Advertisement

ಪಾಕ್‌ ಕುತಂತ್ರ ಬಟಾಬಯಲು

01:36 AM Sep 10, 2019 | Team Udayavani |

ನವದೆಹಲಿ/ಜಿನಿವಾ: ಕಾಶ್ಮೀರದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯವು ತನ್ನ ನಿಲುವಿಗೇ ಬೆಂಬಲ ವ್ಯಕ್ತಪಡಿಸಬೇಕು ಎಂಬ ಉದ್ದೇಶದಿಂದ ಪಾಕಿಸ್ತಾನವು ಏನೆಲ್ಲಾ ಕುತಂತ್ರಗಳನ್ನು ನಡೆಸುತ್ತಿದೆ ಎನ್ನುವುದಕ್ಕೆ ವಿಡಿಯೋ ಸಾಕ್ಷ್ಯಗಳು ದೊರೆತಿವೆ.

Advertisement

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾದ ಮೂರು ವಿಡಿಯೋಗಳು ಸೋಮವಾರ ಬಹಿರಂಗವಾಗಿವೆ. ಜಮ್ಮು-ಕಾಶ್ಮೀರದಲ್ಲಿ ಭಾರತವು ಜನರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸುವ ಪಾಕಿಸ್ತಾನವೇ, ಪಿಒಕೆಯಲ್ಲಿನ ನಾಗರಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಈ ದೃಶ್ಯಾವಳಿಗಳಿಂದ ಸಾಬೀತಾಗಿದೆ.

ಒಂದು ವಿಡಿಯೋದಲ್ಲಿ, ಪಿಒಕೆ ಮೂಲದ ಧರ್ಮಗುರುವೊಬ್ಬರು, ಪಾಕಿಸ್ತಾನದ ಸೇನೆಯ ವಿರುದ್ಧ ವಾಗ್ಧಾಳಿ ನಡೆಸುವ ದೃಶ್ಯವಿದೆ. ಪಿಒಕೆಯಲ್ಲಿರುವ ಜನರನ್ನು ಭಾರತದ ಗಡಿ ನಿಯಂತ್ರಣ ರೇಖೆಯತ್ತ ಪ್ರತಿಭಟನಾ ಮೆರವಣಿಗೆ ನಡೆಸುವಂತೆ ಸೇನೆಯು ಒತ್ತಡ ಹೇರುತ್ತಿರುವುದಕ್ಕೆ ಧರ್ಮಗುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೂಂದು ವಿಡಿಯೋದಲ್ಲಿ, ಪಾಕ್‌ ಆಕ್ರಮಿತ ಕಾಶ್ಮೀರದ ಜನರನ್ನು ಗುರಾಣಿಯಾಗಿ ಬಳಸಿಕೊಳ್ಳುವ ಪಾಕ್‌ ಸೇನೆಯು ಅವರನ್ನು ಮುಂದಿಟ್ಟುಕೊಂಡು ಭಾರತದೊಳಕ್ಕೆ ಉಗ್ರರನ್ನು ನುಸುಳಿಸುತ್ತಿರುವುದು ಕಾಣಿಸುತ್ತದೆ. ಮೂರನೇ ವಿಡಿಯೋದಲ್ಲಿ, ಪಿಒಕೆಯ ಕೆಲ ನಾಗರಿಕರು ಎಲ್ಒಸಿ ದಾಟಿ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿರುವಾಗ, ಅವರ ಮೇಲೆ ಒಳನುಸುಳುವಿಕೆ ತಡೆಯಲು ಭಾರತದ ಸೇನೆಯು ಗುಂಡು ಹಾರಿಸುತ್ತಿರುವ ದೃಶ್ಯವಿದೆ.

8 ಲಷ್ಕರ್‌ ಉಗ್ರರ ಬಂಧನ: ವಿಶೇಷ ಸ್ಥಾನಮಾನ ವಾಪಸ್‌ ಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮಹತ್ವದ ಕಾರ್ಯಾಚರಣೆ ಎಂಬಂತೆ ಸೋಪೋರ್‌ ಜಿಲ್ಲೆಯಲ್ಲಿ ಪೊಲೀಸರು ಸೋಮವಾರ 8 ಮಂದಿ ಲಷ್ಕರ್‌ ಉಗ್ರರನ್ನು ಬಂಧಿಸಿದ್ದಾರೆ. ಈ ಉಗ್ರರು ಕಣಿವೆ ರಾಜ್ಯದ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟು ತೆರೆಯದಂತೆ ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, ವಾಣಿಜ್ಯ ಸಂಕೀರ್ಣಗಳು ಮುಚ್ಚಿಯೇ ಇರಬೇಕೆಂದು ಕರಪತ್ರಗಳನ್ನೂ ಹಂಚುತ್ತಿದ್ದರು. ಕಳೆದ ವಾರ ಮನೆಯೊಂದರ ಮೇಲೆ ನಡೆದ ದಾಳಿಯ ಹಿಂದೆ ಈ ಉಗ್ರರದ್ದೇ ಕೈವಾಡವಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಅಸ್ಸಾಂ ಬಗ್ಗೆಯೂ ಕಳವಳ
ಅಸ್ಸಾಂನಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಂತಿಮ ಪಟ್ಟಿಯಿಂದ 19 ಲಕ್ಷ ಜನರು ವಂಚಿತರಾಗಿರುವವರ ಬಗ್ಗೆಯೂ ಮಿಶೆಲ್ ಕಳವಳ ವ್ಯಕ್ತಪಡಿಸಿದರು. ಪಟ್ಟಿಯಲ್ಲಿ ಸ್ಥಾನಪಡೆಯದವರು ಎಂದಿಗೂ ನಿರಾಶ್ರಿತರಾಗಬಾರದು. ಅವರ ವಿರುದ್ಧ ಕ್ರಮ ಜರುಗಬಾರದು. ಕಾನೂನಾತ್ಮಕವಾಗಿ ಅವರು ಸಲ್ಲಿಸುವ ಮೇಲ್ಮನವಿಗಳ ವಿಚಾರಣೆಗಳು ಸರಾಗವಾಗಿ ನಡೆಯಬೇಕು ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಭಾರತ, ಎನ್‌ಆರ್‌ಸಿಯು ಭಾರತದ ಸುಪ್ರೀಂ ಕೋರ್ಟ್‌ನ ಆದೇಶದಂತೆ ಕ್ರಮಬದ್ಧವಾಗಿ, ಸಂವಿಧಾನಬದ್ಧವಾಗಿ ನಡೆದ ಪ್ರಕ್ರಿಯೆ. ಇದರಿಂದ ವಂಚಿತರಾದವರ ಮೇಲ್ಮನವಿಗಳು ಕಾನೂನಾತ್ಮಕವಾಗಿ ತಿರಸ್ಕಾರವಾಗುವವರೆಗೂ ಯಾರನ್ನೂ ಬಂಧಿಸುವುದಿಲ್ಲ. ಅವರು ಈವರೆಗಿದ್ದಂತೆ ಎಲ್ಲಾ ನಾಗರಿಕ
ಹಕ್ಕುಗಳಿಗೂ ಅರ್ಹರಾಗಿರುತ್ತಾರೆ” ಎಂದು ಹೇಳಿತು.

ಕಾಶ್ಮೀರಿಗರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ
”ಕಾಶ್ಮೀರಿಗರ ಹಕ್ಕುಗಳು ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗದಂತೆ ಭಾರತ ಮತ್ತು ಪಾಕಿಸ್ತಾನಗಳೆರಡೂ ಗಮನ ಹರಿಸಬೇಕು. ಕಣಿವೆ ರಾಜ್ಯದ ಮನದ ಭಾವನೆಗಳಿಗೆ ಬೆಲೆ ಕೊಡಬೇಕು” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥೆ ಮಿಶೆಲ್ ಬ್ಯಾಚೆಲೆಟ್ ಆಗ್ರಹಿಸಿದ್ದಾರೆ. ಮಾನವ ಹಕ್ಕುಗಳ ಪರಿಷತ್ತಿನ 42ನೇ ಮಹಾ ಸಮ್ಮೇಳನ ಸೋಮವಾರ ಆರಂಭಗೊಂಡಿತು. ಇಲ್ಲಿ ಮಾತನಾಡಿದ ಮಿಶೆಲ್, ”ವಿಶೇಷ ಸ್ಥಾನಮಾನ ರದ್ದು ನಂತರದ ಪರಿಸ್ಥಿತಿಗೆ ತಕ್ಕಂತೆ ನಮ್ಮ ಕಚೇರಿಗೆ ಅನೇಕ ವರದಿಗಳು ಬರುತ್ತಿವೆ. ಭಾರತ-ಪಾಕ್‌ ನಡುವಿನ ಎಲ್ಒಸಿ ಎರಡೂ ಕಡೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಹೇಳಲಾಗಿದೆ. ಕಾಶ್ಮೀರದ ರಾಜಕೀಯ ನಾಯಕ ರನ್ನು ಬಂಧಿಸಿರುವುದು, ಅಂತರ್ಜಾಲ ಸೌಲಭ್ಯರದ್ದುಗೊಳಿ ಸಿರುವಂಥ ವಿಚಾರಗಳು ಅಲ್ಲಿನ ಜನರ ಹಕ್ಕುಗಳನ್ನು ಕಸಿದು ಕೊಂಡಿರುವುದರ ಪ್ರತೀಕ ಎನಿಸುತ್ತಿದೆ” ಎಂದು ಬೇಸರಿಸಿ ದ್ದಾರೆ. ”ಭಾರತ ಸರ್ಕಾರ, ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲಿಸಿ, ಜನರಿಗೆ ಮೂಲಭೂತ ವಸ್ತುಗಳು ಲಭ್ಯವಾಗಿಸಬೇಕು” ಎಂದ ಅವರು, ”ಕಾಶ್ಮೀರದ ಜನ ತಮ್ಮ ಭವಿಷ್ಯಕ್ಕೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಎರಡೂ ರಾಷ್ಟ್ರಗಳು ನೀಡಬೇಕಿತ್ತು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next