Advertisement

ಮಾರ್ಚ್‌ನಲ್ಲಿ ಪರಂ-ಸಿಎಂ ಒಗ್ಗಟ್ಟಿನ ಯಾತ್ರೆ

06:40 AM Dec 08, 2017 | |

ಬೆಂಗಳೂರು: ಯಾತ್ರೆಯ ಗೊಂದಲದಿಂದ ಹೊರ ಬರಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಮಾರ್ಚ್‌ 1ರಂದು ವಿಧಾನಸಭೆ ಚುನಾವಣೆಗೆ ಒಗ್ಗಟ್ಟಿನ ಯಾತ್ರೆ ಮಾಡಲು ಮುಂದಾಗಿದ್ದಾರೆ.

Advertisement

ಡಿಸೆಂಬರ್‌ನಲ್ಲಿ ಇಬ್ಬರೂ ಮುಖಂಡರು ಪ್ರತ್ಯೇಕ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದರೂ, ನಮ್ಮಿಬ್ಬರ ನಡುವೆ ಯಾವುದೇ ಗೊಂದಲವಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ 7 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಯಾವತ್ತೂ ಮುನಿಸಿಕೊಂಡಿಲ್ಲ. ಇಬ್ಬರ ನಡುವೆ ಯಾವತ್ತೂ ವೈಮನಸ್ಯ ಬಂದಿಲ್ಲ. ಆದರೂ ನಿರಂತರವಾಗಿ ಭಿನ್ನಾಭಿಪ್ರಾಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅದೆಲ್ಲ ಸತ್ಯಕ್ಕೆ ದೂರ ಎಂದು ಹೇಳಿದರು. ಕಳೆದ ಮೂರು ದಿನಗಳಿಂದ ಪಕ್ಷದ ಮುಂಚೂಣಿ ಘಟಕಗಳು ಮತ್ತು ಜಿಲ್ಲಾ ನಾಯಕರ ಸಭೆ ನಡೆಸಲಾಗಿದ್ದು, ಚುನಾವಣೆಗೆ ಸಿದಟಛಿತೆ ಮಾಡಿಕೊಳ್ಳುವ ಕುರಿತು ಸುದೀರ್ಘ‌ ಚರ್ಚೆಯಾಗಿದೆ. ಮುಖ್ಯಮಂತ್ರಿ ಸರ್ಕಾರಿ ಪ್ರವಾಸ ಮಾಡುವ ಕ್ಷೇತ್ರಗಳನ್ನು ಹೊರತುಪಡಿಸಿ ಪಕ್ಷದ ವತಿಯಿಂದ ಕಾರ್ಯಾಧ್ಯಕ್ಷರ
ಜೊತೆಗೂಡಿ ಪ್ರತ್ಯೇಕ ಪ್ರವಾಸ ಮಾಡಲು ತೀರ್ಮಾನಿಸಲಾಗಿದ್ದು, ಡಿ.20 ರಿಂದ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಈಗಾಗಲೇ ಪಕ್ಷದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಶೇ.86 ರಷ್ಟು ಮುಕ್ತಾಯವಾಗಿದ್ದು 15 ದಿನದಲ್ಲಿ ಪೂರ್ಣಗೊಳಿಸಲಾಗುವುದು. ಇಂದಿರಾ ದೀಪ ನಮನ ಕಾರ್ಯಕ್ರಮವೂ ಸಾಕಷ್ಟು ಯಶಸ್ವಿಯಾಗಿದೆ. ಮುಂಚೂಣಿ ಘಟಕಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೇ ವಿಭಾಗವಾರು ಸಮಾವೇಶಗಳನ್ನೂ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Advertisement

ಟಿಕೆಟ್‌ ತೀರ್ಮಾನ ಇಲ್ಲ : ಹಾಲಿ ಶಾಸಕರು ಹಾಗೂ ನಾಯಕರ ಮಕ್ಕಳಿಗೆ ಟಿಕೆಟ್‌ ನೀಡುವ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನವಾಗಿಲ್ಲ. ಎಲ್ಲವೂ ಹೈಕಮಾಂಡ್‌ ಮಟ್ಟದಲ್ಲಿ ತೀರ್ಮಾನ ಆಗಲಿದೆ. ಹಾಲಿಯಿರುವ ಎಲ್ಲ ಶಾಸಕರಿಗೂ ಟಿಕೆಟ್‌ ನೀಡಿ ಎಂದು ಹೈಕಮಾಂಡ್‌ ಹೇಳಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.

ಸಮೀಕ್ಷೆ ವರದಿ ಬಂದಿಲ್ಲ: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ನಡೆಸುತ್ತಿರುವ ಸಮೀಕ್ಷೆ ವರದಿ ಇನ್ನೂ ಬಂದಿಲ್ಲ. ಜಿಲ್ಲಾ ಸಮಿತಿಯಿಂದ, ಪದಾಧಿಕಾರಿಗಳಿಂದ ಅಭ್ಯರ್ಥಿಗಳ ಕುರಿತು ಪ್ರತ್ಯೇಕ ಮಾಹಿತಿ ಪಡೆದುಕೊಂಡು ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆಂದು ಪರಮೇಶ್ವರ್‌ ತಿಳಿಸಿದರು.

“ರಾಹುಲ್‌ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲು ಕರ್ನಾಟಕಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದೇವೆ. ರಾಹುಲ್‌ ಗಾಂಧಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್‌ನಲ್ಲಿ ಹೊಸ ಯುಗ ಆರಂಭವಾಗಲಿದೆ. ಯುವ ಸಮುದಾಯ ಹೊಸ ವ್ಯವಸ್ಥೆಯೊಂದಿಗೆ ಸೇರಿಕೊಳ್ಳುವುದರಿಂದ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬರಲಿದೆ, ‘ ಎಂದರು.

ಇದೇ ವೇಳೆ, ಕಾಂಗ್ರೆಸ್‌ನಿಂದ ಬೇರೆ ಪಕ್ಷಕ್ಕೆ ಹಿಂಡು ಹಿಂಡು ನಾಯಕರು ವಲಸೆ ಹೋಗುತ್ತಾರೆ ಎನ್ನುವುದನ್ನು ಅಲ್ಲಗಳೆದ ಅವರು, ಕೆಲವು ವ್ಯಕ್ತಿಗಳು ವೈಯಕ್ತಿಕ ಕಾರಣದಿಂದ ಬೇರೆ ಪಕ್ಷಕ್ಕೆ ಹೋಗಬಹುದು. ಅದೇ ರೀತಿ ಬೇರೆ ಪಕ್ಷದ ನಾಯಕರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ. ಜೆಡಿಎಸ್‌ ಬಂಡಾಯ ಶಾಸಕರು ಅನಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ತಾಂತ್ರಿಕವಾಗಿ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿಲ್ಲ. ಅವರು ಬೇರೆ ಪಕ್ಷದ ಬಾಗಿಲು ಬಡಿದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಬಿಜೆಪಿಯವರ ನಾಲಿಗೆ ಮೇಲೆ ಹಿಡಿತ ಇರಲಿ ಬಿಜೆಪಿ ನಾಯಕರು ಪರಿವರ್ತನಾ ಯಾತ್ರೆಯಲ್ಲಿ ವಿಶೇಷವಾಗಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಮುಖ್ಯಮಂತ್ರಿಯ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಅದು ಅವರಿಗೆ ಶೋಭೆ ತರುವುದಿಲ್ಲ. ನಿಮ್ಮ ಬಗ್ಗೆಯೂ ಯಾರೇ ಆ ರೀತಿಯ ಪದ ಬಳಕೆ ಮಾಡಿದ್ದರೂ ಅದು ಸರಿಯಲ್ಲ. ನಿಮ್ಮ ಘನತೆಗೆ ತಕ್ಕಂತೆ ಮಾತನಾಡುವುದು ಒಳ್ಳೆಯದು. ನಿಮ್ಮ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಪರಮೇಶ್ವರ್‌ ಪರೋಕ್ಷ ಎಚ್ಚರಿಕೆ ನೀಡಿದರು. ಬಿಜೆಪಿಯವರು ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವು ವಿಷಯದಲ್ಲಿ ನಾವು ಅಂದುಕೊಂಡಂತೆ ಆಗುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಮುಂದೆ ಕೋಮು ಗಲಭೆ ನಡೆಯದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

2.10 ಲಕ್ಷ ಕೋಟಿ ರೂಪಾಯಿ ಬಜೆಟ್‌
ಶಿರಸಿ:
ಕರ್ನಾಟಕ ಸರ್ಕಾರ ಮಂಡಿಸಲಿರುವ ಈ ಬಾರಿಯ ಬಜೆಟ್‌ ದಾಖಲೆಯದ್ದಾಗಲಿದೆ. ಫೆಬ್ರವರಿಯಲ್ಲಿ
ಮಂಡಿಸಲಾಗುವ ಬಜೆಟ್‌ ಗಾತ್ರ ಕನಿಷ್ಠ 2.10 ಲಕ್ಷ ಕೋಟಿ ರೂ.ಗಳದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಕಟಿಸಿದರು. ನಗರದಲ್ಲಿ ಗುರುವಾರ 150 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ನಾನು ಮಂಡಿಸಿದ ಪ್ರಥಮ ಬಜೆಟ್‌ 98 ಸಾವಿರ ಕೋಟಿ ರೂ. ಇತ್ತು. ನಾಲ್ಕನೇ ಬಜೆಟ್‌ 1.86 ಲಕ್ಷ ಕೋಟಿ ರೂ. ಆಗಿತ್ತು. ಐದನೇ ಬಜೆಟ್‌ ಕಳೆದ ಸಲಕ್ಕಿಂತ ಶೇ.10ರಷ್ಟು ಕನಿಷ್ಠ ಹೆಚ್ಚಳ ಮಾಡಲಾಗುವುದು. ಸರ್ಕಾರದ ಬೊಕ್ಕಸ ಬರಿದಾಗಿಲ್ಲ, ನಾವು ನಮ್ಮ ಬಜೆಟ್‌ ಮೀರಿ ಎಲ್ಲೂ ನಡೆದಿಲ್ಲ. ಪ್ರತಿಪಕ್ಷಗಳು ರಾಜಕಾರಣಕ್ಕಾಗಿ ಆರೋಪಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next