Advertisement

ಪಡುಬೆಳ್ಳೆ: ಸೇತುವೆಯ ಸಂಚಾರ ಸಾಮರ್ಥ್ಯ ತಪಾಸಣೆ

09:37 PM Dec 15, 2019 | Team Udayavani |

ಶಿರ್ವ: ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಪಾಪನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸುಮಾರು 39 ವರ್ಷ ಹಳೆಯದಾದ ಸೇತುವೆಯ ಸಂಚಾರ ಸಾಮರ್ಥ್ಯದ ತಪಾಸಣೆ ಕಾರ್ಯ ಶುಕ್ರವಾರ ನಡೆಯಿತು.

Advertisement

ಉಡುಪಿ ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್‌ ಎಂಜಿನಿಯರ್‌ ಸವಿತಾ ಆರ್‌.ಅವರ ನಿರ್ದೇಶನದಂತೆ ಬೆಂಗಳೂರಿನ ಗುತ್ತಿಗೆದಾರ ಸೇತುವೆ ತಜ್ಞ ಚೆನ್ನಬಸವೇಶ್‌ ನೇತೃತ್ವದ ತಂಡದ ಎಂಜಿನಿಯರ್‌ಗಳಾದ ಮಧು ಮತ್ತು ಅಶ್ವಥ್‌ ಸಹಾಯಕರೊಂದಿಗೆ ಶಿಥಿಲಗೊಂಡ ಸೇತುವೆಯ ಕಾಂಕ್ರೀಟ್‌ ಸಾಮರ್ಥಯದ ಬಗ್ಗೆ ಪರಿಶೀಲನೆ ನಡೆಸಿತು.

ಬೆಂಗಳೂರಿನ ತಜ್ಞರ ತಂಡ ತಾಲೂಕಿನ ಮಣಿಪುರ,ಪಡುಬೆಳ್ಳೆ ಹಾಗೂ ಇತರ 2 ಸೇತುವೆಗಳ ಕಾಂಕ್ರೀಟ್‌ ಸಾಮರ್ಥ್ಯ ಪರಿಶೀಲನೆ ನಡೆಸಿ ಶಿಥಿಲಗೊಂಡ ಸೇತುವೆಯ ಸದ್ಯದ ಪರಿಸ್ಥಿತಿ,ರಿಪೇರಿಯ ಬಗ್ಗೆ ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ಲೋಕೋಪಯೋಗಿ ಇಲಾಖೆಯ ಮೂಲಕ ಸರಕಾರಕ್ಕೆ ಸಲ್ಲಿಸುವುದಾಗಿದೆ ಎಂದು ತಂಡದ ಮುಖ್ಯಸ್ಥ ಚೆನ್ನಬಸವೇಶ್‌ ತಿಳಿಸಿದ್ದಾರೆ.

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಮೂಡುಬೆಳ್ಳೆ-ಪಡುಬೆಳ್ಳೆಯನ್ನು ಸಂಪರ್ಕಿಸುವ ಈ ಸೇತುವೆಯ ಅಗಲ ಕಿರಿದಾಗಿದ್ದು, ವಾಹನ ದಟ್ಟಣೆ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದರಿಂದ ನೂತನ ಸೇತುವೆ ನಿರ್ಮಿಸಲು ಬೆಳ್ಳೆ ಗ್ರಾ.ಪಂ.ವತಿಯಿಂದ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಹರೀಶ್‌ ಶೆಟ್ಟಿ ಮತ್ತು ಸದಸ್ಯ ಬೆಳ್ಳೆ ಗುರುರಾಜ್‌ ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next