Advertisement

ಚಿತ್ರಕಲಾ ಚತುರೆ

09:38 AM Jan 23, 2020 | mahesh |

ಗಣಿತ ಶಿಕ್ಷಕಿ ಮೇಧಾ, ರಾಗಬದ್ಧವಾಗಿ ಗಣಪತಿಯ ಭಜನೆಯಲ್ಲಿ ತನ್ಮಯರಾಗಿದ್ದರೆ, ಅವರ ಮುಂದೆ ಬಿಳಿಯ ಕ್ಯಾನ್ವಾಸ್‌ ಮೇಲೆ ಕಪ್ಪು ಶಾಯಿಯ ಜೆಲ್‌ ಪೆನ್‌ ಹಿಡಿದು ಸರಸರನೆ ಗಣಪತಿಯ ಚಿತ್ರ ಬಿಡಿಸುತ್ತಿದ್ದಾಳೆ ಅದಿತಿ ಸುಧಾಕರ್‌. ಗಾಯಕಿಯ ಹಾಡು ಇನ್ನೂ ಮುಗಿದಿಲ್ಲ. ಆದರೆ, ಎರಡೂವರೆ ನಿಮಿಷಗಳಲ್ಲಿ ಗಣೇಶನ ಐದಾರು ಭಾವಭಂಗಿಯ ಚಿತ್ರಗಳನ್ನು ಬಿಡಿಸಿ ಅದಿತಿ, ಪೆನ್‌ ಕೆಳಗಿಟ್ಟಾಗಿದೆ…ಇದು, ಕಲಾವಿದೆ ಅದಿತಿಯ ಕೈಚಳಕಕ್ಕೊಂದು ಉದಾಹರಣೆ.

Advertisement

ಝೆಂಟ್‌ ಆ್ಯಂಗಲ್‌ ಕಲಾವಿದೆ
ಅಪರೂಪ ಎನಿಸಿದ “ಝೆಂಟ್‌ ಆ್ಯಂಗಲ್‌’ (ಅಮೆರಿಕ ಮೂಲದ ಚಿತ್ರಕಲಾ ವಿಧಾನ) ಚಿತ್ರಕಲೆಯ ಮೂಲಕ ಗಮನ ಸೆಳೆಯುತ್ತಿರುವ ಅದಿತಿ ಸುಧಾಕರ್‌, ಪುತ್ತೂರಿನ ಅಂಬಿಕಾ ವಿದ್ಯಾಲಯದ ಮೊದಲ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ. ತಂದೆ ಸುಧಾಕರ ಅಲೆವೂರಾಯ, ನಗರ ಪಂಚಾಯತಿಯಲ್ಲಿ ಅಧಿಕಾರಿ. ತಾಯಿ ಪೂರ್ಣಿಮಾ ಗೃಹಿಣಿ. ಕುಟುಂಬದಲ್ಲಿ ಕಲಾ ಸಾಧನೆಗೈದವರು ಯಾರೂ ಇಲ್ಲ. ಆದರೆ, ಅದಿತಿ ಈ ವಿಶಿಷ್ಟ ಕಲೆಯನ್ನು ಸ್ವಪ್ರಯತ್ನದಿಂದ ಕಲಿತಿದ್ದಾಳೆ. ಆರೇ ತಿಂಗಳಲ್ಲಿ ಈ ಕಲೆಯನ್ನು ಕರಗತ ಮಾಡಿಕೊಂಡು, ನಿಮಿಷಗಳೊಳಗೆ ಸುಂದರ ಕಲಾಕೃತಿಯನ್ನು ರಚಿಸುವ ನೈಪುಣ್ಯ ಸಂಪಾದಿಸಿರುವ ಅದಿತಿಯದ್ದು ಬಹುಮುಖ ಪ್ರತಿಭೆ.

ಮದರಂಗಿಯಿಂದ ಚಿತ್ರಕಲೆಗೆ…
ಮದುವೆಯಂಥ ಶುಭ ಸಮಾರಂಭಗಳಲ್ಲಿ ಕೈಗೆ ಮೆಹಂದಿ ಹಾಕುವ ಆಸಕ್ತಿಯಿದ್ದ ಅದಿತಿ, ನಿಧಾನವಾಗಿ ಚಿತ್ರಕಲೆಯತ್ತ ಆಕರ್ಷಿತಳಾದಳು. ಕಲೆಯಲ್ಲಿ ತಾನೂ ಏನಾದರೂ ಹೊಸದನ್ನು ಸಾಧಿಸಬೇಕೆಂಬ ಆಕಾಂಕ್ಷೆಯೇ “ಝೆಂಟ್‌ ಆ್ಯಂಗಲ್‌’ ಕಲೆಗೆ ಪ್ರೇರಣೆ. ಕಪ್ಪು ಶಾಯಿಯ ಜೆಲ್‌ ಪೆನ್‌ ಬಳಸಿ, ವೈವಿಧ್ಯಮಯ ಚಿತ್ರಗಳನ್ನು ರಚಿಸಿದ್ದಾಳೆ ಅದಿತಿ. ಗಣಪತಿಯಂಥ ದೇವರ ಚಿತ್ರಗಳನ್ನು ಬಿಡಿಸಲು ತನಗೆ ಇಷ್ಟ ಎನ್ನುವ ಈಕೆ, ಧರ್ಮಸ್ಥಳ ದೇವಾಲಯವನ್ನು ಯಥಾವತ್ತಾಗಿ ಚಿತ್ರವಾಗಿ ರೂಪಿಸಬಲ್ಲಳು. ಬಣ್ಣದಲ್ಲಿ ಅದ್ದಿದ ದಾರಗಳಿಂದ ಕಾಳಿಂಗ ಮರ್ದನ ಕೃಷ್ಣನ ಚಿತ್ರವನ್ನು, ಫೀಡ್‌ ಚಿತ್ರಕಲೆಯಿಂದ ದಶಾವತಾರದ ಚಿತ್ರಗಳನ್ನು ಬಿಡಿಸಿದ್ದಾಳೆ. ಅಷ್ಟೇ ಅಲ್ಲ, ಮಧುಬನಿ ಮತ್ತು ಕಲಂಕಾರಿ ಚಿತ್ರಕಲೆಯಲ್ಲೂ ಈಕೆ ಪರಿಣಿತೆ.

ಆರು ತಿಂಗಳಾಗಿದೆ
ಅದಿತಿ, ಚಿತ್ರಕಲೆಯಲ್ಲಿ ತೊಡಗಿಸಿಕೊಂಡು ಇನ್ನೂ ಆರು ತಿಂಗಳಾಗಿವೆ ಅಷ್ಟೆ. ಆದರೆ, ಈಕೆ ಬರೆದ ಚಿತ್ರಗಳು ಬೆಂಗಳೂರಿನ ಚಿತ್ರಸಂತೆಯಲ್ಲಿ ಪ್ರದರ್ಶನವಾಗಿರುವುದಲ್ಲದೆ, ಆರು ಚಿತ್ರಗಳು ಮಾರಾಟ ಕೂಡಾ ಆಗಿವೆ. ತಾನು ಕಲಿಯುವ ಅಂಬಿಕಾ ವಿದ್ಯಾಲಯ ಸೇರಿದಂತೆ, ಉಡುಪಿಯ ತುಳು ಶಿವಳ್ಳಿ ವಿಶ್ವ ಸಮ್ಮೇಳನ, ಉಜಿರೆ ಮತ್ತು ಪುತ್ತೂರಿನ ಸೌಗಂಧಿಕಾ ಮಹಿಳಾ ಸಮಾವೇಶ, ದೀಪಾವಳಿ ಸಂಭ್ರಮಗಳಲ್ಲಿ ಈಕೆಯ ಚಿತ್ರಗಳ ಪ್ರದರ್ಶನ ಕಂಡಿವೆ. ಕೆಲವು ಶಾಲೆಗಳಲ್ಲಿ ಚಿತ್ರಕಲೆಯ ಪ್ರಾತ್ಯಕ್ಷಿಕೆ ನೀಡಿದ್ದಾಳೆ. ಮುಂದೆ, ನೌಕರಿಗೆ ಸೇರಿಕೊಂಡರೂ ಚಿತ್ರಕಲೆಗೆ ಆದ್ಯತೆ ನೀಡುವುದು ಅದಿತಿಯ ಹೆಬ್ಬಯಕೆ.

ಸಕಲ ಕಲಾ ಚತುರೆ
ಒಂದನೆಯ ತರಗತಿಯಿಂದಲೇ ಭರತನಾಟ್ಯ ಕಲಿಯಲು ಆರಂಭಿಸಿದ ಅದಿತಿ, ಕಥಕ್‌ ನೃತ್ಯದಲ್ಲೂ ಪರಿಣತಿ ಗಳಿಸಿದ್ದಾಳೆ. ಇಂಟರ್‌ನೆಟ್‌ನಲ್ಲಿ ನೋಡುತ್ತಲೇ ರಾಜಸ್ಥಾನದ ಭವಾಯಿ ನೃತ್ಯದಲ್ಲಿಯೂ ಕೌಶಲ ಪಡೆದಿರುವುದು ವಿಶೇಷ. ತಲೆಯ ಮೇಲೆ ಕಲಶಗಳನ್ನು ಇರಿಸಿ, ಮೇಲೆ ಉರಿಯುವ ಬೆಂಕಿಯ ಜೊತೆಗೆ ಚಾಕಚಕ್ಯತೆಯಿಂದ ನೃತ್ಯ ಮಾಡಬಲ್ಲಳು ಅದಿತಿ.

Advertisement

-ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next