Advertisement

ಪಾಕ್‌ ವಿರುದ್ಧ ಇನ್ನಷ್ಟು  ಕ್ರಮ?

03:04 AM May 25, 2017 | Team Udayavani |

ಇಸ್ಲಾಮಾಬಾದ್‌/ಹೊಸದಿಲ್ಲಿ/ವಾಷಿಂಗ್ಟನ್‌: ಕಾಶ್ಮೀರದಲ್ಲಿ ಪಾಕ್‌ ಪ್ರಾಯೋಜಿತ ಭಯೋತ್ಪಾದನೆ, ಒಳನುಸುಳುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕ್‌ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಮಾಡುವುದು ಮತ್ತು ದಂಡನಾತ್ಮಕ ಕ್ರಮ ಜಾರಿ ಕುರಿತು ಭಾರತ ಆಲೋಚಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ವಿಭಾಗದ ನಿರ್ದೇಶಕ ಲೆ| ವಿನ್ಸೆಂಟ್‌ ಸ್ಟೀವರ್ಟ್‌ ಅಲ್ಲಿನ ಶಾಸನ ಸಭೆಗೆ ತಿಳಿಸಿದ್ದಾರೆ. ರಾಜತಾಂತ್ರಿಕವಾಗಿ ಪಾಕ್‌ ಅನ್ನು ಏಕಾಂಗಿಯಾಗಿಸುವ ಯತ್ನವನ್ನು ಭಾರತ ಮತ್ತಷ್ಟು ಮುಂದುವರಿಸಿದೆ. ಇದರ ಬೆನ್ನಲ್ಲೇ ಹೆಚ್ಚುತ್ತಿರುವ ಉಗ್ರವಾದ ವಿರುದ್ಧ ಇಸ್ಲಾಮಾಬಾದ್‌ಗೆ ಪಾಠ ಕಲಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಿಲಿಟರಿಗೆ ಬಲ ತುಂಬುವುದು, ಏಷ್ಯಾದಲ್ಲಿ ರಾಜತಾಂತ್ರಿಕ ವಾಗಿ, ಆರ್ಥಿಕವಾಗಿ ಭಾರತ ತನ್ನ ಹಿಡಿತವನ್ನು ಬಲಪಡಿಸಲು ಮುಂದಾಗಿದೆ. ಭಾರತದಲ್ಲಿ ಉಗ್ರ ದಾಳಿಗಳಿಂದಾಗಿ ಪಾಕ್‌ – ಭಾರತ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

Advertisement

ಇದೇ ವೇಳೆ  ಭಾರತದ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಪಾಕ್‌ ವಿರುದ್ಧದ ಸೇನಾ ಕ್ರಮಕ್ಕೆ ಸಂಬಂಧಿಸಿದಂತೆ ಕಠಿನ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಯುದ್ಧಪೀಡಿತ ಪ್ರದೇಶದಂತಾಗಿರುವ ಕಾಶ್ಮೀರದಲ್ಲಿ ಸರಕಾರದ ನಿರ್ದೇಶ ಪಡೆದು ಕ್ರಮ ಕೈಗೊಳ್ಳುವಷ್ಟು ಸಮಯ ಸೇನೆಗೆ ಇಲ್ಲ. ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ನಿಯಂತ್ರಣ ರೇಖೆಯಲ್ಲಿ ನುಸುಳುಕೋರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ಥಾನ ಸೇನಾ ಬಂಕರ್‌ಗಳ ಮೇಲೆ ಭಾರತೀಯ ಸೇನೆ ಕಠಿನ ಕ್ರಮ ಕೈಗೊಂಡಿರುವುದು ಹಾಗೂ ಪ್ರತಿ ಚಿತಾವಣೆಗೂ ಭಾರತದ ಕಡೆಯಿಂದ ಭಾರೀ ಎದುರೇಟು ಸಿಗುತ್ತಿರುವುದು ಪಾಕ್‌ಗೆ ನುಂಗಲಾರದ ತುತ್ತಾಗಿದೆ.

ಪಾಕ್‌ ಸಿದ್ಧತೆ: ಜತೆಗೆ ನಿಯಂತ್ರಣ ರೇಖೆಯಲ್ಲಿ ದಾಳಿ ಕುರಿತ ವಿಡಿಯೋ ಬಿಡುಗಡೆಯಿಂದಾಗಿ ಅದು ತೀವ್ರ ಅವಮಾನಕ್ಕೊಳಗಾಗಿದೆ. ಈಗ ಯುದ್ಧ ಸನ್ನದ್ಧತೆಯ ಮಾತುಗಳನ್ನು ಆಡತೊಡಗಿದೆ. ಭಾರತ ಗಡಿಯಲ್ಲಿನ ಮುಂಚೂಣಿ ವಾಯುನೆಲೆಯನ್ನು ಸನ್ನದ್ಧ ಸ್ಥಿತಿಯಲ್ಲಿಡುವುದಾಗಿ ಹೇಳಿದೆ. ಇದರೊಂದಿಗೆ, ಪಾಕ್‌ ಸೇನಾ ಮುಖ್ಯಸ್ಥರು ಮುಂಚೂಣಿ ವಾಯುನೆಲೆ ಸ್ಕಾರ್ದು ಎಂಬಲ್ಲಿಗೆ ಬುಧವಾರ ಭೇಟಿ ನೀಡಿದ್ದು, ಅಲ್ಲಿ ಪಾಕ್‌ ವಾಯುಪಡೆ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಿದ್ದಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಪಾಕ್‌ ವಾಯುಪಡೆಯ ಮಿರಾಜ್‌ ಸ್ಕ್ವಾಡ್ರನ್‌ ಒಂದು ಸಿಯಾಚಿನ್‌ ಭಾಗದಲ್ಲಿ ಹಾರಾಟ ನಡೆಸಿದ್ದಾಗಿಯೂ ಜತೆಗೆ ಭಾರತದ ವಾಯು ಸರಹದ್ದನ್ನು ದಾಟಿದ್ದಾಗಿಯೂ ಮಾಧ್ಯಮಗಳು ಹೇಳಿವೆ. ಆದರೆ ಪಾಕ್‌ ಮಾಧ್ಯಮಗಳ ವರದಿಯನ್ನು ಭಾರತೀಯ ವಾಯುಪಡೆ ತಿರಸ್ಕರಿಸಿದೆ.

ಪಾಕ್‌ಗೆ 1,230 ಕೋಟಿ ರೂ. ನೆರವು ಕಟ್‌
ಅಮೆರಿಕ ಪಾಕ್‌ಗೆ ನೀಡುತ್ತಿದ್ದ ವಾರ್ಷಿಕ 1,230 ಕೋಟಿ ಮಿಲಿಟರಿ ನೆರವು ಸಹಿತ ಒಟ್ಟು 2227 ಕೋಟಿ ರೂ.ಗಳ ಹಣಕಾಸು ನೆರವನ್ನು ಕಡಿತಗೊಳಿಸಲು ಮುಂದಾಗಿದೆ. ಇದರ ಬದಲಿಗೆ ಈ ನೆರವನ್ನು ‘ಸಾಲ’ ಎಂದು ನೀಡಲು ಚಿಂತಿಸಿದೆ. ಈ ಕುರಿತ ಶಿಫಾರಸನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ತನ್ನ ಬಜೆಟ್‌ನಲ್ಲಿ ಪ್ರಸ್ತಾವಿಸಿದೆ. ಪಾಕ್‌ ಭಯೋತ್ಪಾದನಾ ನಿಗ್ರಹದಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ಅದಕ್ಕೆ ವಾರ್ಷಿಕ 1,230 ಕೋಟಿ ರೂ. ಮಿಲಿಟರಿ ನೆರವನ್ನು ಅಮೆರಿಕ ನೀಡುತ್ತಿತ್ತು. ಒಂದು ವೇಳೆ ಮಿಲಿಟರಿ ಮತ್ತು ಹಣಕಾಸು ನೆರವು ಅಮೆರಿಕದಿಂದ ನಿಂತು, ಅದು ಸಾಲರೂಪದಲ್ಲಿ ಸಿಕ್ಕರೆ, ಹಣಕಾಸು ವಿಚಾರದಲ್ಲಿ  ಪಾಕ್‌ ಸ್ಥಿತಿ ಬಿಗಡಾಯಿಸಲಿದೆ ಎನ್ನಲಾಗಿದೆ.

ಗಡಿ ಸರಹದ್ದು ಉಲ್ಲಂಘಿಸಿಲ್ಲ: ಭಾರತ
ಸಿಯಾಚಿನ್‌ ಭಾಗದಲ್ಲಿ ಪಾಕ್‌ನ ಯಾವುದೇ ಯುದ್ಧ ವಿಮಾನಗಳು ಭಾರತದ ವಾಯು ಪ್ರದೇಶಕ್ಕೆ ಪ್ರವೇಶ ಮಾಡಿಯೇ ಇಲ್ಲ ಎಂದು ಭಾರತೀಯ ವಾಯುಪಡೆ ಹೇಳಿದೆ. ಈ ಮೂಲಕ ಭಾರತದ ವಾಯುಸರಹದ್ದಿನೊಳಕ್ಕೆ ಪಾಕ್‌ ಯುದ್ಧ ವಿಮಾನಗಳು ನುಗ್ಗಿವೆ ಎಂಬ ವರದಿಯನ್ನು ಅದು ಅಲ್ಲಗಳೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next