Advertisement

ಪಿಒಕೆ ಕಬಳಿಸಲು ಪಾಕ್‌ನೊಂದಿಗೆ ಕೈಜೋಡಿಸಿದ ಚೀನ

11:39 PM Jun 23, 2022 | Team Udayavani |

ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿಯತ್ತ ಮುಖ ಮಾಡಿರುವ ಪಾಕಿಸ್ಥಾನ ಇದೀಗ ತನ್ನನ್ನು ಪಾರು ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಪಾಕಿಸ್ಥಾನದ ಪಾಲಿಗೆ ಪರಮಾಪ್ತ ರಾಷ್ಟ್ರವಾಗಿರುವ ಚೀನ ಭರಪೂರ ಪ್ರಮಾಣದಲ್ಲಿ ಹಣಕಾಸು ನೆರವನ್ನು ನೀಡುತ್ತಿದ್ದರೂ ತೀವ್ರ ಸಂಕಷ್ಟದಿಂದ ನರಳುತ್ತಿರುವ ಪಾಕಿಸ್ಥಾನದ ಪಾಲಿಗೆ “ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಎಂಬಂತಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಚೀನದಿಂದ ಮತ್ತಷ್ಟು ಹಣಕಾಸು ನೆರವನ್ನು ಪಡೆ ಯುವ ಉದ್ದೇಶದಿಂದ ಪಾಕಿಸ್ಥಾನ, ಪಾಕ್‌ ಆಕ್ರಮಿತ ಪ್ರದೇಶದ ಭಾಗವಾದ ಗಿಲ್ಗಿಟ್- ಬಾಲ್ಟಿಸ್ಥಾನ್‌ ಅನ್ನು ಲೀಸ್‌ ಆಧಾರದಲ್ಲಿ ಚೀನಕ್ಕೆ ಹಸ್ತಾಂತರಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಕಾರಕೋರಂ ನ್ಯಾಶನಲ್‌ ಮೂವ್‌ಮೆಂಟ್‌ನ ಅಧ್ಯಕ್ಷ ಮುಮ್ತಾಜ್‌ ನಗ್ರಿ ಗಂಭೀರ ಆರೋಪ ಮಾಡಿದ್ದಾರೆ. ಒಂದು ವೇಳೆ ಪಾಕಿಸ್ಥಾನ ಸರಕಾರ ಇಂಥ ನಿರ್ಧಾರವನ್ನು ಕೈಗೊಂಡದ್ದೇ ಆದಲ್ಲಿ ಈಗಾಗಲೇ ಪ್ರತ್ಯೇಕತಾವಾದ ಮತ್ತು ಪಾಕಿಸ್ಥಾನ ಸರಕಾರದ ತೀವ್ರ ನಿರ್ಲಕ್ಷ್ಯದಿಂದಾಗಿ ಕನಿಷ್ಠ ಮೂಲ ಸೌಲಭ್ಯ ಗಳಿಂದ ವಂಚಿತವಾಗಿರುವ ಈ ಪ್ರದೇಶ ಸದ್ಯೋಭವಿಷ್ಯದಲ್ಲಿ ಯುದ್ಧ ಭೂಮಿಯಾಗಿ ಮಾರ್ಪಡುವ ಎಲ್ಲ ಸಾಧ್ಯತೆಗಳಿವೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಚೀನ-ಪಾಕಿಸ್ಥಾನ ನಡುವಣ ಆರ್ಥಿಕ ಕಾರಿಡಾರ್‌ ಒಪ್ಪಂದದ ಭಾಗವಾಗಿ ಚೀನ, ಪಿಒಕೆಯ ಭಾಗವಾಗಿರುವ ಗಿಲ್ಗಿಟ್- ಬಾಲ್ಟಿಸ್ಥಾನ್‌ ಭಾಗದಲ್ಲಿ ಬಂಡವಾಳ ಹೂಡಿ ತನಗೆ ಅಗತ್ಯವಿರುವೆಡೆ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಈ ಮೂಲಕ ಚೀನ ಮತ್ತು ಪಾಕಿಸ್ಥಾನ ಜಂಟಿಯಾಗಿ ಭಾರತದ ವಿರುದ್ಧ ಷಡ್ಯಂತ್ರ ಹೂಡಿದ್ದು, ಈ ಬೆಳವಣಿಗೆಯ ಮುಂದುವರಿದ ಭಾಗವೇ ಗಿಲ್ಗಿಟ್-ಬಾಲ್ಟಿಸ್ಥಾನವನ್ನು ಚೀನದ ವಶಕ್ಕೆ ಒಪ್ಪಿಸುವುದಾಗಿದೆ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ.

ಆರ್ಥಿಕ ಸಂಕಷ್ಟದಿಂದ ಪಾರಾಗಲು ಪಾಕಿಸ್ಥಾನ ಸರಕಾರ ಚೀನದ ಮುಂದೆ ಈ ಪ್ರಸ್ತಾವ ಇಟ್ಟಿದೆ ಎನ್ನಲಾಗುತ್ತಿದೆಯಾದರೂ ಪಾಕಿಸ್ಥಾನ ಸರಕಾರ ಮಾತ್ರ ಈ ವರದಿ ನಿರಾಕರಿಸಿದೆ. ಆದರೂ ಪಾಕ್‌ ಮತ್ತು ಚೀನ ಜಂಟಿ ಷಡ್ಯಂತ್ರ ಹೂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಆದರೆ ಪಾಕಿಸ್ಥಾನದ ಯಾವುದೇ ಹೇಳಿಕೆಗಳನ್ನು ಭಾರತ ಸಹಿತ ವಿಶ್ವ ಸಮುದಾಯ ನಂಬುವ ಸ್ಥಿತಿಯಲ್ಲಿ ಇಲ್ಲ. ಭಯೋತ್ಪಾದಕರಿಗೆ ಆಶ್ರಯ, ಹಣಕಾಸು ನೆರವು ಮತ್ತಿತರ ವಿಚಾರದಲ್ಲಿ ಪಾಕಿಸ್ಥಾನ ದಶಕಗಳಿಂದ ತನ್ನ ಗೋಸುಂಬೆತನವನ್ನು ಪ್ರದರ್ಶಿಸುತ್ತ ಬಂದಿರುವುದರಿಂದ ಈ ಸ್ಪಷ್ಟನೆಯ ಕುರಿತಂತೆಯೂ ಸಹಜವಾಗಿಯೇ ಅನುಮಾನ ವ್ಯಕ್ತವಾಗಿದೆ.

ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿ­ರುವ ಮತ್ತು ವಿಸ್ತರಣಾವಾದದ ಗುಂಗಿನಲ್ಲಿರುವ ಚೀನದ ಪಾಲಿಗೆ ಪಾಕಿಸ್ಥಾನದ ಈ ಪ್ರಸ್ತಾವ ಬಲುದೊಡ್ಡ ವರದಾನವಾಗಿ ಪರಿಣಮಿಸಲಿದೆ. ಆದರೆ ಪಾಕ್‌ ಆಕ್ರ ಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು ಸದ್ಯ ಪಾಕ್‌ನ ವಶದಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಪಾಕಿಸ್ಥಾನದ ಈ ಪ್ರಸ್ತಾವ ಘನಘೋರ ಪ್ರಮಾದ ವಾಗಲಿದೆಯಲ್ಲದೆ ತಕ್ಕ ಶಾಸ್ತಿ ಅನುಭವಿಸಲಿದೆ.

Advertisement

ಲೀಸ್‌ ಪ್ರಸ್ತಾವನೆ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಗಡಿಭಾಗದಲ್ಲಿ ಚೀನ ಮತ್ತೆ ತಕರಾರು ಆರಂಭಿಸುವ ಸಾಧ್ಯತೆ ಇದೆಯಲ್ಲದೆ ವಾಣಿಜ್ಯ-ವ್ಯವಹಾರ ಕ್ಷೇತ್ರಗಳಲ್ಲೂ ಭಾರೀ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಪಾಕ್‌ಗೆ ಇಂಥ ಪ್ರಯತ್ನಕ್ಕೆ ಕೈಹಾಕದಂತೆ ಎಚ್ಚರಿಕೆ ನೀಡುವ ಜತೆಗೆ ಇವರಿಬ್ಬರ ಷಡ್ಯಂತ್ರದ ಕುರಿತಂತೆ ಜಾಗತಿಕ ಸಮುದಾಯದ ಗಮನ ಸೆಳೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next