ಬಾಸೆಲ್: ಬಿ.ಡಬ್ಲ್ಯು.ಎಫ್. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪಿ.ವಿ. ಸಿಂಧು ಅವರು ಸ್ವರ್ಣ ಪದಕ ಗೆದ್ದಿದ್ದಾರೆ. ಇಂದು ನಡೆದ ಫೈನಲ್ ಕಾದಾಟದಲ್ಲಿ ವಿಶ್ವದ 5ನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಸಿಂಧು ಅವರು ವಿಶ್ವದ ನಾಲ್ಕನೇ ಶ್ರೇಯಾಂಕಿತೆ ಜಪಾನಿನ ನೊಜೊಮಿ ಒಕುಹರಾ ಅವರನ್ನು ಸೋಲಿಸುವ ಮೂಲಕ ಈ ಸಾಧನೆಯನ್ನು ಮಾಡಿದರು.
ಸಿಂಧು ಅವರು ನಿನ್ನೆಯಷ್ಟೇ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಚೀನದ ಚೆನ್ ಯು ಫೀ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಭಾರತೀಯರಲ್ಲಿ ಚಿನ್ನದ ಆಶಾಕಿರಣವನ್ನು ಮೂಡಿಸಿದ್ದರು. ಇದು ಭಾರತೀಯ ಆಟಗಾರರೊಬ್ಬರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆದ್ದ ಮೊತ್ತ ಮೊದಲ ಸ್ವರ್ಣವಾಗಿದೆ.
ಜಪಾನಿನ ಒಕುಹಾರ ಅವರನ್ನು ಸಿಂಧು 21-7, 21-7 ನೇರ ಸೆಟ್ ಗಳಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸಿಂಧು ಅವರು 2013 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2018ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಈ ಬಾರಿ ಇಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಪಿ ವಿ ಸಿಂಧು ಅವರು ಚಿನ್ನದ ನಗೆ ಬೀರಿದ್ದಾರೆ!
‘ಇವತ್ತು ನನ್ನ ತಾಯಿಯ ಜನ್ಮದಿನ. ಹಾಗಾಗಿ ನಾನು ಈ ಸ್ವರ್ಣ ಪದಕವನ್ನು ತಾಯಿಗೆ ಅರ್ಪಿಸುತ್ತಿದ್ದೇನೆ’ – ಎಂದು ಸಿಂಧು ಅವರು ತನ್ನ ಈ ಐತಿಹಾಸಿಕ ಗೆಲುವಿನ ಬಳಿಕ ಹೆಳಿದರು. ಇನ್ನು ತನ್ನ ಈ ಗೆಲುವಿನ ಹಿಂದನ ರೂವಾರಿ ತನ್ನ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರ ಶ್ರಮವನ್ನು ನೆನಪಿಸಿಕೊಳ್ಳಲು ಸಿಂಧು ಮರೆಯಲಿಲ್ಲ. ಗೋಪಿಚಂದ್ ಮತ್ತು ತನ್ನ ಬೆಂಬಲ ಸಿಬ್ಬಂದಿಗಳಿಗೂ ಸಹ ಸಿಂಧು ಕೃತಜ್ಞತೆ ಸಲ್ಲಿಸಿದ್ದಾರೆ.