Advertisement

ವಿಕಲಚೇತನ ಎಂಬ ಅಸಂಗತ ಪದಬಳಕೆಯ ಕಾಲ

03:50 AM Jan 29, 2017 | Harsha Rao |

ಅದೊಂದು ದಿನ ನಾನು ಮನೆ ಹತ್ತಿರದ ಬಿಗ್‌ಬಜಾರಿಗೆ ಹೋಗಿ, ಮನೆಗೆ ಬೇಕಾದ ವಸ್ತುಗಳನ್ನು ಟ್ರಾಲಿ ಒಳಗೆ ಹಾಕಿಕೊಳ್ಳುತ್ತಿದ್ದೆ. ಜೊತೆಯಲ್ಲಿದ್ದ ನನ್ನ ಪತಿ ನಮ್ಮ ಮಗಳಿಗೇನೋ ಕೊಡಿಸಲು ಬೇರೆ ಕೌಂಟರಿಗೆ ಹೋಗಿದ್ದರು. ಕೆಲವು ಸಾಮಾನುಗಳು ತುಸು ಎತ್ತರದಲ್ಲಿದ್ದವು ಮತ್ತು ಅವು ವ್ಹೀಲ್‌ಚೇರಿನಲ್ಲಿದ್ದ ನನಗೆ ಎಟಕುತ್ತಿರಲಿಲ್ಲ. ಅಲ್ಲಿದ್ದ  ಕೆಲಸಗಾರರಲ್ಲಿ ಕೇಳಿ ಪಡೆದು ಹಾಕಿಕೊಳ್ಳತೊಡಗಿದ್ದೆ. ವ್ಹೀಲ್‌ಚೇರ್‌ ಜೊತೆಗೆ ಟ್ರಾಲಿಯನ್ನೂ ನಾನೇ ನಿಧಾನಕ್ಕೆ ದೂಡಿಕೊಂಡು ಹೋಗುತ್ತಿರುವಾಗ ಸಹಜವಾಗಿ ಅತ್ತಿತ್ತ ಹೋಗುವವರಿಗೆ ತುಸುವೇ ತೊಂದರೆ ಆಗಿರಬಹುದು.

Advertisement

ಆಗ ಒಂದು ಕಡೆಯಿಂದ ಮಾತೊಂದು ತೂರಿ ಬಂದಿತ್ತು, “ಇಷ್ಟು ಕಷ್ಟ ಪಟ್ಕೊಂಡು ಯಾಕೆ ಬರ್ಬೆàಕು? ಮನೇಲಿದ್ರೆ ಆಗೆ? ಮನೆಯವ್ರು ತಂದು ಕೊಡ್ತಾರಪ್ಪ. ಇವ್ರಿಗೂ ತೊಂದ್ರೆ ಬೇರೆಯವ್ರಿಗೂ ತೊಂದ್ರೆ’ ಮಾತು ತೂರಿ ಬಂದತ್ತ ನೋಡಿದರೆ ತಕ್ಷಣಕ್ಕೆ ಯಾರು ಹಾಗೆ ಅಂದರೆಂದು ತಿಳಿಯಲಿಲ್ಲ. ಗೊತ್ತಾಗಿದ್ದಿದ್ದರೆ ಅವರಿಗೆ ಖಡಕ್ಕಾಗಿಯೇ ಉತ್ತರಿಸುತ್ತಿದ್ದೆ , “ಸ್ವಲ್ಪ ಬುದ್ಧಿ ಉಪಯೋಗಿಸಿ ಮಾತನಾಡಿ. ಈಗ ಕೈ ಕಾಲು ನೆಟ್ಟಗಿರುವವರಿಗೂ ನಾಳೆ ಯಾವುದೇ ರೀತಿಯ ತೊಂದರೆ ಬರಬಾರದೆಂದಿಲ್ಲ ತಿಳಿಯಿರಿ. ದುರದೃಷ್ಟವಶಾತ್‌ ನೀವೇ ಎಲ್ಲೋ ಬಿದ್ದು ಏಟಾಗಿ, ನಿಮ್ಮ ಎರಡೂ ಕೈಗಳ ಮೂಳೆ ಮುರಿದು ಪ್ಲಾಸ್ಟರ್‌ ಹಾಕಿಡಲು, ನಿಮಗೆ ಬೇರೆಯವರು ಉಣಿಸಿದರೆ ತೃಪ್ತಿಯಾಗುವುದೇ? ಎಷ್ಟು ದಿವಸ ತಾನೇ ಬೇರೊಬ್ಬರು ನಿಮಗೆ ಬೇಕಾದಂತೇ ಉಣಿಸಬಲ್ಲರು? ಹಾಗೇ ನಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಹಕ್ಕು ನಮಗಿದೆ. ನಾವು ಪರಾವಲಂಬಿಗಳಲ್ಲ’ ಎಂದು. 

ಎಷ್ಟೋ ಸಲ ನಮ್ಮಂಥವರಿಗೆ ಹೊರ ಪ್ರಪಂಚಕ್ಕೆ ಹೋಗಿ ವ್ಯವಹರಿಸುವುದು ಕನಸೇ ಆಗಿಬಿಡುತ್ತದೆ. ನಾನು ಮತ್ತು ನನ್ನಂಥ ಕೆಲವೇ ಕೆಲವು ಶಿಕ್ಷಿತ, ಇಂಟರ್ನೆಟ್‌ ಬಳಕೆ ಬಲ್ಲ ಅಂಗವಿಕಲರು ಹೇಗೋ ಆನ್‌ಲೈನ್‌ ಬಳಕೆಯನ್ನು ಬಳಸಿಕೊಂಡಾದರೂ ಕೆಲವು ಅತ್ಯಗತ್ಯ ಆವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಆದರೆ, ಹೊರ ಬೀಳುವುದೇ ಸಾಹಸವಾಗಿ, ಹೇಗೋ ಸ್ವಂತ ಕಾರಿನಲ್ಲೋ, ಬಾಡಿಗೆ ವಾಹನವನ್ನು ಮಾಡಿಕೊಂಡು ಹೋದರೂ, ಬೇಕಾದ್ದನ್ನು ಕೊಳ್ಳಲು ಹೋಗುವ ಅಂಗಡಿಗಳ ದಾರಿಯೋ ಕಾಡದಾರಿಗಿಂತಲೂ ದುರ್ಗಮ ಹಾಗೂ ಕಠಿಣವೆಂದೆನಿಸಿಬಿಡುತ್ತದೆ! ಹೊಟೇಲು, ಬಟ್ಟೆಯಂಗಡಿ, ದಿನಸಿ ಅಂಗಡಿ, ಡಾಕ್ಟರ್‌ ಶಾಪ್‌ ಹೀಗೆ ಎಲ್ಲೋ ಕಡೆಯೂ ಮೆಟ್ಟಿಲುಗಳದೇ ಹಾವಳಿ! ಅದರಲ್ಲೂ ವಿಶೇಷವಾಗಿ ನಮ್ಮ ದೇಶದಲ್ಲಿದೊಂದು ಸಾಮಾಜಿಕ ಪಿಡುಗು ಮತ್ತು ಶಾಪವೆಂದೇ ಹೇಳುವೆ. ನನ್ನ ಅನೇಕ ಸ್ನೇಹಿತರು, ಸಂಬಂಧಿಗಳು ವಿದೇಶಗಳಲ್ಲಿದ್ದಾರೆ. ಅವರೆಲ್ಲ ಹೇಳುತ್ತಿರುತ್ತಾರೆ- “ನಮ್ಮಲ್ಲಿ ಅಂಗವಿಕಲರಿಗೆ ಕರುಣೆ ಅನುಕಂಪ ತೋರದೇ, ಸಮಾನತೆ ನೀಡುತ್ತಾರೆ. ಇಲ್ಲಿ ಎಲ್ಲೂ ಕಡೆಯೂ ರ್‍ಯಾಂಪ್‌, ಲಿಫ‌ುrಗಳಿವೆ. ಬಸ್‌, ರೈಲ್ವೇ ಸ್ಟೇಶನ್‌ ಎಲ್ಲಾ ಸಾರಿಗೆಗಳಲ್ಲೂ ವ್ಹೀಲ್‌ಚೇರ್‌ ಮತ್ತು ಎಲ್ಲಾ ರೀತಿ ಅಂಗವಿಕಲರಿಗಾಗಿಯೇ ಹತ್ತಲು ವಿಶೇಷವಾದ ವ್ಯವಸ್ಥೆ ಇರುತ್ತದೆ. ಯಾವುದೇ ಹಕ್ಕಿನಿಂದಲೂ ಅವರು ವಂಚಿತರಾಗದಂತೇ ನೋಡಿಕೊಳ್ಳಲಾಗುತ್ತದೆ’ ಹೀಗೆ ಅವರು ಕೊಡುವ ಸೌಲಭ್ಯಗಳ ಪಟ್ಟಿಯನ್ನು ಕೇಳುವಾಗ್ಲೇ ನಿಡಿದಾದ ಉಸಿರೊಂದೇ ನನ್ನಿಂದ ಹೊರಬರುವುದು. ಮೂಲಭೂತ ಹಕ್ಕಾದ ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಟ ಸೌಲಭ್ಯವೂ ಇಲ್ಲದೇ, ಅನಕ್ಷರಸ್ಥರಾಗಿಯೇ ಉಳಿದುಬಿಟ್ಟಿರುವ ದೈಹಿಕ/ಮಾನಸಿಕ ನ್ಯೂನತೆ ಉಳ್ಳವರು ಅಸಂಖ್ಯಾತ! ಇದಕ್ಕೆ ಉದಾಹರಣೆಯಾಗಿ ನನ್ನನ್ನೇ ಕೊಡುತ್ತಿದ್ದೇನೆ.

ಚಿಕ್ಕಂದಿನಿಂದಲೂ ನನಗೆ ಡಾಕ್ಟರ್‌ ಆಗುವ ಕನಸು. ಅಂತೆಯೇ ಹತ್ತನೆಯ ತರಗತಿಯ ನಂತರ ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ದುಕೊಳ್ಳ ಹೊರಟಾಗ ಹಲವರಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದವು. “ಪ್ರಾಕ್ಟಿಕಲ್ಸ್‌ , ಡಿಸೆಕ್ಷನ್ಸ್‌ , ಟೈಟ್ರೇಶನ್ಸ್‌ ಎÇÉಾ ಇರುತ್ತವೆ. ಬಹಳ ಹೊತ್ತು ನಿಲ್ಲಬೇಕಾಗುತ್ತದೆ. ಇವಳಿಂದಾಗದು.ಆರ್ಟ್ಸ್ ಕೊಡಿಸಿ ಬಿಡಿ’ ಎಂದು. ಅಂದು ನಾನು ವಿಜ್ಞಾನ ಆಯ್ದುಕೊಂಡಿದ್ದು ಆರ್ಟ್ಸ್ ಅಥವಾ ಕಾಮರ್ಸ್‌ ಕಡಿಮೆ ಎಂಬ ಭಾವದಿಂದಲ್ಲ.

ನನ್ನೊಲವು ಜೀವಶಾಸ್ತ್ರದಲ್ಲಿತ್ತು. ಹಾಗಾಗಿ, ಎಲ್ಲ ಸಲಹೆಗಳನ್ನೂ ಧಿಕ್ಕರಿಸಿ ಮುನ್ನ°ಡೆದಿ¨ªೆ. ಅಂದು ನನ್ನ ಸಹಾಯಕ್ಕೆ ಬಂದಿದ್ದು ನನ್ನ ಹಠ ಮತ್ತು ಅಪ್ಪನ ಛಲ. ಪ್ರಾಕ್ಟಿಕಲ್‌ ಮಾಡಲು ಕಷ್ಟಪಟ್ಟು ಮೊದಲ ಮಹಡಿಗೆ ಹೋಗಿ ಉದ್ದ ಸ್ಟೂಲ್‌ ಇಟ್ಟುಕೊಂಡು ಟೈಟ್ರೇಶನ್‌ ಮಾಡಿದೆ. ಆದರೇನಂತೆ, ದ್ವಿತೀಯ ಪಿಯುಸಿಯ ನಂತರ ವೈದ್ಯಕೀಯ ಶಾಸ್ತ್ರ ಕಲಿಯಲು ಸಾಧ್ಯವೇ ಆಗಲಿಲ್ಲ. ಕಾರಣ, ನಮ್ಮಂಥವರಿಗೆ ಅಂಥ ಸೌಲಭ್ಯವೇ ಇದ್ದಿರಲಿಲ್ಲ. ಈಗಲೂ ಇರುವುದೋ? ಗೊತ್ತಿಲ್ಲ !

Advertisement

ಹೋಗಲಿ, ಹೋಮಿಯೋಪತಿ, ಆಯುರ್ವೆàದ ಅಥವಾ ಮನಶಾÏಸ್ತ್ರದÇÉಾದರೂ ಹೆಚ್ಚಿನ ಓದು ಮಾಡುವ ಎಂದರೆ ಅಂಕಗಳು ಉತ್ತಮವಿದ್ದರೂ ಲಿಫ್ಟ್ ಇಲ್ಲ , ರ್‍ಯಾಂಪ್‌ ಇಲ್ಲ ಎಂದು ಕೈಚೆಲ್ಲಬೇಕಾಯಿತು ! ಆಗ ಮೊದಲ ಬಾರಿ ಆಘಾತ ಅನುಭವಿಸಿ¨ªೆ. ಅತೀವ ನಿರಾಸೆಯಿಂದಲೇ ಬಿ.ಎಸ್ಸಿ. ಸೇರಿ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮುಂದುವರಿಸಿ, ಮುಂದೆ ಮೈಕ್ರೊಬಯೋಲಾಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಕಂಡೆ. ಅಂತಿಮ ಬಿ.ಎಸ್ಸಿ.ಯಲ್ಲಿ 84% ಬಂದಾಗ ಪಟ್ಟ ಖುಶಿ ಅಷ್ಟಿಷ್ಟಲ್ಲ. ಆದರೆ, ಮತ್ತೆ ವಿಧಿ ಮೆಟ್ಟಿಲುಗಳಲ್ಲಿ ಪಟ್ಟಾಗಿ ಕುಳಿತಿತ್ತು.

ಸರಾಗವಾಗಿ ತರಗತಿಗಳನ್ನು ಪ್ರವೇಶಿಸುವ ಸೌಲಭ್ಯಗಳು ಸಿಗದೇ ಕೈಬಿಡಬೇಕಾಯಿತು. ಕೊನೆಗೆ ಮೆಟ್ಟಿಲುಗಳ ಹಂಗಿಲ್ಲದೇ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ  ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಿದೆ. ಇದು ಮನೆಯಲ್ಲಿ ತಕ್ಕಮಟ್ಟಿಗೆ ಅನುಕೂಲವಿದ್ದು, ಅಪ್ಪ, ಅಮ್ಮನ ಬೆಂಬಲವಿದ್ದು, ಆತ್ಮೀಯ ಸ್ನೇಹಿತರ ಸಹಾಯ, ಬೆಂಬಲವಿದ್ದೂ… ಅತೀವ ಅಸಹಾಯಕತೆ, ನಿರಾಸೆ, ಆಕ್ರೋಶ ಅನುಭವಿಸಿದ ನನ್ನ ಕಥೆ! ಇದಾವ ಸೌಲಭ್ಯಗಳೂ ಇಲ್ಲದ, ಕನಿಷ್ಟ ಮನೆಯವರ ಬೆಂಬಲವೂ ಸೂಕ್ತವಾಗಿ ಸಿಗದ, ಹೆತ್ತವರಿಗೆ ಆಶಯವಿದ್ದರೂ, ಸ್ಕೂಲ್‌/ಕಾಲೇಜಿಗೆ ಕಳುಹಿಸಲು ವಾಹನ ಸೌಲಭ್ಯಗಳನ್ನು ಕಲ್ಪಿಸಲಾಗದೆ ಆರ್ಥಿಕವಾಗಿ ಒ¨ªಾಡುವ ಬೇರೆ ಅಂಗವಿಕಲರ ಸ್ಥಿತಿ-ಗತಿಯನ್ನು ಊಹಿಸಲೂ ನನ್ನಿಂದಾಗದು.

ಈಗೇನೋ ಸರ್ಕಾರಿ ಆಫೀಸು, ಶಾಲೆಗಳಲ್ಲಿ ರ್‍ಯಾಂಪ್‌ ಕಾಣಸಿಗುತ್ತಿವೆ. ಆದರೂ ಕಾಲೇಜು/ಶಾಲೆಗಳಲ್ಲಿ ಮೇಲಿನ ಮಹಡಿಗಳಿಗೆ ಹೋಗಲು ಲಿಫ್ಟ್ ವ್ಯವಸ್ಥೆಗಳು ಹೇಗಿವೆ ಎಂದು ತಿಳಿಯೆ! ನಾನು ಕಲಿತಿದ್ದ ಕೆನರಾ ಡಿಗ್ರಿ ಕಾಲೇಜಿನಲ್ಲಿ. ಅಲ್ಲಿ ನನ್ನ ತಂದೆಯವರೇ ಪ್ರೊಫೆಸರ್‌ ಆಗಿದ್ದರು ಮತ್ತು ಅಲ್ಲಿನ ಸಹೃದಯ ಪ್ರಾಧ್ಯಾಪಕ ಮಂಡಳಿಯವರು ಆದಷ್ಟು ತರಗತಿಗಳನ್ನು ಕೆಳಗೇ ಕಲ್ಪಿಸಿಕೊಟ್ಟು ಸಹಕರಿಸಿದ್ದರು. ಹಾಗಾಗಿ, ಆದಷ್ಟು ಸಲೀಸಾಗಿ ಬಿ.ಎಸ್ಸಿ. ಮುಗಿಸಲು ಸಾಧ್ಯವಾಯಿತು. ಇಲ್ಲದಿದ್ದಲ್ಲಿ…?!

ದೈಹಿಕ/ಮಾನಸಿಕ ನ್ಯೂನ್ಯತೆಯುಳ್ಳವರಿಗೆ ವಿಕಲಚೇತನ, ವಿಶಿಷ್ಟ ಚೇತನ, ದಿವ್ಯಾಂಗ ಎಂಬೆಲ್ಲ ನಾಮ ವಿಶೇಷಣಗಳು ಚಿನ್ನದ ಸೂಜಿಯಷ್ಟೇ. ಈ ರೀತಿ ನಮ್ಮನ್ನು ಮೇಲೇರಿಸಿ, ಕೈಚೆಲ್ಲಿ ಸಾಗುವ ಮನೋಸ್ಥಿತಿಯಿಂದ ಸಮಾಜ, ಸರ್ಕಾರ ಎಲ್ಲರೂ ಹೊರಬರಬೇಕಾಗಿದೆ. ಮಾಸಾಶನ, ಪಿಂಚಣಿ ವ್ಯವಸ್ಥೆ ಎಲ್ಲವೂ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆಯೇ. ಆದರೆ, ಬಹು ಮುಖ್ಯವಾಗಿ ನಮ್ಮಂಥವರಿಗೆ ಬೇಕಾಗಿರುವುದು ಸೂಕ್ತ ಶಿಕ್ಷಣ ಮತ್ತು ಗೌರವಯುತ ಬದುಕು. ಅವರೇ ಸ್ವಯಂ ತಮ್ಮ ಮನೆಯಿಂದ ಹೊರಬಂದು ಉದ್ಯೋಗ ಮಾಡಿಕೊಂಡು, ತಮ್ಮ ವ್ಯವಹಾರ ಮಾಡಿಕೊಳ್ಳುತ್ತ , ತಮ್ಮಿಷ್ಟದ ರೀತಿಯ ವಸ್ತುಗಳನ್ನು ಕೊಳ್ಳಲು, ಬೇಕಾದ ಕಡೆ ನಿರಾಯಾಸವಾಗಿ ಸಾಗಲು, ಸ್ವಾವಲಂಬಿಗಳಾಗಿ ಬದುಕಿ ಆತ್ಮವಿಶ್ವಾಸ ಗಳಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಮೊತ್ತಮೊದಲು ನಮ್ಮ ಸುತ್ತಲಿನ ಸಮಾಜ ನಮ್ಮೊಂದಿಗೆ ಧ್ವನಿಯೆತ್ತಬೇಕು.

– ತೇಜಸ್ವಿನಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next