲಿ ಸಿಂಡಿಕೇಟ್‌ ಸರ್ಕಲ್‌, ಟೈಗರ್‌ ಸರ್ಕಲ್‌ಗ‌ಳಲ್ಲಿ ಅತೀ ಹೆಚ್ಚು ಟ್ರಾಫಿಕ್‌ ಹೆಚ್ಚುತ್ತಿದ್ದು, ಪ್ರತ್ಯೇಕ ಟ್ರಾಫಿಕ್‌ ಠಾಣೆ ಅನಿವಾರ್ಯ ಎಂಬಂತಾಗಿದೆ.

ಇಲಾಖೆ ಗುರುತಿಸುವ ಜಾಗದಲ್ಲೇ ಕಡ್ಡಾಯ ಪಾರ್ಕಿಂಗ್‌
ಪಾರ್ಕಿಂಗ್‌ಗೆ ಲಭ್ಯವಿರುವ ಜಾಗಗಳನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುವುದು. ಪೊಲೀಸ್‌ ಇಲಾಖೆ ಗುರುತಿಸುವ ಜಾಗದಲ್ಲೇ ಪಾರ್ಕಿಂಗ್‌ ಮಾಡಬೇಕು. ರಸ್ತೆಯ ಎರಡೂ ಬದಿಯಲ್ಲಿ ತಲಾ ಒಂದೊಂದು ದಿನದಂತೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಜಾರಿಗೆ ತರಲಾಗುವುದು.
-ನಿಶಾ ಜೇಮ್ಸ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು

ಕೇಸು ದಾಖಲು
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನಧಿಕೃತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್‌ ಮಾಡುವವರ ಮೇಲೆ ಕೇಸು ದಾಖಲಿಸಲಾಗುವುದು.
-ನಾರಾಯಣ್‌,
ಟ್ರಾಫಿಕ್‌ ಸಬ್‌ಇನ್‌ಸ್ಪೆಕ್ಟರ್‌

-ಪುನೀತ್‌ ಸಾಲ್ಯಾನ್‌

ಚಿತ್ರಗಳು: ಆಸ್ಟ್ರೋಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next