Advertisement

ಪಂಚರಂಗಿ ಪರಪಂಚ

02:44 PM Jan 17, 2018 | |

“ಪಂಚರಂಗಿ’ ಸಿನಿಮಾದಲ್ಲಿ ಮಿಂಚಿ ಮರೆಯಾದ ಪಾತ್ರ ಇವರದ್ದು. ನಿರ್ದೇಶಕ ಪವನ್‌ ಕುಮಾರ್‌ ಬರೆಯುವ ಎಲ್ಲಾ ಕಥೆಗಳಿಗೆ ಮೊದಲು ಕಿವಿಯಾಗುವುದು ಇವರೇ. ಇವರು ಅಂದರೆ, ಸೌಮ್ಯ ಜಗನ್‌ಮೂರ್ತಿ. ಆ ಚಿತ್ರದಲ್ಲಿ ಪವನ್‌ರ ಪ್ರೇಯಸಿಯಾಗಿದ್ದ ಸೌಮ್ಯಾ ನಿಜ ಜೀವನದಲ್ಲೂ ಪವನ್‌ರನ್ನು ಪ್ರೀತಿಸಿ ಮದುವೆಯಾದವರು. ಸೆಲೆಬ್ರಿಟಿ ಪತ್ನಿ ಅನ್ನುವುದಷ್ಟೇ ಇವರ ಐಡೆಂಟಿಟಿ ಅಲ್ಲ. ನೃತ್ಯಗಾರ್ತಿಯಾಗಿಯೂ ಹೆಸರು ಮಾಡುತ್ತಿರುವ ಸೌಮ್ಯ ನಟಿಯಾಗಿ ಹಲವಾರು ವೆಬ್‌ ಸೀರೀಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರು ನಟಿಸುತ್ತಿರುವ “ಶುಕ್ರದೆಸೆ’, “ಕಥಾ ಸಂಗಮ’ ಸೇರಿ 3 ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಸಾಧನೆಗೆ ಸಂಸಾರ ಯಾವತ್ತೂ ತೊಡಕಲ್ಲ ಎನ್ನುವ ಇವರು “ನಾಸ್ಯ’ ಎನ್ನುವ ಮುದ್ದಾದ ಮಗುವಿನ ತಾಯಿ ಕೂಡ ಹೌದು… 

Advertisement

“ಪಂಚರಂಗಿ’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರಿ, ಆಮೇಲೆ ಏಕೆ ಸಿನಿಮಾದಿಂದ ನಾಪತ್ತೆಯಾದಿರಿ?

ಆಮೇಲೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಬರಲಿಲ್ಲ. ಇದೊಂದೇ ಸಿನಿಮಾ ಸಾಕು, ನೃತ್ಯದ ಕಡೆ ಗಮನ ಹರಿಸೋಣ ಅಂತ ತೀರ್ಮಾನಿಸಿದೆ. ಈಗ ಅದಾಗಿಯೇ ಕಾಲ ಕೂಡಿಬಂದಿದೆ. 3 ಚಿತ್ರಗಳು ನನ್ನ ಕೈಯಲ್ಲಿವೆ. ಎಲ್ಲವೂ ನನ್ನ ಮನಸ್ಸಿಗೆ ಹತ್ತಿರವಾದ ಪಾತ್ರಗಳೇ, ಹೀಗಾಗಿ ಒಪ್ಪಿಕೊಂಡೆ. “ಶುಕ್ರದೆಸೆ’ ಚಿತ್ರದಲ್ಲಿ ನನ್ನದು ಸ್ಲಂ ಮಹಿಳೆ ಪಾತ್ರ. ಸ್ಲಂನಲ್ಲಿ ವಾಸಿಸುವ ಗಂಡ ಹೆಂಡತಿ ಕುರಿತ ಚಿತ್ರ ಇದು. ಅದ್ಭುತವಾದ ಕಥೆಯಿದೆ. ರಿಷಭ್‌ ಶೆಟ್ಟಿ ಅವರ “ಕಥಾ ಸಂಗಮ’ದಲ್ಲೂ ಒಳ್ಳೆಯ ಪಾತ್ರವಿದೆ. ಮತ್ತೂಂದು ಚಿತ್ರ ರಾಕ್‌ಲೈನ್‌ ವೆಂಕಟೇಶ್‌ ಅವರ ನಿರ್ಮಾಣದಲ್ಲಿ ಬರುತ್ತಿದೆ. ಮೂರೂ ಚಿತ್ರದಲ್ಲೂ ನನಗೆ ಚಾಲೆಂಜಿಂಗ್‌ ಪಾತ್ರವೇ ಸಿಕ್ಕಿದೆ. 

“ಶುಕ್ರದೆಸೆ’ ಚಿತ್ರ ಅನೌನ್ಸ್‌ ಆದ ಸಂದರ್ಭದಲ್ಲಿ ಮಾಧ್ಯಮದವರು “ಲೂಸಿಯಾ ಪವನ್‌ ಪತ್ನಿ ಸೌಮ್ಯ ಈ ಚಿತ್ರದ ಹಿರೋಯಿನ್‌’ ಎಂದು ಬರೆದರು. ಸೌಮ್ಯಾ ಎಂದೇ ಬರೆಯಿರಿ, ನನ್ನ ಪತ್ನಿ ಎನ್ನುವ ಗುರುತು ಅಗತ್ಯವಿಲ್ಲ ಎಂದು ಪವನ್‌ ಅದನ್ನು ಖಂಡಿಸಿದ್ದರು. ಆ ಕುರಿತು ನಿಮ್ಮ ಅಭಿಪ್ರಾಯವೇನು?
ಆಗ ಪತ್ರಿಕೆಗಳು ಏನು ಬರೆದಿದ್ದವು ಅಂತ ನಾನು ತಲೆಯೇ ಕೆಡಿಸಿಕೊಂಡಿರಲಿಲ್ಲ. ಈಗಲೂ ಅದರ ಬಗ್ಗೆ ನನ್ನದು ತಟಸ್ಥ ಧೋರಣೆ. ಜನರು ಸಾಮಾನ್ಯವಾಗಿ ಒಬ್ಬ ಮಹಿಳೆಯನ್ನು ಆಕೆಯ ಐಡೆಂಟಿಟಿಯಿಂದ ಗುರುತಿಸುವುದಿಲ್ಲ. ಅವರ ಯೋಚನೆಯನ್ನು ಬದಲಿಸಲು ಸಾಧ್ಯವಿಲ್ಲ. ನಾವಿಬ್ಬರೂ ತುಂಬಾ ಸ್ವತಂತ್ರ ಮನೋಭಾವದವರು. ಸ್ವತಂತ್ರವಾಗಿಯೇ ನಮ್ಮ ಕ್ಷೇತ್ರಗಳಲ್ಲಿ ಬೆಳೆಯುತ್ತಿದ್ದೇವೆ. ಈ ಘಟನೆ ನಡೆದಾಗ ಪವನ್‌ ಅಮೆರಿಕದಲ್ಲಿದ್ದರು. ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ನಂತರ ಅವರು ನನಗೆ ಈ ಕುರಿತು ಹೇಳಿದ್ದರು. 

ನಿಮ್ಮಿಬ್ಬರ ಲವ್‌ ಸ್ಟೋರಿ ಬಗ್ಗೆ ಹೇಳಿ?
ನಮ್ಮಿಬ್ಬರದು ಶಾರ್ಟ್‌ ಆ್ಯಂಡ್‌ ಸ್ವೀಟ್‌ ಲವ್‌ ಸ್ಟೋರಿ. ಪವನ್‌ “ದ ಫೈನಲ್‌ ರಿಹರ್ಸಲ್‌’ ಅನ್ನೋ ನಾಟಕ ಮಾಡುತ್ತಿದ್ದರು. ಅದರಲ್ಲಿ ನನ್ನ ಸ್ನೇಹಿತನೊಬ್ಬ ನಟಿಸುತ್ತಿದ್ದ. ನಾಟಕ ನೋಡಲು ನಾನೂ ಹೋಗಿದ್ದೆ. ಆಗ ಅವನು ನನಗೆ ಪವನ್‌ರನ್ನು ಪರಿಚಯಿಸಿದ್ದ. ಅದಾಗಿ ಒಂದು ವರ್ಷದ ಬಳಿಕ ಮತ್ತೆ ಭೇಟಿಯಾಗಿದ್ದೆವು. ಅದಾಗಿ 2-3 ದಿನಗಳಲ್ಲೇ ಪವನ್‌, “ನಾವಿಬ್ಬರು ಏಕೆ ಮದುವೆಯಾಗಬಾರದು’ ಎಂದು ಕೇಳಿದರು. ನಾನು ಒಪ್ಪಿದೆ. ಮನೆಯವರೂ ಒಪ್ಪಿದರು. ಕೆಲವೇ ದಿನಗಳಲ್ಲಿ ಮದುವೆಯೂ ಆಯಿತು.

ಕೆಇಬಿ ತಯಾರಿಸಿದ್ದ “ವೀಕೆಂಡ್‌ ವಿಥ್‌ ಗೃಹಿಣಿ’ ವೆಬ್‌ ಸೀರೀಸ್‌ನಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಿರಿ. ಅಲ್ಲಿಯ ನಿಮ್ಮ ಗೃಹಿಣಿ ಪಾತ್ರಕ್ಕೂ, ನಿಜ ಜೀವನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಏನು?
ನಾನು ಕೂಡ ಗೃಹಿಣಿಯೇ, ಗೃಹಿಣಿ ಎಂದು ಹೇಳಿಕೊಳ್ಳುವುದರಲ್ಲಿ ಯಾವ ಮುಜುಗರವೂ ಇಲ್ಲ. ಅದು ಬಹಳ ಮುಖ್ಯವಾದ ಕರ್ತವ್ಯ. ಗೃಹಿಣಿ ಇಲ್ಲದಿದ್ದರೆ ಗೃಹವೂ ಇಲ್ಲ. ಸಂಸಾರ ಸರಾಗವಾಗಿ ನಡೆದುಕೊಂಡು ಹೋಗಬೇಕೆಂದರೆ ಗೃಹಿಣಿ ಇರಲೇಬೇಕು. ನಾನು ರೇಡಿಯೋ, ಟಿ.ವಿ.ಯಲ್ಲಿ ಗೃಹಿಣಿಯರು ಮಾತಾಡುವಾಗ ಕೇಳಿದ್ದೇನೆ. ನೀವು ಏನು ಮಾಡಿಕೊಂಡಿದ್ದೀರಿ ಎಂದು ಆರ್‌ಜೆ ಕೇಳಿದರೆ,- “ನಾನು ಹೌಸ್‌ವೈಫ್, ಏನೂ ಮಾಡ್ತಿಲ್ಲ’ ಎನ್ನುತ್ತಾರೆ. ನನಗೆ ಅವರನ್ನು ಹುಡುಕಿಕೊಂಡು ಹೋಗಿ, “ನೀವು ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೀರಿ. ಏನೂ ಮಾಡ್ತಿಲ್ಲ ಅಂತ ಹೇಳಬೇಡಿ’ ಎಂದು ಹೇಳಬೇಕು ಅಂತನಿಸುತ್ತೆ. ಆ ಗೃಹಿಣಿಗೂ ನನಗೂ ವ್ಯತ್ಯಾಸ ಎಂದರೆ, ನಾನು ಅಲ್ಲಿ ಕಾಣುವ ರೀತಿ ಮನೆಯಲ್ಲಿ ಮತ್ತು ಹೊರಗಡೆ ಕಾಣಿಸುವುದಿಲ್ಲ.

Advertisement

ಮಗಳನ್ನು ನಿಮ್ಮ ರೀತಿ ಡ್ಯಾನ್ಸರ್‌ ಮಾಡುತ್ತೀರೊ ಅಥವಾ ಡೈರೆಕ್ಟರ್‌ ಮಾಡುತ್ತೀರೊ?
ನಾಸ್ಯಗೆ ಡ್ಯಾನ್ಸ್‌ನಲ್ಲಿ ಆಸಕ್ತಿ ಇರುವಂತಿದೆ. ನಾನು ಡ್ಯಾನ್ಸ್‌ ಕ್ಲಾಸಿಗೆ ಹೋಗುವಾಗ ಆಗಾಗ ಅವಳನ್ನು ಕರೆದೊಯ್ಯುತ್ತೇನೆ. ಅಭ್ಯಾಸ ನಡೆಸುವಾಗಲೂ ಅವಳು ಕೆಲವೊಮ್ಮೆ ನನ್ನ ಜೊತೆ ಇರುತ್ತಾಳೆ. ಆದರೆ, ಅವಳಿಗೆ ಅಪ್ಪ ಏನು ಕೆಲಸ ಮಾಡ್ತಾರೆ ಅಂತ ಗೊತ್ತೇ ಇಲ್ಲ. ಯಾರಾದರೂ ಕೇಳಿದರೆ “ಏನೂ ಮಾಡಲ್ಲ’ ಅಂತಾಳೆ ಅಥವಾ “ಕಂಪ್ಯೂಟರ್‌ ಕೆಲಸ ಮಾಡ್ತಾರೆ’ ಅಂತಾಳೆ. 

ಕೆಇಬಿ ಅವರ “ಹೈಪರ್‌ ಫಿಲ್ಮ್ ಪ್ರಮೋಷನ್‌ ಸಿಂಡ್ರೋಮ್‌’ ವೆಬ್‌ ವಿಡಿಯೋದಲ್ಲಿ ಪವನ್‌ ಅವರು ಸಾಮಾಜಿಕ ಜಾಲತಾಣಗಳಿಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಎಂದು ಅವರೇ ಹೇಳಿದ್ದರು. ಅವರ ಸೋಷಿಯಲ್‌ ಮೀಡಿಯಾ ಅಡಿಕ್ಷನ್‌ ಬಗ್ಗೆ ನೀವು ಏನು ಹೇಳ್ತೀರಿ?
ನಾನು ಹೇಳಬೇಕಿರುವುದನ್ನು ಆ ವಿಡಿಯೋದಲ್ಲೇ ಹೇಳಿದ್ದೇನೆ. ಎಲ್ಲವನ್ನೂ ಜಾಲತಾಣಗಳ ಮೂಲಕ ಜನರಿಗೆ ತಿಳಿಸುತ್ತಲೇ ಇರುವ ಅಗತ್ಯವಿಲ್ಲ. ನಾವು ಮಾಡುವ ಕೆಲಸವನ್ನು ಇಂಚಿಂಚಾಗಿ ಜಗತ್ತಿಗೆ ತೋರಿಸಿಕೊಳ್ಳಬೇಕಿಲ್ಲ. ಈಗ ನಾನು ಹೇಳಿ ಹೇಳಿ ಆ ಅಭ್ಯಾಸವನ್ನು ಕಡಿಮೆ ಮಾಡಿಸಿದ್ದೇನೆ. 

ನಿಮ್ಮ ಫೇವರಿಟ್‌ ನಿರ್ದೇಶಕ ಯಾರು? ಅವರ ಯಾವ ಚಿತ್ರ ನಿಮಗೆ ಇಷ್ಟ?
ದುನಿಯಾ ಸೂರಿ. ಅವರ ಎಲ್ಲಾ ಸಿನಿಮಾಗಳೂ ಇಷ್ಟ. ಆದರೆ, “ಕಡ್ಡಿಪುಡಿ’ ಎಲ್ಲಾ ಚಿತ್ರಗಳಿಗಿಂತ ಬಹಳ ಇಷ್ಟ.

ಇಬ್ಬರೂ ಸದಾ ಬ್ಯುಸಿ ಇರುತ್ತೀರಾ. ಮಗು, ಮನೆಯನ್ನು ಹೇಗೆ ಸಂಭಾಳಿಸುತ್ತೀರ?
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಂತಿದ್ದರೆ, ಯಾವುದಾದರೊಂದು ದಾರಿ ಹುಡುಕಲೇಬೇಕು. ಮನೆಯಲ್ಲಿ ಒಂದು ಕ್ಯಾಲೆಂಡರ್‌ ಇಟ್ಟುಕೊಂಡಿದ್ದೇವೆ. ನಾವು ಯಾವ ದಿನ ಬ್ಯುಸಿ ಇರುತ್ತೇವೆ ಅಂತ ಮೊದಲೇ ಗುರುತು ಮಾಡುತ್ತೇವೆ. ಆಗ ಒಬ್ಬರು ಮನೆಯಲ್ಲಿದ್ದು ಮಗಳನ್ನು ನೋಡಿಕೊಳ್ಳುತ್ತೇವೆ. ಅವಳೂ ನಮ್ಮ ಬ್ಯುಸಿ ಸಮಯದ ಜೊತೆ ಅಡ್ಜಸ್ಟ್‌ ಆಗಿದ್ದಾಳೆ.

ಪವನ್‌ ನಿಮಗೆ ಮತ್ತು ನೀವು ಅವರಿಗೆ ಯಾವೆಲ್ಲಾ ವಿಷಯಗಳಲ್ಲಿ ಪರಸ್ಪರ ಸಹಕಾರ ನೀಡುತ್ತೀರ?
ನಾನು ಕೆಲಸದಲ್ಲಿ ಬ್ಯುಸಿ ಇದ್ದಾಗ, ಪ್ರದರ್ಶನಕ್ಕಾಗಿ ಬೇರೆ ಕಡೆಗೆ ಹೋದಾಗ ಪವನ್‌ ಮಗಳನ್ನು ನೋಡಿಕೊಳ್ಳುತ್ತಾರೆ. ಅದು ಎಲ್ಲಕ್ಕಿಂತ ದೊಡ್ಡ ಸಹಕಾರ. ನನ್ನ ನೃತ್ಯ ಪ್ರದರ್ಶನಗಳಿಗೆ ಖುದ್ದು ಅವರೇ ಬಂದು ಲೈಟಿಂಗ್‌ ಮಾಡಿಕೊಡುತ್ತಾರೆ. ಪವನ್‌ರ ಎಲ್ಲಾ ಸಿನಿಮಾ, ನಾಟಕಗಳ ಸ್ಕ್ರಿಪ್ಟ್ಗಳ ಚರ್ಚೆ ನಮ್ಮ ಮನೆಯ ಡೈನಿಂಗ್‌ ಟೇಬಲ್‌ ಮೇಲೆ ನಡೆಯುತ್ತದೆ. ಕಥೆಯಲ್ಲಿ ಏನಾದರೂ ಬದಲಾವಣೆ ಬೇಕಿದ್ದರೆ ನಾನು ಸೂಚಿಸುತ್ತೇನೆ. ಮುಖ್ಯವಾಗಿ ಅವರು ಕೆಲಸ ಮಾಡುವಾಗ ಡಿಸ್ಟರ್ಬ್ ಮಾಡುವ ಗೋಜಿಗೆ ಹೋಗುವುದಿಲ್ಲ.

ನೀವು ತುಂಬಾ ಫ‌ುಡ್ಡಿನಾ? ನಿಮ್ಮ ಫೇವರಿಟ್‌ ಹೋಟೆಲ್‌ ಯಾವುದು? 
ನನಗೆ ರಸ್ತೆ ಬದಿ ಚಾಟ್ಸ್‌ ತುಂಬಾ ಇಷ್ಟ. ಅಕ್ಕಿಪೇಟೆ ಬಿರಿಯಾನಿ ಹೋಟೆಲ್‌, ಶಿವಾಜಿ ದೊನ್ನೆ ಬಿರಿಯಾನಿ ಹೋಟೆಲ್‌ ನನ್ನ ಫೇವರೆಟ್‌ ಹೋಟೆಲ್‌ಗ‌ಳು.

ಹಾಗಾದರೆ ಮನೆಯಲ್ಲೂ ಚೆನ್ನಾಗಿ ಅಡುಗೆ ಮಾಡ್ತೀರ ಅನ್ಸುತ್ತೆ ಅಲ್ವಾ?
ಮನೆಯಲ್ಲಿ ಅಡುಗೆ ಮಾಡ್ತೀನಿ. ಆದರೆ, ಚೆನ್ನಾಗಿ ಮಾಡಲ್ಲ. ನನ್ನ ಕೈರುಚಿ ಅಷ್ಟೊಂದು ಚೆನ್ನಾಗಿಲ್ಲ. ನಾನು ಮಾಡುವ ಚಪಾತಿಯನ್ನು ನಮ್ಮ ಮನೆಯಲ್ಲಿ ಬುಲೆಟ್‌ ಪ್ರೂಫ್ ಅಂತ ಕರೀತಾರೆ. ಪವನ್‌ಗೆ ಅನ್ನ, ರಸಂ, ದಾಲ್‌ ಇಷ್ಟಿದ್ದರೆ ಸಾಕು. ಹೀಗಾಗಿ ಚೆನ್ನಾಗಿಯೇ ಅಡುಗೆ ಮಾಡಬೇಕು ಅಂತ ಒತ್ತಡವೇನಿಲ್ಲ. ಅದೇನೋ ಗೊತ್ತಿಲ್ಲ, ಮಗಳಿಗೆ ಇಷ್ಟವಾಗುವ ತಿಂಡಿಗಳನ್ನು ರುಚಿಯಾಗಿ ತಯಾರಿಸ್ತೀನಿ. 

ಪವನ್‌ರಲ್ಲಿ ನಿಮಗಿಷ್ಟವಾಗದ ಗುಣ ಯಾವುದು?
ಸದಾ ಫೋನ್‌ ಹಿಡಿದುಕೊಂಡೇ ಇರ್ತಾರೆ. ಅದು ನನಗೆ ಕಿರಿಕಿರಿ ಉಂಟು ಮಾಡುತ್ತದೆ. 

ಬಿಡುವಿನ ವೇಳೆ ಏನು ಮಾಡ್ತೀರ?
ನಾನು ತುಂಬಾ ಪುಸ್ತಕಗಳನ್ನ ಓದಿ¤àನಿ. ಕನ್ನಡ, ಇಂಗ್ಲಿಷ್‌ ಎರಡೂ ಭಾಷೆಯ ಕಾದಂಬರಿಗಳನ್ನು ಓದುತ್ತೇನೆ. ಭೈರಪ್ಪ ಮತ್ತು ಕುವೆಂಪು ಇಷ್ಟ. ಈಗ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ಓದಲು ಆರಂಭಿಸಿದ್ದೇನೆ.

ಮನೆಯೊಳಗೆ ಪ್ರಶಸ್ತಿ ಇಡುವುದಿಲ್ಲ…
ಮದುವೆಗೂ ಮೊದಲೇ ಪವನ್‌ ಒಂದು ಮಾತು ಹೇಳಿದ್ದರು. ಮದುವೆಯಾದ ಬಳಿಕ ಮನೆಯಲ್ಲಿ ನಮ್ಮ ಕೆಲಸಗಳಿಗೆ ಸಂಬಂಧಿಸಿದ ಯಾವುದೇ ಫ‌ಲಕ, ಫೋಟೊ, ಪ್ರಶಸ್ತಿ ಏನನ್ನೂ ಇರಿಸುವುದು ಬೇಡ, ಮನೆ ಸದಾ ಮನೆ ರೀತಿಯೇ ಇರಬೇಕು ಅಂತ. ನಮ್ಮ ಮನೆಯಲ್ಲಿ ಈಗಲೂ ಯಾವುದೇ ಪ್ರಶಸ್ತಿ ಪತ್ರ, ಶೀಲ್ಡ್‌ಗಳನ್ನು ಇಟ್ಟುಕೊಂಡಿಲ್ಲ. ಅವೆಲ್ಲಾ ಆಫಿಸ್‌ನಲ್ಲಿ ಇವೆ. ಮನೆಗೆ ಬಂದಮೇಲೆ ಸಂಸಾರ ಮಾತ್ರ ನೆನಪಾಗಬೇಕು. ಕೆಲಸ, ಸಾಧನೆ ಯಾವುದನ್ನು ನೆನಪಿಸುವ ಯಾವ ವಸ್ತುಗಳೂ ಮನೆಯಲ್ಲಿ ಕಾಣಿಸುವುದಿಲ್ಲ. ಅದಕ್ಕೇ ಮಗಳಿಗೆ ನಾವಿಬ್ಬರು ಏನು ಕೆಲಸ ಮಾಡುತ್ತೀವಿ ಅಂತ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

 ಡ್ಯಾನ್ಸ್‌ ಕಲಿತಿದ್ದೇ 20ನೇ ವಯಸ್ಸಲ್ಲಿ…
ನನಗೆ ಮೊದಲಿನಿಂದಲೂ ನೃತ್ಯದ ಮೇಲೆ ವಿಶೇಷ ಆಸಕ್ತಿ. ಅದರೆ, ಕಲಿಯಲು ಸಾಧ್ಯವಾಗಿರಲಿಲ್ಲ. ಆದರೂ ಛಲ ಬಿಡದೇ 20ನೇ ವಯಸ್ಸಿನಲ್ಲಿ ಭರತನಾಟ್ಯ ಕ್ಲಾಸ್‌ಗೆ ಸೇರಿಕೊಂಡೆ. ಅಲ್ಲಿ ಎಲ್ಲರೂ 4-5ನೇ ವಯಸ್ಸಿನಿಂದ ಡ್ಯಾನ್ಸ್‌ ಕಲಿತವರಾಗಿದ್ದರು. ನನಗೆ ಅವರ ಮಟ್ಟಕ್ಕೆ ನೃತ್ಯ ಮಾಡುವುದು ಚಾಲೆಂಜಿಂಗ್‌ ಆಗಿತ್ತು. ಆದರೆ, ಹೆಚ್ಚು ಹೆಚ್ಚು ಸಮಯ ಅಭ್ಯಾಸ ಮಾಡಿ, ಅವರ ಮಟ್ಟಕ್ಕೆ ನೃತ್ಯ ಮಾಡುವುದನ್ನು ಕಲಿತುಕೊಂಡೆ. ಈಗ ಏಕ ವ್ಯಕ್ತಿ ಪ್ರದರ್ಶನವನ್ನೂ ನೀಡುತ್ತೇನೆ. ಹೊರ ರಾಜ್ಯ, ದೇಶಗಳೂ ಸೇರಿ ಹಲವಾರು ಕಡೆ ಪ್ರದರ್ಶನ ನೀಡಿದ್ದೇನೆ. ಈ ಮಧ್ಯೆ ಮದುವೆ, ಮಗು ಎಲ್ಲವೂ ಆಯಿತು. ನನಗೆ ನನ್ನ ಮೇಲೆ ಭರವಸೆ ಇದೆ. ಹಾಗಾಗಿಯೇ ಎಲ್ಲದರ ಮಧ್ಯೆ ನೃತ್ಯದಲ್ಲಿ ನೆಲೆ ನಿಲ್ಲಲು ಸಾಧ್ಯವಾಯಿತು. ನನಗೆ ಇಷ್ಟು ದಿನಗಳ ಕಾಲ ರಂಗಪ್ರವೇಶ ಮಾಡಲು ಆಗಿರಲಿಲ್ಲ. ಈ ವರ್ಷ ಅದೂ ನಡೆಯಲಿದೆ. 

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next