ಹುಬ್ಬಳ್ಳಿ: ಮಕ್ಕಳನ್ನು ಮೊಬೈಲ್, ಲ್ಯಾಪ್ ಟಾಪ್ಗೆ ಸೀಮಿತಗೊಳಿಸದೆ ಅವರಲ್ಲಿನ ಪ್ರತಿಭೆ ಅರಳಲು ವೇದಿಕೆ ಕಲ್ಪಿಸುವುದು ಪಾಲಕರ ಜವಾಬ್ದಾರಿ ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುಯಲ್ ಆ್ಯಂಡ್ ಪರಫಾರ್ಮಿಂಗ್ ಆರ್ಟ್ಸ್ ವತಿಯಿಂದ ಡಾ| ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಸೋಮವಾರ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿಯನ್ನು ಪರಿಗಣಿಸಿ ಅವರು ಆಟಗಳಲ್ಲಿ ತೊಡಗುವಂತೆ ಮಾಡಬೇಕು. ಅವರ ಆಸಕ್ತಿಯ ಸಂಗೀತ ಕಲಿಸಬೇಕು. ಹವ್ಯಾಸಗಳು ವ್ಯಕ್ತಿತ್ವ ರೂಪಿಸಲು ನೆರವಾಗುತ್ತವೆ. ಸಂಸ್ಕೃತಿ ಕಾಲೇಜು ಉತ್ತಮ ಶಿಬಿರ ಆಯೋಜಿಸಿದೆ.
ಮಕ್ಕಳನ್ನು ನಿಭಾಯಿಸುವುದು ಸುಲಭವಲ್ಲ. ಮಕ್ಕಳಿಗೆ ತಾಳ್ಮೆಯಿಂದ ನಾಟಕ, ಚಿತ್ರಕಲೆ, ಕ್ಲೇ ಮಾಡೆಲಿಂಗ್ ಕಲಿಸಿದ್ದು ಸಣ್ಣ ಕಾರ್ಯವಲ್ಲ ಎಂದರು. ರಂಗಕರ್ಮಿ ಡಾ| ಶಶಿಧರ ನರೇಂದ್ರ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಪೂರಕವಾಗುತ್ತವೆ.
ಮಕ್ಕಳ ಅಭಿರುಚಿ ಅರಿತುಕೊಂಡು ಪ್ರತಿಭೆ ಪೋಷಿಸಲು ಮುಂದಾಗಬೇಕು. ಎಂಜಿನೀಯರಿಂಗ್ ಅಥವಾ ಎಂಬಿಬಿಎಸ್ ಪದವಿ ಪಡೆಯಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರದೆ ಮಕ್ಕಳ ಆಸಕ್ತಿ ತಿಳಿದುಕೊಂಡು ಅವರ ಆಯ್ಕೆಯ ಕ್ಷೇತ್ರದಲ್ಲಿ ಅವರು ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.
ಡಾ| ವೀಣಾ ಡೇನಿಯಲ್ ಮಾತನಾಡಿ, ರಂಗಭೂಮಿ ಕೇವಲ ಸಂವಹನ ಕೌಶಲ ಬೆಳೆಸುವುದಲ್ಲದೇ ಮಕ್ಕಳಿಗೆ ವೇದಿಕೆ ಭಯ ಹೋಗಲಾಡಿಸುತ್ತದೆ. ಸತ್ವರೂಪ ಫೌಂಡೇಶನ್ ಮಕ್ಕಳಿಗಾಗಿ ರಂಗ ಶಿಬಿರ ನಡೆಸಲು ನಿರ್ಧರಿಸಿದ್ದು, ಆಸಕ್ತರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಬಹುದಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಶಿವಯೋಗಿ ಕೆರೂಡಿ ಇದ್ದರು. ಸಭಾ ಕಾರ್ಯಕ್ರಮದ ನಂತರ ಬಿ.ಆರ್. ಮಾರಪ್ಪ ನಿರ್ದೇಶನದ, ಶಿಬಿರದ ಮಕ್ಕಳು ಅಭಿನಯಿಸಿದ “ಅಲಿಬಾಬಾ ಹಾಗೂ 40 ಕಳ್ಳರು’ ನಾಟಕದ ಪ್ರದರ್ಶನ ನಡೆಯಿತು.