Advertisement

ಪದ್ಮಶಾಲಿ ಸಮಾಜ ಮುಂಬಯಿ: ವಾರ್ಷಿಕೋತ್ಸವ, ಮಹಾಸಭೆ

01:21 PM Aug 30, 2019 | Team Udayavani |

ಮುಂಬಯಿ, ಆ. 29: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ, ಎಜುಕೇಶನ್‌ ಸೊಸೈಟಿ ಹಾಗೂ ಮಹಿಳಾ ಬಳಗದ 83ನೇ ವಾರ್ಷಿಕೋತ್ಸವ ಮತ್ತು ಮಹಾಸಭೆ, ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆ. 15ರಂದು ಸಂಘದ ನೂತನ ಪದ್ಮಶಾಲಿ ಕಲಾಭವನದ ಮಂಜುನಾಥ ಸಭಾಗೃಹದಲ್ಲಿ ನೆರವೇರಿತು.

Advertisement

ಕುಲದೇವರಾದ ಶ್ರೀ ವೀರಭದ್ರ, ಮಹ ಮ್ಮಾಯಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಗೌರವ ಕಾರ್ಯದರ್ಶಿ ಲೀಲಾಧರ ಶೆಟ್ಟಿಗಾರ್‌ ನೆರೆದ ಗಣ್ಯರನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಗುರುಸ್ತೋತ್ರ ಪಠಣ ಹಾಗೂ ವೀರಭದ್ರ ಸ್ತುತಿಯ ಅನಂತರ ಅತಿಥಿ ಗಣ್ಯರು ದೀಪವನ್ನು ಪ್ರಜ್ವಲಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಹಿರಿಯ ಕಾರ್ಯಕರ್ತ ಕೇಶವ ಕೆ. ಪದ್ಮಶಾಲಿಯವರು ವಹಿಸಿದ್ದರು. ಬೆಂಗಳೂರಿನ ಡಾ| ಕಿಶೋರ್‌ ಕುಮಾರ್‌ ರಾಮಕೃಷ್ಣರನ್ನು ಪದ್ಮ ಪ್ರತಿಭಾ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳು, ಕೇಂದ್ರ ಸರಕಾರವು ಹಮ್ಮಿಕೊಂಡಿರುವ ಸಮಗ್ರ ಔಷಧಿ ಕೇಂದ್ರ, ಬದುಕಿನಲ್ಲಿ ಜನರು ದೈನಂದಿನ ಎದುರಿಸುತ್ತಿರುವ ಶಾರೀರಿಕ ಹಾಗೂ ಮಾನಸಿಕ ಒತ್ತಡಗಳು ಹಾಗೂ ಮನುಷ್ಯನನ್ನು ಬಾಧಿಸುತ್ತಿರುವ ಇನ್ನಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು. ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗಾಭ್ಯಾಸ ಹಾಗೂ ಉತ್ತಮ ಆಹಾರಗಳ ಬಗ್ಗೆ ಮಾಹಿತಿ ನೀಡಿದರು.

ಜ್ಯೇಷ್ಠ ಸದಸ್ಯರು, ಶಿಕ್ಷಕರು, ಯಕ್ಷಗಾನ, ಹರಿಕಥೆ-ಜಿನಕಥೆ ಹರಿದಾಸರು, ಕವಿ-ಸಾಹಿತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಂಬಾತನಯ ಮುದ್ರಾಡಿಯವರನ್ನು ಸಭಾಧ್ಯಕ್ಷರಾದ ಕೇಶವ ಕೆ. ಪದ್ಮಶಾಲಿ ಅವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ‘ಪದ್ಮ ಕಲಾ ತಪಸ್ವಿ’ ಬಿರುದನ್ನು ನೀಡಿ ಸಮ್ಮಾನಿಸಿದರು.

ಮಹಿಳಾ ಬಳಗದ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ವರದಿ ವರ್ಷದಲ್ಲಿ ಅತೀ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿರುವ ಜಗನ್ನಾಥ ಟಿ. ಶೆಟ್ಟಿಗಾರ್‌, ಮಹಿಳಾ ವಿಭಾಗದಲ್ಲಿ ಸರೋಜಿನಿ ಎಚ್. ಶೆಟ್ಟಿಗಾರ್‌ ಹಾಗೂ ಅತೀ ಹೆಚ್ಚಿನ ಸದಸ್ಯತನ ಮೊತ್ತವನ್ನು ಸಂಗ್ರಹಿಸಿದ ಎಸ್‌. ವಿ. ಗೋಪಾಲಕೃಷ್ಣ ಇವರೆಲ್ಲರುಗಳನ್ನು ಸಮ್ಮಾನಿಸಲಾಯಿತು. ವರ್ಷದ ಉತ್ತಮ ಕಾರ್ಯಕರ್ತ ಪ್ರಶಸ್ತಿಯನ್ನು ನವೀನ್‌ ಎಂ. ಶೆಟ್ಟಿಗಾರ್‌ ಅವರಿಗೆ ಪ್ರದಾನಿಸಲಾಯಿತು. ಪ್ರತಿಭಾನ್ವಿತೆ ಕು| ಸ್ವರಾ ಎಸ್‌. ಶೆಟ್ಟಿಗಾರ್‌ ಅವರನ್ನು ಗೌರವಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಕೇಶವ ಕೆ. ಪದ್ಮಶಾಲಿ ಅವರು ಮಾತನಾಡಿ ಶುಭಹಾರೈಸಿದರು. ಕೃಷ್ಣ-ಭೀಷ್ಮರ ಸಂವಾದ ಯಕ್ಷಗಾನ ತಾಳಮದ್ದಲೆ ಜರಗಿತು. ಮುದ್ರಾಡಿ, ಕೆ. ಕೆ. ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿಗಾರ್‌ ಅವರು ಕಲಾವಿದರಾಗಿ ಸಹಕರಿಸಿದರು. ಹಿಮ್ಮೇಳದಲ್ಲಿ ರವಿಶಂಕರ್‌ ಆಚಾರ್ಯ, ಇನ್ನ ಆನಂದ ಶೆಟ್ಟಿ ಹಾಗೂ ಹರೀಶ ಸಾಲ್ಯಾನ್‌ ಸಹಕರಿಸಿದರು. ಶ್ರೀ ಕಿಶೋರ್‌ ಎಸ್‌. ಶೆಟ್ಟಿಗಾರರು ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು.

ಭೋಜನಾನಂತರ ಸಂಘ ಹಾಗೂ ಅದರ ಅಂಗ ಸಂಸ್ಥೆಗಳ ವಾರ್ಷಿಕ ಮಹಾಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಉತ್ತಮ್‌ ಎ. ಶೆಟ್ಟಿಗಾರ್‌ ವಹಿಸಿದ್ದರು. ವೇದಿಕೆಯಲ್ಲಿ ಎಜ್ಯುಕೇಶನ್‌ ಸೊಸೈಟಿಯ ಸಭಾಪತಿ ಬಿ. ರಾಮಚಂದ್ರ ಶೆಟ್ಟಿಗಾರ್‌, ಮಹಿಳಾ ಬಳಗದ ಪ್ರಮುಖೆ ಸರೋಜಿನಿ ಶೆಟ್ಟಿಗಾರ್‌ ಹಾಗೂ ಕಲಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್‌ ಉಪಸ್ಥಿತರಿದ್ದರು. ಈ ಸಂದರ್ಭ ವಾರ್ಷಿಕ ವರದಿ ಹಾಗೂ ಆಯವ್ಯಯ ಲೆಕ್ಕಪತ್ರಗಳನ್ನು ಸಭೆಯ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಶ್ರೀ ಕೃಷ್ಣಾನಂದ ಎಂ. ಶೆಟ್ಟಿಗಾರ್‌ ಅವರು ಕಲಾಭವನ ನಿರ್ಮಾಣಕ್ಕೆ ಸಹಕರಿಸಿ ಎಲ್ಲರನ್ನೂ ಸ್ಮರಿಸಿ ನಿರ್ಮಾಣ ಸಮಿತಿಯನ್ನು ಸಭೆಯ ಅನುಮೋದನೆಯೊಂದಿಗೆ ವಿಸರ್ಜಿಸಿದರು. ನೇಮಕಾತಿ ವರ್ಷ 2019-2021ಕ್ಕೆ ಸಂಘದ ಕಾರ್ಯಕಾರಿ ಸಮಿತಿ, ಸೊಸೈಟಿಯ ಆಡಳಿತ ಮಂಡಳಿ, ಮಹಿಳಾ ಬಳಗದ ಕಾರ್ಯಕಾರಿ ಸಮಿತಿ ಹಾಗೂ ಜಯೇಶ್‌ ಶೆಟ್ಟಿಗಾರರ ನೇತೃತ್ವದಲ್ಲಿ ಯುವ ವೇದಿಕೆಯ ಸದಸ್ಯರನ್ನು ನೇಮಿಸಲಾಯಿತು. ಯುವ ಸಮಿತಿಯವರು ನೆರೆ ಪೀಡಿತರಿಗೆ ಸದಸ್ಯರಿಂದ ಬಟ್ಟೆಗಳನ್ನು ಸಂಗ್ರಹಿಸಲಾಯಿತು. ಸಂಘ ಹಾಗೂ ಸೊಸೈಟಿಯ ನಿಯಮಾವಳಿಗಳಲ್ಲಿ ಮಾಡಲಾದ ಬದಲಾವಣೆಗಳ ಠರಾವುಗಳಿಗೆ ಸಭೆಯು ಸರ್ವಾನುಮತದ ಅನುಮೋದನೆ ನೀಡಿತು. ನರ್ಸರಿಯಿಂದ ಪದವೀಧರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಸೊಸೈಟಿಯ ಸಲಹೆಗಾರರಾದ ಶಿವಾನಂದ ಶೆಟ್ಟಿಗಾರರು ಸಮಾಜದ ಕಲಾ ಭವನದ ಕನಸನ್ನು ನನಸು ಮಾಡಲು ಸಫಲರಾದ ಶ್ರೀ ಕೃಷ್ಣಾನಂದ ಶೆಟ್ಟಿಗಾರರನ್ನು ಮನಸಾರೆ ವಂದಿಸಿದರು. ಕೇಶವ ಶೆಟ್ಟಿಗಾರರು ವಂದಿಸಿದರು. ಸಮಾಜದ ಹಿರಿಯ-ಕಿರಿಯ ಸದಸ್ಯರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಸಭಿರ ಮನ ರಂಜಿಸಿದರು. ಬೆಳಗ್ಗಿನ ಉಪಹಾರ, ಭೋಜನ ಹಾಗೂ ಸಂಜೆಯ ಚಹಾ ತಿಂಡಿಯ ವ್ಯವಸ್ಥೆಯನ್ನು ಹರ್ಷ್‌ ಫೌಂಡೇಶನ್‌ ಅವರು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next