Advertisement

ಬಲಾಡ್ಯ ಭಾರತದೆದುರು ಪಾಕ್‌ ಜೂನಿಯರ್

09:44 AM Nov 29, 2019 | sudhir |

ನುರ್‌ ಸುಲ್ತಾನ್‌ (ಕಜಾಕ್‌ಸ್ಥಾನ್‌): ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೂ ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಮುಖಾಮುಖೀಗೆ ಕಾಲ ಕೂಡಿ ಬಂದಿದೆ. ಶುಕ್ರವಾರ ಹಾಗೂ ಶನಿವಾರ ತಟಸ್ಥ ತಾಣವಾದ ಕಜಾಕ್‌ಸ್ಥಾನದ ನುರ್‌ ಸುಲ್ತಾನ್‌ನಲ್ಲಿ ಈ ಸೆಣಸಾಟ ಸಾಗಲಿದೆ.
ಅನುಭವದ ಮಾನದಂಡದ ಪ್ರಕಾರ ಭಾರತ ಅತ್ಯಂತ ಬಲಿಷ್ಠವಾದರೆ, ಪಾಕಿಸ್ಥಾನ ಜೂನಿಯರ್ ಆಟಗಾರರನ್ನೇ ಹೆಚ್ಚು ಅವಲಂಬಿಸಬೇಕಿದೆ. ಇಲ್ಲಿ ಗೆದ್ದವರು ಮುಂದಿನ ವರ್ಷ ಕ್ರೊವೇಶಿಯಾ ವಿರುದ್ಧ ವರ್ಲ್ಡ್ ಗ್ರೂಪ್‌ ಕ್ವಾಲಿಫೈಯರ್‌ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

Advertisement

ಮೂಲ ವೇಳಾಪಟ್ಟಿ ಪ್ರಕಾರ ಭಾರತ-ಪಾಕಿಸ್ಥಾನ ನಡುವಿನ ಈ ಪಂದ್ಯಾವಳಿ ಸೆಪ್ಟಂಬರ್‌ನಲ್ಲೇ ಇಸ್ಲಾಮಾ ಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಭದ್ರತೆ ಹಾಗೂ ಹದಗೆಟ್ಟ ರಾಜಕೀಯ ಕಾರಣಗಳಿಂದ ಭಾರತ ಇಲ್ಲಿ ಆಡಲು ನಿರಾಕರಿಸಿತು. ಅಂತಿಮವಾಗಿ ಪಾಕ್‌ ವಿರೋಧದ ನಡುವೆಯೂ ಇದನ್ನು ತಟಸ್ಥ ತಾಣದಲ್ಲಿ ಆಡಲು ನಿರ್ಧರಿಸಲಾಯಿತು.

ಭಾರತ ಸಂತುಲಿತ ತಂಡ
ಭಾರತ ಅನುಭವಿ ಹಾಗೂ ಯುವ ಆಟಗಾರರ ನ್ನೊಳಗೊಂಡ ಸಂತುಲಿತ ತಂಡ. ಹಿರಿಯಣ್ಣ ಲಿಯಾಂಡರ್‌ ಪೇಸ್‌ ಜತೆಗೆ ಸುಮಿತ್‌ ನಾಗಲ್‌, ರಾಮ್‌ಕುಮಾರ್‌ ರಾಮನಾಥನ್‌ ಅವರಂಥ ಪ್ರತಿಭಾನ್ವಿ ತರಿದ್ದಾರೆ. ಆದರೆ ಪಾಕಿಸ್ಥಾನ ಅಗ್ರ ಆಟಗಾರರಾದ ಐಸಮ್‌ ಉಲ್‌ ಹಕ್‌ ಖುರೇಶಿ, ಅಖೀಲ್‌ ಖಾನ್‌ ಗೈರಲ್ಲಿ ಕಣಕ್ಕಿಳಿಯುತ್ತಿದೆ. ಪಂದ್ಯಾವಳಿಯನ್ನು ಸ್ಥಳಾಂತರಿಸಿದ ಕಾರಣ ಇವರೆಲ್ಲ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇಲ್ಲವಾದರೆ ಕನಿಷ್ಠ ಡಬಲ್ಸ್‌ ಮುಖಾಮುಖೀಯಾದರೂ ಫೈಟ್‌ ಕಾಣುತ್ತಿತ್ತೋ ಏನೋ!

ಭಾರತದ ಆಟಗಾರರಿಗೆ ಧಾರಾಳ ಗ್ರ್ಯಾನ್‌ಸ್ಲಾಮ್‌ ಅನುಭವವಿದ್ದರೆ, ಪಾಕ್‌ ಟೆನಿಸಿಗರು ಇನ್ನೂ ಐಟಿಎಫ್ ಫ್ಯೂಚರ್ ಹಂತದಲ್ಲೇ ಇದ್ದಾರೆ. ಹೀಗಾಗಿ ಪಾಕ್‌ ಆಟಗಾರರ ಪಾಲಿಗೆ ಈ ಸ್ಪರ್ಧೆ ಕಲಿಕೆಗೆ ಮಾತ್ರ ಅಂದರೂ ತಪ್ಪಿಲ್ಲ.

ಡಬಲ್ಸ್‌ನಲ್ಲಿ ಲಿಯಾಂಡರ್‌ ಅವರೊಂದಿಗೆ ಜೀವನ್‌ ನೆಡುಂಚೆಜಿಯನ್‌ ಕಣಕ್ಕಿಳಿಯಲಿದ್ದಾರೆ. ಚೆನ್ನೈನ ಈ ಎಡಗೈ ಟೆನಿಸಿಗ ಡೇವಿಸ್‌ ಕಪ್‌ ಆಡುತ್ತಿರುವ ಭಾರತದ 75ನೇ ಆಟಗಾರನಾಗಲಿದ್ದಾರೆ.

Advertisement

ಜಯದ ನಿರೀಕ್ಷೆಯಲ್ಲಿ ಸುಮಿತ್‌
ಸಿಂಗಲ್ಸ್‌ನಲ್ಲಿ ಸೆಣಸಲಿರುವ ಸುಮಿತ್‌ ನಾಗಲ್‌ ಮೊದಲ ಡೇವಿಸ್‌ ಕಪ್‌ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ಸ್ಪೇನ್‌ (2016) ಮತ್ತು ಚೀನ (2018) ಎದುರಿನ ಸ್ಪರ್ಧೆಯಲ್ಲಿ ಸೋಲನುಭವಿಸಿದ್ದರು. ನಾಗಲ್‌ ಶುಕ್ರವಾರದ ದ್ವಿತೀಯ ಸಿಂಗಲ್ಸ್‌ನಲ್ಲಿ ಹುಜೈಫ‌ ಅಬ್ದುಲ್‌ ರೆಹಮಾನ್‌ ಅವರನ್ನು ಎದುರಿಸುವರು.

ಮತ್ತೋರ್ವ ಸಿಂಗಲ್ಸ್‌ ಆಟಗಾರ ರಾಮಕುಮಾರ್‌ ರಾಮನಾಥನ್‌ ಡೇವಿಸ್‌ ಕಪ್‌ನಲ್ಲಿ 7-7 ದಾಖಲೆ ಹೊಂದಿದ್ದಾರೆ. ಶುಕ್ರವಾರದ ಮೊದಲ ಪಂದ್ಯದಲ್ಲಿ ಇವರು ಮೊಹಮ್ಮದ್‌ ಶೋಯಿಬ್‌ ವಿರುದ್ಧ ಆಡಲಿದ್ದಾರೆ. 17ರ ಹರೆಯದ ಶೋಯಿಬ್‌ 2019ರ ಋತುವಿನಲ್ಲಿ ಒಂದೂ ಪಂದ್ಯವನ್ನಾಡಿಲ್ಲ.

ಪಾಕ್‌ ಯುವ ಆಟಗಾರರ ತಂಡ. ಅವರು ಬಲಿಷ್ಠ ಭಾರತದ ವಿರುದ್ಧ ಆಡಲಿದ್ದಾರೆ. ಹೀಗಾಗಿ ಕಳೆದುಕೊಳ್ಳುವಂಥದ್ದೇನೂ ಇಲ್ಲ. ಕೊನೆಯ ಕ್ಷಣದ ತನಕ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಪಾಕಿಸ್ಥಾನವನ್ನು ವೈಟ್‌ವಾಶ್‌ ಮಾಡುವುದೇ ನಮ್ಮ ಗುರಿ.
– ರೋಹಿತ್‌ ರಾಜ್‌ಪಾಲ್‌, ಭಾರತ ತಂಡದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next