Advertisement

ಶ್ರೀರಾಮನವಮಿ ಪ್ರಯುಕ್ತ ಪಲ್ಲಕ್ಕಿ ಉತ್ಸವ

12:54 AM Apr 22, 2019 | Team Udayavani |

ಮಹದೇವಪುರ: ಸಮೀಪದ ಗರುಡಾಚಾರ್‌ಪಾಳ್ಯದಲ್ಲಿ ಶ್ರೀರಾಮ ನವಮಿ ಪ್ರಯುಕ್ತ 25 ದೇವರುಗಳ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು.

Advertisement

ವಿನಾಯಕ, ಮಂಜುನಾಥ ಸ್ವಾಮಿ, ಆಂಜನೇಯ ಸ್ವಾಮಿ, ರಾಧಾ, ರುಕ್ಮಿಣಿ, ಶ್ರೀಕೃಷ್ಣ, ಮಹೇಶ್ವರಮ್ಮ, ಸಫಲಮ್ಮದೇವಿ, ಸತ್ಯನಾರಾಯ ಸ್ವಾಮಿ, ರಾಘವೇಂದ್ರ ಸ್ವಾಮಿ, ಗಟ್ಟಿಗಣಪತಿ, ವೆಂಕಟರಮಣ ಸ್ವಾಮಿ, ಶಿರಡಿ ಸಾಯಿಬಾಬಾ, ಭಕ್ತ ಕನಕದಾಸ, ರಾಮದೇವರು, ಅಯ್ಯಪ್ಪ ಸ್ವಾಮಿ, ಕಾವೇರಮ್ಮ ಸೇರಿದಂತೆ 25 ದೇವರಗಳ ಪಲ್ಲಕಕಿಗೆ ನಾನಾ ಬಗೆಯ ಹೂವು ಮತ್ತು ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರಮುಖ ಭೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿತು.

ಈ ವೇಳೆ ತುಮಕೂರಿನ ಶ್ರೀ ಕರಿಬಸವೇಶ್ವರ ಮಠದಿಂದ ಕರೆಸಲಾಗಿದ್ದ ಆನೆಯ ಮೇಲಿನ ಅಂಬಾರಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿ ಇರಿಸಿ ಮೆರವಣಿಗೆ ಮಾಡಲಾಯಿತು. ಕೀಲುಕುದುರೆ, ಗಾರುಡಿ ಗೊಂಬೆ ಕುಣಿತ, ವೀರಗಾಸೆ, ತಮಟೆ ವಾದ್ಯ, ನಾದಸ್ವರ, ನಾಯಂಡಿ ನೃತ್ಯ, ಮರಗಾಲು ಮನುಷ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಹುಲಿ ಕುಣಿತ ಹಾಕಿದ ಸಚಿವ ನಾಗರಾಜ್‌: ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ವಸತಿ ಸಚಿವ ಎಂ.ಟಿ.ಬಿ. ನಾಗರಾಜ್‌, ಉತ್ಸವ ಮೂರ್ತಿಗಳ ಎದುರಿದ್ದ ತಮಟೆ ವಾದ್ಯ ತಂಡದ ಬೀಟ್‌ಗೆ ತಕ್ಕಂತೆ ಹುಲಿ ಕುಣಿತ ಹಾಕುವ ಮೂಲಕ ನೆರೆದವರನ್ನು ರಂಜಿಸಿದರು. ಈ ಹಿಂದೆ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಹೋಸಕೊಟೆ ಕ್ಷೇತ್ರದಲ್ಲಿ ಸಚಿವ ನಾಗರಾಜ್‌ ಅವರು ನಾಗಿನಿ ನೃತ್ಯ ಮಾಡುವ ಮೂಲಕ ಗಮನಸೆಳೆದಿದ್ದರು.

ಮಹದೇವಪುರ, ಕಾವೇರಿನಗರ, ಬಿ.ನಾರಾಯಣಪುರ, ಕೆ.ಆರ್‌.ಪುರ, ಹೂಡಿ, ಆರ್‌ಬಿಎಚ್‌ ಕಾಲೋನಿ, ಲಕ್ಷ್ಮೀಸಾಗರ ಬಡವಾಣೆ, ಚಿಕ್ಕಣ ಬಡವಾಣೆ ಹಾಗೂ ಗರುಡಾಚಾರ್‌ಪಾಳ್ಯ ಸುತ್ತಮುತ್ತಲಿನ ಬಡವಾಣೆಗಳ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಪಾಲಿಕೆ ಸದಸ್ಯ ಬಿ.ಎನ್‌.ನಿತೀಶ್‌ ಪುರುಷೋತ್ತಮ್‌, ಜಿ.ಪಂ ಸದಸ್ಯ ಸಿ.ನಾಗರಾಜ್‌, ಮುಖಂಡರಾದ ಎ.ಯಲ್ಲಪ್ಪ, ರಾಜಶೇಖರ್‌, ರವಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next