Advertisement

ಸಾವಯವ ಔಷಧೀಯ ಸಸ್ಯ ಕೃಷಿ

03:55 PM May 14, 2019 | pallavi |

ಕುಮಟಾ: ಪರಿಸರ ಸಂರಕ್ಷಿಸಿ, ಗಿಡ ಬೆಳೆಸಿ, ಪರಿಸರ ಉಳಿಸಿ ಹೀಗೆ ಎಲ್ಲರೂ ಉಪದೇಶ ಮಾಡುವವರ ಸಂಖ್ಯೆ ಅಧಿಕವಾಗಿದೆ. ಆದರೆ ಉಪದೇಶ ಮಾಡುವವರೆಲ್ಲ ಗಿಡ ನೆಡುವುದೂ ಇಲ್ಲ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದೂ ಇಲ್ಲ. ಎಲ್ಲೋ ಕೆಲವರು ತಮ್ಮ ಮಾತಿನಂತೆ ಕೃತಿಗಿಳಿಯುತ್ತಾರೆ. ಅಂತವರು ಸಮಾಜಕ್ಕೆ ತಮ್ಮ ಸಾಧನೆಗಳ ಮೂಲಕವೇ ಆದರ್ಶರಾಗುತ್ತಾರೆ. ಅಂತವರಲ್ಲಿ ತಾಲೂಕಿನ ಕಲ್ಲಬ್ಬೆಯ ರಾಮಚಂದ್ರ ಭಟ್ಟ ಹೆಬ್ಳೇಕೇರಿ ಒಬ್ಬರು.

Advertisement

ಇಂದಿನ ದಿನಗಳಲ್ಲಿ ಹಲವು ಔಷಧೀಯ ಗಿಡ, ಮರಗಳು ಅವನತಿಯಲ್ಲಿವೆ. ಇನ್ನು ಕೆಲವು ಸಸ್ಯಗಳ ಉಪಯೋಗವೇ ಇಂದಿನ ಕೆಲವರಿಗೆ ಗೊತ್ತಿಲ್ಲ. ಅಂತಹ ಔಷಧೀಯ ಗಿಡ ಮರಗಳ ಜೊತೆಗೆ ಹಲವು ಅಮೂಲ್ಯವಾದ ಸಸ್ಯ ಸಂಪತ್ತನ್ನು ತಮ್ಮ 2.3 ಎಕರೆ ಜಮೀನಿನಲ್ಲಿ ಬೆಳೆಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಕಾದಿಡುವ ಉದ್ದೇಶದಿಂದ ಅವರು ಕಾರ್ಯಪ್ರವ್ರತ್ತರಾಗಿದ್ದಾರೆ.

ಅರಣ್ಯ ಇಲಾಖೆ ಸಹಯೋಗದಲ್ಲಿ ಔಷಧಿ ಗಿಡಗಳನ್ನು ಹಾಗೂ ಅರಣ್ಯದಲ್ಲಿ ಬೆಳೆಯುವ ಗಿಡಗಳನ್ನು ತಂದು ಸತತ 6-7 ವರ್ಷದ ಪರಿಶ್ರಮದಿಂದ ತಮ್ಮ ಜಾಗದಲ್ಲಿ ಬೆಳೆಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕೇವಲ ಸಗಣಿಗೊಬ್ಬರವನ್ನು ಹಾಕಲಾಗಿದೆ. ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಗಿಡಗಳಿಗೆ ರೋಗಗಳ ಭೀತಿ ಎದುರಾಗುವುದಿಲ್ಲ. ವರ್ಷಕ್ಕೆ ಒಂದು ಸಲ ಗೊಬ್ಬರ ಹಾಕಿ ಗಿಡಗಳ ಬುಡಕ್ಕೆ ಮಣ್ಣು ಹಾಕಿದರೆ ತಾನಾಗಿಯೇ ಬೆಳೆಯುತ್ತದೆ. ರೈತರು ಮತ್ಯಾವುದೇ ಹಣ ವ್ಯಯಸುವ ಅವಶ್ಯಕತೆ ಇಲ್ಲವೆನ್ನುತ್ತಾರೆ ರಾಮಚಂದ್ರ ಭಟ್ಟ. ಬೇಸಿಗೆಯಲ್ಲಿ ಮೂರು ವರ್ಷಗಳವರೆಗೆ ಗಿಡಗಳಿಗೆ ನೀರು ಕೊಡಬೇಕಾಗುತ್ತದೆ. 3 ವರ್ಷ ಕಳೆದ ನಂತರ ನೀರು ಕೊಡುವ ಅವಶ್ಯಕತೆಯಿಲ್ಲ.

ಎರಡುಕಾಲು ಎಕರೆ ಜಮೀನಿನಲ್ಲಿ ಅರಣ್ಯದಲ್ಲಿ ಬೆಳೆಯುವ ಮುರುಗಲು, ಮುತ್ತುಗಲ, ಅಂಡಮುರುಗಲು, ಸಿವಣೆ, ಸಾಗವಾನಿ, ಚರಣಿಗೆ, ನಂದಿ, ಹೆಬ್ಬಲಸು ವಾಣೆ, ಮತ್ತಿ, ಬೀಟೆ, ಕೆಂದಾಳ, ಬೆನ್ನುಹೊನ್ನೆ, ಸುರಹೊನ್ನೆ, ಹೊಳೆಮತ್ತಿ, ನೇರಲು, ಗುಳಮಾವು, ಕಾಸಗ, ಸಪ್ಪುಗೊದ್ದಲು, ಹೊಳೆಪಂಸ, ಬಿಲ್ಲಕಂಬಿ, ಬಿಲ್ಲ ಹ್ಯಾಗ ಹಾಗೂ ಔಷಧಿ ಸಸ್ಯಗಳಾದ ಅಂಕೋಲೆ, ಮಾಪ, ಏಕನಾಯಕ, ಅಶೋಕಾ ರಕ್ತಚಂದನ, ಆಪತ್ತಿ ಹಾಗೂ ಸ್ವತಃ ಕಸಿ ಮಾಡಿ ಬೆಳೆಸಿದ ಚಿಕ್ಕು, ಮಾವು ಗೇರು ಸಸಿಗಳನ್ನು ಬೆಳೆಸಲಾಗಿದ್ದು ಕೆಲವು ಹಣ್ಣಿನ ಗಿಡಗಳು ಫಲ ನೀಡುತ್ತಿವೆ.

ನಾವು ಗಿಡ ನೆಟ್ಟು ಬೆಳೆಸಿದರೆ ಮುಂದೆ ಅದೇ ಗಿಡಗಳು ನಮ್ಮನ್ನು ಪೊರೆಯುತ್ತವೆ. ಸಿಗುವ ಹಣ್ಣು ಹಂಪಲುಗಳು ಆರ್ಥಿಕತೆಗೆ ಶಕ್ತಿ ನೀಡುತ್ತವೆ. ಜೊತೆಗೆ ಬೇಸಿಗೆಯಲ್ಲಿ ಸಿಗುವ ದೆರಕೆಲೆಗಳು ತೋಟಕ್ಕೆ ಗೊಬ್ಬರವಾಗುತ್ತದೆ. ಪ್ರತೀದಿನ 2 ತಾಸುಗಳನ್ನು ಈ ಗುಡ್ಡದಂತಹ ಸ್ಥಳದಲ್ಲಿ ಗಿಡಗಳ ಆರೈಕೆಗೆಯಲ್ಲಿ ಕಳೆಯುವದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯವೂ ದೊರೆಯುತ್ತಿದೆ ಎಂದು ನುಡಿಯುವ ರಾಮಚಂದ್ರ ಭಟ್ಟರು ಸೆಲ್ಕೋ ಸೋಲಾರ್‌ ಕಂಪನಿಯಲ್ಲಿ ಇನ್ನುಳಿದ ಸಮಯದಲ್ಲಿ ಉದ್ಯೋಗವನ್ನೂ ಮಾಡುತ್ತಾರೆ.

Advertisement

ಅರಣ್ಯ ಇಲಾಖೆ ಗಿಡಗಳನ್ನು ಒದಗಿಸುವ ಜೊತೆಗೆ ಮೂರು ವರ್ಷಗಳವರೆಗೆ ಗಿಡ ಬೆಳೆಸಲು ಸ್ವಲ್ಪಮಟ್ಟಿನ ಅನುದಾನವನ್ನೂ ನೀಡುತ್ತದೆ. ಹೀಗೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಈ ರೀತಿಯ ಸಸಿಗಳನ್ನು ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಕಾಡಿನಲ್ಲಿ ಬೆಳೆಯುವ ಮರಗಳ ಹಾಗೂ ದಿನನಿತ್ಯ ಬೇಕಾಗುವ ಔಷಧಿ ಸಸ್ಯಗಳನ್ನು ಕಾಯ್ದಿರಿಸುವಿಕೆಯಿಂದ ಆರ್ಥಿಕ ಸದೃಢತೆ ಪಡೆಯುವದರ ಜೊತೆಗೆ ಮುಂದಿನ ಸಮಾಜಕ್ಕೆ ನಮ್ಮ ಕೊಡುಗೆಯನ್ನೂ ನೀಡಿದಂತಾಗುತ್ತದೆ.

ಮುಂದಿನ ಪೀಳಿಗೆಗೆ ಹಲವು ಔಷಧ ಸಸ್ಯಗಳು ಮತ್ತು ಕೆಲವು ವಿಶೇಷ ಜಾತಿಯ ಮರಗಳು ಕಾಣಲೂ ಸಿಗಲಾರದು. ಅದಕ್ಕಾಗಿ ನಾನು ಹಲವು ವಿಶೇಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಚನೆ ಮಾಡಿದ್ದೇನೆ. ಹಲವು ಪ್ರಬೇಧದ ಗಿಡಗಳು ಮತ್ತು ಅವುಗಳ ಪ್ರಯೋಜನವನ್ನು ಗೊತ್ತಿಲ್ಲದವರಿಗೆ ತಿಳಿಸುವ ಉದ್ದೇಶದಿಂದ ನನ್ನ ಮಾಲಕಿ ಜಮೀನಿನಲ್ಲಿಯೇ ಅರಣ್ಯ ಬೆಳೆಸಿದ್ದೇನೆ. ಇದಕ್ಕೆ ಅರಣ್ಯ ಇಲಾಖೆಯೂ ಉತ್ತಮವಾಗಿ ಸ್ಪಂದಿಸಿದೆ.
•ರಾಮಚಂದ್ರ ಭಟ್ಟ, ಹೆಬ್ಳೇಕೇರಿ

•ಕೆ. ದಿನೇಶ ಗಾಂವ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next