Advertisement

ಜನಪ್ರತಿನಿಧಿಯಾದರೆ ಜನಪರ‌ ಕೆಲಸ ಮಾಡಲು ಸಾಧ್ಯ

11:14 PM Apr 02, 2024 | Team Udayavani |

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಇಬ್ಬರು ಹೊಸಬರು ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೈಸೂರು ಸಂಸ್ಥಾನದ ರಾಜವಂಶಸ್ಥರಾಗಿದ್ದಾರೆ. ಇವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

Advertisement

ನಿಮ್ಮ ಜೀವನದಲ್ಲೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ಒಳ್ಳೆಯ ಅನುಭವ ಸಿಗುತ್ತಿದೆ. ಹೋದಲ್ಲೆಲ್ಲ ಜನರು ಉತ್ಸಾಹದಿಂದ ನನ್ನನ್ನು ಬರಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಈ ಹಿಂದೆಯೂ ಸಾರ್ವಜನಿಕವಾಗಿ ಎಲ್ಲರೊಂದಿಗೆ ಓಡಾಡಿದ ಅನುಭವ ಇದೆ. ನಮ್ಮದೇ ಆದ ಸಮಾಜ ಸೇವಾ ಸಂಸ್ಥೆಗಳಿದ್ದು, ಅವುಗಳ ಮುಖಾಂತರ ಹಲವು ಸಾಮಾಜಿಕ ಚಟುಚವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಜತೆಗೆ ಧಾರ್ಮಿಕ ಕಾರ್ಯಗಳಲ್ಲೂ ಭಾಗವಹಿಸಿದ ಅನುಭವ ಇದೆ. ಆದರೆ ಈ ರಾಜಕೀಯ ಅನುಭವ ಇನ್ನೂ ಆಳವಾಗಿದ್ದು, ಒಳ್ಳೆಯ ಅನುಭವ ಎಲ್ಲರಿಂದಲೂ ಸಿಗುತ್ತಿದೆ.

ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ ಮತ್ತು ಏನು ಪ್ರೇರಣೆ?
ಒಂದು ವರ್ಷದ ಹಿಂದೆಯೇ ರಾಜಕೀಯಕ್ಕೆ ಬರಬೇಕು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಮಾ. 13ರಂದು ಅಧಿಕೃತವಾಯಿತು. ಸಮಾಜದ ಉನ್ನತಿಗಾಗಿ ದೊಡ್ಡಮಟ್ಟದಲ್ಲಿ ಕೆಲಸ ಮಾಡಬೇಕು ಎಂದರೆ ಈಗಿನ ವ್ಯವಸ್ಥೆಯಲ್ಲಿ ರಾಜಕೀಯಕ್ಕೆ ಬರಲೇಬೇಕು. ಜನರ ಪ್ರತಿನಿಧಿಯಾದರಷ್ಟೇ ದೊಡ್ಡಮಟ್ಟದ ಕೆಲಸ ಮಾಡಲು ಸಾಧ್ಯ. ಸಮಾಜಮುಖೀ ಕೆಲಸ ಮಾಡಲು ರಾಜಕೀಯ ಉತ್ತಮ ವೇದಿಕೆಯಾಗಿದೆ.

ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್‌ ಯಾರು ಮತ್ತು ಯಾಕೆ?
ನಮಗೆ ಗಾಡ್‌ ಫಾದರ್‌ ದೇವರು. ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ದೇವರು ಬಿಟ್ಟು ಮತ್ಯಾರೂ ಇಲ್ಲ.

ಮೊದಲ ಪ್ರಯತ್ನದಲ್ಲೇ ನೀವು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ಭಾರತೀಯ ಜನತಾ ಪಾರ್ಟಿ ನನಗೆ ಇದೇ ಮೊದಲ ಬಾರಿಗೆ ಅವಕಾಶ ನೀಡಿದೆ. ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ರಾಜಕೀದಲ್ಲಿದ್ದುಕೊಂಡು ಅನೇಕ ಒಳ್ಳೆಯ ಕೆಲಸ, ಸಾಧನೆ ಮಾಡಿದ್ದಾರೆ. ಹಾಗಾಗಿ ನನಗೂ ರಾಜಕೀಯಕ್ಕೆ ಬರಬೇಕು ಅನ್ನಿಸಿತು. ದೇಶದಲ್ಲಿ ಪ್ರಧಾನಿ ಮೋದಿಯಂತ ನಾಯಕರಿರುವಾಗ ಅವರು ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಲುವುದು ಸರಿ ಅನ್ನಿಸಿತು. ಪ್ರಧಾನಿ ಮೋದಿ ಅವರ ಕಾರ್ಯವೈಖರಿ ನಮಗೆ ಸ್ಫೂರ್ತಿಯಾಗಿದೆ.

Advertisement

ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಅಡಿಪಾಯವನ್ನಿಟ್ಟಿದೆ. ಈ ಕಾರ್ಯ ಮುಂದುವರೆಯಲು ಎಲ್ಲರ ಬೆಂಬಲ ಬೇಕಿದೆ. ಜತೆಗೆ, ಮೈಸೂರು-ಕೊಡಗು ಈ ಎರಡು ಕ್ಷೇತ್ರದ ಪರಂಪರೆ ಮುಖ್ಯ. ಮೈಸೂರು ಮೈಸೂರಾಗಿ ಉಳಿಯಬೇಕು. ಕೊಡಗು ಕೊಡಗು ಆಗಿಯೇ ಉಳಿಯಬೇಕಿದೆ. ಹಾಗೆಂದ ಮಾತ್ರಕ್ಕೆ ಅಭಿವೃದ್ಧಿ ಬೇಡವೆಂದಲ್ಲ. ಅಭಿವೃದ್ಧಿ ಬೇಕಾಗಿದೆ. ಅದು ಆಗ್ಯಾìನಿಕ್‌ ಆಗಿ ಅಭಿವೃದ್ಧಿಯಾಗಬೇಕು. ನಾನು ಈ ಎರಡೂ ಪ್ರದೇಶಗಳ ಪ್ರಕೃತಿಯನ್ನು ಉಳಿಸುವ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ನನ್ನ ಅಧ್ಯಯನವೂ ಪರಿಸರ ಆರ್ಥಿಕತೆ ಆಗಿರುವುದರಿಂದ ಹೆಚ್ಚಿನ ಮಹತ್ವವನ್ನು ಪರಿಸರಕ್ಕೆ ನೀಡುವೆ. ಪರಿಸರಕ್ಕೆ ಪೂರಕವಾದ ಅಭಿವೃದ್ಧಿಯನ್ನು ಮಾಡುವೆ.

ಜತೆಗೆ ಮೈಸೂರು ಮತ್ತು ಕೊಡಗು ಈ ಎರಡೂ ಜಿಲ್ಲೆಗಳು ಪ್ರವಾಸೋದ್ಯಮ ಅವಲಂಬಿತವಾಗಿವೆ. ಹಾಗೆಯೇ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಲಾಗುತ್ತಿದ್ದು, ಕೃಷಿ, ಪ್ರವಾಸೋದ್ಯಮ ಹಾಗೂ ಮೈಸೂರು ಮತ್ತು ಕೊಡಗಿನ ಪರಂಪರೆ ಉಳಿಸಲು ಪ್ರಯತ್ನಿಸುತ್ತೇನೆ. ಕೊಡಗಿನ ಕಾಫಿ, ಕಿತ್ತಳೆ ಬೆಳಗಳ ಅಭಿವೃದ್ಧಿ ಹಾಗೂ ಮೈಸೂರಿನ ಭತ್ತ, ರಾಗಿ, ಹತ್ತಿ, ಹೊಗೆ ಸೊಪ್ಪು ಸೇರಿದಂತೆ ಎರಡು ಜಿಲ್ಲೆಯ ಪ್ರಮುಖ ಬೆಳೆಗಳ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ರೈತರ ಹಿತ ಕಾಪಾಡುವೆ.

ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? 5 ಕಾರಣ ಹೇಳಿ
ಮೊದಲು ಕ್ಷೇತ್ರದ ಜನತೆಯ ಸಮಸ್ಯೆಗಳೇನು ಎಂಬುದನ್ನು ತಿಳಿದು ಅದನ್ನು ಪರಿಹರಿಸುವ ಕೆಲಸ ಮಾಡುತ್ತೇವೆ ಎಂಬ ಭರವಸೆಯನ್ನು ತುಂಬಬೇಕಿದೆ. ನಮ್ಮ ಪಕ್ಷದ ಅಭಿವೃದ್ಧಿ ಕೆಲಸ ಮತ್ತು ಹೊಸ ಯೋಜನೆಗಳನ್ನು ಜನರ ಮುಂದಿಡಲಾಗುವುದು. ಹಲವು ಶತಮಾನಗಳಿಂದ ಮೈಸೂರು ಸಂಸ್ಥಾನವನ್ನು ನಮ್ಮ ಪೂರ್ವಜರು ಆಳ್ವಿಕೆ ಮಾಡಿದ್ದು, ಜನಪರ ಕೆಲಸ ಮಾಡಿದ್ದಾರೆ. ಅವು ನಮ್ಮ ಕಣ್ಣ ಮುಂದೆ ಇಂದಿಗೂ ಕಾಣುತ್ತಿವೆ. ಜತೆಗೆ ಮೈಸೂರು ರಾಜಮನೆತನಕ್ಕೂ, ಜನರಿಗೂ ಭಾವನಾತ್ಮಕ ಸಂಬಂಧ ಇದೆ. ಪ್ರಧಾನಿ ಮೋದಿ ಅವರ ಹತ್ತು ವರ್ಷದ ಸಾಧನೆ ಹಾಗೂ ಮೈಸೂರು-ಕೊಡಗು ಅಭಿವೃದ್ಧಿಗೆ ನನ್ನದೇ ಆದ ದೃಷ್ಟಿಕೋನ ನನ್ನ ಕೈಹಿಡಿಯಲಿದೆ.

ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಅಂತ ಇದ್ದೀರಿ?
ಎಲ್ಲರಿಗೂ ಕನಸುಗಳಿರುತ್ತವೆ. ಅಂತೆಯೇ ಮೊದಲು ಚುನಾವಣೆ ಗೆಲ್ಲುವುದೇ ಆದ್ಯತೆ. ಬಳಿಕ ನಮ್ಮ ಜನರ ಸಮಸ್ಯೆಗಳನ್ನು ಸಂಸತ್‌ ಗಮನಕ್ಕೆ ತಂದು ನಮ್ಮ ಭಾಗದ ಜನರಿಗೆ ನ್ಯಾಯ ದೊರಕಿಸಿಕೊಡುವುದಾಗಿದೆ.

ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ನಮ್ಮೆಲ್ಲ ಚಿತ್ತ ಇರುವುದು ಚುನಾವಣೆ ಮೇಲೆ. ಸದ್ಯಕ್ಕೆ ಚುನಾವಣೆ ಗೆಲ್ಲುವುದಷ್ಟೇ ನಮ್ಮ ಗುರಿ. ಅನಂತರ ನನ್ನದೇ ಆದ ಯೋಜನೆಗಳಿದ್ದು, ಅವುಗಳ ಅನುಷ್ಠಾನಕ್ಕೆ ದುಡಿಯುತ್ತೇನೆ. ಪ್ರಧಾನ ಮಂತ್ರಿ ಮೋದಿ ಮತ್ತು ಕ್ಷೇತ್ರದ ಜನರ ನಡುವೆ ಸೇತುವೆಯಾಗಿಮ ಕೆಲಸ ಮಾಡುತ್ತೇನೆ.

ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸು ಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ನಮ್ಮ ಕ್ಷೇತ್ರದ್ದು ಆಗ್ಯಾìನಿಕ್‌ ಡೆವಲಪ್‌ಮೆಂಟ್‌ ಆಗಬೇಕಿದೆ. ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರೋತ್ಸಾಹ ಅಗತ್ಯವಿದ್ದು, ರೈತರಿಗೆ ಕೌಶಲ ತರಬೇತಿ ನೀಡಬೇಕಿದೆ. ಬೇರೆ ರೀತಿಯ ಬೆಳೆಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸಬೇಕಿದೆ. ಕೈಗಾರಿಕೆ ಮತ್ತು ಐಟಿ ಹಬ್‌ ಪೂರಕವಾದ ವೇದಿಕೆ ಸೃಷ್ಟಿಸುವುದು. ಇದರಿಂದ ಸ್ಥಿರವಾದ ಆರ್ಥಿಕ ಶಕ್ತಿಯನ್ನು ರೂಪಿಸಬೇಕಿದೆ.

ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ವೈಯಕ್ತಿಕ ಜೀವನ ಇರಬಹುದು, ಸಾರ್ವಜನಿಕ ಜೀವನವೇ ಇರಬಹುದು ಹಿರಿಯರ ಆಶೀರ್ವಾದ, ಪ್ರೀತಿ ಇಲ್ಲದೇ ನಮ್ಮ ಯಾವುದೇ ಕೆಲಸಗಳೂ ಯಶಸ್ವಿಯಾಗುವುದಿಲ್ಲ. ಹಾಗಾಗಿ ನಮಗೆ ಹಿರಿಯರ ಆಶೀರ್ವಾದ ಬೇಕಿದ್ದು, ನಮ್ಮ ಪಕ್ಷ ಮತ್ತು ಮಿತ್ರ ಪಕ್ಷದ ಎಲ್ಲ ಹಿರಿಯರ ಸಲಹೆಯೊಂದಿಗೆ ಮುಂದುವರೆಯುತ್ತೇನೆ. ಅಂತಿಮವಾಗಿ ನಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುವಾಗ ಅವರ ಸಲಹೆ ಪಡೆಯುತ್ತೇನೆ.

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next