Advertisement

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

11:57 PM Mar 18, 2024 | Team Udayavani |

ಮೈಸೂರು: ಸಂವಿಧಾನ ರಚನೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ಬಳಿಕ ರಾಜತ್ವಕ್ಕೆ ಯಾವುದೇ ವಿಶೇಷ ಹಕ್ಕುಗಳಿಲ್ಲ. ರಾಜ ವಂಶಸ್ಥರು ಕೂಡ ಸಾಮಾನ್ಯ ಜನರಂತೆಯೇ ಬದುಕುತ್ತಿದ್ದಾರೆ. ನಾನು ಕೂಡ ಸಾಮಾನ್ಯ ಜನರಂತೆಯೇ ಜೀವನ ನಡೆಸುತ್ತಿದ್ದೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ, ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಮನೆಯ ಪರಂಪರೆ, ಸಂಸ್ಕೃತಿಯನ್ನು ಅರಮನೆಯೊಳಗೆ ಮುಂದುವರಿಸಿಕೊಂಡು ಹೋಗುತ್ತಿ ದ್ದೇನೆ. ಅರಮನೆಯಿಂದ ಹೊರಗೆ ಬಂದಾಗ ನಾನು ಸಾಮಾನ್ಯ ವ್ಯಕ್ತಿಯೇ. ಸಾಮಾನ್ಯ ವ್ಯಕ್ತಿಗಳಂತೆಯೇ ಜೀವನ ನಡೆಸುತ್ತಿದ್ದೇನೆ. ನಾನೀಗ ಜನ ಸಾಮಾನ್ಯರೊಂದಿಗೆ ಬೆರೆಯುತ್ತಿರುವುದು, ಜನರ ನಡುವೆ ಓಡಾಡುತ್ತಿರುವುದು ಯಾವುದೇ ಚುನಾವಣ ಗಿಮಿಕ್‌ ಅಲ್ಲ ಎಂದರು.

ಅರಮನೆ ಆಸ್ತಿ ಉಳಿಸಿಕೊಳ್ಳಲು
ರಾಜಕೀಯಕ್ಕೆ ಬಂದಿಲ್ಲ: ಯದುವೀರ್‌
ನಮ್ಮ ಅರಮನೆಯ ಆಸ್ತಿಯನ್ನು ಉಳಿಸಿಕೊಳ್ಳಲೆಂದು ನಾನು ರಾಜಕೀಯಕ್ಕೆ ಬಂದಿಲ್ಲ. ಜನರ ಕೆಲಸ ಮಾಡಲೆಂದು ಬಂದಿದ್ದೇನೆ. ಅರಮನೆಯ ಆಸ್ತಿ ಬಗ್ಗೆ ತಾಯಿಯವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಬೆಂಗಳೂರಿನ ಅರಮನೆಯನ್ನು ತ್ವರಿತವಾಗಿ ವಶಪಡಿಸಿ ಕೊಳ್ಳುವಂತೆ ರಾಜ್ಯ ಸರಕಾರ ಆದೇಶಿಸಿರುವುದಕ್ಕೆ ಪ್ರತಿಕ್ರಿ ಯಿಸಿದ ಅವರು, ಬೆಂಗಳೂರು ಅರಮನೆಯ ವಿಚಾರ ಕಾನೂನು ಹೋರಾಟದ ವ್ಯಾಪ್ತಿಯಲ್ಲಿದೆ. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ. ಆಸ್ತಿಯೆಲ್ಲವೂ ನನ್ನ ತಾಯಿಯವರ ಹೆಸರಿನಲ್ಲಿದ್ದು, ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ನಾನು ಅರಮನೆಯ ಆಸ್ತಿಯನ್ನು ಉಳಿಸಿಕೊಳ್ಳಲೆಂದು ರಾಜಕಾರಣಕ್ಕೆ ಬಂದಿದ್ದೇನೆ ಎಂಬುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next