Advertisement

ಪಾಣಾಜೆ: ಡಂಪಿಂಗ್‌ ಯಾರ್ಡ್‌ನಂತಾದ ಜಾಂಬ್ರಿ ಪರಿಸರ

11:54 PM Feb 26, 2020 | Team Udayavani |

ಪಾಣಾಜೆ: ಪಾಣಾಜೆ ಗ್ರಾಮದ ಐತಿಹಾಸಿಕ ಸ್ಥಳ ಜಾಂಬ್ರಿ ಗುಹೆ ಪರಿಸರ ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆಯಾಗುತ್ತಲಿದೆ. ಈ ಪರಿಸರ ತುಂಬಾ ಕೋಳಿ ತ್ಯಾಜ್ಯ, ಘನ ತ್ಯಾಜ್ಯಗಳು ತುಂಬಿ ಹೋಗುತ್ತಿವೆ. ಈಗಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದೆ ಪೂರ್ಣ ಪ್ರಮಾಣದ ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆಗೊಳ್ಳುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Advertisement

ರಕ್ಷಿತಾರಣ್ಯ ಪ್ರದೇಶ
ಮಂಗಳೂರು ವಿಭಾಗದ ಪುತ್ತೂರು ವಲಯ ವ್ಯಾಪ್ತಿಗೆ ಬರುವ ರಕ್ಷಿತಾರಣ್ಯ ಪ್ರದೇಶದಲ್ಲಿ ಜಾಂಬ್ರಿ ಪ್ರದೇಶ ಇದೆ. ಸಮತಟ್ಟದ ಪ್ರದೇಶದ ಒಂದು ಭಾಗ ಕೇರಳವಾದರೆ ಮತ್ತೂಂದು ಭಾಗ ಬಂಟಾಜೆ ರಕ್ಷಿತಾರಣ್ಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಅಲ್ಲಲ್ಲಿ ಕೋಳಿ ತ್ಯಾಜ್ಯಗಳನ್ನು ಚೀಲಗಳಲ್ಲಿ, ಪ್ಲಾಸ್ಟಿಕ್‌ ಕ್ಯಾನ್‌ಗಳಲ್ಲಿ ಎಸೆಯಲಾಗಿದೆ. ಕಾಡು ಪ್ರಾಣಿಗಳು ತ್ಯಾಜ್ಯಗಳನ್ನು ಜನವಸತಿ ಪ್ರದೇಶಗಳಿಗೆ ತಂದು ಬೀಸಾಡುತ್ತಿವೆ. ಪ್ರದೇಶವೆಲ್ಲ ದುರ್ವಾಸನೆ ಬೀರುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇವೆ. ಹೀಗೆ ಮುಂದುವರಿದರೆ ಮಳೆಗಾಲದಲ್ಲಿ ತ್ಯಾಜ್ಯ ನೀರಿನ ಮೂಲವನ್ನು ಸೇರಿ ಸಾಂಕ್ರಾಮಿಕ ರೋಗ ಗಳು ಬರುವ ಸಾಧ್ಯತೆ ಇದೆ. ಅಲ್ಲದೆ ಪ್ಲಾಸ್ಟಿಕ್‌ ಬಾಟಲಿಗಳು ಎರಡೂ ಭಾಗಗಳಲ್ಲಿ ಕಂಡು ಬರುತ್ತಿವೆ.

ಮದ್ಯ ಸೇವನೆ
ಜಾಂಬ್ರಿ ಪರಿಸರವು ಸಂಜೆ ಸಮಯದಲ್ಲಿ ಮದ್ಯ ಸೇವನೆ ತಾಣವಾಗುತ್ತಿರುವುದಕ್ಕೆ ಅಲ್ಲಿ ಸಿಕ್ಕಿರುವ ಮದ್ಯದ ಬಾಟಲಿಗಳು ಸಾಕ್ಷಿಯಾಗುತ್ತಿವೆ. ಮದ್ಯವನ್ನು ಇಲ್ಲಿ ತಂದು ಸೇವನೆ ಮಾಡಿ ಪರಿಸರವನ್ನು ಹಾಳುಗೆಡಹುವ ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಪುಡಿ ಮಾಡಿ ಎಸೆಯುತ್ತಿದ್ದಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಬರುತ್ತಿವೆ. ಸಂಜೆ ಮತ್ತು ರಾತ್ರಿ ಕಿಡಿಗೇಡಿಗಳು ಈ ಪರಿಸರ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್‌ ಮತ್ತು ಅರಣ್ಯ ಇಲಾಖೆ ಗಸ್ತು ನಿರತರಾಗಿ ಕಿಡಿಗೇಡಿಗಳನ್ನು ಗುರುತಿಸಿ ಶಿಕ್ಷಿಸುವ ಕೆಲಸವಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗಿಳಿಯಾಲು ಮನೆಯವರ ಕಾಳಜಿ
ಜಾಂಬ್ರಿ ಗುಹೆಯನ್ನು ಕಾಣಲು ಬರುವ ಪ್ರವಾಸಿಗರಿಗೆ ಮನದಟ್ಟು ಮಾಡುವ ಕೆಲಸ ಗಿಳಿಯಾಲು ಮನೆತನದಿಂದ ಆಗುತ್ತಿದೆ. ಕೆಲವು ವರ್ಷಗಳಿಂದ ಈ ಪ್ರದೇಶಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಸ್ವತ್ಛತೆ ಪಾಠ, ಗುಹೆಯ ವಿಶೇಷತೆ ಬಗ್ಗೆ ಗಿಳಿಯಾಲು ಮನೆಯವರು ಮನವರಿಕೆ ಮಾಡುತ್ತಾರೆ. ಸ್ವತ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಜಾಂಬ್ರಿ ಗುಹಾ ಪರಿಸರದಲ್ಲಿ ಸ್ವತ್ಛತೆ ಬಗ್ಗೆ ನಾಮ ಫ‌ಲಕ ಅಳವಡಿಸಲಾಗಿತ್ತು. ಆದರೆ ಅದೂ ಈಗ ನಾಪತ್ತೆಯಾಗಿದೆ.

ಸೂಕ್ತ ಕ್ರಮ ಕೈಗೊಳ್ಳಿ
ಹಲವು ತಿಂಗಳಿಂದ ಜಾಂಬ್ರಿ ಗುಹಾ ಪ್ರದೇಶದಲ್ಲಿ ಕೋಳಿ ತ್ಯಾಜ್ಯ ಹಾಗೂ ಇತರ ತ್ಯಾಜ್ಯ ಹೆಚ್ಚುತ್ತಿದೆ. ತ್ಯಾಜ್ಯಗಳನ್ನು ಎಸೆಯವವರು ಮತ್ತು ಪರಿಸರವನ್ನು ಹಾಳುಗೆಡುವವರನ್ನು ಸಂಬಂಧಪಟ್ಟ ಇಲಾಖೆಯವರು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗಿಳಿಯಾಲು ಜಿ. ಮಹಾಬಲೇಶ್ವರ ಭಟ್‌.

Advertisement

ಇಲಾಖೆಯವರು ಗಮನಹರಿಸಿ
ಜಾಂಬ್ರಿ ಪ್ರದೇಶವು ರಕ್ಷಿತಾರಣ್ಯ ಪ್ರದೇಶದಲ್ಲಿ ಇದೆ. ಜಾಂಬ್ರಿ ಪರಿಸರವನ್ನು ಹಾನಿ ಮಾಡುವ ಕಿಡಿಗೇಡಿಗಳನ್ನು ಗುರುತಿಸಿ ಪೊಲೀಸ್‌ ಮತ್ತು ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ನಾರಾಯಣ ಪೂಜಾರಿ, ಅಧ್ಯಕ್ಷ, ಪಾಣಾಜೆ ಗ್ರಾ.ಪಂ.

ಕ್ರಮ ಕೈಗೊಳ್ಳುತ್ತೇವೆ
ತ್ಯಾಜ್ಯದ ಬಗ್ಗೆ ಗ್ರಾಮ ಪಂಚಾಯತ್‌ ಗಮನಕ್ಕೆ ತರಲಾಗಿದೆ. ಕೋಳಿ ತ್ಯಾಜ್ಯವನ್ನು ಎಸೆಯುವವರನ್ನು ಗುರುತಿಸಿ ಎಚ್ಚರಿಕೆ ನೀಡಿದ್ದೇವೆ. ಪ್ರವಾಸಿ ತಾಣವಾಗಿರುವುದರಿಂದ ತ್ಯಾಜ್ಯವನ್ನು ಎಸೆಯುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಮೋಹನ್‌, ಅರಣ್ಯ ರಕ್ಷಕ, ಪಾಣಾಜೆ ವಲಯ

Advertisement

Udayavani is now on Telegram. Click here to join our channel and stay updated with the latest news.

Next