Advertisement

ಪಡುಕುದ್ರು: ದಶಕಗಳಿಂದ ಈಡೇರದ ಸಂಪರ್ಕ ಸೇತುವೆ

12:19 AM Dec 10, 2019 | Team Udayavani |

ಹೆಮ್ಮಾಡಿ: ಕಟ್ ಬೆಲ್ತೂರು ಗ್ರಾಮದ ಸುಳ್ಸೆಸಮೀಪ ಪಡುಕುದ್ರು ಎನ್ನುವ ಕುದ್ರು ಇದೆ. ಇಲ್ಲಿರುವುದು ಎರಡೇ ಮನೆಗಳಾದರೂ ಒಂದು ಮನೆಯಲ್ಲಿ 50 ಮಂದಿ ಹಾಗೂ ಮತ್ತೂಂದು ಮನೆ ಯಲ್ಲಿ 15 ಮಂದಿ ಒಟ್ಟು ಸೇರಿ 65 ಜನರಿದ್ದಾರೆ. ಹಲವು ದಶಕಗಳಿಂದ ಇಲ್ಲಿನ ಜನ ಕುದ್ರುವಿನಿಂದ ಸಂಪರ್ಕ ಸೇತುವೆಗೆ ಬೇಡಿಕೆಯಿಟ್ಟರೂ ಇನ್ನೂ ಆ ಕನಸು ಮಾತ್ರ ಈಡೇರಿಲ್ಲ.

Advertisement

ಪಡುಕುದ್ರುವಿನಲ್ಲಿ ನಂದಿ ದೇವಾಡಿಗ ಹಾಗೂ ಗೋಪಾಲ್‌ ಬಿ.ಕೆ. ಎಂಬುವರ ಎರಡು ಮನೆಗಳಿವೆ. ಇಲ್ಲಿನ ಎರಡು ಮನೆಗಳಲ್ಲೂ ಕೂಡು ಕುಟುಂಬ ವಿರುವುದು. ಇವರು ಪೇಟೆ ಅಥವಾ ಕುದ್ರುವಿನಿಂದ ಆಚೆ ಬರಬೇಕಾದರೆ ನದಿ ದಾಟಿಯೇ ಈಚೆ ಬರಬೇಕು. ಸೇತುವೆಯಿಲ್ಲದ ಕಾರಣ ದೋಣಿಯೇ ಆಸರೆಯಾಗಿದೆ.

20 ಎಕರೆ ವಿಸ್ತೀರ್ಣ
ಈ ಪಡುಕುದ್ರು ಅಂದಾಜು 20 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದೆ. ಹಿಂದೆ ಇದಕ್ಕೂ ಹೆಚ್ಚು ವಿಸ್ತೀರ್ಣವಿದ್ದು, ಆದರೆ ನದಿಯ ನೀರಿನ ಸವಕಳಿಗೆ ಕುದ್ರು ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತ ಬರುತ್ತಿದೆ. ಇದರಲ್ಲಿ 15 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ಭತ್ತ, ತೆಂಗು ಕೃಷಿಯನ್ನು ಮಾಡುತ್ತಾರೆ.

ಹಲವು ವರ್ಷಗಳ ಬೇಡಿಕೆ
ಇಲ್ಲಿಗೆ ಸೇತುವೆ ಸಂಪರ್ಕ ಕಲ್ಪಿಸುವ ಸಲುವಾಗಿ ಇಲ್ಲಿನ ಜನ ಹಲವು ವರ್ಷಗಳಿಂದ ಬೇಡಿಕೆಯಿಡುತ್ತಲೇ ಇದ್ದಾರೆ. ಪ್ರತಿ ಸಲ ಎಲ್ಲ ಚುನಾವಣೆ ಬಂದಾಗಲೂ ಜನಪ್ರತಿನಿಧಿಗಳು ಸೇತುವೆ ಮಾಡಿಕೊಡುವ ಭರವಸೆ ಕೊಡುತ್ತಾರೆ. ಆದರೆ ಅದು ಈ ವರೆಗೆ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಅಕ್ಕಮ್ಮ (90) ಹಾಗೂ ಸುಬ್ಬಿ (84) ಎನ್ನುವ ಹಿರಿಯರಿಬ್ಬರು ಹಲವು ವರ್ಷಗಳಿಂದ ಸೇತುವೆಗಾಗಿ ಹೋರಾಟ ನಡೆಸಿ, ಕೆಲವು ವರ್ಷಗಳ ಹಿಂದೆ ಕಾಲವಾದರು. ಆದರೆ ಸೇತುವೆ ಕನಸು ಮಾತ್ರ ನನಸಾಗಿಲ್ಲ.

ಕಟಾವಿಗೂ ಸಮಸ್ಯೆ
ಇಲ್ಲಿನ 20 ಎಕರೆಯ ಪೈಕಿ ಸುಮಾರು 15 ಎಕರೆಯಷ್ಟು ಪ್ರದೇಶದಲ್ಲಿ ಕೃಷಿ ಮಾಡುತ್ತಾರೆ. ಅದರಲ್ಲಿ ಹೆಚ್ಚಿನ ಭಾಗ ಗದ್ದೆಯಿದ್ದು, ಭತ್ತದ ಕೃಷಿ ಮಾಡಿದರೂ, ಕಟಾವಿಗೆ ಯಂತ್ರ ಬರಲು ನದಿಯ ನೀರಿನ ಮಟ್ಟ ಇಳಿಕೆಯಾಗುವವರೆಗೆ ಕಾಯಬೇಕು. ಇನ್ನು ಬೆಳೆದ ಭತ್ತವನ್ನು ಪೇಟೆಗೆ ದೋಣಿ ಮೂಲಕವೇ ಕೊಂಡು ಹೋಗಬೇಕಾಗಿದೆ. ಯಳೂರು- ತೋಪು ವಿನಲ್ಲಿರುವ ಡ್ಯಾಂನಿಂದಾಗಿ ಈಗ ಇಲ್ಲಿ ಎರಡು ಬೆಳೆ ಬೆಳೆಯುವುದು ಕಷ್ಟ. ಇದಲ್ಲದೆ ಮಾರ್ಚ್‌ ಅನಂತರ ನೀರಿನ ಸಮಸ್ಯೆ ಕೂಡ ಎದುರಾಗುತ್ತದೆ.

Advertisement

10 ವಿದ್ಯಾರ್ಥಿಗಳು
ಈ ಕುದ್ರುವಿನಿಂದ ಪ್ರತಿ ನಿತ್ಯ ಶಾಲಾ – ಕಾಲೇಜಿಗೆ ಹೋಗುವ 10 ಮಕ್ಕಳಿದ್ದು, ಅವರು ದೋಣಿಯಲ್ಲಿಯೇ ಬಂದು ಹೋಗಬೇಕು. ಬೇಸಗೆ ಕಾಲದಲ್ಲಾದರೂ ಪರಾÌಗಿಲ್ಲ. ಆದರೆ ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವುದರಿಂದ ಕೆಲವೊಮ್ಮೆ ದೋಣಿ ಮೂಲಕವೂ ಸಂಚರಿಸುವುದು ಕಷ್ಟ. ಇನ್ನು ಇಲ್ಲಿಂದ ಶಿಕ್ಷಕಿಯೊಬ್ಬರು ಪ್ರತಿ ದಿನ ಸುಳೆÕ ಶಾಲೆಗೆ ಹೋಗಿ ಬರುತ್ತಿದ್ದಾರೆ. ಇದಲ್ಲದೆ ಅನೇಕ ಮಂದಿ ಹೋಟೆಲ್‌ ಮತ್ತಿತರೆಡೆಗಳಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆಲ್ಲ ಈ ದೋಣಿಯೊಂದೇ ಆಧಾರವಾಗಿದೆ.

ಈ ಸಲವಾದರೂ ಮಾಡಿಕೊಡಲಿ
ಹಲವು ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ಕೊಡುತ್ತಲೇ ಇದ್ದೇವೆ. ಈ ಸಲ ವಾದರೂ ಮಾಡಿಕೊಡಲಿ. ಇಲ್ಲಿರುವ ಎರಡು ಮನೆಗಳಿಗೆ 2 ಸ್ವಂತದ ದೋಣಿ ಗಳಿವೆ. ಅದು ಕೂಡ ಈಗ ತೂತಾಗುತ್ತಿದ್ದು, ಅಪಾಯಕಾರಿಯಾಗಿದೆ. ಪಂ. ನಿಂದ ಕನಿಷ್ಠ ದೋಣಿಗಳನ್ನಾದರೂ ನೀಡಲಿ. ಯಾರಿ ಗಾದರೂ ಅನಾರೋಗ್ಯ ಉಂಟಾದರೂ ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ.
– ಗೋಪಾಲ್‌ ಬಿ.ಕೆ., ಪಡುಕುದ್ರು

ಎಲ್ಲದಕ್ಕೂ ಸಮಸ್ಯೆ
ನಾವು ಏನೇ ಬೇಕಾದರೂ ನದಿ ದಾಟಿ ಪೇಟೆಗೆ ಬರಬೇಕು. ಸೇತುವೆಯಿಲ್ಲದ ಕಾರಣ ಎಲ್ಲದಕ್ಕೂ ಸಮಸ್ಯೆಯಾಗುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರಿಗೆಲ್ಲ ಕಷ್ಟ. ಭತ್ತ ಅಂಗಡಿಗೆ ಕೊಂಡು ಹೋಗಬೇಕಾದರೂ ದೋಣಿಯಲ್ಲಿಯೇ ಹೋಗಬೇಕು. ಈ ಬಗ್ಗೆ ಈಗಿನ ಹಾಗೂ ಹಿಂದಿನ ಶಾಸಕರಿಗೆಲ್ಲ ಮನವಿ ಮಾಡಿದ್ದೇವು. ಜಿ.ಪಂ., ಗ್ರಾ.ಪಂ. ಸದಸ್ಯರಿಗೂ ಮನವಿ ಸಲ್ಲಿಸಿದ್ದೇವೆ.
– ರಮೇಶ್‌ ದೇವಾಡಿಗ,
ಪಡುಕುದ್ರು ನಿವಾಸಿ

ಖಂಡಿತ ಮಾಡ್ತೇನೆ
ಈಗಾಗಲೇ ಕ್ಷೇತ್ರದ ಅನೇಕ ಕಡೆಗಳ ರಸ್ತೆ, ಸೇತುವೆ ಬೇಡಿಕೆಗಳಿಗೆ ಅನುದಾನ ಮಂಜೂರುಗೊಳಿಸಲಾಗಿದೆ. ಸುಳೆÕಯ ಪಡುಕುದ್ರುವಿನ ಜನರ ಸೇತುವೆಯಿಲ್ಲದೆ ಅನುಭವಿಸುತ್ತಿರುವ ಸಮಸ್ಯೆ ಕುರಿತು ಅರಿವಿದ್ದು, ಖಂಡಿತ ಸೇತುವೆ ನಿರ್ಮಾಣ ಬಗ್ಗೆ ಗಮನಹರಿಸಲಾಗುವುದು.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next