ಕನ್ನಡದಲ್ಲಿ ಮಾತಿಲ್ಲದ ಚಿತ್ರಗಳು ಈಗಾಗಲೇ ಬಂದಿವೆ. ಮೂಕಿ ಚಿತ್ರ ಅಂದಾಕ್ಷಣ ಥಟ್ಟನೆ ನೆನಪಾಗೋದೇ, ಕಮಲ್ಹಾಸನ್ ಅಭಿನಯದ “ಪುಷ್ಪಕ ವಿಮಾನ’. ಅದು ಎವರ್ಗ್ರೀನ್ ಚಿತ್ರ ಅನ್ನೋದು ಎಲ್ಲರಿಗೂ ಗೊತ್ತು. ಅದಾದ ಬಳಿಕ “ಮಿರರ್’ ಎಂಬ ಚಿತ್ರವೂ ಬಂದಿತ್ತು. ಅದರಲ್ಲೂ ಮಾತಿಲ್ಲದ ಚಿತ್ರಣವಿತ್ತು. ಒಂದಷ್ಟು ಮಾತಿಲ್ಲದೆ ಚಿತ್ರಗಳು ಬಂದರೂ, ಎಲ್ಲೂ ಅಷ್ಟೊಂದು ಸುದ್ದಿಯಾಗಲಿಲ್ಲ. ಈಗ ಕನ್ನಡದಲ್ಲಿ ಮತ್ತೂಂದು ಮೂಕಿ ಚಿತ್ರ ರೆಡಿಯಾಗಿದೆ.
ಅದರ ಹೆಸರು “ಪರಿಧಿ’. ಮೇ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂಕಿ ಸಿನಿಮಾ ಮಾಡೋದು ಕಷ್ಟನಾ, ಸುಲಭನಾ? ಇದು ಮಾಡಿದವರಿಗಷ್ಟೇ ಗೊತ್ತು. ಆದರೆ, ನೋಡೋರಿಗೆ ಅದೊಂದು ಅನನ್ಯ ಅನುಭವ ನೀಡುವಂತಿದ್ದರೆ ಮಾತ್ರ ಮೂಕಿ ಚಿತ್ರಕ್ಕೊಂದು ಬೆಲೆ ಮತ್ತು ನೆಲೆ. ಈ “ಪರಿಧಿ’ ಚಿತ್ರಕ್ಕೆ ಎಸ್.ಬಿ. ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಅವರದೇ. ಸಾಮಾನ್ಯವಾಗಿ ಮೂಕಿ ಚಿತ್ರದಲ್ಲಿ ಹಾವ-ಭಾವ ಮುಖ್ಯ.
ಅದರಲ್ಲೂ ಕಥೆ ಕೂಡ ಸುಮ್ಮನೆ ನೋಡಿಸಿಕೊಂಡು ಹೋಗುವಂತಿದ್ದರೆ ಮಾತ್ರ ಅದಕ್ಕೊಂದು ಅರ್ಥ. ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಜೀವಾಳವಾಗಿರಬೇಕು. ಅಂಥದ್ದೊಂದು ತೃಪ್ತಿಭಾವದಲ್ಲಿ ಕೆಲಸ ಮಾಡಿರೋದು ಸಂಗೀತ ನಿರ್ದೇಶಕ ಸೂರಜ್ ಮಹಾರಾಜ್ ಹಾಗು ಕಾರ್ತಿಕ್ ವೆಂಕಟೇಶ್. ಇಬ್ಬರೂ, “ಪರಿಧಿ’ಯ ಹಿಂದೆ ನಿಂತಿದ್ದಾರೆ. ಇದೊಂದು ಪಾರ್ಸೆಲ್ ಕಂಪೆನಿಯಲ್ಲಿ ಕೆಲಸ ಮಾಡುವ ಯುವಕನೊಬ್ಬನ ಕಥೆ.
ಅಲ್ಲಿ ಕೆಲಸ ಮಾಡುವ ಸಾಮಾನ್ಯ ಯುವಕ, ತಾನು ಐಷಾರಾಮಿ ಜೀವನ ನಡೆಸಿದರೆ ಹೇಗಿರುತ್ತೆ ಎಂಬ ಆಸೆಯಿಂದ, ಇರುವ ಒಳ್ಳೆಯ ಕೆಲಸವನ್ನೂ ಕೈ ಬಿಟ್ಟು, ತನಗೇ ಅರಿವಿಲ್ಲದಂತೆ ಅಪರಾಧ ಜಗತ್ತಿಗೆ ಕಾಲಿಡುತ್ತಾನೆ. ಆದರೆ, ಎಲ್ಲೋ ಒಂದು ಕಡೆ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದವನು, ದಿಢೀರ್ ಶ್ರೀಮಂತನಾಗುವ ಆಸೆಗೆ, ಅಪರಾಧ ಜಗತ್ತಿಗೆ ಕಾಲಿಟ್ಟು, ಅಲ್ಲಿ ಹೇಗೆಲ್ಲಾ ಒದ್ದಾಡುತ್ತಾನೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಇಲ್ಲಾಗಿದೆ.
ಇಲ್ಲಿ ಸಂದೇಶದ ಜೊತೆಗೆ ಮನರಂಜನೆಯೂ ಇದೆ. ಒಂದು ಗಂಭೀರ ಅಂಶವುಳ್ಳ “ಪರಿಧಿ’ ಹೊಸ ಪ್ರಯತ್ನ ಎಂಬುದು ಚಿತ್ರತಂಡದ ಮಾತು. ಈ ಚಿತ್ರಕ್ಕೆ ರಾಜ್ಕಿರಣ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಈ ಹಿಂದೆ ರಾಜ್ಕಿರಣ್ ಅವರು “ಮಿಸ್ಡ್ ಕಾಲ್’ ಚಿತ್ರದಲ್ಲಿ ನಟಿಸಿದ್ದರು. ಇವರಿಗೆ ನಿಶಾ ನಾಯಕಿ. ಅವರಿಗೆ ಇದು ಎರಡನೇ ಚಿತ್ರ. ಚಿತ್ರದಲ್ಲಿ ಅಮರನಾಥ್ ಆರಾಧ್ಯ ಕೂಡ ನಟಿಸಿದ್ದಾರೆ.
ಜೀವಾ ಆಂತೋಣಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ನಿತೀಶ್ಕುಮಾರ್ ಸಂಕಲನ ಮಾಡಿದ್ದಾರೆ. “ಪರಿಧಿ’ ಚಿತ್ರ ಸಿದ್ಧಗೊಳ್ಳಲು ಕಾರಣ ನಂದಕುಮಾರ್. ಕೃಷ್ಣಗಿರಿಯಲ್ಲಿ ಕ್ಯಾಮೆರಾಗಳನ್ನು ಬಾಡಿಗೆ ಕೊಡುವ ಕೆಲಸ ಮಾಡುತ್ತಿರುವ ನಂದಕುಮಾರ್, “ಪರಿಧಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಅಂದಹಾಗೆ, ಈ “ಪರಿಧಿ’ಯಲ್ಲಿ ರೊಮ್ಯಾನ್ಸ್ ಇದೆ, ಹಾರರ್ ಟಚ್ ಇದೆ. ಥ್ರಿಲ್ಲರ್ ಅಂಶಗಳೂ ಇದೆಯಂತೆ.