ನವದೆಹಲಿ: ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಕೋವಿಡ್ ರೋಗಿಗಳ ರಕ್ಷಣೆಗೆ ಇದೀಗ ಆಟೋರಿಕ್ಷಾ ಆ್ಯಂಬುಲೆನ್ಸ್ ರೋಡಿಗಿಳಿದಿವೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಟಿವೈಸಿಐಎ ಫೌಂಡೇಷನ್ ಸಹಯೋಗದಲ್ಲಿ 10 ಆಟೋಗಳನ್ನು ಆಟೋ ಆಂಬುಲೆನ್ಸ್ ನ್ನಾಗಿ ಪರಿವರ್ತಿಸಿ ಸೇವೆಗೆ ಲಭ್ಯವಾಗುವಂತೆ ಮಾಡಿದ್ದಾರೆ.
ಪ್ರಾರಂಭಿಕ ಹಂತದ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ, ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
ಆಟೋ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಿಲೆಂಡರ್ ಹಾಗೂ ಸ್ಯಾನಿಟೈಸರ್ ಗಳ ಸೌಲಭ್ಯಗಳು ಇರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲ ಹಂತದಲ್ಲಿ 10 ಆಟೋಗಳನ್ನು ಆ್ಯಂಬುಲೆನ್ಸ್ ಗಳಾಗಿ ಪರಿವರ್ತಿಸಲಾಗಿದೆ. ಜನರಿಂದ 25 ಲಕ್ಷದ ವರೆಗೆ ಫಂಡ್ ಕಲೆಕ್ಟ್ ಮಾಡಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಟೋ ಆ್ಯಂಬುಲೆನ್ಸ್ ಸೇವೆ ವಿಸ್ತರಿಸುವುದಾಗಿ ಟಿವೈಸಿಐಎ ಫೌಂಡೇಷನ್ ತಿಳಿಸಿದೆ.
ಇನ್ನು ದೆಹಲಿಯಲ್ಲಿ ಕಳೆದ ಒಂದು ತಿಂಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿವೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ದಾಖಲೆ ಪ್ರಮಾಣದ ಸಾವುಗಳು ಸಂಭವಿಸಿವೆ. ಇತ್ತ ಕೋವಿಡ್ ರೋಗಿಗಳಿಗೆ ಬೆಡ್ ಹಾಗೂ ಆಕ್ಸಿಜನ್ ಕೊರತೆ ಎದುರಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಆಕ್ಸಿಜನ್ ಪೂರೈಕೆ ಮಾಡಿದ್ದು, ಕೊರತೆ ನೀಗಿದೆ.