Advertisement

ಭತ್ತದ ಕಣಜದ ತುಂಬಾ ಸಕ್ಕರೆ ಸಿಹಿ

04:22 PM Feb 04, 2022 | Team Udayavani |

ಧಾರವಾಡ: ದೇಶಿ ಭತ್ತದ ಕಣಜ, ಆಆಲ್ಫೋನ್ಸೋ ಮಾವಿನ ಶೀಕರಣಿಯ ಹರವಿ ಎಂದೇ ಖ್ಯಾತವಾಗಿರುವ ಧಾರವಾಡ ಜಿಲ್ಲೆ ಈ ವರ್ಷ ಸಿಹಿ ಸಕ್ಕರೆಯ ಅತ್ಯಧಿಕ ಕಬ್ಬು ಉತ್ಪಾದನೆಯಲ್ಲಿ ಮುಂಚೂಣಿಗೆ ಬಂದು ನಿಂತಿದೆ. ಹೌದು. 25ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿ ವರ್ಷಕ್ಕೆ 4 ಕೋಟಿ ಟನ್‌ನಷ್ಟು ಕಬ್ಬು ಉತ್ಪಾದಿಸುವ ಬೆಳಗಾವಿ ಜಿಲ್ಲೆಯ ಪಕ್ಕದಲ್ಲಿಯೇ ಇರುವ ಧಾರವಾಡ ಜಿಲ್ಲೆಯ 89 ಸಾವಿರ ಹೆಕ್ಟೇರ್‌ ಪ್ರದೇಶವನ್ನು ಕಬ್ಬು ಆವರಿಸಿಕೊಂಡಿದೆ.

Advertisement

ಈ ವರ್ಷ ಸರಾಸರಿ 48 ಲಕ್ಷ ಟನ್‌ ಕಬ್ಬು ಉತ್ಪಾದನೆಯಾಗಿದ್ದು, ಮುಂದಿನ ವರ್ಷ ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹೀಗಿದ್ದರೂ ಈ ಜಿಲ್ಲೆಯಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇಲ್ಲ. ದೇಶಿ ಭತ್ತಕ್ಕೆ ಹೆಸರಾಗಿದ್ದ ಧಾರವಾಡ ಜಿಲ್ಲೆಯ 2ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತಿ ಬೆಳೆಯಲಾಗುತ್ತಿತ್ತು. ಮನ್ಸೂನ್‌ ಮಳೆಯಾಧಾರಿತವಾಗಿ ಬೆಳೆಯುತ್ತಿದ್ದ ಈ ಭತ್ತ ಕಳೆದ ಹತ್ತು ವರ್ಷಗಳಲ್ಲಿ ಸಂಪೂರ್ಣ ಮಾಯವಾಗಿದ್ದು, ಇದೀಗ ಭತ್ತದ ಜಾಗ ವನ್ನೆಲ್ಲ ಕಬ್ಬು ಅತಿಕ್ರಮಿಸಿಕೊಂಡಿದ್ದು, ಜಿಲ್ಲೆಯ ರೈತರು ಕಬ್ಬಿನ ಬೆಳೆಗೆ ಮಾರು ಹೋಗಿದ್ದಾರೆ.

ಪ್ರತಿಯೊಂದು ಹಳ್ಳಿಯಲ್ಲಿ ಬೆರಳೆಣಿಕೆಯಷ್ಟಿದ್ದ ದೈತ್ಯ ಟ್ರ್ಯಾಕ್ಟರ್‌ಗಳ ಸಂಖ್ಯೆ ಇದೀಗ ಹತ್ತು ಇಪ್ಪತ್ತಕ್ಕೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಕಬ್ಬು ಸಾಗಾಣಿಕೆ ಮಾಡುವ 300 ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳಿದ್ದು, 80 ಲಾರಿಗಳು ಕಳೆದ ಐದು ವರ್ಷಗಳಲ್ಲಿ ಜಿಲ್ಲೆಗೆ ಬಂದಿವೆ. ಕಬ್ಬು ಕಟಾವಿಗೆ ಲಕ್ಷ ಲಕ್ಷ ಮುಂಗಡ ಹಣ ಕೊಟ್ಟು ಮಹಾರಾಷ್ಟ್ರ, ಕೊಪ್ಪಳ, ಮತ್ತು ರಾಯಚೂರು ಗ್ಯಾಂಗ್‌ಗಳನ್ನು ಜಿಲ್ಲೆಯ ಕಬ್ಬು ಬೆಳೆಗಾರರು ಕಾಯ್ದಿರಿಸುತ್ತಿದ್ದಾರೆ.

ಒಂದೇ ಒಂದು ಕಾರ್ಖಾನೆ ಇಲ್ಲ: ಧಾರವಾಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ಮುಂಚೆ ಬೆಳಗಾವಿ ಜಿಲ್ಲೆಯ ಸವದತ್ತಿ, ಹಾವೇರಿ ಜಿಲ್ಲೆಯ ಸಂಗೂರು ಕಾರ್ಖಾನೆಗಳಿಗೆ ಜಿಲ್ಲೆಯಿಂದ ಕಬ್ಬು ಸಾಗಾಣಿಕೆಯಾಗುತ್ತಿತ್ತು. ಆದರೆ ನಂತರದ ವರ್ಷಗಳಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗಳು ಅದನ್ನು ಕೊಂಡುಕೊಳ್ಳದೇ ಹೋಗಿದ್ದರಿಂದ ಸಮಸ್ಯೆಯಾಗಿ ರೈತರು ಕಬ್ಬಿನ ಗದ್ದೆಗಳಿಗೆ ಬೆಂಕಿ ಇಟ್ಟಿದ್ದರು.

ಆದರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪ್ಯಾರಿ ಶುಗರ್ ಕಂಪನಿ ಸಕ್ಕರೆ ಕಾರ್ಖಾನೆ ಆರಂಭಿಸಿದ ನಂತರ ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯಲಾರಂಭಿಸಿತು. ಅದರಲ್ಲೂ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಧಾರವಾಡ, ಅಳ್ನಾವರ ಮತ್ತು ಕಲಘಟಗಿಯಲ್ಲಿ ಇದೀಗ ಶೇ.86 ಭೂಮಿ ಕಬ್ಬಿನ ಬೆಳೆ ಆವೃತವಾಗಿದ್ದು, ಇಲ್ಲಿನ ವಾತಾವರಣವೂ ಇದಕ್ಕೆ ಪೂರಕವಾಗಿದೆ. ವಿಪರ್ಯಾಸ ಎಂದರೆ ಇಷ್ಟೆಲ್ಲ ಕಬ್ಬು ಉತ್ಪಾದನೆಯಾದರೂ ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇಲ್ಲ. ಜಿಲ್ಲೆಯಿಂದ ಪ್ರತಿಯೊಬ್ಬ ರೈತರು ತಮ್ಮ ಕಬ್ಬನ್ನು ಹೊರ ಜಿಲ್ಲೆಗಳಿಗೆ ಕಳುಹಿಸುತ್ತಾರೆ.

Advertisement

ಬೆಳಗಾವಿ, ಬಾಗಲಕೋಟೆಯತ್ತ ಕಬ್ಬು :
ಧಾರವಾಡ ಜಿಲ್ಲೆಯಲ್ಲಿ ಯಾವುದೇ ದೊಡ್ಡ ನದಿಗಳಾಗಲಿ ಜಲಮೂಲಗಳಾಗಲಿ ಇಲ್ಲ. ಹೀಗಾಗಿ ಇಲ್ಲಿ ಕಬ್ಬು ಅರಿದು ಸಕ್ಕರೆ ಮಾಡುವ ದೈತ್ಯ ಕಂಪನಿಗಳು ಸ್ಥಾಪನೆಯಾಗಿಲ್ಲ. ಬಂಡವಾಳ ಹೂಡಿಕೆ ದೃಷ್ಟಿಯಿಂದ ಶಿಕ್ಷಣ, ಸೇರಿದಂತೆ ಇತರೇ ಸಣ್ಣಪುಟ್ಟ ಕೈಗಾರಿಕೆಗಳು ಜಿಲ್ಲೆಯಲ್ಲಿದ್ದು, ಸಕ್ಕರೆ ಕಾರ್ಖಾನೆಗಳು ಮಾತ್ರ ಈವರೆಗೂ ಸ್ಥಾಪನೆಯಾಗಿಲ್ಲ. ಜಿಲ್ಲೆಯಲ್ಲಿ ಮಾಜಿ ಸಚಿವ ಸಂತೋಷ ಲಾಡ್‌ ಅವರು ಕಲಘಟಗಿ ಸಮೀಪದ ಹಳ್ಳಿಯೊಂದರಲ್ಲಿ ಸಕ್ಕರೆ ಕಾರ್ಖಾನೆಗೆ
ಸ್ಥಾಪಿಸಲು ಒಲವು ತೋರಿದ್ದರು. ಆದರೆ ನೀರಿನ ಮೂಲದ ಕೊರತೆ ಹಾಗೂ ಬಂಡವಾಳ ಕೊರತೆಯಿಂದ ಅವರು ಈ ಯೋಜನೆ ಕೈ ಬಿಟ್ಟರು. ಸಚಿವ ಉಮೇಶ ಕತ್ತಿ ಅವರು ಕಿತ್ತೂರು ಸಮೀಪ ಧಾರವಾಡ ಜಿಲ್ಲೆಯಲ್ಲಿ ಇನ್ನೊಂದು ಖಾಸಗಿ ಸಕ್ಕರೆ ಕಾರ್ಖಾನೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದರು.ಆದರೆ ಅವರು ಯೋಜನೆ ಕೈ ಬಿಟ್ಟಿದ್ದಾರೆ.

ಕೈಗಾರಿಕಾ ಸಚಿವ ನಿರಾಣಿ ಕೂಡ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಗೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ಆದರೆ ಅವರು ಯೋಜನೆ ಕೈ ಬಿಟ್ಟರು. ಇದೀಗ ಜಿಲ್ಲೆಯಲ್ಲಿ ಪ್ರತಿವರ್ಷ ಉತ್ಪಾದನೆಯಾಗುವ ಲಕ್ಷ ಲಕ್ಷ ಟನ್‌ ಕಬ್ಬು ಬೆಳಗಾವಿ ಜಿಲ್ಲೆಯ ಕಾರ್ಖಾನೆ ಮತ್ತು ದೂರದ ಬಾಗಲಕೋಟೆ ಜಿಲ್ಲೆಗಳ ಕಾರ್ಖಾನೆಗೂ ರವಾನೆಯಾಗುತ್ತಿದೆ.

2025ಕ್ಕೆ ಲಕ್ಷ ಕಬ್ಬು ಬೆಳೆಗಾರರು
ಜಿಲ್ಲೆಯಲ್ಲಿ ಇದೀಗ ಕಬ್ಬು ಬೆಳೆಗಾರರ ಸಂಖ್ಯೆ ಬರೊಬ್ಬರಿ ಒಂದು ಲಕ್ಷಕ್ಕೂ ಅಧಿಕವಾಗಿದೆ. 1994ರಲ್ಲಿ ಜಿಲ್ಲೆಯಲ್ಲಿ 2800 ಜನ ಕಬ್ಬು ಬೆಳೆಗಾರರಿದ್ದರು. ಕರ್ನಾಟಕ ರಾಜ್ಯ ರೈತ ಸಂಘವು ಅಧಿಕೃತವಾಗಿ ಕಬ್ಬು ಬೆಳೆಗಾರರ ಸಮಸ್ಯೆ ಗುರುತಿಸಲು ಜಿಲ್ಲೆಯಲ್ಲಿನ ಕಬ್ಬು ಬೆಳೆಗಾರರ ಪಟ್ಟಿ ಬಿಡುಗಡೆ ಮಾಡಿ ಕಬ್ಬು ಹಾನಿಗೆ ಪರಿಹಾರ ಕೋರಿದ್ದರು. 2000ನೇ ಇಸ್ವಿ ವೇಳೆಗೆ ಇದು 12 ಸಾವಿರಕ್ಕೇರಿತು. 2021ರಲ್ಲಿ 76 ಸಾವಿರಕ್ಕೆ ಏರಿಕೆಯಾಗಿದೆ. ಇದೀಗ ಹೊಸ ಕಬ್ಬು ಬೆಳೆಗಾರರು ಈ ವರ್ಷ ಹೊಸದಾಗಿ ಇನ್ನಷ್ಟು ಕಬ್ಬು ಬೆಳೆಗಾರರು ಸೇರ್ಪಡೆಯಾಗುತ್ತಿದ್ದು, 2025ನೇ ಇಸ್ವಿಗೆ ಧಾರವಾಡ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಂಖ್ಯೆ 1ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಕಬ್ಬು ಬೆಳೆಗಾರರ ಸಂಘ ಅಂದಾಜು ಮಾಡಿದೆ.

ರುಚಿ ಕೊಡದ ಬೆಲ್ಲ
ಸಾಂಪ್ರದಾಯಿಕವಾಗಿ ಧಾರವಾಡ ಜಿಲ್ಲೆಯಲ್ಲಿ ಸಕ್ಕರೆ ಜತೆ ಜತೆಗೆ ಬೆಲ್ಲವನ್ನು ಕೂಡ ಆಲೆಮನೆಗಳ ಮೂಲಕ ಉತ್ಪಾದಿಸಲಾಗುತ್ತಿತ್ತು. 1990ರ ದಶಕದವರೆಗೂ ಪ್ರತಿಹಳ್ಳಿಗಳಲ್ಲಿಯೂ ಇಲ್ಲಿ ಆಲೆಮನೆಗಳು ಇರುತ್ತಿದ್ದವು. ಆದರೆ ನಂತರದ ವರ್ಷಗಳಲ್ಲಿ ಆಲೆಮನೆಗಳು ಕಣ್ಮರೆಯಾಗಿದ್ದು, ಇದೀಗ ಜಿಲ್ಲೆಯಾದ್ಯಂತ 23 ಬೆಲ್ಲ ತಯಾರಿಕೆ ಘಟಕಗಳು ಇವೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೇರವಾಗಿ ಕಳುಹಿಸಿ ಬ್ಯಾಂಕ್‌ ಖಾತೆಗಳಿಗೆ ಹಣ ಬರುತ್ತಿರುವುದರಿಂದ ಬೆಲ್ಲ ತಯಾರಿಕೆಗೆ ರೈತರು ಒಲವು ತೋರುತ್ತಿಲ್ಲ. ಜಿಲ್ಲೆಗೆ ಮಹಾಲಿಂಗಪೂರದಿಂದ ಅತ್ಯಧಿಕ ಬೆಲ್ಲ ಬರುತ್ತಿದ್ದು, ವರ್ಷಕ್ಕೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು 12 ಸಾವಿರ ಟನ್‌ ಬೆಲ್ಲ ಮಾರಾಟವಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಒಂದು ಸಕ್ಕರೆ ಕಾರ್ಖಾನೆ ಸ್ಪಾಪನೆಯಾಗುವುದು ಸೂಕ್ತ. ದೂರದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗೆ ಕಬ್ಬು ಸಾಗಿಸುವುದಕ್ಕೆ ಸಾರಿಗೆ ವೆಚ್ಚವೇ ಅಧಿಕವಾಗುತ್ತಿದ್ದು, ಉದ್ಯಮಿಗಳು ಜಿಲ್ಲೆಯತ್ತ ಗಮನ ಹರಿಸಬೇಕಿದೆ.
ಶ್ರೀಶೈಲಗೌಡ ಕಮತರ, ರೈತ ಮುಖಂಡ

ಕಬ್ಬು ರೈತರಿಗೆ ಸರಿಯಾದ ಸಮಯಕ್ಕೆ ಕಟಾವು ಆದರೆ ಲಾಭ. ವಿಳಂಬವಾದಂತೆಲ್ಲ ನಷ್ಟ. ಜಿಲ್ಲೆಯಲ್ಲೇ ಕಬ್ಬಿನ ಕಾರ್ಖಾನೆಯೊಂದು ಇದ್ದರೆ ನಿಜಕ್ಕೂ ರೈತರಿಗೆ ಅನುಕೂಲ.
ನಿಜಗುಣಿಗೌಡ ಪಾಟೀಲ,
ವೀರಾಪೂರ ರೈತ

*ಡಾ| ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next