Advertisement

 ಚುನಾವಣೆಗೆ “ಉಗ್ರ’ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

07:43 PM Jan 16, 2022 | Team Udayavani |

ನವದೆಹಲಿ: ಪಂಚರಾಜ್ಯಗಳಲ್ಲಿ ಚುನಾವಣೆಯ ಹವಾ ವ್ಯಾಪಿಸಿರುವಂತೆಯೇ ಪಾಕಿಸ್ತಾನ ಪ್ರೇರಿತ ಉಗ್ರರು ಸದ್ದಿಲ್ಲದೇ ತಮ್ಮ ಗುರಿಸಾಧನೆಗೆ ತಯಾರಾಗುತ್ತಿದ್ದಾರೆಯೇ?

Advertisement

ಹೌದು ಎನ್ನುತ್ತಿವೆ ಗುಪ್ತಚರ ವರದಿಗಳು. ವಿಶೇಷವಾಗಿ ಉತ್ತರಪ್ರದೇಶ ಮತ್ತು ಪಂಜಾಬ್‌ನಲ್ಲಿ ಚುನಾವಣಾ ಪ್ರಕ್ರಿಯೆಯ ಹಳಿ ತಪ್ಪಿಸಲು ಪಾಕ್‌ ಐಎಸ್‌ಐ ಸಂಚು ರೂಪಿಸಿದ್ದು, ತನ್ನ ಉಗ್ರ ಸಂಘಟನೆಗಳನ್ನು ಆ್ಯಕ್ಟಿವೇಟ್‌ ಮಾಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಈ ಎರಡೂ ರಾಜ್ಯಗಳಲ್ಲಿ ಐಎಸ್‌ಐ ಪ್ರೇರಿತ ಸಿಖ್‌ ಉಗ್ರ ಸಂಘಟನೆಗಳು ಚುನಾವಣಾ ರ್ಯಾಲಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದ್ದು, ವಿವಿಐಪಿಗಳು ಅಥವಾ ಪ್ರಮುಖ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿವೆ. ಇದಕ್ಕಾಗಿ ಎಲ್ಲ ಸಣ್ಣಪುಟ್ಟ ಹಾಗೂ ದೊಡ್ಡ ಉಗ್ರ ಗುಂಪುಗಳನ್ನು ಸಕ್ರಿಯವಾಗಿಸಲಾಗುತ್ತಿದೆ. ಉತ್ತರಾಖಂಡದಲ್ಲೂ ವಿಧ್ವಂಸಕ ಕೃತ್ಯಕ್ಕೆ ಐಎಸ್‌ಐ ಯೋಜನೆ ರೂಪಿಸಿದೆ ಎಂದೂ ಮೂಲಗಳು ಹೇಳಿವೆ.

ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಮೂಲಕ ಪಂಜಾಬ್‌ ಮತ್ತು ಐಎಸ್‌ವೈಎಫ್, ಬಿಕೆಐನಂಥ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮೂಡುವಂತೆ ವಿದೇಶಗಳಲ್ಲಿರುವ ಸಿಖ್‌ ಉಗ್ರ ಸಂಘಟನೆಗಳಿಗೂ ಐಎಸ್‌ಐ ಸೂಚಿಸಿದೆ ಎನ್ನಲಾಗಿದೆ.

ಜಾತಿ ಗಣತಿಯ ಆಶ್ವಾಸನೆ:
ಉತ್ತರಪ್ರದೇಶದಲ್ಲಿ ಎಸ್‌ಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಜಾತಿ ಆಧಾರಿತ ಗಣತಿ ನಡೆಸಲಾಗುತ್ತದೆ ಎಂದು ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಘೋಷಿಸಿದ್ದಾರೆ. ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸಲಾಗುತ್ತದೆ ಎಂದೂ ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದ ಉತ್ತರಪ್ರದೇಶ ಬಿಜೆಪಿ ಸಚಿವ ದಾರಾ ಸಿಂಗ್‌ ಚೌಹಾಣ್‌ ಭಾನುವಾರ ಎಸ್ಪಿಗೆ ಸೇರ್ಪಡೆಯಾಗಿದ್ದಾರೆ. ಅವರ ಜತೆಗೆ ಅಪ್ನಾ ದಳ್‌ ಶಾಸಕ ವಿಶ್ವನಾಥ್‌ಗಂಜ್‌ ಕೂಡ ಸಮಾಜವಾದಿ ಪಕ್ಷ ಸೇರಿದ್ದಾರೆ. ಇದೇ ವೇಳೆ, ಸಮಾಜವಾದಿ ಪಕ್ಷ-ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಭಾನುವಾರ ಭಾರತೀಯ ಕಿಸಾನ್‌ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ನರೇಶ್‌ ಟೀಕಾಯತ್‌ ಘೋಷಿಸಿದ್ದಾರೆ.

Advertisement

ಇದನ್ನೂ ಓದಿ:ನೀವು ಒಳ್ಳೆಯದನ್ನೇ ಮಾಡಿದ್ದೀರಿ: ಕೊಹ್ಲಿ ಕುರಿತಾಗಿ ಪತ್ನಿ ಅನುಷ್ಕಾ ಭಾವನಾತ್ಮಕ ಬರಹ

ಬಿಜೆಪಿ ಸೇರ್ಪಡೆ:
ಈ ನಡುವೆ, ಬಿಜೆಪಿ ಜತೆ ಮೈತ್ರಿ ಮಾತುಕತೆ ಅಂತಿಮಗೊಂಡಿದ್ದು, ನಾವು ಉ.ಪ್ರದೇಶದಲ್ಲಿ 15 ಸೀಟುಗಳಲ್ಲಿ ಸ್ಪರ್ಧಿಸಲಿದ್ದೇವೆ ಎಂದು ನಿಶಾದ್‌ ಪಾರ್ಟಿ ತಿಳಿಸಿದೆ. ಭಾನುವಾರ ಸಮಾಜವಾದಿ ಪಕ್ಷದ ಇಬ್ಬರು ಎಂಎಲ್‌ಸಿಗಳು ಮತ್ತು ಮಾಜಿ ಐಎಎಸ್‌ ಅಧಿಕಾರಿ ಲಕ್ನೋದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮುಂದೂಡಿಕೆಗೆ ಆಗ್ರಹ:
ಫೆ.16ರಂದು ಗುರು ರವಿದಾಸ್‌ ಜಯಂತಿ ಇರುವ ಹಿನ್ನೆಲೆಯಲ್ಲಿ ಪಂಜಾಬ್‌ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಚು.ಆಯೋಗವನ್ನು ಮನವಿ ಮಾಡಿವೆ.

ಎಸ್‌ಪಿ ಕಾರ್ಯಕರ್ತ ಆತ್ಮಹತ್ಯೆ ಯತ್ನ
ಪಕ್ಷದ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಎಸ್‌ಪಿ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ. ಲಕ್ನೋದಲ್ಲಿನ ಪಕ್ಷದ ಪ್ರಧಾನ ಕಚೇರಿ ಮುಂಭಾಗದಲ್ಲಿ ಠಾಕೂರ್‌ ಆದಿತ್ಯ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಕೂಡಲೇ ಅಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ. ಪಕ್ಷಕ್ಕಾಗಿ 5 ವರ್ಷದಿಂದ ದುಡಿಯುತ್ತಿದ್ದರೂ ಟಿಕೆಟ್‌ ಸಿಗಲಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.

ಉತ್ಪಾಲ್‌ ಪರ್ರಿಕರ್‌ಗೆ ಆಪ್‌ ಗಾಳ?
ಗೋವಾ ಮಾಜಿ ಸಿಎಂ ಮನೋಹರ್‌ ಪರ್ರಿಕರ್‌ ಅವರ ಪುತ್ರ ಉತ್ಪಾಲ್‌ ಪರ್ರಿಕರ್‌ ಅವರು ಆಪ್‌ಗೆ ಬರಲು ಇಚ್ಛಿಸಿದರೆ ನಾವು ತುಂಬುಹೃದಯದಿಂದ ಸ್ವಾಗತಿಸುತ್ತೇವೆ ಎಂದು ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಜತೆಗೆ, 1947ರಿಂದ ಈವರೆಗೆ ದೇಶದಲ್ಲಿರುವ ಅತಿ ಪ್ರಾಮಾಣಿಕ ಪಕ್ಷವೆಂದರೆ ಆಮ್‌ ಆದ್ಮಿ ಪಕ್ಷ. ಭ್ರಷ್ಟಾಚಾರ ಮುಕ್ತ ಆಡಳಿತ ನಮ್ಮ ಡಿಎನ್‌ಎಯಲ್ಲೇ ಇದೆ ಎಂದೂ ಹೇಳಿದ್ದಾರೆ. ಈ ನಡುವೆ, ಗೋವಾದಲ್ಲಿ 10-15 ಸೀಟುಗಳಲ್ಲಿ ಕಣಕ್ಕಿಳಿಯುವುದಾಗಿ ಶಿವಸೇನೆ ಘೋಷಿಸಿದೆ. ಎನ್‌ಸಿಪಿ ಮತ್ತು ಶಿವಸೇನೆ ಗೋವಾದಲ್ಲೂ ಮೈತ್ರಿ ಮಾಡಿಕೊಂಡಿವೆ.

ಸಿಎಂ ಛನ್ನಿ ಸೋದರನ ಬಂಡಾಯ
ಬಸ್ಸಿ ಪಠಾಣಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ಅವರ ಸಹೋದರ ಮನೋಹರ್‌ ಸಿಂಗ್‌ ಈಗ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಟಿಕೆಟ್‌ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡಿರುವ ಅವರು, ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಪತ್ರಕರ್ತರಿಗೆ ಅಂಚೆ ಮತ ಅವಕಾಶ
ಪಂಚರಾಜ್ಯ ಚುನಾವಣೆಗಳಲ್ಲಿ ಮಾಧ್ಯಮ ಸಿಬ್ಬಂದಿಗೆ ಅಂಚೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮತದಾನದ ದಿನ ಕರ್ತವ್ಯನಿರತ ಪತ್ರಕರ್ತರಿಗೆ ಈ ಅವಕಾಶ ನೀಡಲಾಗಿದೆ. ಇವರಲ್ಲದೇ, ಆಹಾರ ನಾಗರಿಕ ಪೂರೈಕೆ, ಭಾರತೀಯ ಆಹಾರ ನಿಗಮ, ಆಲ್‌ ಇಂಡಿಯಾ ರೇಡಿಯೋ, ದೂರದರ್ಶನ, ಅಂಚೆ ಮತ್ತು ಟೆಲಿಗ್ರಾಫ್, ರೈಲ್ವೆ, ಬಿಎಸ್‌ಎನ್‌ಎಲ್‌ ಸಿಬ್ಬಂದಿಗೂ ಇದೇ ಅವಕಾಶವಿದೆ ಎಂದಿದೆ ಆಯೋಗ.

72 ಗಂಟೆಗಳಲ್ಲಿ 15 ಲಕ್ಷ ಜನರಿಂದ ಎಸ್ಸೆಮ್ಮೆಸ್‌!
ಪಂಜಾಬ್‌ನಲ್ಲಿ ಆಪ್‌ ಸಿಎಂ ಅಭ್ಯರ್ಥಿಯನ್ನು ನೀವೇ ಸೂಚಿಸಿ ಎಂದು ಮತದಾರರಿಗೆ ಕೇಜ್ರಿವಾಲ್‌ ಇತ್ತೀಚೆಗೆ ಕರೆ ನೀಡಿ, ಮೊಬೈಲ್‌ ಸಂಖ್ಯೆಯೊಂದನ್ನು ಅನಾವರಣಗೊಳಿಸಿದ್ದರು. ಇದಾದ ಕೇವಲ 72 ಗಂಟೆಗಳಲ್ಲಿ ಬರೋಬ್ಬರಿ 15 ಲಕ್ಷ ಮಂದಿ ಸಂದೇಶ ಕಳುಹಿಸಿದ್ದಾರೆ ಎಂದು ಪಕ್ಷ ತಿಳಿಸಿದೆ. ಜ.17ರವರೆಗೂ ಸಂದೇಶ ರವಾನೆಗೆ ಅವಕಾಶ ಕಲ್ಪಿಸಲಾಗಿದೆ.

ಶುರುವಾಗಿದೆ 7 ಸಂಖ್ಯೆಯ “ಶುಭ ಲೆಕ್ಕಾಚಾರ’
ಉತ್ತರಪ್ರದೇಶದ ಚುನಾವಣೆ 7 ಹಂತಗಳಲ್ಲಿ ನಡೆಯಲಿದೆ. ಇದರೊಂದಿಗೆ ಅಲ್ಲಿ 7 ಸಂಖ್ಯೆಯ ಹೆಸರು ಹೇಳಿಕೊಂಡು, ಇದು ತಮಗೆ ಅದೃಷ್ಟ ತರುತ್ತದೆ ನಾವೇ ಗೆಲ್ಲುತ್ತೇವೆ ಎಂದು ಪರಸ್ಪರ ಬಿಂಬಿಸಿಕೊಳ್ಳುವ ಯತ್ನವೊಂದು ನಡೆದಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸೇ ಠ್, 7ನೇ ಸಂಖ್ಯೆ ಶುಭಸೂಚಕವಾಗಿದೆ. ಭಾರತೀಯರು ಸಪ್ತರ್ಷಿ ಮಂಡಲವನ್ನು ಗೌರವಿಸುತ್ತಾರೆ. ಹಾಗೆಯೇ ಕಾಮನಬಿಲ್ಲಿನಲ್ಲಿ 7 ಬಣ್ಣಗಳಿವೆ, ಸಂಗೀತದಲ್ಲಿ ಸಪ್ತಸ್ವರಗಳಿವೆ. 2017ರ ಉತ್ತರಪ್ರದೇಶ ಚುನಾವಣೆ, 2019ರ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ನಡೆದಿತ್ತು. ಇಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿತ್ತು ಎಂದು ಅವರು  ಟ್ವೀಟ್‌ ಮಾಡಿದ್ದಾರೆ. ಇದನ್ನು ಟೀಕಿಸಿರುವ ಕಾಂಗ್ರೆಸ್‌ ವಕ್ತಾರ ಅಶೋಕ್‌ ಸಿಂಗ್‌, ಬಿಜೆಪಿಯ ಸಪ್ತವರ್ಣಗಳ ಕನಸಿಗೆ (ಕಾಮನಬಿಲ್ಲು) ಬಲಿಬೀಳದಿರಲು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ಅವರು ಬಿಜೆಪಿಯನ್ನು ಸಪ್ತಸಾಗರದಾಚೆ ಎಸೆಯುವುದು ಖಚಿತ ಎಂದು ಅಣಕವಾಡಿದ್ದಾರೆ.

ಬಿಜೆಪಿಯ ದ್ವೇಷ ರಾಜಕೀಯವು ದೇಶಕ್ಕೆ ಅಪಾಯ. ದೇಶದಲ್ಲಿ ನಿರುದ್ಯೋಗ ತಾಂಡವವಾಡಲು ಕೂಡ ಈ ದ್ವೇಷ ರಾಜಕೀಯವೇ ಕಾರಣ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯು ಜೈಲಿನಲ್ಲಿರುವ ವ್ಯಕ್ತಿಯಿಂದ ಆರಂಭವಾಗಿ ಬೇಲ್‌ನಲ್ಲಿರುವ ವ್ಯಕ್ತಿಯಲ್ಲಿ ಕೊನೆಗೊಳ್ಳುತ್ತದೆ. ಗಲಭೆಕೋರರು ಎಸ್ಪಿಗೆ ಸೇರುತ್ತಾರೆ, ಗಲಭೆಕೋರರನ್ನು ಹಿಡಿದವರು ಬಿಜೆಪಿಗೆ ಸೇರುತ್ತಾರೆ.
– ಅನುರಾಗ್‌ ಠಾಕೂರ್‌, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next