Advertisement

ನಮ್ಮ ಶಾಲೆ ನಮ್ಮ ಹೆಮ್ಮೆ: ನೂರಾರು ಸಾಧಕರನ್ನು ನೀಡಿದ ಹೆಬ್ರಿ ಸರಕಾರಿ ಹಿ. ಪ್ರಾ. ಶಾಲೆ

01:08 PM Nov 09, 2019 | mahesh |

1882 ಶಾಲೆ ಸ್ಥಾಪನೆ
ಪ್ರಸ್ತುತ 305 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಹೆಬ್ರಿ: ಕಳೆದ 137 ವರ್ಷ ಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹಿರಿಯ ವಿದ್ಯಾ ದೇಗುಲ ಹೆಬ್ರಿ ತಾಲೂಕಿನ ಹೃದಯಭಾಗದಲ್ಲಿರುವ ಹೆಬ್ರಿ ಸರಕಾರಿ ಹಿ.ಪ್ರಾ.ಶಾಲೆ ಶತಮಾನ ಕಂಡು ಮುನ್ನುಡೆಯುತ್ತಿದೆ.

1882 ರಲ್ಲಿ ಹುಲ್ಲಿನ ಮಾಡು, ಚಿಕ್ಕ ತರಗತಿ ಕೊಠಡಿ ಓರ್ವ ಶಿಕ್ಷಕರೊಂದಿಗೆ ಶಾಲೆ ಸ್ಥಾಪನೆಯಾಯಿತು. ಅನಂತರ ದಿ| ಭುಜಂಗ ಬಲ್ಲಾಳರ ಬಾಡಿಗೆೆ ಕಟ್ಟದಲ್ಲಿದ್ದ ಶಾಲೆ ಅಭಿವೃದ್ಧಿ ಹೊಂದುತ್ತಾ ದಾನಿಗಳ ಹಾಗೂ ಸರಕಾರದ ನೆರವಿನಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆರಂಭದಲ್ಲಿ ಶಿವರಾಮಯ್ಯ ನಂದಳಿಕೆ ಶಿಕ್ಷಕರೊಂದಿಗೆ ಆರಂಭವಾದ ಶಾಲೆ ಶತಮಾನೋತ್ಸವ ಸಂದರ್ಭಕ್ಕೆ ಸುಮಾರು 90 ಜನ ಶಿಕ್ಷಕರು ಸೇವೆ ಸಲ್ಲಿಸಿದ್ದು ಹಲವರು ಇಲ್ಲಿ ಕಲಿತು ಇಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದು ವಿಶೇಷ.
2004ರಲ್ಲಿ ಸುಸಜ್ಜಿತ ತರಗತಿ ಕೋಣೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡು ಇದೀಗ 305 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ಮೂಲ ಸೌಕರ್ಯ
ಸುಮಾರು 2.95 ಎಕ್ರೆ ಜಾಗದಲ್ಲಿ ವಿಶಾಲವಾದ ಆಟದ ಮೈದಾನ,ಸುಸಜ್ಜಿತ ತರಗತಿ ಕೋಣೆ, ಕಂಪ್ಯೂಟರ್‌ ಲ್ಯಾಬ್‌ , ವಿಜ್ಞಾನ ಪ್ರಯೋಗಾಲಯ , ಆಂಗ್ಲ ಮಾಧ್ಯಮ ಶಿಕ್ಷಣ , ಶೌಚಾಲಯ, ನಲಿಕಲಿ ಕೊಠಡಿ, ಸ್ಮಾರ್ಟ್‌ ಕ್ಲಾಸ್‌, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ , ಆವರಣ ಗೋಡೆ , ನೀರಿನ ಬಾವಿ , ಅಕ್ಷರ ದಾಸೋಹ ಮೊದಲಾದ ಮೂಲ ಸೌಕರ್ಯದೊಂದಿಗೆ ದಾನಿಗಳ ನೆರವಿನೊಂದಿಗೆ ಪುನರುಜ್ಜೀವನ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಇಲ್ಲಿ ಚಂಪಕಾ ಕೆ. ಅವರು ಮುಖ್ಯ ಶಿಕ್ಷಕಿಯ ಜತೆ 10 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಸಾಧಕ ಹಳೆ ವಿದ್ಯಾರ್ಥಿಗಳು
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ರಘುರಾಮ್‌ ಸೋಮಯಾಜಿ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ , ಕಾರ್ಕಳದ ಮಾಜಿ ಶಾಸಕ ದಿ| ಗೋಪಾಲ್‌ ಭಂಡಾರಿ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ.ಸಿ.ರಾವ್‌ ಶಿವಪುರ , ಸೀತಾನದಿ ಗಣಪಯ್ಯ ಶೆಟ್ಟಿ , ಸಾಹಿತಿ ಡಾ| ಪ್ರದೀಪ್‌ ಕುಮಾರ್‌ ಹೆಬ್ರಿ , ಉದ್ಯಮ ಕ್ಷೇತ್ರದ ರಮಣ ನಾಯಕ್‌ ಸೇರಿದಂತೆ ನೂರಾರು ಸಾಧಕರನ್ನು ನಾಡಿಗೆ ನೀಡಿದ ಹೆಮ್ಮೆ ಈ ಶಾಲೆಗೆ ಇದೆ.

ಕಡಿಮೆಯಾಗದ ವಿದ್ಯಾರ್ಥಿ ಸಂಖ್ಯೆ
ಬಂಗಾರುಗುಡ್ಡೆ, ಇಂದಿರಾನಗರ, ಕನ್ಯಾನ, ಗಾಂಧಿ ನಗರ, ಕುಚ್ಚಾರು, ಮುದ್ರಾಡಿ, ಶಿವಪುರ, ವಂಡಾರಬೆಟ್ಟು ,  ಕೊಂಡೆಜೆಡ್ಡು, ಸೊಳ್ಳೆ ಕಟ್ಟೆ , ನಾಡ್ಪಾಲು ,ಮಂಡಾಡಿ ಜೆಡ್ಡು, ಸೀತಾನದಿ, ಸೋಮೇಶ್ವರ ಸುತ್ತಮುತ್ತಲಿನ ಗ್ರಾಮದ ಜನರು ಇದೇ ಶಾಲೆಗೆ ಬರುತ್ತಿದ್ದು ಹಿಂದೆ 800 ವಿದ್ಯಾರ್ಥಿಗಳನ್ನು ಹೊಂದಿ ಹಿರಿಯ ಶಾಲೆ ಎಂಬ ಹೆಗ್ಗಳಿಕೆ ಇತ್ತು. ಇಂದು ಈ ಶಾಲೆಯ ವ್ಯಾಪ್ತಿಯಲ್ಲಿ 16 ಸರಕಾರಿ 2 ಖಾಸಗಿ ಶಾಲೆಗಳಿದ್ದರೂ 305 ವಿದ್ಯಾರ್ಥಿಗಳನ್ನು ಹೊಂದಿದ್ದು ಇಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಉತ್ತಮ ಶಾಲೆ ಪ್ರಶಸ್ತಿಯೊಂದಿಗೆ 2011-12 ರಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಶಕುಂತಲಾ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಗಣ್ಯರ ಭೇಟಿ
ಕೋಟ ಶಿವರಾಮ ಕಾರಂತ, ಪೇಜಾವರ ಶ್ರೀ, ಅದಮಾರು ಶ್ರೀ, ಮಾಜಿ ಮಖ್ಯಮಂತ್ರಿ
ಡಾ| ಎಂ. ವೀರಪ್ಪ ಮೊಲಿ ಸೇರಿದಂತೆ ಹಲವು ಗಣ್ಯರು ಈ ಶಾಲೆಗೆ ಭೇಟಿ ನೀಡಿದ್ದರು.

137 ವರ್ಷಗಳ ಇತಿಹಾಸದಲ್ಲಿ ದಾಖಲೇ ವಿದ್ಯಾರ್ಥಿಗಳನ್ನು ಹೊಂದಿದ ನಮ್ಮ ಶಾಲೆ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ದಾನಿಗಳ ನೆರವು ಹಾಗೂ ಗುಣಮಟ್ಟದ ಬೋಧಕ ವೃಂದದೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ.


-ಚಂಪಕಾ ಕೆ. , ಶಾಲಾ ಮುಖ್ಯ ಶಿಕ್ಷಕಿ

1948ರಲ್ಲಿ ನಾನು ಈ ಶಾಲೆ ಹಳೆವಿದ್ಯಾರ್ಥಿ ಯಾಗಿರುವುದು ಅಷ್ಟೆ ಅಲ್ಲದೆ ಕಲಿತ ಶಾಲೆಯಲ್ಲಿಯೇ ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಯೋಗ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಈ ಶಾಲೆಯ ಶತಮಾನೋತ್ಸವದ ಸ್ಮರಣ ಸಂಚಿಕೆಯ ಸಂಪಾದಕನಾಗಿ ಸೇವೆ ಸಲ್ಲಿಸುವುದರ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಾಲೆ ಅಡಿಪಾಯ ಹಾಕಿಕೊಟ್ಟಿದೆ.


-ಅಂಬಾತನಯ ಮುದ್ರಾಡಿ, ಹಿರಿಯ ಸಾಹಿತಿ ( ಹಳೆವಿದ್ಯಾರ್ಥಿ)

Advertisement

Udayavani is now on Telegram. Click here to join our channel and stay updated with the latest news.

Next