ಇಸ್ಲಾಮಾಬಾದ್ : ಭಾರತದ ರಾಜಧಾನಿ ದಿಲ್ಲಿಯಲ್ಲಿನ ಪಾಕ್ ದೂತಾವಾಸದ ಸಿಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಸಮಾಲೋಚನೆ ನಡೆಸಲು ಇಸ್ಲಾಮಾಬಾದ್ ದಿಲ್ಲಿಯಲ್ಲಿನ ತನ್ನ ರಾಯಭಾರಿಯನ್ನು ಕರೆಸಿಕೊಂಡಿದೆ ಎಂದು ಪಾಕ್ ವಿದೇಶ ಕಾರ್ಯಾಲಯವನ್ನು ಉಲ್ಲೇಖೀಸಿ ವರದಿಗಳು ತಿಳಿಸಿವೆ.
ಪಾಕ್ ವಿದೇಶ ಕಾರ್ಯಾಲಯದ ಮೂಲಗಳಿಂದು ತಿಳಿದು ಬಂದಿರುವಂತೆ ದಿಲ್ಲಿಯಲ್ಲಿನ ಪಾಕ್ ಹೈಕಮಿಶನರ್ ಸೊಹೇಲ್ ಮಹಮೂದ್ ಅವರನ್ನು ಇಸ್ಲಾಮಾಬಾದ್ಗೆ ಕರೆಸಿಕೊಳ್ಳಲಾಗಿದೆ.
ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಅವರು ಇಸ್ಲಾಮಾಬಾದಿನಲ್ಲಿ ನಡೆಸಿದ ಸಾಪ್ತಾಹಿಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಹೊಸದಿಲ್ಲಿಯಲ್ಲಿನ ಪಾಕ್ ರಾಜತಂತ್ರಜ್ಞರಿಗೆ ಈಚೆಗೆ ಕಿರುಕುಳ ನೀಡಲಾದ ಘಟನೆಗಳ ಬಗ್ಗೆ ಸಮಾಲೋಚನೆ ನಡೆಸಲು ಪಾಕ್ ಸರಕಾರ ತನ್ನ ಹೈಕಮಿಶನರ್ ಅವರನ್ನು ಇಸ್ಲಾಮಾಬಾದ್ಗೆ ಕರೆಸಿಕೊಂಡಿದೆ ಎಂದು ವಕ್ತಾರ ಫೈಸಲ್ ತಿಳಿಸಿದರು.
ಭಾರತದಲ್ಲಿರುವ ಪಾಕ್ ರಾಜತಂತ್ರಜ್ಞರು ಮತ್ತು ಅವರ ಕುಟುಂಬದವರಿಗೆ ಭಾರತೀಯ ಸರಕಾರ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಪಾಕ್ ಸರಕಾರ ಈ ಬಗ್ಗೆ ಭಾರತೀಯ ಉಪ ಹೈಕಮಿಶನರ್ಗೆ ಮತ್ತು ವಿದೇಶ ಸಚಿವಾಲಯಕ್ಕೆ ಹಲವು ಬಾರಿ ಪ್ರತಿಭಟನೆ ಸಲ್ಲಿಸಿದ ಹೊರತಾಗಿಯೂ ಅದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಫೈಸಲ್ ಆರೋಪಿಸಿದರು.