Advertisement

ಮತ್ತೆ ಪುಟಿದೇಳ್ತಾರಾ ಪವರ್‌ಫ‌ುಲ್‌ ಮಿನಿಸ್ಟರ್‌:ಇ.ಡಿ, ಸಿಬಿಐ ಗುಮ್ಮ?

09:28 AM Aug 07, 2017 | |

ಐಟಿ ದಾಳಿಯ ಅನಂತರ ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಭವಿಷ್ಯ ಮುಸುಕಾಗುತ್ತಾ? ಡಿ.ಕೆ.ಶಿವಕುಮಾರ್‌ ಮೆತ್ತಾಗಾಗುತ್ತಾರಾ? ಕಾಂಗ್ರೆಸ್‌ ಬಿಡ್ತಾರಾ? ಬಿಜೆಪಿಗೆ ಹೋಗ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.  ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಬೇರೆ ಪಕ್ಷಕ್ಕೆ ಹೋಗುವುದು ದೂರದ ಮಾತು ಎಂದೇ ಹೇಳಬಹುದು. 

Advertisement

ಕಳೆದ ವಾರ ರಾಜ್ಯ ಸಚಿವ ಸಂಪುಟದ ಪ್ರಭಾವಿ ಸಚಿವ ಹಾಗೂ ಒಕ್ಕಲಿಗ ಸಮುದಾಯದ ಮುಖಂಡ ಡಿ.ಕೆ.ಶಿವಕುಮಾರ್‌ ಕುಟುಂಬ ಸದಸ್ಯರು, ಅವರ ಒಡೆತನದ ಸಂಸ್ಥೆಗಳು ಹಾಗೂ ಅವರ ಪರಮಾಪ್ತರ ನಿವಾಸ-ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ಇಡೀ ದೇಶದ ಗಮನ ಸಳೆದಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ಆಪರೇಷನ್‌ ಕಮಲ ಭೀತಿಯಿಂದ ಗುಜರಾತ್‌ ಶಾಸಕರು ಬೆಂಗಳೂರಿಗೆ ಬಂದು ಆಶ್ರಯ ಹಾಗೂ ಆತಿಥ್ಯ ಪಡೆದ ಹಾಗೂ ಅದರ ಉಸ್ತುವಾರಿ ಡಿ.ಕೆ.ಶಿವಕುಮಾರ್‌-ಡಿ.ಕೆ.ಸುರೇಶ್‌ ಸಹೋದರರು ವಹಿಸಿಕೊಂಡ ಸಂದರ್ಭದಲ್ಲೇ ದಾಳಿ ನಡೆದಿದ್ದರಿಂದ ಸಹಜವಾಗಿ ಇದು ರಾಜಕೀಯಪ್ರೇರಿತ ಎಂಬ ಆರೋಪಗಳು ಕೇಳಿ ಬಂದವು. ಲೋಕಸಭೆ, ರಾಜ್ಯಸಭೆಯಲ್ಲೂ ವಿಷಯ ಪ್ರತಿಧ್ವನಿಸಿ ಡಿ.ಕೆ.ಶಿವಕುಮಾರ್‌ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದರು.

ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಗಳು ಪ್ರತಿಪಕ್ಷಗಳನ್ನು ಬಗ್ಗುಬಡಿಯಲು ಅಥವಾ ಸ್ವ ಪಕ್ಷೀಯರನ್ನು ಮಟ್ಟ ಹಾಕಲು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ “ಅಸ್ತ್ರ’ ಬಳಕೆ ಮಾಡಿಕೊಳ್ಳುತ್ತದೆ ಎಂಬುದು ಮೊದಲಿನಿಂದಲೂ ಕೇಳಿಬರುವ ಮಾತು. ಅದಕ್ಕೆ ಇಂಬುಕೊಡುವಂತೆ ಕರ್ನಾಟಕದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಹತ್ತು ಹಲವಾರು ಉದಾಹರಣೆಗಳು ನಡೆದಿವೆ. ಲಾಲೂ ಪ್ರಸಾದ್‌ ಯಾದವ್‌, ಮಾಯಾವತಿ,  ಜಯಲಲಿತಾ, ಮಮತಾ ಬ್ಯಾನರ್ಜಿ, ಜಗನ್ಮೋಹನ್‌ರೆಡ್ಡಿ, ಹೀಗೆ  ಹಲವಾರು ರಾಜಕಾರಣಿಗಳು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಹೀಗೆ ಒಂದಲ್ಲಾ ಒಂದು “ಬ್ರಹ್ಮಾಸ್ತ್ರ’ಕ್ಕೆ ಸಿಲುಕಿದವರೇ. ರಾಜ್ಯದ ಮಟ್ಟಿಗೆ ಹೇಳಬೇಕಾದರೆ ಎಸ್‌.ಬಂಗಾರಪ್ಪ, ಬಿ.ಎಸ್‌.ಯಡಿಯೂರಪ್ಪ, ಜನಾರ್ದನರೆಡ್ಡಿ, ಇದೀಗ ಡಿ.ಕೆ.ಶಿವಕುಮಾರ್‌ ಸರದಿ….

ಎಸ್‌.ಬಂಗಾರಪ್ಪ ಆವರು ಮುಖ್ಯಮಂತ್ರಿಯಾಗಿದ್ದಾಗ ಕೇಳಿ ಬಂದ ಕ್ಲಾಸಿಕ್‌ ಕಂಪ್ಯೂಟರ್‌ ಹಗರಣ ಐದಾರು ಕೋಟಿ ರೂ. ಮೊತ್ತದ್ದು. ಆದರೆ, ಅವರದೇ ಪಕ್ಷ ಕೇಂದ್ರದಲ್ಲಿದ್ದರೂ ಅವರನ್ನ ಬಚಾವು ಮಾಡಲು ಆಗಿರಲಿಲ್ಲ. ಅದೂ  ರಾಜಕೀಯದ ಷಡ್ಯಂತ್ರವೇ ಆಗಿತ್ತು ಎಂಬುದು ಬಂಗಾರಪ್ಪನವರ ಆಕ್ರೋಶಕ್ಕೂ ಕಾರಣವಾಗಿತ್ತು. ಆಗ, ತಮ್ಮದೇ ಪಕ್ಷದ ವಿರುದ್ಧ ಸಿಡಿದೆದ್ದು “ಸೊಂಟ ಮುರೀತೀನಿ’ ಎಂದು ಶಪಥ ಮಾಡಿ  ಬೇರೆ ಪಕ್ಷ ಸ್ಥಾಪಿಸಿ ಮತ್ತೆ ಕಾಂಗ್ರೆಸ್‌ ಸೇರಿ ಮತ್ತೆ ಬಿಟ್ಟು ಸಮಾಜವಾದಿ ಪಕ್ಷ, ಬಿಜೆಪಿ ಪ್ರವೇಶ ಮಾಡಿ ಕೊನೆಗಾಲದಲ್ಲಿ ಜೆಡಿಎಸ್‌ ಸೇರಿದ್ದರು. ಆದರೆ, ಆ ಪ್ರಕರಣ ಅವರ ಜನಪ್ರಿಯತೆ ಹಾಗೂ ವರ್ಚಸ್ಸಿಗೆ ಧಕ್ಕೆ ತಂದಿರಲಿಲ್ಲ. 

ಅಕ್ರಮ ಗಣಿಗಾರಿಕೆ ಕುರಿತ ನ್ಯಾ.ಸಂತೋಷ್‌ಹೆಗ್ಡೆ ವರದಿ ಹಾಗೂ ಡಿ ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಯಡಿಯೂರಪ್ಪ ಅವರು ಕೇಂದ್ರದ ತನಿಖಾ ಸಂಸ್ಥೆಗಳ ವಿಚಾರಣೆ ಬಿಸಿ ನೋಡಿದವರೇ. ತಮ್ಮದೇ ಪಕ್ಷದವರು ತಮ್ಮ ಕೈ ಹಿಡಿಯಲಿಲ್ಲ ಎಂದು ಬಿಜೆಪಿ ಬಿಟ್ಟು ಕೆಜಿಪಿ ಸ್ಥಾಪಿಸಿ ಕೊನೆಗೆ ಮರಳಿ ಗೂಡಿಗೆ ಎಂದು ಪೂರ್ವಾಶ್ರಮಕ್ಕೆ ಶರಣಾದವರು.

Advertisement

ರಾಜಕೀಯ ಭವಿಷ್ಯ ಏನಾಗಲಿದೆ?
ಡಿ.ಕೆ.ಶಿವಕುಮಾರ್‌ ವಿಚಾರಕ್ಕೆ ಬರುವುದಾದರೆ ಐಟಿ ದಾಳಿಯ ನಂತರ ಅವರ ರಾಜಕೀಯ ಭವಿಷ್ಯ ಮುಸುಕಾಗುತ್ತಾ? ಡಿ.ಕೆ.ಶಿವಕುಮಾರ್‌ ಮೆತ್ತಾಗಾಗುತ್ತಾರಾ? ಕಾಂಗ್ರೆಸ್‌ ಬಿಡ್ತಾರಾ? ಬಿಜೆಪಿಗೆ ಹೋಗ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಬೇರೆ ಪಕ್ಷಕ್ಕೆ ಹೋಗುವುದು ದೂರದ ಮಾತು ಎಂದೇ ಹೇಳಬಹುದು. ಶಿಕ್ಷಣ ಸಂಸ್ಥೆ, ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವಾರು ಕಂಪನಿಗಳ ಮೂಲಕ. ವ್ಯಾಪಾರ-ವಹಿವಾಟಿನಲ್ಲಿ ತೊಡಗಿರುವುದರಿಂದ ಲೆಕ್ಕಾಚಾರ ತೋರಿಸಿ ಒಂದೊಮ್ಮೆ ಅಲ್ಪಸ್ವಲ್ಪ ವ್ಯತ್ಯಾಸವಾಗಿದ್ದರೂ ಸರಿಪಡಿಸಿಕೊಂಡು ಮತ್ತೆ ಪುಟಿದೇಳಬಹುದು.

ಅಕ್ರಮ ಇಲ್ಲ ಎನ್ನುವುದಾದರೆ ಡಿ.ಕೆ.ಶಿವಕುಮಾರ್‌ ಬೆನ್ನಿಗೆ ಇಡೀ ಪಕ್ಷ, ಸಮುದಾಯ ನಿಲ್ಲಬಹುದು.  ಅಷ್ಟೇ ಅಲ್ಲ ಇಂತಹ ಕಷ್ಟಕಾಲದಲ್ಲೂ ಗುಜರಾತ್‌ ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ದು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ ಅವರು ಗೆಲ್ಲುವಂತೆ ನೋಡಿಕೊಂಡಿದ್ದೇ ಆದರೆ ಡಿ.ಕೆ.ಶಿವಕುಮಾರ್‌, ಹೈಕಮಾಂಡ್‌ ಆಪತಾºಂಧವ ಆಗುವುದಂತೂ ಖಚಿತ.

ಆಗ, ಡಿ.ಕೆ.ಶಿವಕುಮಾರ್‌ ಬಹುದಿನಗಳ ಕನಸು ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು. ಒಂದೊಮ್ಮೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ನಿರ್ಮಾಣವಾದರೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್‌ಗೆ ಲಭಿಸುವಂತಹ ವಾತಾವರಣದಲ್ಲಿ ಸಹಜವಾಗಿ ಡಿ.ಕೆ.ಶಿವಕುಮಾರ್‌ ಹೆಸರು ಮೊದಲನೆಯದಾಗುತ್ತದೆ. ಅವರ ಮತ್ತೂಂದು ಕನಸಾದ “ಕೆಪಿಸಿಸಿ ಅಧ್ಯಕ್ಷ’ ಪಟ್ಟವೂ ಸುಲಭವಾಗಿ ದೊರೆಯಬಹುದು. ಒಂದು ಕಾಲದಲ್ಲಿ ಹೈಕಮಾಂಡ್‌ನ‌ಲ್ಲಿ ಎಸ್‌.ಎಂ.ಕೃಷ್ಣ ಅವರಿಗಿದ್ದ ಸ್ಥಾನ ಡಿ.ಕೆ.ಶಿವಕುಮಾರ್‌ ಅವರದಾಗಬಹುದು.

ಡಿ.ಕೆ.ಶಿವಕುಮಾರ್‌ ಅವರ ಮತ್ತೂಂದು ಬಲ ಎಂದರೆ ರಾಜ್ಯವ್ಯಾಪಿ ವರ್ಚಸ್ಸು ಹಾಗೂ ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಿ. ಸ್ವಂತ ವರ್ಚಸ್ಸು ಹಾಗೂ ಸಮುದಾಯದ ಬೆಂಬಲ ಇರುವವರು ಐಟಿ, ಇಡಿ, ಸಿಬಿಐ ದಾಳಿಯ ನಂತರವೂ ರಾಜಕೀಯ ವಾಗಿ ಏಳಿಗೆ ಕಂಡ ಹಲವಾರು ಉದಾಹರಣೆಗಳು ಇವೆ. 

ರಾಜ್ಯದ ಮಟ್ಟಿಗೆ ಹೇಳುವುದಾದರೆ ಅಕ್ರಮ ಗಣಿಗಾರಿಕೆ ಹಾಗೂ ಡಿ ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಯಡಿಯೂರಪ್ಪ ಕೇಂದ್ರದ ತನಿಖಾ ಸಂಸ್ಥೆಗಳಿಂದಾಗಿ ಜೈಲಿಗೆ ಹೋಗಿ ಬಂದು ನಲುಗಿದರೂ ಸಮುದಾಯ ಅವರ ಜತೆ ನಿಂತಿತು. ರಾಷ್ಟ್ರಮಟ್ಟದಲ್ಲಿ ಬಿಹಾರದ ಲಾಲೂ ಪ್ರಸಾದ್‌ ಯಾದವ್‌, ಉತ್ತರಪ್ರದೇಶದ ಮಾಯಾವತಿ ವಿಚಾರದಲ್ಲೂ ಇದು ಸಾಬೀತಾಗಿದೆ. ಅಷ್ಟೇಕೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧದ ಶಾರದಾ-ನಾರದಾ ಪ್ರಕರಣದಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳ ಪ್ರಹಾರ ನಡೆದರೂ ರಾಜ್ಯದ ಜನ ಆಕೆಯ ಪರ ಬೆಂಬಲಕ್ಕೆ ನಿಂತಿರುವುದು ಸಾಕ್ಷಿ.

ಇದು ಎಲ್ಲರ ವಿಷಯದಲ್ಲೂ ಆಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಬಳ್ಳಾರಿಯ ಗಣಿ ಧಣಿ ಜನಾರ್ದನ ರೆಡ್ಡಿ ವಿಚಾರದಲ್ಲಿ ಹಾಗೆ ಆಗಲಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಐಟಿ, ಇಡಿ, ಸಿಬಿಐ ದಾಳಿಗೆ ಸಿಲುಕಿ ಪಕ್ಷ ಹಾಗೂ ಸಮುದಾಯದ ಬೆಂಬಲ ಸಿಗದೆ ಇನ್ನೂ ತಿಣುಕಾಡುತ್ತಿರುವ ಉದಾಹರಣೆಯೂ ಇದೆ. ಅದೇ ರೀತಿ ಆಂಧ್ರಪ್ರದೇಶದಲ್ಲಿಯೂ ವೈ.ಎಸ್‌.ರಾಜಶೇಖರರೆಡ್ಡಿ ಪುತ್ರ ಜಗನ್ಮೋಹನರೆಡ್ಡಿ ಅಕ್ರಮ ಪ್ರಕರಣಗಳಲ್ಲಿ ಸಿಲುಕಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಹೆಣಗಾಡುತ್ತಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿ ಹೇಳುವುದಾದರೆ ಡಿ.ಕೆ.ಶಿವಕುಮಾರ್‌ ಮೇಲೆ ನಡೆದಿರುವ  ಆದಾಯ ತೆರಿಗೆ ದಾಳಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಲ್ಲಿ ಆತಂಕ ಮೂಡಿಸಿರುವುದಂತೂ ಹೌದು.

ಇನ್ನೂ ಮುಂದೆ ಹೋಗಿ ಹೇಳುವುದಾದರೆ  ಈಗಾಗಲೇ ಕೆಲವರ ಪಟ್ಟಿಯೂ ಐಟಿ ಇಲಾಖೆಯ ಬಳಿ ಇದ್ದು ಯಾವುದೇ ಸಂದರ್ಭದಲ್ಲಿ ದಾಳಿ ಆಗಬಹುದು ಎಂದೂ ಹೇಳಲಾಗುತ್ತಿದೆ. ಹೀಗಾಗಿ, ಇನ್ನೂ ಹಲವರ ಮೇಲೆ ಐಟಿ “ಬ್ರಹ್ಮಾಸ್ತ್ರ’ದ ತೂಗುಕತ್ತಿ ನೇತಾಡುತ್ತಿದೆ.

ಪ್ರಭಾವಿ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯುವ ಸಲುವಾಗಿಯೇ ಇಂತಹ ದಾಳಿ ಮಾಡಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಸೇರಿ ಕೆಲವು ನಾಯಕರ ಬಳಿ ಬಿಜೆಪಿ ರಾಷ್ಟ್ರೀಯ ನಾಯಕರು ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಡಿ.ಕೆ.ಶಿವಕುಮಾರ್‌ ಒಪ್ಪಿರಲಿಲ್ಲ. ಹೀಗಾಗಿ, ದಾಳಿ ಆಗಿದೆ ಎಂದೂ ಹೇಳಲಾಗುತ್ತಿದೆ. 

ಇದರ ನಡುವೆ ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದು ಐಟಿ ದಾಳಿಯಿಂದ ಸಮುದಾಯಕ್ಕೆ ಅವರ ಪರ ಅನುಕಂಪ ಬಂದಿದೆ. ಇದು ಬಿಜೆಪಿಗೆ ಮುಳುವಾಗಬಹುದು ಎಂದು ಪ್ರಭಾವಿಗಳು ಮಧ್ಯಸ್ಥಿಕೆ ವಹಿಸಿದ್ದಾರೆ. ಹೀಗಾಗಿ, ಸದ್ಯಕ್ಕೆ ಐಟಿ ದಾಳಿಗೆ ಮಾತ್ರ ಸೀಮಿತವಾಗಿದೆ ಎಂಬ ವದಂತಿಗಳೂ ಇವೆ.

ಈಗಾಗಲೇ ಬಿಜೆಪಿ ಸೇರಿರುವ ನಾಯಕರಿಗೂ ಡಿ.ಕೆ.ಶಿವಕುಮಾರ್‌ ಮೇಲಿನ ಐಟಿ ದಾಳಿ ಪ್ರಕರಣಕ್ಕೂ ತಳಕು ಸಹ ಹಾಕಲಾಗುತ್ತಿದೆ. ಒಟ್ಟಾರೆ, ಯಾರ್ಯಾರ ಮೇಲೆ ಯಾವ್ಯಾವ ತೂಗುಕತ್ತಿ ಇದೆ, ಅದು ಕೊನೆಗೆ ಯಾವ ಗುರಿ ಮುಟ್ಟುತ್ತದೆ ಎಂಬುದು ಕಾದು ನೋಡಬೇಕಿದೆ. ಯಾಕೆಂದರೆ, ಅಧಿಕಾರ, ರಾಜಕಾರಣ, ಪಕ್ಷ ಇವು ನಿಂತ ನೀರಲ್ಲ. ತಾನೇ ನಡು ನೀರಲ್ಲಿ ಮುಳುಗುವಾಗ ಯಾರೂ ಇನ್ನೊಬ್ಬರ ಸಹಾಯಕ್ಕೆ ಹೋಗುವ ಸಾಹಸ ಮಾಡುವುದಿಲ್ಲ.

ಎದ್ದು ಬರ್ತಾರಾ?
ಡಿ.ಕೆ.ಶಿವಕುಮಾರ್‌ ವಿಚಾರದಲ್ಲಿ ಐಟಿ ದಾಳಿ ಆಯ್ತು, ಮುಂದೆ ಜಾರಿ ನಿರ್ದೇಶನಾಲಯ, ಸಿಬಿಐ ಭೀತಿಯೂ ಇದೆ ಎಂಬ ಮಾತುಗಳ ನಡುವೆಯೂ ರಾಜಕೀಯವಾಗಿ ಡಿ.ಕೆ.ಶಿವಕುಮಾರ್‌ ಭವಿಷ್ಯ ಏನು ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಶನಿವಾರ ಐಟಿ ದಾಳಿ ಮುಗಿದ ನಂತರ ಸದಾಶಿನಗರದ “ಕೆಂಕೇರಿ’ ನಿವಾಸದ ಮುಂದೆ “ನಾನು ಕಿವಿಯಲ್ಲಿ ಹೂ ಇಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ, ರಾಜಕಾರಣ ಮಾಡಲು ಬಂದಿದ್ದೇನೆ, ಮಾಡಿಯೇ ತೀರುತ್ತೇನೆ’ ಎಂಬ ಮಾತುಗಳು ಸಹಜವಾಗಿ ಅವರಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ತೋರುತ್ತದೆ. ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಪಕ್ಷ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಿಯೂ ಆಗಿರುವುದರಿಂದ ಇದೆಲ್ಲವನ್ನೂ ಮೆಟ್ಟಿ ನಿಲ್ಲಬಹುದು. ಪಕ್ಷ ಹಾಗೂ ಸಮುದಾಯ ಅವರ ಜತೆಗೆ ನಿಂತರೆ ರಾಜಕೀಯವಾಗಿ ಪ್ರಭಾವಿಯೂ ಆಗಬಹುದು. ಕಷ್ಟಕಾಲದಲ್ಲಿ ಅಪದಾºಂಧವ ಆಗಿದ್ದಕ್ಕೆ ಹೈಕಮಾಂಡ್‌ ಮಟ್ಟದಲ್ಲೂ ಅವರು ಮಿಂಚಬಹುದು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next