Advertisement

ವಾಹನ ಪಾರ್ಕಿಂಗ್‌ಗೆ ಸಾರ್ವಜನಿಕರ ಪರದಾಟ

07:35 PM Sep 15, 2021 | Team Udayavani |

ಪುತ್ತೂರು ತಾಲೂಕಿನ ಅತೀ ದೊಡ್ಡ ಗ್ರಾಮ ನೆಟ್ಟಣಿಗೆ ಮುಟ್ನೂರಿನ ಈಶ್ವರಮಂಗಲದಲ್ಲಿನ ಸಮಸ್ಯೆಗಳೂ ಅಷ್ಟೇ ದೊಡ್ಡದಿದೆ. ಪೇಟೆಯಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಜನರ ಪರದಾಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕೇರಳ ಗಡಿಗೆ ಸಮೀಪದ ಇಲ್ಲಿನ ಚಿತ್ರಣ ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ.

Advertisement

ಈಶ್ವರಮಂಗಲ: ಕರ್ನಾಟಕ-ಕೇರಳದ ಗಡಿಭಾಗದಲ್ಲಿರುವ ತಾಲೂಕಿನ ಅತೀ ದೊಡ್ಡ ಗ್ರಾಮ ನೆಟ್ಟಣಿಗೆ ಮುಟ್ನೂರು ಗ್ರಾಮದಲ್ಲಿರುವ ಊರು ಈಶ್ವರಮಂಗಲ. ಇಲ್ಲಿಂದ ಕೇರಳ ಗಡಿಗೆ  ಕೇವಲ 4 ಕಿ.ಮೀ.ದೂರ.

ಕಾವು-ಈಶ್ವರಮಂಗಲ- ಪಳ್ಳತ್ತೂರು ಲೋಕೋ ಪಯೋಗಿ ರಸ್ತೆ ಇಲ್ಲೇ ಹಾದು ಹೋಗುತ್ತಿದ್ದು, ವಾಹನ ಪಾರ್ಕಿಂಗ್‌ಗೆ ಪರದಾಡುತ್ತಿರುವ ದೃಶ್ಯ ಸಾಮಾನ್ಯ ಎಂಬಂತಾಗಿದೆ.

ಕೇರಳ ಗಡಿಯ ಸನಿಹದ ಗ್ರಾಮ:

ನೆಟ್ಟಣಿಗೆ ಮುಟ್ನೂರು ಗ್ರಾಮದ ಈಶ್ವರಮಂಗಲ ವಾಣಿಜ್ಯ, ಶೈಕ್ಷಣಿಕ ಹಾಗೂ ವಾಣಿಜ್ಯೇತರ ಚಟುವಟಿಕೆಗಳ ತಾಣವಾಗಿದೆ.  ಕಾಸರಗೋಡು ತಾಲೂಕಿನ ದೇಲಂಪಾಡಿ, ಕಾರಡ್ಕ, ಬೆಳ್ಳೂರು ಗ್ರಾಮ ಜನರ ಜತೆ ಪಡುವನ್ನೂರು, ಬಡಗನ್ನೂರು, ಅರಿಯಡ್ಕದಿಂದ ದಿನನಿತ್ಯ ಗ್ರಾಮಸ್ಥರು ವ್ಯವಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಈಶ್ವರಮಂಗಲ ಪೇಟೆಗೆ ಆಗಮಿಸಿದ ವಾಹನಗಳನ್ನು ಕೆಲವು ಸಲ ರಸ್ತೆ ಬದಿಯಲ್ಲೇ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮಾತ್ರವಲ್ಲ ಸರಕಾರಿ, ಖಾಸಗಿ ಬಸ್‌ಗಳು ರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರು ಹತ್ತಿಸುತ್ತವೆ. ಇದರಿಂದ ಪಾದಚಾರಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ಮಾತ್ರವಲ್ಲ ಈಶ್ವರಮಂಗಲ ಪೇಟೆಗೆ ಬರುವ  ಕೆಲವು ವಾಹನಗಳು  ಮೇ| ಸಂದೀಪ್‌ ಉಣ್ಣಿ ಕೃಷ್ಣನ್‌  ವೃತ್ತಕ್ಕೆ ಸುತ್ತು ಹಾಕದೇ ನೇರವಾಗಿ ಸಂಚರಿಸಿದರೆ ಮತ್ತೆ ಕೆಲವು ವೃತ್ತಕ್ಕೆ ಸುತ್ತು ಹಾಕಿ ಸಂಚರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

Advertisement

 ರಸ್ತೆ ಅಂಚಿನಲ್ಲಿಯೇ ಸಂತೆ:

ಪ್ರತೀ ರವಿವಾರ ಈಶ್ವರಮಂಗಲ ಸಂತೆ ವೃತ್ತದ ಬಳಿಯೇ  ನಡೆಯುತ್ತಿದೆ. ಗ್ರಾಹಕರು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವಂತಂಹ ಪರಿಸ್ಥಿತಿ. ಈಗಾಗಲೇ ಗ್ರಾ.ಪಂ. ಎಪಿಎಂಸಿ ಯಾರ್ಡ್‌ಗೆ ಜಾಗ ಕಾದಿರಿಸಿದ ವಿಷಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಅಸರ್ಮಪಕ ತ್ಯಾಜ್ಯ ವಿಲೇವಾರಿ:

ಗ್ರಾ.ಪಂ. ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಘಟಕ ಸ್ಥಾಪಿಸಿದ್ದರೂ ಇನ್ನಷ್ಟೆ ಕಾರ್ಯ ಪ್ರವೃತವಾಗಬೇಕಾಗಿದೆ. ಪೇಟೆಯಲ್ಲಿ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿದ್ದು, ಪ್ರತಿ 15ದಿನಗಳಿಗೊಮ್ಮೆ ವಿಲೇವಾರಿ ಮಾಡಿದರೂ  ಕೆಲವು ಕಡೆ ಘನ ತ್ಯಾಜ್ಯವನ್ನು ಚರಂಡಿಗೆ ಎಸೆಯಲಾಗುತ್ತಿದ್ದು,  ಪೇಟೆಯಲ್ಲಿರುವ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯಲು ಅಡಚಣೆ ಎದುರಾಗಿದೆ.

ಎರಡು ತಿಂಗಳಲ್ಲಿ ಎದ್ದು ಹೋದ ಡಾಮರು:

ಈಶ್ವರಮಂಗಲ ಪೇಟೆಯ ಮೂಲಕ ಹಾದು ಹೋಗುವ ಕಾವು ಈಶ್ವರಮಂಗಲ-ಪಂಚೋಡಿ- ಕರ್ನೂರು ಗಾಳಿಮುಖ ಲೋಕೋಪಯೋಗಿ ರಸ್ತೆಯ  ಪಂಚೋಡಿಯಿಂದ ಗಾಳಿಮುಖದವರೆಗೆ ಕಳೆದ ಬೇಸಗೆ ಯಲ್ಲಿ ಡಾಮರು ಹಾಕಲಾಗಿದ್ದು, ಮಳೆಗಾಲದಲ್ಲಿ ಎದ್ದು ಹೋಗಿದೆ.

ಕಂದಾಯ ಇಲಾಖೆಗೆ ಕಚೇರಿ ಇಲ್ಲ :

ನೆಟ್ಟಣಿಗೆ ಮುಟ್ನೂರು ಗ್ರಾಮದ ಗ್ರಾಮಕರಣಿಕರ ಕಚೇರಿಯು ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದೆ. ಗ್ರಾ. ಪಂ. ಬಳಿಯೇ ಇರುವ ಸಣ್ಣ ಕೊಠಡಿಯಲ್ಲಿಯೇ ದಾಖಲೆಯನ್ನು ಸಂಗ್ರಹಣೆ  ಮಾಡಬೇಕಾಗುತ್ತದೆ. ಗ್ರಾಮಸ್ಥರು ಕಚೇರಿಗೆ ಬಂದರೆ ನಿಂತುಕೊಂಡು ವ್ಯವರಿಸಬೇಕಾಗಿದೆ. ಪುತ್ತೂರು ತಾಲೂಕಿನ ಅತೀ ದೊಡ್ಡ ಗ್ರಾಮದ ಜಮೀನಿನ ಸಂಪೂರ್ಣ ಮಾಹಿತಿ ಇದ್ದರೂ ಇನ್ನೂ ಸ್ವಂತ ಕಟ್ಟಡದ ಭಾಗ್ಯ ಇಲಾಖೆಗೆ ಇಲ್ಲದೆ ಇರುವುದು ವಿಪರ್ಯಾಸ.

ಹೊರಠಾಣೆ ಕಟ್ಟಡ ಪೂರ್ತಿಯಾಗಿಲ್ಲ  :

ಸಂಸದ ಡಿ.ವಿ.ಸದಾನಂದ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭ ವಾದ ಈಶ್ವರಮಂಗಲ ಪೊಲೀಸ್‌ ಹೊರ ಠಾಣೆಯ ನೂತನ ಕಟ್ಟಡ ಇನ್ನೂ ಪೂರ್ತಿಯಾಗಿಲ್ಲ. ಪೇಟೆಯ ಸನಿಹದಲ್ಲಿರುವ ಠಾಣೆಯು ಮೂಲ ಸೌಕರ್ಯದಿಂದ ವಂಚಿತವಾಗಿದೆ. ಪ್ರಸ್ತುತ ಈಶ್ವರಮಂಗಲ ಸಿಎ ಬ್ಯಾಂಕ್‌ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ  ಹೊರ ಠಾಣೆ ಸಮೀಪ ದಲ್ಲಿ ಇಲಾಖೆಗೆ ಸಂಬಂಧಿಸಿದ ಜಾಗ ಇದೆ. ಗಡಿ ಭಾಗವಾಗಿರುವುದರಿಂದ ಶಾಶ್ವತ ಪೊಲೀಸ್‌ ಠಾಣೆಯ ಜತೆ ಮೂಲ ಸೌಕರ್ಯಕ್ಕೆ ಕ್ರಮ ಕೈಗೊಳ್ಳ ಬೇಕಾಗಿದೆ.

ಪ್ರಮುಖ ಬೇಡಿಕೆಗಳು :

  • ಪೇಟೆಯಲ್ಲಿ ಅನಧಿಕೃತ ಕೈ ಗಾಡಿಯಲ್ಲಿ ವ್ಯಾಪಾರ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು
  • ಮತ್ತೂಂದು ರಾಷ್ಟ್ರೀಯ ಬ್ಯಾಂಕ್‌ ಸ್ಥಾಪನೆ
  • ಬೆಳಗ್ಗೆ ಮತ್ತು ಸಂಜೆ ಪೇಟೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಮತ್ತು ಮಕ್ಕಳ ಸುರಕ್ಷತೆಗೆ ಪೊಲೀಸ್‌ ಸಿಬಂದಿ ನೇಮಕ

-ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next