Advertisement

ಬ್ರಹ್ಮಾವರಕ್ಕೆ 16 ಸದಸ್ಯರು, ಉಡುಪಿಗೆ 13!

01:49 PM Jun 25, 2020 | mahesh |

ಉಡುಪಿ: ತಾಲೂಕು ಪಂಚಾಯತ್‌ಗಳ ವಿಂಗಡಣೆಯಾದ ಬಳಿಕ ಹೊಸ ಮೀಸಲಾತಿಯಂತೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲಿ ನಡೆಯುವ ಸಾಧ್ಯತೆಗಳಿವೆ. ವಿಭಜನೆಗೊಂಡ ಬಳಿಕ ಉಡುಪಿ ತಾ.ಪಂ. ಕಚೇರಿಯಲ್ಲಿ ಮಂಗಳವಾರ ಮೊದಲ ಸಭೆ ನಡೆದಿದೆ. ತಾ.ಪಂ. ಸದಸ್ಯರನ್ನು ವಿಭಜಿಸಿ ಅಧಿಸೂಚನೆ ಪ್ರಕಟಗೊಂಡ ಬಳಿಕ ಆಯ್ದ ಹಾಲಿ ಸದಸ್ಯರು ಅವರ ಅಧಿಕಾರ ಮುಗಿಯುವವರೆಗೆ ಹೊಸ ತಾ.ಪಂ. ಸದಸ್ಯರಾಗುವರು. ಈಗಾಗಲೆ ಕೆಲವು ತಾಲೂಕುಗಳ ಅಧ್ಯಕ್ಷ,  ಉಪಾಧ್ಯಕ್ಷರ ಮೀಸಲಾತಿ ಪ್ರಕಟ ವಾಗಿದ್ದು, ಶೀಘ್ರದಲ್ಲಿ ಆಯ್ಕೆ ನಡೆ ಯುವ ಸಾಧ್ಯತೆಗಳಿವೆ.

Advertisement

ಮೀಸಲಾತಿ ಪ್ರಕಟ
ಕಾಪು ತಾಲೂಕಿನ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಪ್ರವರ್ಗ-ಬಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಬ್ರಹ್ಮಾವರ ತಾಲೂಕಿನ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಕಲ್ಪಿಸಲಾಗಿದೆ. ಉಡುಪಿ ಮೀಸಲಾತಿ ಇನ್ನೂ ಪ್ರಕಟವಾಗಿಲ್ಲ.

ಜನಸಂಖ್ಯೆಯಲ್ಲೂ ಬ್ರಹ್ಮಾವರ ಅಗ್ರಣಿ
ವಿಭಜನೆಯಾದ ಬಳಿಕ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುವ ಉಡುಪಿ ತಾಲೂಕಿಗೂ ಜನಸಂಖ್ಯಾ ಬಲದಲ್ಲಿ ಹಿನ್ನಡೆಯಾಗಿದೆ. ಈ ಹಿಂದೆ 41 ಸದಸ್ಯರಿದ್ದರು. ವಿಂಗಡಣೆ ಬಳಿಕ ಉಡುಪಿಗೆ 13, ಕಾಪುವಿಗೆ 12 ಹಾಗೂ ಬ್ರಹ್ಮಾವರಕ್ಕೆ 16 ಸದಸ್ಯರು ಹಂಚಿಹೋಗಿದ್ದಾರೆ.

ಬ್ರಹ್ಮಾವರವೇ ಕೇಂದ್ರ ಬಿಂದು
ಜನಸಂಖ್ಯೆ ಹಾಗೂ ಅಭಿವೃದ್ಧಿಯ ದೃಷ್ಟಿಕೋನದಿಂದಲೂ ಬ್ರಹ್ಮಾವರ ತಾಲೂಕಿಗೆ ವಿಪುಲ ಅವಕಾಶವಿದೆ. ತಾಲೂಕು ಪಂಚಾಯತ್‌ನಲ್ಲಿ ಸದಸ್ಯರ ಬಲಾಬಲ, ಜನಸಂಖ್ಯೆ, ಗ್ರಾಮಗಳ ಸಂಖ್ಯೆಯ ಆಧಾರದಲ್ಲಿಯೂ ಬ್ರಹ್ಮಾವರ ಪ್ರಬಲವಾಗಿದೆ. 26 ಗ್ರಾಮಗಳಿರುವ ಕಾಪು ತಾಲೂಕಿನಲ್ಲಿ 16 ಗ್ರಾ.ಪಂ.ಗಳಿದ್ದು, ಜನಸಂಖ್ಯೆ 1,13,165 ಆಗಿದೆ. ಉಡುಪಿಯಲ್ಲಿ 16 ಗ್ರಾ.ಪಂ., 28 ಗ್ರಾಮಗಳು ಹಾಗೂ ಜನಸಂಖ್ಯೆ 1,28,369 ಆಗಿದೆ. ಬ್ರಹ್ಮಾವರದಲ್ಲಿ 27 ಗ್ರಾ.ಪಂ., 48 ಗ್ರಾಮಗಳು ಹಾಗೂ 1,58,949 ಜನಸಂಖ್ಯೆ ಇದೆ.

ಉಡುಪಿಗೆ ಹಂಗಾಮಿ ಅಧ್ಯಕ್ಷ
ಉಡುಪಿ ತಾಲೂಕು ಪಂಚಾಯತ್‌ಗೆ ಈ ಹಿಂದೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದ ಶರತ್‌ ಕುಮಾರ್‌ ಬೈಲಕರೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬ್ರಹ್ಮಾವರ ಹಾಗೂ ಕಾಪುತಾಲೂಕುಗಳಲ್ಲಿ ಜಿ.ಪಂ. ಉಪ ಕಾರ್ಯದರ್ಶಿಗಳ ಮೇಲುಸ್ತುವಾರಿ ಯಲ್ಲಿ ಸಭೆಗಳನ್ನು ನಡೆಸಲು ನಿಯಮಾವಳಿ ಪ್ರಕಾರ ಅವಕಾಶಗಳಿವೆ. ಸಭೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

Advertisement

ಅವಧಿ ಮುನ್ನವೇ ಅಧಿಕಾರ ಕಳೆದುಕೊಂಡ ಅಧ್ಯಕ್ಷರು!
ಉಡುಪಿ ತಾ. ಪಂ.ಗೆ ಮುಂದಿನ ಮೇ ತಿಂಗಳ ವರೆಗೆ ಅಧ್ಯಕ್ಷರಾಗಿದ್ದ ನೀತಾ ಗುರುರಾಜ್‌ ಅವರು ಸರಕಾರದ ಈ ನಿಯಮಾವಳಿಯಿಂದಾಗಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ಅವರು ಕಾಪು ತಾಲೂಕು ವ್ಯಾಪ್ತಿಗೆ ಒಳಪಡುವ ಕಾರಣ ಅಲ್ಲಿ ಮೀಸಲಾತಿಯಂತೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಆ ವರೆಗೆ ಅವರು ಅಲ್ಲಿ ಸದಸ್ಯರಾಗಿಯೇ ಮುಂದುವರಿಯಲಿದ್ದಾರೆ. ಸುಮಾರು 4 ವರ್ಷಗಳ ಹಿಂದೆ ಅಧ್ಯಕ್ಷರ ಆಯ್ಕೆಯಾಗಿದ್ದಾಗ ಪಕ್ಷದೊಳಗಿನ ಒಡಂಬಡಿಕೆಯಂತೆ ಎರಡೂವರೆ ವರ್ಷಗಳಿಗೆ ಅಧಿಕಾರ ಹಂಚಿಕೊಳ್ಳಲು ನಿರ್ಧಾರವಾಗಿತ್ತು. ಒಂದು ವರ್ಷದ ಹಿಂದೆ ಲೋಕಸಭಾ ಚುನಾವಣೆ ಬಂದ ಕಾರಣ ಪ್ರಥಮ ಅವಧಿಯ ಅಧ್ಯಕ್ಷರ ರಾಜೀನಾಮೆ ತಡವಾಗಿತ್ತು. ಒಂಬತ್ತು ತಿಂಗಳ ಹಿಂದೆ ನೀತಾ ಗುರುರಾಜ್‌ ಅಧ್ಯಕ್ಷರಾಗಿದ್ದು, ಕೆಲವೇ ಸಭೆಗಳನ್ನು ನಡೆಸಲಷ್ಟೇ ಸಾಧ್ಯವಾಯಿತು.

ಅನುಕೂಲವೇ ಅಧಿಕ
ತಾಲೂಕು ವಿಂಗಡಣೆಯಿಂದಾಗಿ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವೇ ಹೆಚ್ಚಾಗಿದೆ. ಹಿಂದೆ ಉಡುಪಿಯಲ್ಲೇ ನಡೆಯುತ್ತಿದ್ದ ಸಭೆಯು ಬದಲಾವಣೆ ಬಳಿಕ ಆಯಾ ತಾಲೂಕು ಕೇಂದ್ರಗಳಲ್ಲಿಯೇ ನಡೆಯಲಿದ್ದು, ಎಲ್ಲರಿಗೂ ಅನುಕೂಲವಾಗಲಿದೆ. ಅಧಿಕಾರಿಗಳೂ ಸುಲಭದಲ್ಲಿ ಸಿಗುವ ಕಾರಣ ಅಭಿವೃದ್ಧಿ ಕಾರ್ಯ ಚುರುಕು ಪಡೆದೀತು ಎನ್ನುತ್ತಾರೆ ಬ್ರಹ್ಮಾವರ ತಾ.ಪಂ. ಸದಸ್ಯ ಸುಧೀರ್‌ಕುಮಾರ್‌ ಶೆಟ್ಟಿ.

ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ
ತಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ನೇಮಕದ ಮೀಸಲಾತಿ ಹೊರಡಿಸಲಾಗಿದೆ. ಆಯ್ಕೆ ಪ್ರಕ್ರಿಯೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ತಾಲೂಕುವಾರು ಮೀಸಲಾತಿ ಭಿನ್ನವಾಗಿರುತ್ತದೆ.
-ಮೋಹನ್‌ರಾಜ್‌, ಕಾರ್ಯನಿರ್ವಹಣಾಧಿಕಾರಿ, ಉಡುಪಿ ತಾ. ಪಂ.

Advertisement

Udayavani is now on Telegram. Click here to join our channel and stay updated with the latest news.

Next